Advertisement

ತತ್ವ ಸಿದ್ಧಾಂತಕ್ಕೆ ಬದ್ಧರಾಗಿದ್ದ ನಾಯಕ ಅರಸು

04:05 PM Aug 21, 2022 | Team Udayavani |

ತುಮಕೂರು: ತತ್ವ ಸಿದ್ಧಾಂತಗಳಿಗೆ ಬದ್ಧವಾಗಿ ಬದುಕಿದಾಗ ಮಾತ್ರ ಗಟ್ಟಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯ. ಅಂತಹ ಘನ ವ್ಯಕ್ತಿತ್ವ ಮಾಜಿ ಮುಖ್ಯಮಂತ್ರಿ ದಿ. ಡಿ.ದೇವರಾಜ ಅರಸು ಅವರದ್ದು ಎಂದು ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ್‌ ಹೇಳಿದರು.

Advertisement

ನಗರದ ಬಾಲಭವನದಲ್ಲಿ ಶನಿವಾರ ಜಿಲ್ಲಾಡಳಿತ, ಜಿಪಂ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಆಶ್ರಯದಲ್ಲಿ ನಡೆದ ಡಿ.ದೇವರಾಜ ಅರಸು ಅವರ 107ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಅರಸು ಅವರು ಮುಖ್ಯಮಂತ್ರಿ ಆಗಿದ್ದಾಗ ಕೈಗೊಂಡಂತಹ ಮಹತ್ತರ ನಿರ್ಧಾರಗಳಲ್ಲಿ ಭೂ ಸುಧಾರಣೆ ಕಾಯ್ದೆ ಪ್ರಮುಖವಾಗಿದ್ದು, ಉಳುವವನೇ ಭೂಮಿಯ ಒಡೆಯ ಯೋಜನೆಯನ್ನು ಜಾರಿಗೆ ತರುವುದರ ಮೂಲಕ ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂಬಂತೆ ಭೂಮಿಯ ಹಕ್ಕನ್ನು ನೀಡಿದವರು ಎಂದರು.

ಜನ ಸಮುದಾಯಕ್ಕೆ ಅನುಕೂಲವಾಗುವಂತ ನೀತಿಗಳಿಗೆ ಬದಲಾವಣೆ ಮಾಡಿ ಭೂ ಸುಧಾರಣೆ ಕಾಯ್ದೆ ಜಾರಿಗೆ ತಂದರು. ವ್ಯಕ್ತಿ-ಶಕ್ತಿಯಾಗಿ ರೂಪುಗೊಂಡಿದ್ದ ಅರಸು ಅವರು ತತ್ವ ಸಿದ್ಧಾಂತಕ್ಕೆ ಬದ್ಧರಾಗಿದ್ದರು ಎಂದು ಹೇಳಿದರು.

ಡಿ.ದೇವರಾಜ ಅರಸು ಅವರ ವಿಚಾರಧಾರೆಗಳ ಕುರಿತು ವಿಶೇಷ ಉಪನ್ಯಾಸ ನೀಡಿದ ತುಮಕೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಸಮಾಜ ಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಅಧ್ಯಕ್ಷರು ಹಾಗೂ ಪ್ರಾಧ್ಯಾಪಕರಾದ ಡಾ.ಕೆ.ಜಿ.ಪರಶುರಾಮ ಮಾತನಾಡಿ, ಗುರಿ ಮತ್ತು ಉದ್ದೇಶಗಳನ್ನು ಸರಿಯಾದ ರೀತಿಯಲ್ಲಿ ಗುರುತಿಸಿಕೊಳ್ಳುವಲ್ಲಿ ಹಿಂದುಳಿದ ವರ್ಗಗಳು ಹಿಂದುಳಿದಿವೆ. ಔದ್ಯೋಗಿಕರಣವೇ ಅಭ್ಯುದಯದ ಮೂಲ. ಸರ್ಕಾರವು ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳ ಮೇಲೆ ಬಂಡವಾಳ ಹೂಡುತ್ತದೆ. ಅದನ್ನು ಸದುಪಯೋಗ ಪಡಿಸಿಕೊಂಡು ಶಿಕ್ಷಣ ಪೂರ್ಣಗೊಳಿಸಿ ಉದ್ಯೋಗ ಪಡೆಯಬೇಕು. ಆ ಮೂಲಕ ಆರ್ಥಿಕ ಸಬಲೀಕರಣ, ಸಾಮಾಜಿಕ ಸಬಲೀಕರಣ ಮತ್ತು ರಾಜಕೀಯ ಸಬಲೀಕರಣವನ್ನು ಸಾಧಿಸಬೇಕೆಂದರು.

Advertisement

ಶಾಸಕ ಜಿ.ಬಿ.ಜ್ಯೋತಿಗಣೇಶ್‌ ಮಾತನಾಡಿ, ಡಿ. ದೇವರಾಜ ಅರಸು ಅವರ ವರ್ಚಸ್ಸು, ಅವರ ಕೊಡುಗೆಗಳು, ಜಾರಿಗೆ ತಂದ ಕಾಯ್ದೆಗಳು ಸಾರ್ವ ಕಾಲಿಕ. ತುಳಿತಕ್ಕೊಳಗಾದವರ ವರ್ಗಗಳಿಗೆ ಸ್ಥಾನಮಾನ ಕಲ್ಪಿಸಿಕೊಟ್ಟ ಧೀಮಂತ ವ್ಯಕ್ತಿತ್ವ ಅವರದು ಎಂದರು.

ಅರಸು ಕುರಿತಾಗಿ ಸಚ್ಚಿದಾನಂದ ಸ್ವಾಮಿಯವರು ಸಾಕಷ್ಟು ಲೇಖನಗಳನ್ನು ಬರೆದಿದ್ದು, ಅವರ ರಾಜಕೀಯ, ವೈಯಕ್ತಿಕ ಜೀವನ ಹಿಂದುಳಿದ ವರ್ಗಗಳನ್ನು ಸಮಾಜದ ಮುಖ್ಯ ವಾಹಿನಿಗೆ ತರುವಲ್ಲಿ ಅವರ ಶ್ರಮ ಸಾರ್ಥಕವಾದದು ಎಂದರು.

ಜಿಲ್ಲಾ ಮಡಿವಾಳ ಸಂಘಕ್ಕೆ ಡಿ.ದೇವರಾಜ ಅರಸು ಪ್ರಶಸ್ತಿ, 50 ಸಾವಿರ ರೂ. ಚೆಕ್‌ನ್ನು ಜಿಲ್ಲಾ ಮಡಿವಾಳ ಸಂಘದ ಅಧ್ಯಕ್ಷ ಲಕ್ಷ್ಮಣ್‌ ಅವರಿಗೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಜಿಪಂ ಸಿಇಒ ಡಾ.ಕೆ. ವಿದ್ಯಾಕುಮಾರಿ, ಉಪವಿಭಾಗಾಧಿಕಾರಿ ವಿ ಅಜಯ್‌, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಗಂಗಪ್ಪ ಎಸ್‌.ಆರ್‌., ಹಿಂದುಳಿದ ವರ್ಗಗಳ ಮುಖಂಡರಾದ ಎಸ್‌.ನಾಗಣ್ಣ, ಆಂಜನಪ್ಪ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಹಾಗೂ ಉದಯವಾಣಿ ಹಿರಿಯ ಜಿಲ್ಲಾ ವರದಿಗಾರ ಚಿ.ನಿ.ಪುರುಷೋತ್ತಮ್‌, ವಿವಿಧ ಹಿಂದುಳಿದ ವರ್ಗದ ಸಮಾಜದ ಮುಖಂಡರು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next