Advertisement

ಬಿಲ್ಡರ್‌ಗಳ ಅನುಕೂಲಕ್ಕೆ ಅಭಿವೃದ್ಧಿ ನೆಪ?

01:13 AM Dec 22, 2019 | Lakshmi GovindaRaj |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಈಗಾಗಲೇ ಅಭಿವೃದ್ಧಿಯಾಗಿರುವ ಕೆರೆಗಳನ್ನು ಮತ್ತೆ “ಅಭಿವೃದ್ಧಿ’ ಹೆಸರಿನಲ್ಲಿ ಕಾರ್ಪೊರೇಟ್‌ ಸಂಸ್ಥೆಗಳಿಗೆ ವಹಿಸಿಕೊಡುತ್ತಿರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಬಿಬಿಎಂಪಿ ವ್ಯಾಪ್ತಿಯ ದೊಡ್ಡಕಲ್ಲಸಂದ್ರ ಕೆರೆಯನ್ನು ಆಕ್ಷನ್‌ಏಯ್ಡ ಅಸೋಸಿಯೇಷನ್‌ ಹಾಗೂ ಸ್ಥಳೀಯರ ಸಹಕಾರದೊಂದಿಗೆ ಈಗಾಗಲೇ ಬಹುತೇಕ ಅಭಿವೃದ್ಧಿಪಡಿಸಿದ್ದು, ಮುಂದುವರಿದ ಕಾಮಗಾರಿಗಳಿಗೆ ಬಿಬಿಎಂಪಿ 5 ಕೋಟಿ ರೂ. ವೆಚ್ಚದಲ್ಲಿ ಟೆಂಡರ್‌ ಸಹ ಕರೆದಿತ್ತು.

Advertisement

ಕೆರೆಗಳ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಬಿಬಿಎಂಪಿಯ ಕೆರೆ ವಿಭಾಗದ ಅಧಿಕಾರಿಗಳಿಗೆ ಯಾವುದೇ ಮಾಹಿತಿ ನೀಡಿದೆ ಹಾಗೂ ಸಲಹೆ ಸಹ ಪಡೆದುಕೊಳ್ಳದೆ, ಈ ಕೆರೆಯನ್ನು 1.30 ಕೋಟಿ ರೂ. ವೆಚ್ಚದಲ್ಲಿ ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ ಅನುದಾನದಡಿ ಅಭಿವೃದ್ಧಿಪಡಿಸಲು ಮುಂದಾಗಿದೆ. ನಗರದಲ್ಲಿ ಹಲವು ಕೆರೆಗಳು ಇನ್ನೂ ಅಭಿವೃದ್ಧಿಯಾಗದೆ ಇವೆ. ಹೀಗಿರುವಾಗ ಈಗಾಗಲೇ ಅಭಿವೃದ್ಧಿ ಹೊಂದಿರುವ ದೊಡ್ಡಕಲ್ಲಸಂದ್ರ ಕೆರೆಯನ್ನು ಮತ್ತೂಮ್ಮೆ ಸಿಎಸ್‌ಆರ್‌ ಅಡಿ ನೀಡಲಾಗಿದೆ. ಕೆರೆಯ ಸಮೀಪವೇ ಬಿಲ್ಡರ್‌ಗಳು ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸುತ್ತಿದ್ದು, “ಸಿಎಸ್‌ಆರ್‌’ ಹಿಂದೆ ಈ ಕಾರ್ಪೊರೇಟ್‌ ಬಿಲ್ಡರ್‌ ಕಂಪನಿಗಳ ಲಾಬಿ ಕೆಲಸ ಮಾಡಿದೆ ಎಂಬ ಆರೋಪ ಕೇಳಿಬರುತ್ತಿದೆ.

ಬಿಬಿಎಂಪಿಗೆ ಮಾಹಿತಿಯೇ ಇಲ್ಲ: ದೊಡ್ಡಕಲ್ಲಸಂದ್ರ ಕೆರೆಯನ್ನು ಸಿಎಸ್‌ಆರ್‌ ಅಡಿ ಅಭಿವೃದ್ಧಿಗೆ ನೀಡುವ ಮುನ್ನ ಬಿಬಿಎಂಪಿ ಅಧಿಕಾರಿಗಳಿಗೆ ಯಾವುದೇ ಮಾಹಿತಿ ನೀಡಿಲ್ಲ. ಅಲ್ಲದೆ, ಈ ಕೆರೆ ಅಭಿವೃದ್ಧಿಪಡಿಸಲು ಈಗಾಗಲೇ ಬಿಬಿಎಂಪಿ 5 ಕೋಟಿ ರೂ. ಮೊತ್ತದ ಟೆಂಡರ್‌ ಕರೆದಿತ್ತು. ಈಗ ಆ ಟೆಂಡರ್‌ ಪ್ರಕ್ರಿಯೆ ರದ್ದುಪಡಿಸುವುದಕ್ಕೆ ಬಿಬಿಎಂಪಿ ಮುಂದಾಗಿದೆ. ದೊಡ್ಡಕಲ್ಲಸಂದ್ರ ಕೆರೆಯ ಸಮೀಪವೇ ಖಾಸಗಿ ಸಂಸ್ಥೆಯೊಂದು ವಸತಿ ಸಮುಚ್ಛಯಗಳನ್ನು ನಿರ್ಮಾಣ ಮಾಡಿದೆ. ಈಗಲೂ ಹಲವು ಅಂತಸ್ತಿನ ಕಟ್ಟಡಗಳು ನಿರ್ಮಾಣ ಹಂತದಲ್ಲಿವೆ. ಅಪಾರ್ಟ್‌ಮೆಂಟ್‌ನ ಒಳಚರಂಡಿ ನೀರು ದೊಡ್ಡಕಲ್ಲಸಂದ್ರ ಕೆರೆಗೆ ಸೇರುತ್ತಿದ್ದು, ಕಟ್ಟಡ ನಿರ್ಮಾಣದಲ್ಲಿ ತೊಡಗಿಸಿಕೊಂಡಿರುವ ಕಾರ್ಮಿಕರಿಂದಲೂ ಕೆರೆ ಹಾಳಾಗುತ್ತಿದೆ ಎಂದು ಆಕ್ಷನ್‌ಏಯ್ಡ ಅಸೋಸಿಯೇಷನ್‌ ಸದಸ್ಯ ರಾಘವೇಂದ್ರ ಪಚ್ಚಾಪುರ ದೂರಿದ್ದಾರೆ. ಇದೇ ಕಾರಣಕ್ಕೆ ಖಾಸಗಿ ಬಿಲ್ಡರ್‌ಗಳು ತಮ್ಮ ನ್ಯೂನತೆಗಳನ್ನು ಮುಚ್ಚಿ ಹಾಕುವ ಉದ್ದೇಶದಿಂದ ಅಭಿವೃದ್ಧಿ ನೆಪ ಹಿಡಿದುಕೊಂಡಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.

ಜೀವಸಂಕುಲದ ಮೇಲೆ ಪರಿಣಾಮ: ಕೆರೆಗಳು ಸಾರ್ವಜನಿಕರ ಸ್ವತ್ತು. ಇದರ ಅಭಿವೃದ್ಧಿಯನ್ನು ಯಾವುದೇ ಕಾರಣಕ್ಕೂ ಖಾಸಗಿ ಸಂಸ್ಥೆಗೆ ನೀಡಬಾರದು. ಕೆರೆಗಳನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸುವುದರಿಂದ ಜೀವಸಂಕುಲದ ಮೇಲೆ ಪರಿಣಾಮ ಉಂಟಾಗಲಿದೆ ಎಂದು ಪರಿಸರ ತಜ್ಞರಾದ ಡಾ.ಕ್ಷಿತಿಜ್‌ ಅರಸ್‌ ಹೇಳುತ್ತಾರೆ. ಖಾಸಗಿ ಸಂಸ್ಥೆಯು ಅರ್ಪಾಟ್‌ಮೆಂಟ್‌ ನಿವಾಸಿಗಳ ಅನುಕೂಲಕ್ಕೆ ತಕ್ಕಂತೆ ಕೆರೆ ಅಭಿವೃದ್ಧಿಪಡಿಸುವ ಸಾಧ್ಯತೆ ಇದೆ.

ಜತೆಗೆ ಕೆರೆಯ ಜಾಗ ಸಹ ಒತ್ತುವರಿ ಮಾಡಬಹುದು. ಅಲ್ಲದೆ, ಇಲ್ಲಿರುವ 43 ಜಾತಿಯ 354 ಮರಗಳು, 94 ಪಕ್ಷಿ ಪ್ರಭೇದಗಳು, 38 ಚಿಟ್ಟೆ ಸಂತತಿಗೂ ತೊಂದರೆಯಾಗಬಹುದು ಎಂಬ ಆತಂಕ ವ್ಯಕ್ತಪಡಿಸುತ್ತಾರೆ. ಖಾಸಗಿ ಸಂಸ್ಥೆ ಕೆರೆಯ ಸಮೀಪ ನಿರ್ಮಿಸುತ್ತಿರುವ ಅರ್ಪಾಟ್‌ಮೆಂಟ್‌ನಲ್ಲಿ 2,500 ಪ್ಲ್ರಾಟ್‌ಗಳಿದ್ದು, ಇದೇ ಕಾರಣಕ್ಕೆ ಅವರು ಅಭಿವೃದ್ಧಿಪಡಿಸಲು ಮುಂದಾಗಿರಬಹುದು. ಇದರ ಬದಲು ಸ್ಥಳೀಯರ ಸಹಭಾಗಿತ್ವದಲ್ಲಿ ಅಭಿವೃದ್ಧಿ ನಡೆದರೆ ಮಾತ್ರ ಕೆರೆ ಉಳಿಯಲಿದೆ ಎಂದು ಕ್ಷಿತಿಜ್‌ ತಿಳಿಸುತ್ತಾರೆ.

Advertisement

ಆರು ಕೆರೆಗಳು ನಿರ್ವಹಣೆ ಮತ್ತು ಅಭಿವೃದ್ಧಿ: ದೊಡ್ಡಕಲ್ಲಸಂದ್ರ ಕೆರೆಯಷ್ಟೇ ಅಲ್ಲದೆ ಇನ್ನೂ ಆರು ಕೆರೆಗಳನ್ನು ನಿರ್ವಹಣೆ ಮತ್ತು ಅಭಿವೃದ್ಧಿಗಾಗಿ ಖಾಸಗಿ ಕಂಪನಿಗಳಿಗೆ ವಹಿಸಲು ಸರ್ಕಾರ ನಿರ್ಧರಿಸಿದ್ದು, ಮುಂದಿನ ದಿನಗಳಲ್ಲಿ ಅವುಗಳ ಹೊಣೆ ಆಯಾ ಕಂಪನಿಗಳದ್ದಾಗಲಿದೆ. ಮಾರಸಂದ್ರ ಕೆರೆ, ಕಮ್ಮಸಂದ್ರ, ದೊಡ್ಡ ನಾಗಮಂಗಲ, ದೊಡ್ಡ ತೂಗೂರು, ದೊಡ್ಡಕಲ್ಲಸಂದ್ರ, ಕಾರೇಹಳ್ಳಿ ಕೆರೆಗಳನ್ನು ಸುಮಾರು 37 ಕೋಟಿ ರೂ. ವೆಚ್ಚದಲ್ಲಿ ನಿರ್ವಹಣೆ ಜತೆಗೆ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಈ ಕಂಪನಿಗಳು ತಮ್ಮ ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ ಅನುದಾನದಡಿ ಅಭಿವೃದ್ಧಿಪಡಿಸಲಿವೆ ಎಂದು ಅಧಿಕಾರಿಗಳು ತಿಳಿಸುತ್ತಾರೆ.

ಪರಿಸರ ನಾಶಕ್ಕೆ ನಗರಗಳ ಕೊಡುಗೆ ಶೇ.75ಕ್ಕೂ ಹೆಚ್ಚು
ಬೆಂಗಳೂರು: ವಿಶ್ವದ ಎಲ್ಲ ನಗರಗಳ ವಿಸ್ತೀರ್ಣ ಒಂದು ಮಾಡಿ ನೋಡಿದರೆ ಭೂಮಿಯ ಶೇ.2 ಪ್ರಮಾಣಕ್ಕಿಂತ ಕಡಿಮೆ ಇದೆ. ಆದರೆ, ಪರಿಸರ ಮಾಲಿನ್ಯಕ್ಕೆ ನಗರಗಳ ಕೊಡುಗೆ ಶೇ.75ಕ್ಕಿಂತ ಹೆಚ್ಚು ಎಂದು ಪರಿಸರವಾದಿ ಡಾ.ಕ್ಷಿತಿಜ್‌ ಅರಸ್‌ ಹೇಳಿದರು.

ಆಕ್ಷನ್‌ಏಯ್ಡ ಅಸೋಸಿಯೇಷನ್‌ ಮತ್ತು ಜೈನ್‌ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಜೈನ್‌ ವಿವಿ ಸಭಾಂಗಣದಲ್ಲಿ ಶನಿವಾರ ನಡೆದ ನಗರಗಳಲ್ಲಿನ ಕೆರೆಗಳ ಜೀವವೈವಿಧ್ಯತೆ ಸಂವಾದ ಹಾಗೂ ದೊಡ್ಡಕಲ್ಲಸಂದ್ರ ಕೆರೆಯಲ್ಲಿನ ಜೀವವೈವಿಧ್ಯತೆ ವರದಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸುತ್ತಮುತ್ತಲಿನ ಜೀವಸಂಕುಲ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರಗಳು ಸಂವೇದನೆಯಿಂದ ವರ್ತಿಸುತ್ತಿಲ್ಲ ಎಂದು ತಿಳಿಸಿದರು.

ಸ್ಮಾರ್ಟ್‌ಸಿಟಿ, ಮೇಲ್ಸೇತುವೆ ಮತ್ತಿತರ ವಿಚಾರಗಳ ಬಗ್ಗೆ ಮಾತನಾಡುವ ಜನಪ್ರತಿನಿಧಿಗಳು ಪರಿಸರದ ಬಗ್ಗೆ ಮಾತನಾಡುವುದಿಲ್ಲ. ಬೆಂಗಳೂರಿನಲ್ಲಿ ವೈಟ್‌ಟಾಪಿಂಗ್‌ ಮಾಡುವುದರಲ್ಲಿ ಅರ್ಥವೇ ಇಲ್ಲ. ಆರು ಸಾವಿರ ಮಿ.ಮೀ ಮಳೆಯಾದರೆ ವೈಟ್‌ಟಾಪಿಂಗ್‌ ಮಾಡುವುದರಲ್ಲಿ ಅರ್ಥವಿದೆ. ಇದರಿಂದ ನೀರೂ ಉಳಿಯಲಿದೆ. ಆದರೆ, ನಗರದಲ್ಲಿ 900 ಮಿ.ಮೀಗಿಂತ ಹೆಚ್ಚು ಮಳೆಯಾಗುವುದೇ ಇಲ್ಲ. ಈ ರೀತಿಯ ಅವೈಜ್ಞಾನಿಕ ಯೋಜನೆಗಳಿಂದ ಜೀವಸಂಕುಲ ನಶಿಸುತ್ತಿದೆ ಎಂದು ತಿಳಿಸಿದರು.

ಪಕ್ಷಿ ತಜ್ಞ ಉಲ್ಲಾಸ್‌ ಆನಂದ್‌ ಮಾತನಾಡಿ, ದೊಡ್ಡಕಲ್ಲಸಂದ್ರ ಕೆರೆಯ ಸುತ್ತಮುತ್ತಲಿನ ಪ್ರದೇಶದಲ್ಲಿ 43 ಜಾತಿಯ 354 ಮರಗಳು, 94 ಪ್ರಭೇದದ ಪಕ್ಷಿಗಳು ಹಾಗೂ 38 ಭಿನ್ನವಾದ ಚಿಟ್ಟೆಗಳಿವೆ. ಈ ಬಗ್ಗೆ ಮಕ್ಕಳಿಗೆ ತಿಳಿಸಬಹುದು. ಯಾವ ಸಮಯದಲ್ಲಿ ಯಾವ ಪಕ್ಷಿಗಳು ಬರುತ್ತವೆ ಎಂದು ತಿಳಿದುಕೊಳ್ಳಲು ಪಕ್ಷಿಗಳ ಹಾಜರಾತಿ ಪುಸ್ತಕವನ್ನೂ ಇಟ್ಟಿದ್ದೇವೆ. ಹಾಜರಾತಿ ಪುಸ್ತಕ ಇಡುವುದರಿಂದ ಪಕ್ಷಿಗಳ ಸಂತತಿ ಮತ್ತು ಪ್ರಭೇದಗಳ ಬಗ್ಗೆ ಯೂ ತಿಳಿದುಕೊಳ್ಳಬಹುದು. ನಮ್ಮ ದೇಶದಲ್ಲಿ ಭಿನ್ನವಾದ ವಾತಾವರಣ ಇರುವುದರಿಂದ ವೈವಿಧ್ಯಮಯ ಜೀವಸಂಕುಲ ಇದೆ. ಅದನ್ನು ಉಳಿಸಿಕೊಳ್ಳುವ ಕೆಲಸವಾಗಬೇಕಿದೆ ಎಂದರು.

ಪರಿಸರವಾದಿ ಭಾರ್ಗವಿ ರಾವ್‌ ಮಾತನಾಡಿ, ಅರಣ್ಯ ರಕ್ಷಣೆಯ ಬಗ್ಗೆ ರೂಪಿಸಲಾಗಿರುವ ಕಾನೂನುಗಳಿಂದ ಉದ್ದೇಶಪೂರ್ವಕವಾಗಿ 195 ಮರಗಳನ್ನು ಕಾನೂನಿನ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಈ ಮೂಲಕ ದೊಡ್ಡ ಉದ್ದಿಮೆಗಳಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ ಎಂದು ದೂರಿದರು. ಕಾರ್ಯಕ್ರಮದಲ್ಲಿ ಪರಿಸರ ತಜ್ಞೆ ಶುಭಾ ರಾಮಚಂದ್ರನ್‌, ಆಕ್ಷನ್‌ಏಯ್ಡ ಅಸೋಸಿಯೇಷನ್‌ನ ಪ್ರಾದೇಶಿಕ ವ್ಯವಸ್ಥಾಪಕಿ ನಂದಿನಿ ಹಾಗೂ ಸದಸ್ಯ ರಾಘವೇಂದ್ರ ಪಚ್ಚಾಪುರ ಮತ್ತು ದೊಡ್ಡಕಲ್ಲಸಂದ್ರ ಕೆರೆ ಪ್ರದೇಶದ ನಿವಾಸಿಗಳು ಭಾಗವಹಿಸಿದ್ದರು.

ಅರ್ಪಾಟ್‌ಮೆಂಟ್‌ನಿಂದ ಕೊಳಚೆ ನೀರು ಬಿಡಲು ಕೆರೆಗೆ ಪೈಪ್‌ ಅಳವಡಿಸಿದ್ದರು. ಸ್ಥಳೀಯರ ವಿರೋಧ ನಂತರ ಅದನ್ನು ತೆರವುಗೊಳಿಸಿದ್ದಾರೆ. ಅದೇ ನಿರ್ಮಾಣ ಸಂಸ್ಥೆಯೇ ಈಗ ಕೆರೆ ನಿರ್ವಹಣೆಗೆ ಮುಂದಾಗಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
-ವೆಂಕಟೇಶ್‌, ಸ್ಥಳೀಯ ನಿವಾಸಿ

* ಹಿತೇಶ್‌ ವೈ

Advertisement

Udayavani is now on Telegram. Click here to join our channel and stay updated with the latest news.

Next