Advertisement

ದೇವರು ಬೇಕಾಗಿದ್ದಾರೆ…ಹೀಗೊಂದು ಪ್ರಕಟಣೆ

12:25 AM Aug 23, 2019 | mahesh |

ದೇವರು ಇದ್ದಾನೋ, ಇಲ್ಲವೋ ಎಂಬ ಬಗ್ಗೆ ಆಸ್ತಿಕರು ಮತ್ತು ನಾಸ್ತಿಕರ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಆದರೆ ಇಲ್ಲೊಂದು ಹೊಸಬರ ತಂಡ ಗಾಂಧಿನಗರದಲ್ಲಿ ‘ದೇವರು ಬೇಕಾಗಿದ್ದಾರೆ’ ಅಂತ ದೇವರ ಹುಡುಕಾಟಕ್ಕೆ ಇಳಿದಿದೆ. ಹೌದು, ‘ದೇವರು ಬೇಕಾಗಿದ್ದಾರೆ’ ಎನ್ನುವ ಹೆಸರಿನಲ್ಲಿ ಚಿತ್ರವೊಂದು ತೆರೆಗೆ ಬರುತ್ತಿದೆ.

Advertisement

‘ಹಾರಿಜೋನ್‌ ಮೂವೀಸ್‌’ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ‘ದೇವರು ಬೇಕಾಗಿದ್ದಾರೆ’ ಚಿತ್ರಕ್ಕೆ ಕೇಂಜ ಚೇತನ್‌ ಕುಮಾರ್‌ ಕಥೆ, ಚಿತ್ರಕಥೆ ಬರೆದು ಸಂಕಲನ ಮತ್ತು ನಿರ್ದೇಶನ ಮಾಡಿದ್ದಾರೆ. ಹಿರಿಯ ನಟ ಎಸ್‌. ಶಿವರಾಮ್‌, ಮಾಸ್ಟರ್‌ ಅನೂಪ್‌, ಪ್ರಸಾದ್‌ ವಸಿಷ್ಠ, ಸತ್ಯನಾಥ್‌, ಆಟೋ ನಾಗರಾಜ್‌, ನಾಗೇಶ್‌ ಕಾರ್ತಿಕ್‌, ಶಾರದಾ, ಶ್ರೀನಾಥ್‌ ಮೊದಲಾದ ಕಲಾವಿದರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಸದ್ಯ ಚಿತ್ರದ ಪೋಸ್ಟ್‌ ಪ್ರೊಡಕ್ಷನ್‌ನ ಅಂತಿಮ ಹಂತದಲ್ಲಿರುವ ‘ದೇವರು ಬೇಕಾಗಿದ್ದಾರೆ’ ಚಿತ್ರತಂಡ, ಇತ್ತೀಚೆಗೆ ಚಿತ್ರದ ಪ್ರಮೋಶನ್‌ ಕೆಲಸಗಳಿಗೆ ಚಾಲನೆ ನೀಡಿದ್ದು, ಅದರ ಮೊದಲ ಭಾಗವಾಗಿ ಚಿತ್ರತಂಡ ಚಿತ್ರದ ಮೊದಲ ಟೀಸರ್‌ ಅನ್ನು ಬಿಡುಗಡೆ ಮಾಡಿದೆ. ಇತ್ತೀಚೆಗೆ ನಡೆದ ಸಮಾರಂಭದಲ್ಲಿ ನಿರ್ದೇಶಕ ಡಿ. ಸತ್ಯಪ್ರಕಾಶ್‌, ಸಂಭಾಷಣೆಕಾರ ಮಾಸ್ತಿ ಚಿತ್ರದ ಟೀಸರ್‌ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಕೋರಿದರು.

ಇನ್ನು ಚಿತ್ರದ ಕಥಾಹಂದರದ ಬಗ್ಗೆ ಮಾತನಾಡುವ ಚಿತ್ರತಂಡ, ರಸ್ತೆ ಅಪಘಾತದಲ್ಲಿ ತನ್ನ ಕುಟುಂಬದವರನ್ನು ಕಳೆದುಕೊಂಡ ಆರು ತಿಂಗಳ ಮಗು ‘ಅಪ್ಪು’ವನ್ನು ಊರಿನ ಮುಖ್ಯಸ್ಥ ರಂಗಣ್ಣ ಸಾಕಿ ಸಲಗುತ್ತಾರೆ. ‘ಅಪ್ಪು’ಗೆ ಬುದ್ದಿ ಬಂದಾಗ ತನ್ನ ತಂದೆ-ತಾಯಿ ದೇವರ ಬಳಿ ಇದ್ದಾರೆಂದು ತಿಳಿದು ದೇವರನ್ನು ಹುಡುಕುತ್ತ ಹೊರಡುತ್ತಾನೆ. ಮುಂದೆ ಏನಾಗುತ್ತದೆ ಎನ್ನುವುದೇ ಚಿತ್ರದ ಕಥಾಹಂದರ ಎಂದು ಚಿತ್ರದ ಎಳೆಯನ್ನು ಬಿಚ್ಚಿಡುತ್ತದೆ.

‘ದೇವರು ಬೇಕಾಗಿದ್ದಾರೆ’ ಚಿತ್ರಕ್ಕೆ ರುದ್ರಮುನಿ ಬೆಳೆಗೆರೆ ಛಾಯಾಗ್ರಹಣವಿದೆ. ಚಿತ್ರದ ಹಾಡುಗಳಿಗೆ ಜ್ಯೂವೇನ್‌ ಸಿಂಗ್‌ ಸಂಗೀತವಿದೆ. ಚಿತ್ರದಲ್ಲಿ ಒಟ್ಟು 5 ಹಾಡುಗಳಿದ್ದು, ವಿಜಯ್‌ ವಿಶ್ವಮಣಿ, ಮಾರ್ಟಿನ್‌ ಯೋ ಸಾಹಿತ್ಯವಿದೆ. ನಿಧಿನ್‌ ಲಾಲ್, ಆಸ್ರಫ್ ಜಾನ್ಸನ್‌, ಶ್ವೇತಾ ಸುಬ್ರಮಣ್ಯನ್‌ ಮೊದಲಾದವರು ಚಿತ್ರದ ಹಾಡುಗಳಿಗೆ ಧ್ವನಿಯಾಗಿದ್ದಾರೆ. ‘ದೇವರು ಬೇಕಾಗಿದ್ದಾರೆ’ ಚಿತ್ರವನ್ನು ಕೈವಾರ, ಗುಡಿಬಂಡೆ, ಬಾಗೇಪಲ್ಲಿ, ಬೆಂಗಳೂರು ಸುತ್ತಮುತ್ತ ಚಿತ್ರೀಕರಿಸಲಾಗಿದ್ದು, ಚಿತ್ರತಂಡದ ಪ್ಲಾನ್‌ ಪ್ರಕಾರ ಎಲ್ಲವೂ ನಡೆದರೆ, ಅಕ್ಟೋಬರ್‌ ವೇಳೆಗೆ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next