Advertisement

ನಾಳೆಗೊಂದು ಸುಂದರ ಹೆಸರು..

08:36 PM Jul 24, 2021 | Team Udayavani |

ಭಾರತವು ಪಾಶ್ಚಾತ್ಯ ದೇಶಗಳಿಂದ ಯಾವಾಗಲೂ ಪ್ರತೀ ವಿಷಯಗಳಲ್ಲಿ ಭಿನ್ನ ಎಂದು ಸಾಬೀತುಪಡಿಸುತ್ತಲೇ ಬಂದಿದೆ. ಈ ಭಿನ್ನತೆ ಹಲವು ವಿಷಯಗಳಲ್ಲಿ ಧನಾತ್ಮಕವಾಗಿಯೂ ಇನ್ನು ಕಲವು ವಿಷಯಗಳಲ್ಲಿ ಋಣಾತ್ಮಕವಾಗಿಯೂ ಇದೆ ಎಂದರೆ ಅತಿಶಯೋಕ್ತಿಯಲ್ಲ. ಈ ವ್ಯತ್ಯಾಸಗಳು ನಮಗೆ ಭಾರತದಲ್ಲಿದ್ದಾಗ ಹೆಚ್ಚಾಗಿ ಗಮನಕ್ಕೆ ಬರುವುದಿಲ್ಲ. ಆದರೆ ಬೇರೆ ದೇಶಕ್ಕೆ ಬಂದು ಉಳಿದ ಮೇಲೆ ಇಲ್ಲಿನ ರೀತಿನೀತಿಗಳು  ನಮ್ಮ ಪರಿಸರವನ್ನು, ನಾವು ಬದುಕುವ,  ಯೋಚಿಸುವ, ಚಿಂತಿಸುವ ರೀತಿಯನ್ನು ಬದಲಾಯಿಸುವಂತೆ ಮಾಡುತ್ತದೆ.

Advertisement

ಭಾರತವು ಪಾಶ್ಚಾತ್ಯ ದೇಶಗಳಿಂದ ಯಾವಾಗಲೂ ಪ್ರತೀ ವಿಷಯಗಳಲ್ಲಿ ಭಿನ್ನ ಎಂದು ಸಾಬೀತುಪಡಿಸುತ್ತಲೇ ಬಂದಿದೆ. ಈ ಭಿನ್ನತೆ ಹಲವು ವಿಷಯಗಳಲ್ಲಿ ಧನಾತ್ಮಕವಾಗಿಯೂ ಇನ್ನು ಕಲವು ವಿಷಯಗಳಲ್ಲಿ ಋಣಾತ್ಮಕವಾಗಿಯೂ ಇದೆ ಎಂದರೆ ಅತಿಶಯೋಕ್ತಿಯಲ್ಲ. ಈ ವ್ಯತ್ಯಾಸಗಳು ನಮಗೆ ಭಾರತದಲ್ಲಿದ್ದಾಗ ಹೆಚ್ಚಾಗಿ ಗಮನಕ್ಕೆ ಬರುವುದಿಲ್ಲ. ಆದರೆ ಬೇರೆ ದೇಶಕ್ಕೆ ಬಂದು ಉಳಿದ ಮೇಲೆ ಇಲ್ಲಿನ ರೀತಿನೀತಿಗಳು  ನಮ್ಮ ಪರಿಸರವನ್ನು, ನಾವು ಬದುಕುವ,  ಯೋಚಿಸುವ, ಚಿಂತಿಸುವ ರೀತಿಯನ್ನು ಬದಲಾಯಿಸುವಂತೆ ಮಾಡುತ್ತದೆ.

ವೈದ್ಯಕೀಯ ಲೋಕದಲ್ಲಿ ವ್ಯತ್ಯಾಸಗಳು ಹೊಸದೇನಲ್ಲ. ಇದು ಎಲ್ಲರಿಗೂ ತಿಳಿದಿರು ವಂತದ್ದು. ಡಾಕ್ಟರ್‌ ತನ್ನ ಸಹಾಯ ಕೇಳಿ ಬಂದವನಲ್ಲಿ ಮಾತಾಡುವ ರೀತಿಯಿಂದ ಹಿಡಿದು, ಔಷಧವನ್ನು ಕೊಡುವ ರೀತಿಯೂ ಬೇರೆಯಾಗಿದೆ.

ನನ್ನ ಅಜ್ಜ  ವಾನಳ್ಳಿಯಲ್ಲಿ ಇಡೀ ಸೀಮೆಗೆ ಒಬ್ಬರೇ ವೈದ್ಯರಾಗಿದ್ದವರು. ಹಗಲು ರಾತ್ರಿ ವ್ಯತ್ಯಾಸವಿಲ್ಲದೆ ರೋಗಿಗಳ ಸೇವೆ ಮಾಡುತ್ತಿದ್ದುದನ್ನು ಕಣ್ಣಾರೆ ಕಂಡಿದ್ದೇನೆ. ಕಾಡು ನಡುವಿನ ಹಳ್ಳಿಗಳಲ್ಲಿ, ಮುಂಗಾರು ಮಳೆ ತೆರಪಿಲ್ಲದೆ ಹೊಡೆಯುತ್ತಿದ್ದಾಗಲೂ ಹತ್ತು ಹನ್ನೆರಡು ಮೈಲಿ ನಡೆದುಕೊಂಡು ಹೋಗಿ ರೋಗಿಗಳ ಶುಶ್ರೂಷೆ ಮಾಡುತ್ತಿದ್ದರು. ಇದೆಲ್ಲ ಮುಂದುವರಿದ ದೇಶಗಳಿಗೆ ಗೊತ್ತೇ ಇರಲಿಕ್ಕಿಲ್ಲ.

ನಮ್ಮಲ್ಲಿಗೂ  ಇಲ್ಲಿಗೂ ಇರುವ ವ್ಯತ್ಯಾಸಗಳ ನಡುವೆ ನನಗೆ ವಿಶೇಷವೆಂದು  ಕಾಣಿಸಿದ್ದು ಹಾಗೂ ದಿನಾ ಕಾಡುವಂತಹದ್ದು  ಏನೆಂದರೆ, ಪಾಶ್ಚಾತ್ಯ ದೇಶದ ಜನರು ತಮ್ಮೊಳಗಿರುವ ಸಾಮರ್ಥ್ಯ, ಅಸಾಮರ್ಥ್ಯ, ಅಂಗವಿಕಲತೆ ಹಾಗೂ ಗುಣಪಡಿಸಲಾಗದಂತಹ ಅಸ್ವಸ್ಥತೆಗಳನ್ನು ಸ್ವೀಕರಿಸುವ ರೀತಿ. ಇಲ್ಲಿ ರೋಗಗಳನ್ನು ಸ್ವೀಕರಿಸುವವರು ಹೆಚ್ಚು. ಅಂದರೆ, ತಮ್ಮ ಮಗುವಿಗೆ ತಂತನತೆ ಇದೆ ಎಂದರೆ ಇದೆ ಎಂದು ಒಪ್ಪಿ, ತನ್ನ ಮಗುವಿನ ಬೆಳವಣಿಗೆಗೆ ಯಾವ ರೀತಿ ತಯಾರಾಗಬೇಕೊ ಅದನ್ನೆಲ್ಲ ಮಾನಸಿಕವಾಗಿ ಹಾಗೂ ಭೌತಿಕವಾಗಿ ಸಿದ್ಧಪಡಿಸುವ ರೀತಿ. ಯಾರ ಬಳಿಯು ತಮ್ಮ ಮಗುವಿನ “ವಿಶೇಷತೆಯ’ ಬಗ್ಗೆ ಮುಚ್ಚಿಡುವ ಪ್ರಯತ್ನ ಮಾಡುವುದಿಲ್ಲ. ಕನಿಕರವನ್ನು ಬಯಸುವುದಿಲ್ಲ. ಬದಲಾಗಿ ಬೇರೆಯವರಲ್ಲಿ ಆ ತಂತನತೆ ಬಗೆಗಿನ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಾರೆ. ಡಾಕ್ಟರಿನ ಬಳಿ ಏನು ತೊಡಕಾಗಿದೆ ಎಂದು ತಿಳಿಯುವುದರಲ್ಲಿ ಯಾವುದೇ ಭಯ ಪಡುವುದಿಲ್ಲ. ಮಗುವಿನಲ್ಲಿ ಅಥವಾ ತಮ್ಮ ದೇಹದಲ್ಲಿ ಏನಾದರೂ ತೊಡಕಾಗಿದ್ದರೆ, ಅದಕ್ಕೆ ಉತ್ತರ ಕಂಡುಕೊಳ್ಳಲು ಹಾತೊರೆಯುತ್ತಿರುತ್ತಾರೆ. ತಿಳಿದ ಅನಂತರ  ಆ ಕಾಯಿಲೆಯ ಜತೆ ಗುರುತಿಸಿ ಕೊಳ್ಳಲು ಹಿಂದೆಮುಂದೆ ನೋಡುವ ಪ್ರಮೇಯವೇ ಇರುವುದಿಲ್ಲ. ಆದರೆ ನಮ್ಮ ದೇಶದಲ್ಲಿ ತಮ್ಮ ತೊಂದರೆಗಳನ್ನು ಲೇಬಲ್‌ ಮಾಡಿಕೊಳ್ಳಲು ಜನರು ಹೆದರುತ್ತಾರೆ. ಕೋವಿಡ್‌ ಬಂದುದಕ್ಕೇ ಅವಮಾನದಿಂದ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳೂ ಇವೆ. ಈ ವ್ಯತ್ಯಾಸ, ಇತ್ತೀಚೆಗೆ ನಮ್ಮ ಕ್ಲಿನಿಕ್‌ನಲ್ಲಿ ಬಹಳ ಸ್ಪಷ್ಟವಾಗಿ ತಿಳಿಯಿತು.

Advertisement

ಮೊನ್ನೆ ಒಂದೇ ದಿನ ಇಬ್ಬರು ತಂತನತೆಯುಳ್ಳ ಮಕ್ಕಳನ್ನು ಪರೀಕ್ಷಿಸಿದೆ. ಇಬ್ಬರೂ ಮಕ್ಕಳಿಗೆ 4 ವರ್ಷ. ಇಬ್ಬರೂ ಹುಡುಗಿಯರು. ಒಂದು ಮಗು ಆಸ್ಟ್ರೇಲಿಯನ್ನರದ್ದು ಹಾಗೂ ಇನ್ನೊಂದು ಮಗು ಭಾರತೀಯರದ್ದು. ಇಬ್ಬರೂ ತಮ್ಮ ತಂದೆ-ತಾಯಿಯ ಜತೆ ಬಂದಿದ್ದರು. ಇಬ್ಬರೂ ಮಾತಿನಲ್ಲಿ, ಭಾಷೆಯಲ್ಲಿ,  ಬೇರೆ ಕೌಶಲಗಳಲ್ಲಿ ಅವರ ವಯಸ್ಸಿನ ಮಕ್ಕಳಿಗಿಂತ ಹಿಂದಿದ್ದರು. ಒಂದೇ ವ್ಯತ್ಯಾಸವೆಂದರೆ, ಒಬ್ಬಳಿಗೆ ಮಾತ್ರ “ತಂತನತೆ’ ಉಳ್ಳವಳು ಎಂದು “ಲೇಬಲ್‌’ ಆಗಿತ್ತು, ಇನ್ನೊಬ್ಬಳಿಗೆ ಆಗಿರಲಿಲ್ಲ.

ನಾನು ಪರೀಕ್ಷೆ ನಡೆಸಿದ ಅನಂತರ ಭಾರತೀಯ ಪೋಷಕರಿಗೆ ಕೇಳಿದೆ,  ನಿಮ್ಮ ಮಗುವಿನ ಸಮಸ್ಯೆಯ ಬಗ್ಗೆ ನಿಮಗೆ ಅರಿವಿದೆಯಾ ಎಂದು.

ಅದಕ್ಕೆ ಅವರು ಕೊಟ್ಟ ಉತ್ತರ ಹೀಗಿತ್ತು. “ಮೇಡಮ್‌, ನಮ್ಮ ಮಗು ಬೇರೆಯವರಂತಿಲ್ಲ ಎಂದು ಗೊತ್ತು. ಇದರಿಂದ ನಮ್ಮ ಮನೆಯವರಿಗೆ ಬೇಜಾರಾಗಬಹುದು ಎಂದು ನಾವು ದೇಶ ಬಿಟ್ಟು ಬಂದು ಬಿಟ್ಟೆವು. ಇನ್ನೂ ಇವಳಿಗೆ ತಂತನತೆ ಇದೆ ಎಂದು “ಲೇಬಲ್‌’ ಮಾಡಲು ನಮ್ಮ ಮನಸ್ಸು ಒಪ್ಪುತ್ತಿಲ್ಲ. ನಮ್ಮ ಮಗಳ ಹೆಸರು ಆಕೆಯ ಗುರುತಾಗಬೇಕೇ ಹೊರತು ಆಕೆಯ “ತಂತನತೆ’ ಅಲ್ಲ. ಅವಳಿಗಾದ ತೊಂದರೆಯನ್ನು “ಲೇಬಲ್‌’ ಮಾಡಿಬಿಟ್ಟರೆ, ಅದು ಎಲ್ಲರಿಗೂ ತಿಳಿಯುತ್ತದೆ. ಶಾಲೆಯಲ್ಲಿ ಜಾಗ ಸಿಗೋದು ಕಷ್ಟ !, ಸಿಕ್ಕರೂ ಅವಳ ಸಾಧ್ಯತೆಗಳನ್ನು ಯಾರೂ ಗಮನಿಸೋದೇ ಇಲ್ಲ. ಅವಳ “ತಂತನತೆ’ ಎದ್ದು ನಿಲ್ಲುತ್ತದೆ. ನಾವು ಇದಕ್ಕೆ ತಯಾರಿಲ್ಲ. ನೀವು ಈಕೆಗೆ ಮಾತು ಹೇಳಿಕೊಡಿ. ಬೇರೆ ಮಕ್ಕಳಂತೆಯೇ ನೋಡಿ. ಆದರೆ “ತಂತನತೆ’ ಇರುವವಳು ಎಂದು ಕರೆಯಬೇಡಿ ಎಂದರು.

ಅರೆ! ಆದರೆ ತೊಂದರೆ ಇದ್ದದ್ದಾಗಿದೆ. ಆ ತೊಂದರೆಗೊಂದು ಹೆಸರು ಕೊಡಲು ಅದೆಷ್ಟು ಯೋಚನೆ ಮಾಡುತ್ತಿದ್ದಾರಲ್ಲ.. ಎಂದು ಮನಸ್ಸು ನನ್ನ ಹಳೆಯ ನೆನಪುಗಳನ್ನು ಮೆಲುಕು ಹಾಕತೊಡಗಿತ್ತು. ನಮ್ಮ ದೇಶದಲ್ಲಿ ಕೆಲಸ ಮಾಡುವಾಗ ಅದೆಷ್ಟೋ ತಂದೆತಾಯಂದಿರು ತಮ್ಮ ಮಗುವಿಗೆ ಕಿವಿ ಕೇಳುತ್ತಿಲ್ಲ ಎಂದು ಸ್ಪಷ್ಟಪಡಿಸಿಕೊಂಡ ಅನಂತರವೂ  ಅತ್ತುಅತ್ತು ನಂಬದೇ ಕಿವಿಯ ಸಾಧನವನ್ನೂ ಕೊಳ್ಳದೇ ಹೋದವರು, ಮಗು ಎಲ್ಲರಿಗಿಂತ ಭಿನ್ನವಿದೆ, ತೋರಿಸಿಕೊಂಡರೆ ನಮ್ಮ ಅಕ್ಕಪಕ್ಕದ ಮನೆಯವರು ಏನು ಹೇಳುತ್ತಾರೋ  ಎಂಬ ಭಯವಿರುವ ಪೋಷಕರು, ನನ್ನ ಗಂಡನಿಗೂ ಮಾತು ಬರಲು ತಡವಾಗಿತ್ತು ಎಂದು, ಮಗು ಮಾತಾಡುತ್ತದೆ ಎಂದು ಕಾದು ಕುಳಿತಿರುವರು… ಎಲ್ಲರೂ ಒಮ್ಮೆಲೆ ನೆನಪಾದರು.

ಮಗುವಿನ ತೊಂದರೆ ಒಂದೇ ಆದರೂ ಪೋಷಕರು ಅದನ್ನು ಸ್ವೀಕರಿಸುವ ರೀತಿ ನನಗೆ ಅಚ್ಚರಿ ಉಂಟು ಮಾಡಿದೆ. ಡಾಕ್ಟರು ಹಾಗೂ ನಾವುಗಳು ನಿಮ್ಮಲ್ಲಿ ಅಥವಾ ನಿಮ್ಮ ಮಗುವಿನಲ್ಲಿ ಈ ತೊಂದರೆಯಿದೆ. ಆ ತೊಂದರೆಗೆ ಈ ಹೆಸರು ಎಂದು ಹೇಳಿಬಿಟ್ಟರೆ ನಮ್ಮ ಕೆಲಸವಾಯಿತು ಎಂದು ಅಂದುಕೊಂಡರೆ ಅದು ಭ್ರಮೆ. ನಾವು ಕೊಡೋ ಹೆಸರಿನಲ್ಲಿ ಆ ಮಗುವಿನ “ಭವಿಷ್ಯ’ ಅಡಗಿದೆ ಎಂದು ಎಷ್ಟೋ ಬಾರಿ ಯೋಚಿಸುವುದೇ ಇಲ್ಲ. ಅಷ್ಟಕ್ಕೂ ವೈದ್ಯರಿಗೆ ಅವರು ಸಾವಿರದ ಒಂದನೇ ವ್ಯಕ್ತಿಯಾಗಿರಬಹುದು. ಹೀಗಾಗಿ ಅವರಿಗೆ ಏನೂ ಅನಿಸದಿದ್ದರೆ ಆಶ್ಚರ್ಯವಿಲ್ಲ. ಆದರೆ ವ್ಯಕ್ತಿಗೆ ಇದೇ ಮೊದಲು. ಆತ ನೀವು ಹೆಸರಿಸಿದ ತೊಂದರೆಯನ್ನು ಮೊದಲ ಬಾರಿಗೆ ಕೇಳಿದ್ದಿರಬಹುದು. ಈ ಹೆಸರಿಗೆ ಬೇರೆ ಅರ್ಥ ನೀಡೋಣ. ಮಗುವಿನ ತೊಂದರೆಯನ್ನು ಒಪ್ಪಿಕೊಂಡು ಅವರ ಭವಿಷ್ಯವನ್ನು ಚಂದಗಾಣಿಸಲು ಬದ್ಧರಾಗೋಣ.

ಸ್ಫೂರ್ತಿ, ತಸ್ಮೇನಿಯಾ

Advertisement

Udayavani is now on Telegram. Click here to join our channel and stay updated with the latest news.

Next