Advertisement

ನಾಯಕತ್ವ ಗುಣ ಬೆಳೆಸಿ: ಜಯಪಾಲ ಶೆಟ್ಟಿ

05:38 PM Nov 15, 2019 | Suhan S |

ಮುಂಬಯಿ, ನ. 14: ಕಳೆದ ನಾಲ್ಕು ದಶಕಗಳ ಹಿಂದೆ ಹಿರಿಯರ ದೂರದೃಷ್ಟಿ, ನಾಡು-ನುಡಿಯ ಚಿಂತನೆ, ಸಂಸ್ಕೃತಿ-ಸಂಸ್ಕಾರ, ಸಂಪ್ರದಾಯಗಳ ಉದ್ದೀಪನದ ಸದುದ್ದೇಶದಿಂದ ಅನುಭವೀ ತಿಳಿವಳಿಕೆಯ ಸದಸ್ಯರಿಂದ ಸ್ಥಾಪನೆಗೊಂಡ ಕಾಂದಿವಲಿ ಕನ್ನಡ ಸಂಘವು ಸಂಕಲ್ಪ ಸಿದ್ದಿ ಜನಮನ ಕಾರ್ಯಕ್ರಮಗಳನ್ನು ತುಳು-ಕನ್ನಡಿಗರಿಗೆ ನೀಡುವಲ್ಲಿ ಯಶಸ್ವಿಯಾಗಿ ಪ್ರಸ್ತುತ ಮಾದರಿ ಸಂಸ್ಥೆಯಾಗಿ ಬೆಳಿದಿದೆ.

Advertisement

ಪ್ರಸಕ್ತ ಸಂಸ್ಥೆಯ ಬೆಳವಣಿಗೆಯ ಕಾಲಘಟ್ಟದಲ್ಲಿ ಯುವ ಪೀಳಿಗೆಯ ಸಹಕಾರದ ಮೂಲಕ ಪ್ರಗತಿಪರ ಚಿಂತನೆಗೆ ಪೂರಕವಾಗಿ ಸಂಘವನ್ನು ಬೆಳೆಸುವ ಉದ್ದೇಶ ಕಾಂದಿವಲಿ ಕನ್ನಡ ಸಂಘ ಹೊಂದಿದೆ. ಆ ಮೂಲಕ ಸಂಪೂರ್ಣ ಬೆಳವಣಿಗೆಗೆ ಹೊಸ ಆಯಾಮ ನೀಡುವ ಉದ್ದೇಶ ಸಂಘ ಹೊಂದಿದ್ದು, ಸದಸ್ಯ ಬಾಂಧವರ, ತುಳು-ಕನ್ನಡಿಗರ ಪ್ರೋತ್ಸಾಹ ಸದಾಯಿರಲಿ ಎಂದು ಕಾಂದಿವಲಿ ಕನ್ನಡ ಸಂಘದ ಅಧ್ಯಕ್ಷರಾದ ಪೊಲ್ಯ ಜಯಪಾಲ ಶೆಟ್ಟಿ ನುಡಿದರು.

ಕಾಂದಿವಲಿ ಪಾಂಚೋಲಿಯ ಶಾಲೆಯಲ್ಲಿ ನ. 10ರಂದು ಜರಗಿದ ಕಾಂದಿವಲಿ ಕನ್ನಡ ಸಂಘದ 25ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಒಗ್ಗಟ್ಟಾಗಿ ಬೆಳೆದು ಕರಾವಳಿ ಕನ್ನಡಿಗರ ಏಕತೆಯ ಪ್ರತಿರೂಪವಾದ ಈ ಸಂಸ್ಥೆ ಪ್ರಾಮಾಣಿಕತೆ, ದೃಢ ನಿರ್ಧಾರಗಳು, ಸಮಾಜಪರ ಕಾರ್ಯಗಳಿಂದ ಜನಮನ್ನಣೆ ಗಳಿಸಿದೆ. ಸಂಘಟನಾ ಸೌಹಾರ್ದತೆ, ಸಂಸ್ಕೃತಿ, ಸಾಮಾಜಿಕ ನ್ಯಾಯ ಪರಿಕಲ್ಪನೆ ನಮ್ಮಲ್ಲಿ ಸಂಸ್ಕೃತಿಯನ್ನು ಅನಾವರಣಗೊಳಿಸಿದೆ. ಸಾಂಘಿಕತೆ, ಐಕ್ಯತೆ, ಸಮಾನತೆಯ ನಡವಳಿಕೆ ಎದ್ದು ಕಾಣುವ ಸಂಪ್ರದಾಯ ಕಾರ್ಯಚಟುವಟಿಕೆಗಳಿಗೆ ಒತ್ತು ನೀಡುವ ಮೂಲಕ ಸಂಘವನ್ನು ಯುವಶಕ್ತಿಯ ಕೈಗೆ ನೀಡುವ ಅನಿವಾರ್ಯತೆ ಎದುರಾಗಿದೆ.

ಜೊತೆಗೆ ಸಂಘದ ಆರ್ಥಿಕತೆಯನ್ನು ಸುಧಾರಿಸುವ ದೃಷ್ಟಿಯಲ್ಲಿ ಮಹಿಳಾ ಸದಸ್ಯರು, ಹಿರಿಯರು, ಯುವಕರು, ಸಹಕರಿಸಬೇಕು. ಸಮಯೋಚಿತ ಪ್ರಗತಿಯ ಮೂಲಕ ಆಧ್ಯಾತ್ಮಿಕ, ಸಾಂಸ್ಕೃತಿಕ ಆರ್ಥಿಕವಾಗಿಯೂ ಪ್ರಗತಿ ಸಾಧಿಸಿದ ಸಂಸ್ಥೆಯಲ್ಲಿ ಯುವ ಸದಸ್ಯರು ಸಕ್ರಿಯವಾಗಿ ನೂತನ ಕಾರ್ಯಕ್ರಮದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಯುವ ಜನಾಂಗಕ್ಕೆ ಹಿರಿಯರ ಮಾರ್ಗದರ್ಶನವು ದೊರೆಯಲಿದೆ. ಮುಂದೆ ನೂತನ ಕಚೇರಿ ಕಾರ್ಯರಂಭಗೊಳ್ಳುವಾಗ ‌ ಸಂಘದ ಕರ್ಚು ವೆಚ್ಚಗಳಲ್ಲಿ ಬದಲಾವಣೆಯಾಗಲಿದ್ದು ಅದಕ್ಕೂ ಸದಸ್ಯರು ಗಮನಹರಿಸಿ ಸಹಕರಿಸಬೇಕು ಎಂದು ವಿನಂತಿಸಿದರು.

ಮಹಾಸಭೆಯ ಪ್ರಾರಂಭದಲ್ಲಿ ಮಹಿಳಾ ಸದಸ್ಯರಾದ ಯಮುನಾ ಸಾಲ್ಯಾನ್‌, ಪದ್ಮಾವತಿ ನಾಯ್ಕ ಬಳಗದವರು ಪ್ರಾರ್ಥನೆಗೈದರು. ಜತೆ ಕಾರ್ಯದರ್ಶಿ ಜಗದೀಶ್‌ ಶೆಟ್ಟಿ ಗತ ವರ್ಷದ ವಾರ್ಷಿಕ ವರದಿಯನ್ನು ಸಭೆಯಲ್ಲಿ ಮಂಡಿಸಿದರು. ಸಿಎ ಪ್ರಕಾಶ್‌ ಶೆಟ್ಟಿಯವರನ್ನು ಪ್ರಸಕ್ತ ಸಾಲಿಗೆ ಆಂತರಿಕ ಲೆಕ್ಕ ಪರಿಶೋಧರಾಗಿ ಆಯ್ಕೆಗೊಳಿಸಲಾಯಿತು.

Advertisement

ಸದಸ್ಯರ ಪರಪಾಗಿ ವಿಠಲ್‌ ಶೆಟ್ಟಿ, ವಾಸು ಕೆ. ಪುತ್ರನ್‌, ಲತಾ ಬಂಗೇರ ಸಂಘದ ಪೂರ್ವಾಲೋಚನೆಯ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಡಾ| ಪಿ. ವಿ. ಶೆಟ್ಟಿ ನೇತೃತ್ವದ ಕರ್ನಾಟಕ ನ್ಪೋರ್ಟ್ಸ್ ಅಸೋಶಿಯೇಶನ್‌ನ ಉಪಾಧ್ಯಕ್ಷರಾಗಿ ಆಯ್ಕೆಗೊಂಡ ಸಂಘದ ಉಪಾಧ್ಯಕ್ಷರಾದ ಪ್ರೇಮ್‌ನಾಥ್‌ ಪಿ. ಕೋಟ್ಯಾನ್‌, ಪಾಂಚೋಲಿಯ ಶಾಲೆಯ ಮುಖ್ಯೋಪಾಧ್ಯಾಯರಾದ ಕುಮಾರ್‌ ಹಾಗೂ ಹಲವಾರು ಭಜನಾ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿಗಳಿಸಿದ ಮಹಿಳಾ ಸದಸ್ಯರನ್ನು ಸಂಘದ ಅಧ್ಯಕ್ಷರು ಅಭಿನಂದಿಸಿದರು. ವೇದಿಕೆಯಲ್ಲಿ ಗೌರವ ಕೋಶಾಧಿಕಾರಿ ಸುಂದರ ಶೆಟ್ಟಿ ಮಹಿಳಾ ಕಾರ್ಯಾಧ್ಯಕ್ಷೆ ಸಭಿತಾ ಜಿ. ಪೂಜಾರಿ, ವಾರಿಜಾ ಕರ್ಕೇರ ಮೊದಲಾದವರು ಉಪಸ್ಥಿತರಿದ್ದರು. ಜತೆ ಕಾರ್ಯದರ್ಶಿ ಜಗದೀಶ್‌ ಶೆಟ್ಟಿ ವಂದಿಸಿದರು.

 

ಚಿತ್ರ-ವರದಿ : ರಮೇಶ್‌ ಉದ್ಯಾವರ

Advertisement

Udayavani is now on Telegram. Click here to join our channel and stay updated with the latest news.

Next