Advertisement

ತುಮಕೂರಲ್ಲಿ ಸ್ಪರ್ಧೆ ಖಚಿತ, ಬೆಂಗಳೂರು ಉತ್ತರಕ್ಕೂ ಗೌಡರ ಕಣ್ಣು

06:57 AM Mar 25, 2019 | Team Udayavani |

ತುಮಕೂರಲ್ಲಿ ಸ್ಪರ್ಧೆ ಖಚಿತ, ಬೆಂಗಳೂರು ಉತ್ತರಕ್ಕೂ ಗೌಡರ ಕಣ್ಣು
ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆಗೆ ಮಾಜಿ ಪ್ರಧಾನಿ ಚಿಂತನೆ | ಎರಡು ಕ್ಷೇತŠಗಳ ಸ್ಪರ್ಧೆಗೆ ಪಕ್ಷದ ವಲಯದಲ್ಲೇ ತೀವ್ರ ಆಕ್ಷೇಪ

Advertisement

ಬೆಂಗಳೂರು: ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ತುಮಕೂರು ಜತೆ ಬೆಂಗಳೂರು ಉತ್ತರ ಕ್ಷೇತ್ರದಲ್ಲೂ ಸ್ಪರ್ಧೆ  ಮಾಡುವ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದಾರೆ. ಹೀಗಾಗಿಯೇ, ಭಾನುವಾರ ರಾತ್ರಿವರೆಗೂ ಉತ್ತರ ಕ್ಷೇತ್ರಕ್ಕೆ ಅಭ್ಯರ್ಥಿ ಹೆಸರು ಫೈನಲ್‌ ಆಗಿರಲಿಲ್ಲ. ಆದರೆ, ದೇವೇಗೌಡರು ಎರಡು ಕಡೆ ಸ್ಪರ್ಧೆ ಮಾಡುವುದಕ್ಕೆ ಪಕ್ಷದ
ವಲಯದಲ್ಲೇ ತೀವ್ರ ಆಕ್ಷೇಪವಿದೆ. ದೇವೇಗೌಡರು ತುಮಕೂರು ಹಾಗೂ ಬೆಂಗಳೂರು
ಉತ್ತರ ಕ್ಷೇತ್ರ ಎರಡರಲ್ಲೂ ಸ್ಪರ್ಧೆ ಮಾಡಿದರೆ ಕಾಂಗ್ರೆಸ್‌ನಿಂದ ಸೀಟು ಹಂಚಿಕೆಯಡಿ ಪಡೆದಿರುವ ಎಂಟು ಕ್ಷೇತ್ರಗಳಲ್ಲಿ ಒಂದೇ ಕುಟುಂಬದವರು ನಾಲ್ಕು ಕ್ಷೇತ್ರಗಳಲ್ಲಿ ಸ್ಪರ್ಧೆ
ಮಾಡಿದ್ದಾರೆ ಎಂಬ ಅಪವಾದ ಎದುರಿಸಬೇಕು. ಹೀಗಾಗಿ, ಒಂದೇ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಎಂದು ನಾಯಕರು ಒತ್ತಡ ಹಾಕುತ್ತಿದ್ದಾರೆ.

ಜಮೀರ್‌ಗೆ ಆಹ್ವಾನ: ಈ ಮಧ್ಯೆ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹಾಗೂ ಸಚಿವ ಜಮೀರ್‌ ಅಹಮದ್‌ ಅವರು ಭಾನುವಾರ ದೇವೇಗೌಡರನ್ನು ಭೇಟಿ ಮಾಡಿದ್ದರು.
ಬೆಂಗಳೂರು ಉತ್ತರದಲ್ಲಿ ನಿಲ್ಲುವಂತೆ ಜಮೀರ್‌ಗೆ ದೇವೇಗೌಡರು ಆಹ್ವಾನ ನೀಡಿದರು.ಆದರೆ, ಅದಕ್ಕೆ ಅವರು ನಿರಾಕರಿಸಿದರು. ಕಾಂಗ್ರೆಸ್‌ನಿಂದ ಬೆಂಗಳೂರು ಕೇಂದ್ರಕ್ಕೆ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್‌ ನೀಡಲಾಗಿದೆ. ಹೀಗಾಗಿ, ಉತ್ತರಕ್ಕೆ ಬೇರೆ ಸಮುದಾಯಕ್ಕೆ ಟಿಕೆಟ್‌ ಕೊಡಿ ಎಂದು ಹೇಳಿದರು ಎನ್ನಲಾಗಿದೆ. ತುಮಕೂರು ಕ್ಷೇತ್ರದಲ್ಲಿನ ಅಸಮಾಧಾನ, ಬಂಡಾಯ ಶಮನಕ್ಕೆ ಶ್ರಮಿಸುವುದಾಗಿ ಇಬ್ಬರೂ ಗೌಡರಿಗೆ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಈ ಮಧ್ಯೆ, ಬಿ.ಎಲ್‌.ಶಂಕರ್‌ರನ್ನು ಜೆಡಿಎಸ್‌ ಚಿಹ್ನೆಯಡಿ ಬೆಂಗಳೂರು ಉತ್ತರದಿಂದ ಸ್ಪರ್ಧೆಗಿಳಿಸಲು ಪ್ರಯತ್ನ
ನಡೆದಿತ್ತು. ನಿವೃತ್ತ ನ್ಯಾ.ವಿ.ಗೋಪಾಲಗೌಡ ಅವರನ್ನು ಬೆಂಗಳೂರು ಉತ್ತರ ಕ್ಷೇತ್ರದಿಂದ ಕಣಕ್ಕಿಳಿಸುವ ಮಾತುಕತೆಗಳೂ ನಡೆಯುತ್ತಿವೆ. ಇದರ ಜತೆಗೆ, ಹಿಂದುಳಿದ
ವರ್ಗಕ್ಕೆ ಕೊಡಬೇಕು ಎಂಬುದೂ ಪರಿಶೀಲನೆಯಲ್ಲಿದೆ ಎಂದು ತಿಳಿದು ಬಂದಿದೆ.

ಮೊಯ್ಲಿ ಭೇಟಿ: ಎಂ.ವೀರಪ್ಪ ಮೊಯ್ಲಿ ಅವರು ಸಚಿವ ಶಿವಶಂಕರರೆಡ್ಡಿ ಜತೆ ದೇವೇಗೌಡ, ಕುಮಾರಸ್ವಾಮಿಯನ್ನು ಭೇಟಿ ಮಾಡಿ, ಬೆಂಬಲ ಕೋರಿದರು.

ಎಚ್‌.ಡಿ. ದೇವೇಗೌಡ ನಾಮಪತ್ರ ಸಲ್ಲಿಕೆ ಇಂದು

Advertisement

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಸೋಮವಾರ ಮಧ್ಯಾಹ್ನ 2.15ಕ್ಕೆ ತುಮಕೂರು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ. ಈ ವೇಳೆ, ಉಪಮುಖ್ಯಮಂತ್ರಿ ಪರಮೇಶ್ವರ್‌ ಸೇರಿದಂತೆ ಕಾಂಗ್ರೆಸ್‌, ಜೆಡಿಎಸ್‌ನ ನಾಯಕರು ಹಾಜರಿರಲಿದ್ದಾರೆ. ಇದೇ ವೇಳೆ, ಜೆಡಿಎಸ್‌ ಹಿರಿಯ ಮುಖಂಡ ಡಿ.ನಾಗರಾಜಯ್ಯ ಕೂಡ ಸೋಮವಾರ ತುಮಕೂರಿನಿಂದ ನಾಮಪತ್ರ ಸಲ್ಲಿಸಲು
ಮುಂದಾಗಿದ್ದಾರೆ. ಈ ಮಧ್ಯೆ, ಮಧುಗಿರಿಯಲ್ಲಿ ಮಾತನಾಡಿದ ಸಂಸದ ದ್ದಹನುಮೇಗೌಡ, “ರಾಜ್ಯದ ಎಲ್ಲ ಹಾಲಿ ಸಂಸದರಿಗೂ ಟಿಕೆಟ್‌ ನೀಡಿದ್ದು, ನನಗೆ ಮಾತ್ರ
ನೀಡಿಲ್ಲ. ಪಕ್ಷವು ಈ ಬಗ್ಗೆ ತೀರ್ಮಾನ ಬದಲಿಸಿ ನನಗೆ ಮತ್ತೆ ಸ್ಪರ್ಧಿಸಲು ಅವಕಾಶ ನೀಡುವಂತೆ ಮನವಿ ಮಾಡಿದರು. ಮೈತ್ರಿಧರ್ಮ ಇಲ್ಲಿ ಪಾಲನೆಯಾಗುತ್ತಿಲ್ಲ. ನನಗೆ
ಅನ್ಯಾಯವಾಗಿದೆ. ಹೀಗಾಗಿ, ಸೋಮವಾರ ನಾನೂ ಕೂಡ ಕಾಂಗ್ರೆಸ್‌ನಿಂದ ನಾಮಪತ್ರ ಸಲ್ಲಿಸುತ್ತೇನೆ’ ಎಂದರು.

ಗೌಡರನ್ನು ಗೆಲ್ಲಿಸುವ ಹೊಣೆ ನನ್ನ ಮೇಲಿದೆ
ದೇವೇಗೌಡರನ್ನು ಈ ಕ್ಷೇತ್ರದಿಂದ ಗೆಲ್ಲಿಸುವ ಜವಾಬ್ದಾರಿಯನ್ನು ನನ್ನ ಮೇಲೆ ಹಾಕಿದ್ದಾರೆ. ನಾವೆಲ್ಲ ಒಗ್ಗಟ್ಟಾಗಿ ಅವರ ಗೆಲುವಿಗೆ ಶ್ರಮಿಸಬೇಕು. ಚುನಾವಣೆಯಲ್ಲಿ ಎಲ್ಲ
ರಣತಂತ್ರಗಳನ್ನು ಪ್ರಯೋಗಿಸಿ ದೇವೇಗೌಡರನ್ನು ಗೆಲ್ಲಿಸಬೇಕು ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ತಿಳಿಸಿದರು. ನಗರದ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ಮಾಜಿ ಶಾಸಕರು ಹಾಗೂ ಕಾಂಗ್ರೆಸ್‌ ಕಾರ್ಯಕರ್ತರ ಸಭೆ ನಡೆಸಿ, ನಮ್ಮ ಪಕ್ಷದ ಯಾವ ಮುಖಂಡರೂ ಬಂಡಾಯ ಏಳಬಾರದು. ಎಲ್ಲರೂ ಒಗ್ಗಟ್ಟಾಗಿ
ದೇವೇಗೌಡರನ್ನು ಗೆಲ್ಲಿಸೋಣ ಎಂದರು. ಈ ವೇಳೆ, ಮುದ್ದಹನುಮೇಗೌಡರಿಗೆ ಟಿಕೆಟ್‌
ತಪ್ಪಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿ ಅವರ ಬೆಂಬಲಿಗರು ಸಭೆಯಿಂದ ಹೊರ ನಡೆದರು.

ಸಿದ್ದಗಂಗಾ ಮಠಕ್ಕೆ ಭೇಟಿ

ತುಮಕೂರು: ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ದೇವೇಗೌಡರು ಭಾನುವಾರ ಸಂಜೆ ಶ್ರೀ ಕ್ಷೇತ್ರ ಸಿದ್ಧಛಿಗಂಗಾ ಮಠಕ್ಕೆ ಭೇಟಿ ನೀಡಿ, ಡಾ.ಶ್ರೀ ಶಿವಕುಮಾರ ಸ್ವಾಮೀಜಿ
ಅವರ ಲಿಂಗೈಕ್ಯ ಗದ್ದುಗೆಗೆ ಪೂಜೆ ಸಲ್ಲಿಸಿದರು. ನಂತರ, ಶ್ರೀ ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದರು. ಈ ವೇಳೆ ಶ್ರೀಗಳೊಂದಿಗೆ ಕೆಲ ಹೊತ್ತು ಮಾತನಾಡಿದರು. ನಂತರ, ಕಾಂಗ್ರೆಸ್‌ ಮುಖಂಡರ ಜೊತೆಯೂ ಸ್ವಲ್ಪ ಹೊತ್ತು ಚರ್ಚಿಸಿ, ಸೋಮವಾರ ನಾಮಪತ್ರ ಸಲ್ಲಿಸುವ ಬಗ್ಗೆ
ಮುಖಂಡರಿಗೆ ಮಾಹಿತಿ ನೀಡಿದರು.

ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸರ್ಕಾರದಲ್ಲಿ ಲೋಕಸಭಾ ಚುನಾವಣೆಗೆ ಸೀಟು ಹಂಚಿಕೆಯಾಗಿದ್ದು, ನಮಗೆ ತುಮಕೂರು ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದಾರೆ. ಇಲ್ಲಿಯ ಕಾಂಗ್ರೆಸ್‌ ಮುಖಂಡರುಗಳಾದ ಡಾ.ಜಿ.ಪರಮೇಶ್ವರ್‌, ಟಿ.ಬಿ.ಜಯಚಂದ್ರ ಸೇರಿದಂತೆ ಹಲವು ಮುಖಂಡರು ತುಮಕೂರಿನಿಂದ ಸ್ಪರ್ಧಿಸಬೇಕು ಎಂದು ಒತ್ತಾಯ ಹಾಕಿದರು. ಅವರ ಒತ್ತಾಯಕ್ಕೆ ಮಣಿದು ಸೋಮವಾರ ನಾಮಪತ್ರ ಸಲ್ಲಿಸುವೆ.
● ದೇವೇಗೌಡ, ಮಾಜಿ ಪ್ರಧಾನಿ.

ನಾಳೆ ಬಸವರಾಜು ನಾಮಪತ್ರ
ಮಾಜಿ ಸಂಸದ ಜಿ.ಎಸ್‌.ಬಸವರಾಜ್‌ ಅವರು ಬಿಜೆಪಿ ಅಭ್ಯರ್ಥಿಯಾಗಿ ಪಕ್ಷದ ಮುಖಂಡರ ನೇತೃತ್ವದಲ್ಲಿ ಮಾ.26ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಬಿಜೆಪಿ ಶಾಸಕ ಜೆ.ಸಿ.ಮಾಧುಸ್ವಾಮಿ, ದೇವೇಗೌಡರನ್ನು ಎದುರಿಸಲು ಬಿಜೆಪಿ ಸಿದ್ಧ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next