Advertisement

ಟೊಮ್ಯಾಟೋ ಬೆಲೆ ಕುಸಿತ; ಬೆಳೆಗಾರರು ಕಂಗಾಲು

01:32 PM Jan 26, 2020 | Naveen |

ದೇವದುರ್ಗ: ಒಂದೆಡೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತ ಮತ್ತೂಂದೆಡೆ ಗ್ರಾಹಕರು ಇಲ್ಲದೇ ಟೊಮ್ಯಾಟೋ, ಮೂಲಂಗಿ, ದಾಳಿಂಬೆ ಬೆಳೆದ ರೈತರು ಕಂಗಾಲಾಗುವಂತಾಗಿದೆ. ಪಟ್ಟಣದ ಚಿಲ್ಲರೆ ಮಾರುಕಟ್ಟೆಯಲ್ಲಿ ಟೊಮ್ಯಾಟೋಗೆ ಕೆಜಿಗೆ 10ರಿಂದ 15 ರೂ. ದರ ಇದ್ದರೂ ಗ್ರಾಹಕರು ಟೊಮ್ಯಾಟೋ ಖರೀದಿಗೆ ಮುಂದಾಗುತ್ತಿಲ್ಲ. ಇನ್ನು ರೈತರು ಸುಮಾರು 20ರಿಂದ 22 ಕೆಜಿ ಟೊಮ್ಯಾಟೋ ಇರುವ ಒಂದು ಟ್ರೇಯನ್ನು ದಲ್ಲಾಳಿಗಳ ಮಾರಿದರೆ 130ರಿಂದ 140 ರೂ. ಸಿಗುತ್ತಿದೆ. ಹೀಗಾಗಿ ಕೆಲ ರೈತರು ಪಿಕಪ್‌ ವಾಹನಗಳಲ್ಲಿ ಟೊಮ್ಯಾಟೋ ತುಂಬಿಕೊಂಡು ಹಳ್ಳಿ-ಹಳ್ಳಿ, ಪಟ್ಟಣದ ವಿವಿಧೆಡೆ ಅಲೆದು ಮಾರುತ್ತಿದ್ದಾರೆ.

Advertisement

ತಾಲೂಕಿನಾದ್ಯಂತ 200ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಟೊಮ್ಯಾಟೋ ಬೆಳೆಯಲಾಗಿದೆ. ಕೊಪ್ಪರ, ಕೆ.ಇರಬಗೇರಾ, ಯಲ್ಲಮ್ಮದೊಡ್ಡಿ, ಅರಕೇರಾ, ಆಲ್ಕೋಡ್‌, ಹೊನ್ನಕಾಟಮಳ್ಳಿ ಸೇರಿ ಇತರೆ ನೀರಾವರಿ ಸೌಲಭ್ಯ ಇರುವ ಪ್ರದೇಶದಲ್ಲಿ ರೈತರು ಟೊಮ್ಯಾಟೋ ಬೆಳೆದಿದ್ದಾರೆ. ಉತ್ತಮ ಇಳುವರಿ ಬಂದಿದ್ದು, ಬೆಲೆ ಇಳಿಕೆಗೆ ಇದು ಕೂಡ ಕಾರಣವಾಗಿದೆ. ಪಟ್ಟಣದ ವಾರದ ಶನಿವಾರ ಸಂತೆಯಲ್ಲಿ ಒಂದು ಕೆಜಿಗೆ 10ರಿಂದ 15ರೂ. ವರೆಗೆ ಟೊಮ್ಯಾಟೋ ಮಾರಾಟ ನಡೆಯಿತು. ಹಳ್ಳಿಗಳಿಂದ ಟೊಮ್ಯಾಟೋ ತಂದ ರೈತರು ಸಂಜೆವರೆಗೂ ಹೋದಷ್ಟು ಟೊಮ್ಯಾಟೋ ಮಾರಿ ಉಳಿದವನ್ನು ಅಲ್ಲಿಯೇ ದನಕರುಗಳಿಗೆ ಹಾಕಿ ಹೋಗುವಂತಹ ಸ್ಥಿತಿ ನಿರ್ಮಾಣವಾಗಿದೆ.

ಮೂಲಂಗಿ ಎಸೆದ ರೈತ: ಪಟ್ಟಣದ ವಾರದ ಶನಿವಾರ ಸಂತೆಯಲ್ಲಿ ಮೂಲಂಗಿಗೆ ಬೆಲೆ ಇಲ್ಲದೇ ರೈತನೊಬ್ಬ ಹೋಟೆಲ್‌ ವೊಂದರ ಮುಂದೆ ಎಸೆದು ಹೋದ ಪ್ರಸಂಗ ನಡೆಯಿತು. ಗ್ರಾಹಕರು 2 ರೂ.ಗೆ ಒಂದರಂತೆ ಮೂಲಂಗಿ ಕೇಳುತ್ತಿದ್ದರಿಂದ ಬೇಸತ್ತ ರೈತ ನಿಂಗಪ್ಪ ಎಂಬವರು ದನಕರುಗಳಾದರೂ ತಿನ್ನಲಿ ಹೋಟೆಲ್‌ವೊಂದರ ಮುಂದೆ ನೂರಾರು ಮೂಲಂಗಿಗಳನ್ನು ಎಸೆದು ಹೋದ. ಇವುಗಳನ್ನೇ ಕೆಲವರು ಆರಿಸಿಕೊಡರು. ಉಳಿದವುಗಳನ್ನು ದನಕರುಗಳು ತಿಂದವು.

Advertisement

Udayavani is now on Telegram. Click here to join our channel and stay updated with the latest news.

Next