ಉಳ್ಳಾಲ: ಪ್ರತಿಭಾನ್ವಿತ ಯುವ ಪದವೀಧರರು ಉನ್ನತ ಶಿಕ್ಷಣ ಮತ್ತು ಉತ್ತಮ ವೃತ್ತಿಪರತೆಯನ್ನು ಹೊಂದುವ ನಿಟ್ಟಿನಲ್ಲಿ ಜೀವನದಲ್ಲಿ ನೈತಿಕ ಮೌಲ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಬೆಂಗಳೂರಿನ ನ್ಯಾಶನಲ್ ಸ್ಕೂಲ್ ಆಫ್ ಇಂಡಿಯಾ ಕಾನೂನು ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ| ಆರ್. ವೆಂಕಟರಾವ್ ಅಭಿಪ್ರಾಯಪಟ್ಟಿದ್ದಾರೆ.
ದೇರಳಕಟ್ಟೆಯ ಎ.ಬಿ. ಶೆಟ್ಟಿ ಸ್ಮಾರಕ ದಂತ ಮಹಾವಿದ್ಯಾಲಯದ ‘ಮನನ’ ಸಭಾಂಗಣದಲ್ಲಿ ನಿಟ್ಟೆ ವಿಶ್ವವಿದ್ಯಾನಿಲಯ ಮತ್ತು ಎ.ಬಿ. ಶೆಟ್ಟಿ ಸ್ಮಾರಕ ದಂತ ಮಹಾವಿದ್ಯಾಲಯದ ಹಳೆ ವಿದ್ಯಾರ್ಥಿಗಳ ಸಂಘದ ಆಶ್ರಯದಲ್ಲಿ ದಂತ ಮಹಾವಿದ್ಯಾಲಯದ ಸ್ಥಾಪಕ ಡೀನ್ ಪ್ರೊ| ಎನ್. ಶ್ರೀಧರ್ ಶೆಟ್ಟಿ 9ನೇ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಜೀವನದಲ್ಲಿ ನೀತಿಶಾಸ್ತ್ರ ವಿಚಾರದಲ್ಲಿ ಉಪನ್ಯಾಸ ನೀಡಿದರು.
ಒಂದು ಶಿಕ್ಷಣ ಸಂಸ್ಥೆಯ ಸರ್ವಾಂಗೀಣ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಹಳೆ ವಿದ್ಯಾ ರ್ಥಿಗಳಿಂದ ದತ್ತಿ ಉಪನ್ಯಾಸದ ಮೂಲಕ ಗೌರವಿಸಲ್ಪಡುವ ಪ್ರೊ| ಶ್ರೀಧರ ಶೆಟ್ಟಿ ಅವರು ಓರ್ವ ವ್ಯಕ್ತಿಯಾಗಿ ಅಲ್ಲ ಒಂದು ಸಂಘಶಕ್ತಿಯಾಗಿ ಬೆಳೆದು ನಿಂತಿರುವುದು ಶ್ಲಾಘನೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ವಿಶ್ವ ವಿದ್ಯಾಲಯದ ಕುಲಾಧಿಪತಿ ಎನ್. ವಿನಯ ಹೆಗ್ಡೆ ಅವರು ಎ.ಬಿ. ಶೆಟ್ಟಿ ದಂತ ಮಹಾವಿದ್ಯಾಲಯದ ಪ್ರಾರಂಭದ ಹಂತದಲ್ಲಿ ಅದರ ಚುಕ್ಕಾಣಿ ಹಿಡಿಯುವ ಮೂಲಕ ಡಾ| ಶ್ರೀಧರ್ ಶೆಟ್ಟಿ ಕಾಲೇಜಿಗೆ ಭದ್ರ ಬುನಾದಿ ಹಾಕಿದ್ದು ಇಂದು ರಾಷ್ಟ್ರದ ಪ್ರತಿಷ್ಠಿತ ಐದು ದಂತ ಮಹಾವಿದ್ಯಾಲಯದಲ್ಲಿ ಸ್ಥಾನ ಪಡೆದುಕೊಳ್ಳಲು ಸಾಧ್ಯವಾಗಿದೆ ಎಂದರು.
ಎ.ಬಿ. ಶೆಟ್ಟಿ ದಂತ ವೈದ್ಯಕೀಯ ಕಾಲೇಜಿನ ಸ್ಥಾಪಕ ಡೀನ್ ಪ್ರೊ| ಎನ್. ಶ್ರೀಧರ್ ಶೆಟ್ಟಿ ಅನಿಸಿಕೆ ವ್ಯಕ್ತಪಡಿಸಿದರು. ನಿಟ್ಟೆ ವಿ.ವಿ. ಸಹಕುಲಾಧಿಪತಿ ಪ್ರೊ| ಎಂ. ಶಾಂತಾರಾಮ ಶೆಟ್ಟಿ , ಕುಲಪತಿ ಡಾ| ಸತೀಶ್ ಕುಮಾರ್ ಭಂಡಾರಿ ಉಪಸ್ಥಿತರಿದ್ದರು. ಎ.ಬಿ. ಶೆಟ್ಟಿ ಸ್ಮಾರಕ ದಂತ ಮಹಾ ವಿದ್ಯಾಲಯದ ಪ್ರಾಂಶುಪಾಲ ಡಾ| ಯು.ಎಸ್. ಕೃಷ್ಣ ನಾಯಕ್ ಸ್ವಾಗತಿಸಿ, ದತ್ತಿ ಉಪನ್ಯಾಸದ ಸಂಯೋಜಕ ಡಾ| ಸುಭಾಷ್ ಬಾಬು ವ್ಯಕ್ತಿ ಪರಿಚಯ ನೀಡಿದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಡಾ| ಅಮರಶ್ರೀ ಎ. ಶೆಟ್ಟಿ ವಂದಿಸಿದರು. ಡಾ| ಡಿಲಿಷಾ ನಿರ್ವಹಿಸಿದರು.