Advertisement

“ದೇವಕಾನ ಕೃಷ್ಣ ಭಟ್‌ ತೆಂಕುತಿಟ್ಟು ಯಕ್ಷಗಾನದ ಮಹಾಕಲಾವಿದ ‘

10:27 PM Jun 13, 2019 | Team Udayavani |

ಕಾಸರಗೋಡು: ದೇವಕಾನ ಕೃಷ್ಣ ಭಟ್‌ ಅವರು ತೆಂಕುತಿಟ್ಟಿನ ಯಕ್ಷಗಾನಕ್ಕೆ ನೀಡಿದ ಕೊಡುಗೆ ಅನನ್ಯವಾದುದು. 1980 ರ ಕಾಲಘಟ್ಟದಲ್ಲಿ ಯಕ್ಷಗಾನ ಪೋಷಾಕುಗಳನ್ನು ತಯಾರು ಮಾಡುವ ಕಾಯಕದಲ್ಲಿ ತಮ್ಮನ್ನು ಸ್ವಯಂ ತೊಡಗಿಸಿಕೊಂಡ ಅವರು ಯಕ್ಷ ಗಾನ ಕಲೆಯ ಒಳಮರ್ಮವನ್ನು ಅರಿತ ಕಲಾವಿದರಾಗಿ ಜನಮನ್ನಣೆ ಪಡೆಯುತ್ತಾ ಬೆಳೆದವರು.

Advertisement

ತೆಂಕುತಿಟ್ಟಿನ ಹಲವು ಮೇಳಗಳಿಗೆ ಸಂಘ ಸಂಸ್ಥೆಗಳಿಗೆ ಹಾಗೂ ಮಕ್ಕಳ ತಂಡಗಳಿಗೆ ಬೇಕಾದ ಪೋಷಾಕುಗಳನ್ನು ನಿರ್ಮಿಸಿಕೊಟ್ಟು ಕಾಸರಗೋಡಿನಲ್ಲಿ ಮಾತ್ರವಲ್ಲ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯ ವ್ಯಾಪ್ತಿಯಾಗಿ ಯಕ್ಷಗಾನ ಕಲೆಯು ಉಳಿಯಲು ಮತ್ತು ಬೆಳೆಯಲು ಕಾರಣಕರ್ತರಾದರು ಎಂದು ಹಿರಿಯ ಯಕ್ಷಗಾನ ಕಲಾವಿದ ನಾಟ್ಯಗುರು ದಿವಾಣ ಶಿವಶಂಕರ ಭಟ್‌ ಅವರು ಹೇಳಿದರು.

ಸಿರಿಚಂದನ ಕನ್ನಡ ಯುವಬಳಗ ಕಾಸರ ಗೋಡು ಸಂಸ್ಥೆಯ ಯಕ್ಷನುಡಿಸರಣಿಯ ಹದಿನಾರನೆಯ ಕಾರ್ಯಕ್ರಮವು ಕಾಸರ ಗೋಡು ಕೋಟೆಕಣಿ ಶ್ರೀ ರಾಮನಾಥ ಸಾಂಸ್ಕೃತಿಕ ಭವನದ ಪ್ರಾಯೋಜಕತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಣ್ಣದ ವೇಷ, ಪೀಠಿಕೆ ವೇಷ, ಎದುರು ವೇಷ, ಪುಂಡು ವೇಷ, ಸ್ತ್ರೀ ವೇಷ ಹಾಗೂ ಹಾಸ್ಯ ವೇಷಗಳ ಸಾಂಪ್ರದಾಯಿಕ ನಡೆಯ ಕುರಿತು ಬಣ್ಣಗಾರಿಕೆಯ ಕುರಿತು ಅವರಿಗೆ ವಿಶೇಷ ಪರಿಜ್ಞಾನವಿತ್ತು. ಆದುದರಿಂದ ಅವರ ಬಣ್ಣಗಾರಿಕೆ ರಾಜ್ಯರಾಷ್ಟ್ರದ ಗಡಿಯನ್ನು ದಾಟಿ ವಿದೇಶದಲ್ಲೂ ಬೆಳಗಿದೆ. ತಮ್ಮ ಕಾಲನಂತರವೂ ತಾವು ಪರಿಪಾಲಿಸಿಕೊಂಡು ಬಂದ ಈ ಶ್ರಮದಾಯಕ ಕೆಲಸ ಉಳಿಯಬೇಕೆಂಬ ಹಂಬಲ ಅವರದಾಗಿತ್ತು. ಆದಕಾರಣ ತಮ್ಮ ಮನೆಯನ್ನು ಮತ್ತು ತಮ್ಮ ಸುಪುತ್ರರನ್ನು ಆ ದಿಶೆಯಲ್ಲಿ ಸಿದ್ಧಗೊಳಿಸಿರುವುದು ಅವರ ಮತ್ತೂಂದು ಮಹತ್ವದ ಸಾಧನೆ ಎಂದು ದಿವಾಣ ಶಿವಶಂಕರ ಭಟ್‌ ಅಭಿಪ್ರಾಯಪಟ್ಟರು.

ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಹರಿದಾಸ ಜಯಾನಂದ ಕುಮಾರ್‌ ಹೊಸದುರ್ಗ ನಾಡಿನ ಎಲ್ಲೆಗಳನ್ನು ಜೋಡಿಸುವಲ್ಲಿ ಯಕ್ಷನುಡಿ ಸರಣಿಯ ಪಾತ್ರ ಮಹತ್ವದ್ದು. ವಿದ್ಯಾರ್ಥಿಗಳನ್ನು ಯುವಜನತೆಯನ್ನು ಯಕ್ಷನುಡಿ ಸರಣಿ ಒಂದುಗೂಡಿಸಿದೆ. ಇದು ಕಾಸರಗೋಡಿನ ಮಟ್ಟಿಗೆ ದೊಡ್ಡ ಸಾಧನೆ. ಚಂದ್ರಗಿರಿ ಹೊಳೆಯ ದಕ್ಷಿಣಕ್ಕೂ ಈ ಸರಣಿ ವ್ಯಾಪಿಸುವಂತೆ ಮಾಡಲು ಸಹಕರಿಸುವೆ ಎಂದರು.

Advertisement

ಅಧ್ಯಕ್ಷತೆಯನ್ನು ಬಳಗದ ಸದಸ್ಯ ಬಾಲಕೃಷ್ಣ ಬೆಳಿಂಜ ವಹಿಸಿದ್ದರು. ಶ್ರೀ ರಾಮನಾಥ ಸಭಾಭವನ ಸಮಿತಿಯ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್‌ ಕೋಟೆಕಣಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸಮಿತಿಯ ಸದಸ್ಯ ಸತ್ಯನಾರಾಯಣ ಸ್ವಾಗತಿಸಿದರು. ಕೋಶಾಧಿಕಾರಿ ಸಂದೇಶ್‌ ಎನ್‌. ವಂದಿಸಿದರು. ಡಾ| ರತ್ನಾಕರ ಮಲ್ಲಮೂಲೆ ಪ್ರಾಸಾವಿಕ ನುಡಿಗಳನ್ನಾಡಿದರು. ತ್ರಿಶಾ ಜಿ.ಕೆ. ಪ್ರಾರ್ಥನೆ ಹಾಡಿದರು.

ಕಾರ್ಯಕ್ರಮದಲ್ಲಿ ಕನ್ನಡ ಜಾಗೃತಿ ಉಪನ್ಯಾಸವನ್ನು ಮಾಡಿದ ಬಳಗದ ಯುವ ಕಲಾವಿದ ಹಾಗೂ ಮಂಗಳೂರು ಪಿ.ಎ.ಎಂಜಿ ನಿಯರಿಂಗ್‌ ಕಾಲೇಜಿನ ಉಪನ್ಯಾಸಕ ಶಶಿಧರ ಕುದಿಂಗಿಲ ಮಾತನಾಡಿ, ಭಾಷೆಯ ಉಳಿವಿನ ಮೂಲಕ ಒಂದು ಪ್ರಾದೇಶಿಕ ಸಂಸ್ಕೃತಿಯೂ ಉಳಿಯುತ್ತದೆ. ಜಾಗತೀಕರಣದ ಪ್ರಭಾವ ಸ್ಥಳೀಯ ಭಾಷೆ ಕಲೆ ಮತ್ತು ಸಂಸ್ಕೃತಿಯನ್ನು ನಾಶ ಮಾಡುತ್ತಿವೆ. ಹೃದಯದ ಭಾಷೆಯ ಅಳಿವು ಮನುಷ್ಯನ ಸೃಜನಾತ್ಮಕ ಬೆಳವಣಿಗೆಯನ್ನೂ ಕುಂಠಿತಗೊಳಿಸುತ್ತದೆ.

ಈ ನಿಟ್ಟಿನಲ್ಲಿ ಕಾಸರ ಗೋಡಿನಲ್ಲಿ ಕನ್ನಡ ಸದಾ ಕಾಲ ಉಳಿಯಬೇಕು. ಕನ್ನಡಿಗರು ಅದರಲ್ಲೂ ಯುವಜನತೆ ಈ ಮರ್ಮವನ್ನು ಅರಿತುಕೊಳ್ಳಬೇಕು. ಇಂದಿನ ಸಾಮಾಜಿಕ ಜಾಲತಾಣಗಳ ಹಾವಳಿಯಿಂದಾಗಿ ಯುವಕರಲ್ಲಿ ಚಿಂತನೆಯ ಮನೋಭಾವ ಹಾಗೂ ಓದುವಿಕೆ ಕಡಿಮೆಯಾಗಿದೆ. ಪತ್ರಿಕೆಯನ್ನು ಓದುವ ಮನೋಭಾವವೂ ಕನ್ನಡಿಗರಲ್ಲಿ ಕಡಿಮೆಯಾಗುತ್ತಿದೆ. ದಿನಪತ್ರಿಕೆಯ ಓದಿನಿಂದ ಸಕಾಲಿಕ ಜ್ಞಾನ ಮಾತ್ರವಲ್ಲ ಭಾಷೆ ಸಂಸ್ಕೃತಿಯ ಆಗುಹೋಗುಗಳನ್ನೂ ತಿಳಿಯಲು ಸಾಧ್ಯ. ದಿನಪತ್ರಿಕೆ ಹಾಗೂ ನಿಯತಕಾಲಿಕಗಳ ಓದುವ ಅಭ್ಯಾಸವನ್ನು ದಿನಚರಿಯ ಒಂದು ಭಾಗವೆಂಬಂತೆ ರೂಢಿಸಿಕೊಳ್ಳಬೇಕು ಎಂದು ಶಶಿಧರ ಅವರು ನುಡಿದರು.

ಇದೇ ಸಂದರ್ಭದಲ್ಲಿ ಈ ಶೈಕ್ಷಣಿಕ ವರ್ಷದಿಂದ ಅಧ್ಯಾಪನ ಬದುಕಿಗೆ ಕಾಲಿರಿಸಿದ ಸಿರಿಚಂದನ ಬಳಗದ ಪದಾಧಿಕಾರಿಗಳಾದ ದಿವಾಕರ ಬಲ್ಲಾಳ್‌ ಎ.ಬಿ, ಪ್ರಶಾಂತ ಹೊಳ್ಳ ಎನ್‌, ಪ್ರದೀಪ್‌ಕುಮಾರ್‌ಎಡನೀರು ಹಾಗೂ ರಾಜೇಶ್‌ಎಸ್‌.ಪಿ. ಇವರಿಗೆ ಅಭಿನಂದನೆ ಸಲ್ಲಿಸಲಾಯಿತು.

ತಾಳಮದ್ದಳೆ
ಸಭಾ ಕಾರ್ಯಕ್ರಮದ ಬಳಿಕ ಸಿರಿಚಂದನ ಬಳಗದ ಯುವ ಕಲಾವಿದರಿಂದ “ಜಾಂಬವತಿ ಕಲ್ಯಾಣ’ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಿತು.

ಭಾಗವತರಾಗಿ ರೋಹಿಣಿ ದಿವಾಣ ಹಾಗೂ ಸಚಿನ್‌ ಶೆಟ್ಟಿ ಕುದ್ರೆಪ್ಪಾಡಿ, ಮದ್ದಳೆಯಲ್ಲಿ ಪುಂಡಿಕೈ ರಾಜೇಂದ್ರ ಪ್ರಸಾದ್‌, ಚೆಂಡೆಯಲ್ಲಿ ಶ್ರೀಸ್ಕಂದ ದಿವಾಣ ಸಹಕರಿಸಿದರು.
ಮುಮ್ಮೇಳದಲ್ಲಿ ಬಲ ರಾಮನಾಗಿ ನವೀನ ಕುಂಟಾರು, ನಾರದನಾಗಿ ಕಾರ್ತಿಕ್‌ ಪಡ್ರೆ, ಶ್ರೀಕೃಷ್ಣನಾಗಿ ಶಶಿಧರ ಕುದಿಂಗಿಲ, ಜಾಂಬವಂತನಾಗಿ ದಿವಾಕರ ಬಲ್ಲಾಳ್‌ ಎ.ಬಿ. ಸಹಕರಿಸಿದರು

ಇದಮಿತ್ಥಂ
ಯಕ್ಷಗಾನದ ಬಣ್ಣಗಾರಿಕೆ ಹಾಗೂ ವೇಷ ಭೂಷಣಗಳ ಸಾಂಪ್ರದಾಯಿಕ ರೂಪುರೇಖೆಗಳ ಬಗ್ಗೆ ವಿಶೇಷವಾಗಿ ಅಧ್ಯಯನ ಮಾಡಿರುವ ದೇವಕಾನರು ತಮ್ಮ ಅಧ್ಯಯನಕ್ಕಾಗಿ ಹಲವು ವರುಷಗಳ ಕಾಲ ಪ್ರಸಿದ್ಧ ಮೇಳಗಳ ಹಿರಿಯ ಕಲಾವಿದರನ್ನು ಭೇಟಿಯಾಗುತ್ತಿದ್ದರು. ತೆಂಕುತಿಟ್ಟಿನ ಪರಂಪರಾಗತ ಶೈಲಿಯನ್ನು ವೇಷಗಳ ವೈಶಿಷ್ಟÂಗಳನ್ನು ಸೂಕ್ಷ್ಮಗಳನ್ನು ಅರ್ಥಮಾಡಿಕೊಂಡಿದ್ದರು. ಆದ ಕಾರಣ ಬಣ್ಣಗಾರಿಕೆ ಹಾಗೂ ವೇಷಭೂಷಣಗಳ ಬಗ್ಗೆ ದೇವಕಾನರು ಇದಮಿತ್ಥಂ ಎಂದು ಹೇಳಬಲ್ಲ ಕಲಾವಿದನೂ ವಿದ್ವಾಂಸನೂ ಆಗಿದ್ದರು ಎಂದು ಶಿವಶಂಕರ ಭಟ್‌ ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next