Advertisement

AI ಅಳವಡಿಸಿಕೊಂಡಾಗ ಅಭಿವೃದ್ಧಿ ಸಾಧ್ಯ

03:24 PM Jan 23, 2024 | Team Udayavani |

ಮಾನವನ ವಿಕಾಸವಾದಂತೆ ಅವನ ಅವಶ್ಯಕತೆಗಳೂ ಬದಲಾಗುತ್ತಾ ಬಂದಿವೆ. ಶತಮಾನಗಳಿಂದಲೂ ಮನುಷ್ಯನ ಆವಶ್ಯಕತೆಗಳಿಗೆ ತಕ್ಕಂತೆ ಹೊಸ ಹೊಸ ಆವಿಷ್ಕಾರಗಳಾಗುತ್ತಿವೆ. ಪ್ರತೀ ಆವಿಷ್ಕಾರದ ಉದ್ದೇಶ, ಮನುಷ್ಯನ ಕೆಲಸಗಳನ್ನು ಸರಳಗೊಳಿಸುವುದಾಗಿದೆ. ಅಂತಹದ್ದೇ ಆವಿಷ್ಕಾರಗಳಲ್ಲೊಂದು ಕೃತಕ ಬುದ್ಧಿಮತ್ತೆ.

Advertisement

ಹೆಸರೇ ಸೂಚಿಸುವಂತೆ ಕೃತಕವಾಗಿ ಸೃಷ್ಟಿಸಲ್ಪಟ್ಟ ಬುದ್ಧಿಮತ್ತೆಯೇ ಕೃತಕ ಬುದ್ಧಿಮತ್ತೆ ಅಥವಾ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ (ಎಐ). ಮಾನವನ ಬುದ್ಧಿ ಸಾಮರ್ಥ್ಯದಿಂದ ಸೃಷ್ಠಿಯಾಗಿರುವ ಕೃತಕ ಬುದ್ಧಿಮತ್ತೆ ಪ್ರಸ್ತುತ ಜಗತ್ತಿನಾದ್ಯಂತ ಸದ್ದು ಮಾಡುತ್ತಿದೆ. ಜಗತ್ತಿನ ಪ್ರತಿಯೊಂದು ಕ್ಷೇತ್ರದಲ್ಲೂ ತನ್ನ ಛಾಪನ್ನು ಮೂಡಿಸಿ ವಿಶೇಷ ಅಲೆಯೊಂದನ್ನು ಸೃಷ್ಟಿಸಿದೆ.

ವಿದ್ಯಾರ್ಥಿಯೊಬ್ಬನ ಪ್ರಶ್ನೆಗೆ ಉತ್ತರ ಕಂಡುಹಿಡಿಯುವುದರಿಂದ ಹಿಡಿದು ರಾಷ್ಟದ ರಕ್ಷಣಾ ವ್ಯವಸ್ಥೆಯವರೆಗೆ ಪ್ರತಿಯೊಂದು ವಲಯದಲ್ಲೂ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ತನ್ನ ಹೆಜ್ಜೆಯನ್ನೂರಿದೆ. ಕೃತಕ ಬುದ್ಧಿಮತ್ತೆಯ ಜನನವಾಗಿ ದಶಕಗಳೇ ಕಳೆದಿದ್ದರೂ ಇತ್ತೀಚಿನ ವರ್ಷಗಳಲ್ಲಿ ಅದರ ಪ್ರಭಾವ ಹೆಚ್ಚಾಗಿ ಕಾಣುತ್ತಿದ್ದೇವೆ.

ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಎರಡು ಕಾರಣಗಳಿಂದ ಅತೀ ಹೆಚ್ಚು ಸದ್ದು ಮಾಡುತ್ತಿದೆ. ಒಂದು, ಅದರ ಕಾರ್ಯಕ್ಷಮತೆ. ಇನ್ನೊಂದು, ಅದರಿಂದ ಮಾನವನಿಗಾಗುತ್ತಿರುವ ನಷ್ಟ. ಇತ್ತೀಚೆಗೆ ಎಐ ಮಾನವನ ಸ್ಥಾನವನ್ನಾಕ್ರಮಿಸಿಕೊಳ್ಳಲಿದೆ ಎಂಬ ಭಯ ಪ್ರತಿಯೊಬ್ಬರನ್ನೂ ಕಾಡಿದ್ದು ನಿಜ ಆದರೆ ಕೃತಕ ಬುದ್ಧಿಮತ್ತೆಯ ಆವಿಷ್ಕಾರಕ್ಕೆ ಮೂಲ ಕಾರಣ ಮನುಷ್ಯನ ಕೆಲಸದ ಹೊರೆಯನ್ನು ಕಡಿಮೆ ಮಾಡುವುದೇ ಆಗಿದೆ ಹೊರತು ಮನುಷ್ಯನ ಸ್ಥಾನವನ್ನಾಕ್ರಮಿಸಲು ಅಲ್ಲ.

ಮನುಷ್ಯನ ಹೋಲಿಕೆಯಲ್ಲಿ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿದೆ. ಏಕೆಂದರೆ ಮನುಷ್ಯ ಮಾಡಬಲ್ಲ ಕೆಲಸವನ್ನು ಹತ್ತರಷ್ಟು ವೇಗದಲ್ಲಿ ಎಐ ಮಾಡಬಲ್ಲದು. ಅಂತರ್ಜಾಲದಲ್ಲಿರುವ ಮಾಹಿತಿಯನ್ನು ಕಲೆಹಾಕಿ ನಮಗೆ ಬೇಕಾದ ವಿಷಯವನ್ನು ಕ್ಷಣ ಮಾತ್ರದಲ್ಲಿ ಹುಡುಕಿ ನಮ್ಮ ಮುಂದಿಡಬಲ್ಲದು. ಹೊಸ ಆವಿಷ್ಕಾರಗಳ ಸಮರ್ಪಕ ಬಳಕೆಯಿಂದ ನಮ್ಮ ಗುಣಮಟ್ಟವನ್ನು ಸುಧಾರಿಸಬಹುದು. ಅಂತೆಯೇ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಕೂಡ ಮಾನವನ ಕಾರ್ಯಕ್ಷಮತೆಯನ್ನು ವೃದ್ಧಿಸುತ್ತದೆ. ಇಷ್ಟು ವರ್ಷ ನಾವು ಮಾಡುತ್ತಿದ್ದ ಕೆಲಸವನ್ನು ಎಐ ಇನ್ನಷ್ಟು ವೇಗವಾಗಿ ಮಾಡಲು ಸಹಾಯ ಮಾಡುತ್ತದೆ. ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ನಮ್ಮ ಜೀವನ ಶೈಲಿಯನ್ನು ಉನ್ನತೀಕರಿಸುತ್ತಿದೆ; ನಮ್ಮ ಕಾರ್ಯವೈಖರಿಯನ್ನು ವೃದ್ಧಿಸುತ್ತಿದೆ.

Advertisement

ಕಾಲಾನುಕ್ರಮ ಹೊರಬರುತ್ತಿರುವ ಆವಿಷ್ಕಾರಗಳನ್ನು ಹಳಿಯುವುದರಿಂದ ನಮ್ಮ ಜೀವನ ನಿಂತ ನೀರಿನಂತಾಗುವ ಸಾಧ್ಯತೆಗಳು ಹೆಚ್ಚು. ಮಾನವ ಹೊಸತನಕ್ಕೆ ಒಗ್ಗಿಕೊಳ್ಳುವ ಪ್ರಯತ್ನ ಮಾಡಿದಾಗಲೇ ಸುಧಾರಿತ ಜೀವನ ಸಾಧ್ಯ. ಯಾವ ವ್ಯಕ್ತಿ ಹೊಸತನಕ್ಕೆ ತೆರೆದುಕೊಳ್ಳುವನೋ ಆತ ಹೆಚ್ಚಿನ ಸಾಧ್ಯತೆಗಳೆಡೆಗೆ ಸಾಗಬಲ್ಲ. ಪ್ರತಿಯೊಂದು ಅಭಿವೃದ್ಧಿಯೂ ಬದಲಾವಣೆಯಿಂದ ಪ್ರಾರಂಭವಾಗುವುದು. ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಎಂಬ ಬದಲಾವಣೆಯನ್ನು ಅಳವಡಿಸಿಕೊಳ್ಳುವುದರಿಂದ ನಮ್ಮಲ್ಲೂ ಹೊಸದೊಂದು ಬೆಳವಣಿಗೆ ಕಾಣಲು ಸಾಧ್ಯವಾಗಬಹುದು. ಇದೇ ವೇಳೆ ಬದಲಾವಣೆ ಸಕಾರಾತ್ಮಕವಾಗಿದ್ದಾಗ ಆಕ್ರಮಿಸಿಕೊಳ್ಳುವ ಪ್ರಕ್ರಿಯೆಯೂ ನಿಲ್ಲುತ್ತದೆ.

-ಶಿವಕುಮಾರ

ಎಸ್‌.ಡಿ.ಎಂ. ಕಾಲೇಜು, ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next