Advertisement

ಉಭಯ ನದಿಗಳಲ್ಲಿ ಪುಣ್ಯಸ್ನಾನಗೈದ ಭಕ್ತರು

09:49 AM Jan 16, 2019 | |

ರಾಯಚೂರು: ಸೂರ್ಯ ಪಥ ಬದಲಿಸುವ ಮಕರ ಸಂಕ್ರಮಣ ಹಬ್ಬವನ್ನು ಜಿಲ್ಲಾದ್ಯಂತ ಮಂಗಳವಾರ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಈ ಬಾರಿ ಎರಡು ದಿನ ಹಬ್ಬ ಆಚರಿಸಿದ ಪರಿಣಾಮ ಹಾಗೂ ನದಿಗಳಲ್ಲಿ ನೀರಿನ ಹರಿವು ಕಡಿಮೆಯಾದ ಪರಿಣಾಮ ಪುಣ್ಯಸ್ನಾನಕ್ಕೆ ಬರುವ ಜನರ ಸಂಖ್ಯೆ ಕುಗ್ಗಿತ್ತು.

Advertisement

ಜಿಲ್ಲೆಯಲ್ಲಿ ಹರಿದಿರುವ ಕೃಷ್ಣಾ ಮತ್ತು ತುಂಗಭದ್ರಾ ನದಿಗಳಲ್ಲಿ ಹೆಚ್ಚೇನೂ ನಿರಿಲ್ಲದಿದ್ದರೂ ಪುಣ್ಯಸ್ನಾನಕ್ಕೆ ನೀರಿನ ಕೊರತೆ ಕಂಡು ಬರಲಿಲ್ಲ. ಹೀಗಾಗಿ ಜನ ಉಭಯ ನದಿಗಳ ವಿವಿಧ ಪ್ರೇಕ್ಷಣೀಯ ಸ್ಥಳಗಳಲ್ಲಿ ಪುಣ್ಯಸ್ನಾನ ಮಾಡಿದರು. ಆರ್‌ಟಿಪಿಎಸ್‌ಗಾಗಿ ಒಂದು ಟಿಎಂಸಿ ನೀರು ಹರಿಸಿದ ಪರಿಣಾಮ ಕೃಷ್ಣಾ ನದಿಯಲ್ಲಿ ನೀರಿನ ಹರಿವಿತ್ತು. ಮೊದಲನೇ ಬೆಳೆ ಕಟಾವು ಮಾಡಿದ್ದರಿಂದ ತುಂಗಭದ್ರಾ ನದಿಗೂ ಸಣ್ಣ ಪ್ರಮಾಣದಲ್ಲಿ ನೀರು ಹರಿಸಲಾಗುತ್ತಿದೆ.

ಎರಡು ನದಿಗಳಿಗೆ ತಂಡೋಪತಂಡವಾಗಿ ಆಗಮಿಸಿದ ಜನ ನದಿಯಲ್ಲಿ ಮಿಂದು ಪೂಜೆ ಸಲ್ಲಿಸಿದರು. ಬಳಿಕ ನದಿ ಪಾತ್ರಗಳಲ್ಲಿ ಕುಳಿತು ಸಜ್ಜೆ ರೊಟ್ಟಿ, ಎಳ್ಳು, ಶೇಂಗಾ ಹೋಳಿಗೆ, ಭರ್ತ (ತರಕಾರಿ ಖಾದ್ಯ), ಎಣ್ಣೆ ಬದನೆಕಾಯಿ, ಚಿತ್ರಾನ್ನ, ಮೊಸರನ್ನ ಸೇರಿದಂತೆ ಹಲವು ಬಗೆ ಬಗೆಯ ಭಕ್ಷ್ಯ ಖಾದ್ಯಗಳನ್ನು ಸವಿದು ಸಂಭ್ರಮಿಸಿದರು.

ಗೂಗಲ್‌ ಪ್ರಭುಸ್ವಾಮಿ, ಕೃಷ್ಣಾ, ಕುರುವಪುರ, ನಾರದಗಡ್ಡೆ, ಎಲೆಬಿಚ್ಚಾಲಿ, ರಾಜಲಬಂಡಾ, ಮಂತ್ರಾಲಯ, ಕೊಪ್ಪರ ಹೀಗೆ ಉಭಯ ನದಿಗಳ ವಿವಿಧ ಪುಣ್ಯಕ್ಷೇತ್ರಗಳಲ್ಲಿ ಜನ ಪುಣ್ಯಸ್ನಾನ ಮಾಡಿದ್ದು ಕಂಡು ಬಂತು. ಈ ಬಾರಿ ಕಳೆದ ಸೋಮವಾರ ಹೊರತುಪಡಿಸಿ ಮೂರು ದಿನ ರಜೆ ಇರುವ ಕಾರಣ ನೌಕರ ವರ್ಗದವರು ಕುಟುಂಬ ಸಹಿತರಾಗಿ ದೂರದೂರುಗಳಿಗೆ ಪ್ರವಾಸ ಕೈಗೊಂಡಿರುವ ಸಾಧ್ಯತೆಗಳು ಇವೆ. ಸಾಕಷ್ಟು ಜನ ಹಂಪಿ, ಕೂಡಲಸಂಗಮ, ಶ್ರೀಶೈಲಕ್ಕೆ ತೆರಳಿ ಪುಣ್ಯಸ್ನಾನ ಮಾಡಿದರು.

ನದಿಯಲ್ಲಿ ನೀರಿನ ಹರಿವು ಕಡಿಮೆ ಇದ್ದರೂ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಅಲ್ಲಲ್ಲಿ ಎಚ್ಚರಿಕೆ ಫಲಕಗಳನ್ನು ಅಳವಡಿಸಿದ್ದರು. ಅಲ್ಲದೇ, ಗಸ್ತು ತಿರುಗತ್ತಿದ್ದ ಪೊಲೀಸರು ಹೊಂಡಗಳಲ್ಲಿ ಮೊಸಳೆಗಳು ಕಂಡು ಬಂದಿದ್ದು, ಆಳಕ್ಕೆ ಇಳಿಯದಂತೆ ಸೂಚನೆ ನೀಡುತ್ತಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮೀನುಗಾರರನ್ನು ನಿಯೋಜಿಸಲಾಗಿತ್ತು.

Advertisement

ಮೂವರ ಸಾವು: ಸಿಂಧನೂರು ತಾಲೂಕಿನ ಒಳಬಳ್ಳಾರಿ ಬಳಿಯ ತುಂಗಭದ್ರಾ ನದಿಯಲ್ಲಿ ಇಬ್ಬರು ಯುವಕರು ನದಿ ಪಾಲಾಗಿದ್ದರೆ, ಸಿಂಧನೂರು ಮೂಲದ ಬಾಲಕ ಹಂಪಿಯಲ್ಲಿ ನದಿ ಪಾಲಾಗಿರುವ ದುರಂತ ಸಂಭವಿಸಿದೆ. ಅದನ್ನು ಹೊರತಾಗಿಸಿ ಮತ್ತೆಲ್ಲೂ ಅಹಿತಕರ ಘಟನೆಗಳು ನಡೆದಿಲ್ಲ.

ರಂಗೋಲಿ-ವಿವಿಧ ಸ್ಪರ್ಧೆ: ಸಂಕ್ರಾಂತಿ ಹಬ್ಬದ ನಿಮಿತ್ತ ನಗರದಲ್ಲಿ ಸಾಕಷ್ಟು ಬಡಾವಣೆಗಳಲ್ಲಿ ಮನೆಗಳ ಮುಂದೆ ರಂಗೋಲಿ ಬಿಡಿಸಲಾಗಿತ್ತು. ಯುವತಿಯರು ಬಣ್ಣಬಣ್ಣದ ರಂಗೋಲಿ ಬಿಡಿಸುವ ಮೂಲಕ ಹಬ್ಬವನ್ನು ಸಡಗರದಿಂದ ಆಚರಿಸಿದರು. ಉಳಿದಂತೆ ಗ್ರಾಮೀಣ ಭಾಗದಲ್ಲೂ ಕಲ್ಲು ಎತ್ತುವ ಸ್ಪರ್ಧೆ, ಉಸುಕಿನ ಚೀಲ ಹೊರುವ ಸ್ಪರ್ಧೆಯಂಥ ಕ್ರೀಡೆಗಳನ್ನು ಆಯೋಜಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next