Advertisement

ವಿನ್ಯಾಸ ಅನುಮೋದನೆ ಮತ್ತೆ ಯೋಜನಾ ಪ್ರಾಧಿಕಾರಗಳ ಹೆಗಲಿಗೆ

01:15 AM Jan 30, 2024 | Team Udayavani |

ಮಂಗಳೂರು: ಜಮೀನು ವಿನ್ಯಾಸ ಅನು ಮೋದನೆಯನ್ನು ಗ್ರಾಮ ಪಂಚಾಯತ್‌, ನಗರ ಸ್ಥಳೀಯ ಸಂಸ್ಥೆಗಳಿಂದ ಮತ್ತೊಮ್ಮೆ ಕಿತ್ತುಕೊಂಡಿರುವ ನಗರಾಭಿವೃದ್ಧಿ ಇಲಾಖೆ ಆ ಅಧಿಕಾರವನ್ನು ಹಿಂದಿ ನಂತೆಯೇ ನಗರಾಭಿವೃದ್ಧಿ, ಯೋಜನಾ ಪ್ರಾಧಿಕಾರಗಳಿಗೆ ನೀಡಿ ಆದೇಶಿಸಿದೆ.

Advertisement

ಇನ್ನು ಮುಂದೆ 25 ಸೆಂಟ್ಸ್‌ ವರೆಗೆ ಗ್ರಾ.ಪಂ. ಹಾಗೂ 25 ಸೆಂಟ್ಸ್‌ನಿಂದ 1 ಎಕ್ರೆ ವರೆಗೆ ತಾ.ಪಂ.ನಲ್ಲಿ ವಿನ್ಯಾಸ ಅನುಮೋದನೆ ಸಿಗದು. ಅದಕ್ಕೆ ಸಾರ್ವಜನಿಕರು ಜಿಲ್ಲಾ ಕೇಂದ್ರದಲ್ಲಿರುವ ನಗರಾಭಿವೃದ್ಧಿ/ಯೋಜನಾ ಪ್ರಾಧಿಕಾರಕ್ಕೆ ತೆರಳಬೇಕಿದೆ.

ಇದರ ಮಧ್ಯೆ ನಗರಾಭಿವೃದ್ಧಿ ಇಲಾಖೆ ಆದೇಶ ಬಂದಿದ್ದು, ಇನ್ನೂ ಗ್ರಾಮೀಣಾಭಿವೃದ್ಧಿ ಇಲಾಖಾ ವಲಯದಿಂದ ಯಾವುದೇ ಸೂಚನೆ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಆದೇಶವನ್ನು ಜಾರಿಗೊಳಿಸಬೇಕೇ ಬೇಡವೇ ಎಂಬ ಜಿಜ್ಞಾಸೆಯಲ್ಲಿ ಗ್ರಾ.ಪಂ., ಸ್ಥಳೀಯ ಸಂಸ್ಥೆಗಳು ಮುಳುಗಿವೆ.

ಯಾಕೆ ಬದಲಾವಣೆ?
ಯೋಜನಾ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಗ್ರಾ.ಪಂ./ನಗರ ಸ್ಥಳೀಯ ಸಂಸ್ಥೆಗಳಿಂದ ವಿನ್ಯಾಸ ಮಂಜೂರಾಗಿದ್ದು, ಕರ್ನಾಟಕ ನಗರ ಹಾಗೂ ಗ್ರಾಮಾಂತರ ಯೋಜನಾ ಕಾಯ್ದೆಯ ಅವಕಾಶಕ್ಕೆ ವ್ಯತಿರಿಕ್ತವಾಗಿ ದ್ದಾಗಿದೆ ಎಂದು ನ. 15ರಂದು ನಡೆದ ರಿಟ್‌ ಅರ್ಜಿಯ ವಿಚಾರಣೆ ನಡೆಸಿದ ಸಂದರ್ಭ ಹೈಕೋರ್ಟ್‌ ಅಭಿ ಪ್ರಾಯಪಟ್ಟಿತ್ತು. ಈ ಅನುಮೋದನೆಯ ವಿರುದ್ಧ ದೂರು ಸ್ವೀಕರಿಸಿದ ಹಿನ್ನೆಲೆಯಲ್ಲಿ ವಿನ್ಯಾಸ ನಕ್ಷೆ ಮತ್ತು ಖಾತೆಗಳನ್ನೇ ರದ್ದುಗೊಳಿಸಿ ಆದೇಶಿಸಲಾಗಿದೆ. ಇಂಥ ಸಮಸ್ಯೆಯನ್ನು ನಿಯಂತ್ರಿಸಲು ಹಾಗೂ ಭವಿಷ್ಯದಲ್ಲಿ ಪುನರಾವರ್ತಿಯಾಗದಂತೆ ತಡೆಗಟ್ಟಲು ಸರಕಾರದಿಂದ ವಿವರಣೆ ಕೋರಲಾಗಿತ್ತು. ಸ್ಥಳೀಯ ಯೋಜನಾ ಪ್ರದೇಶವ್ಯಾಪ್ತಿಯಲ್ಲಿ ಕರ್ನಾಟಕ ನಗರ ಹಾಗೂ ಗ್ರಾಮಾಂತರ ಯೋಜನಾ ಕಾಯ್ದೆ 1961ರ ಕಲಂ 17ರಡಿಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರಗಳು/ಯೋಜನಾ ಪ್ರಾಧಿಕಾರಗಳು ವಿನ್ಯಾಸ ಅನುಮೋದಿಸಲಿವೆ. ಈ ಅಧಿಕಾರ ಗ್ರಾ.ಪಂ. ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗಿಲ್ಲ ಎಂದು ನಗರಾಭಿವೃದ್ಧಿ ಇಲಾಖೆ ಹೇಳಿದೆ.

ಗ್ರಾ.ಪಂ.ಗಳು/ನಗರ ಸ್ಥಳೀಯ ಸಂಸ್ಥೆಗಳು ಯೋಜನಾ ಪ್ರಾಧಿಕಾರ/ನಗರಾಭಿವೃದ್ಧಿ ಪ್ರಾಧಿಕಾರ ದಿಂದ ವಿನ್ಯಾಸ ಅನುಮೋದನೆ ಪಡೆದಿರುವುದನ್ನು ಖಚಿತಪಡಿಸಿದ ಬಳಿಕವೇ ಖಾತಾ ನೀಡಬೇಕು ಎಂದು ಸೂಚಿಸಲಾಗಿದೆ.

Advertisement

ಅಧಿಕಾರ ನೀಡಿ ವಾಪಸ್‌!
9/11 ದೊರೆಯಲು ಆಗಬೇಕಾದ ವಿನ್ಯಾಸ ಅನುಮೋದನೆಯನ್ನು 2014ರ ಬಳಿಕ ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕರು ಮಾಡಬೇಕಿತ್ತು. 2016ರಲ್ಲಿ ಇದನ್ನು ಪರಿಷ್ಕರಿಸಿ 1 ಎಕ್ರೆ ವರೆಗೆ ತಾ.ಪಂ.ಗೇ ಅನುಮೋದನೆ ಅಧಿಕಾರ ನೀಡಲಾಯಿತು. ಡಿಸೆಂಬರ್‌ ವೇಳೆಗೆ ಅದೂ ಬದಲಾಗಿ 25 ಸೆಂಟ್ಸ್‌ ವರೆಗೆ ಗ್ರಾ.ಪಂ. ಹಾಗೂ 1 ಎಕ್ರೆ ವರೆಗೆ ತಾ.ಪಂ. ಅನುಮೋದನೆ ಅಧಿಕಾರ ನೀಡಲಾಯಿತು. 2022ರಲ್ಲಿ ಮತ್ತೆ ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕರಿಗೇ ಆ ಅಧಿಕಾರ ಸಿಕ್ಕಿತು. 2 ತಿಂಗಳಲ್ಲಿ ಮತ್ತೆ ಬದಲಾವಣೆ ಆಗಿ ಗ್ರಾಮ ಪಂಚಾಯತ್‌, ತಾಲೂಕು ಪಂಚಾಯತ್‌ಗಳಿಗೆ ಅಧಿಕಾರ ನೀಡಲಾಯಿತು. ಈಗ ಅದು ಮತ್ತೆ ಬದಲಾವಣೆ ಆಗಿದೆ.

2014ರ ಮೊದಲು ಇದೇ ಕ್ರಮ ಇತ್ತು. ಬಳಿಕ ಬದಲಾವಣೆ ಆಗಿ ಗ್ರಾ.ಪಂ. ಹಾಗೂ ತಾ.ಪಂ. ವ್ಯಾಪ್ತಿಯಲ್ಲಿ ಅನುಮೋದನೆಗೆ ಅವ ಕಾಶ ನೀಡಿದ್ದು, ಈಗ ಮತ್ತೆ ಹಳೆಯ ವಿಧಾನವನ್ನು ಅನುಸರಿಸಲು ನಗರಾಭಿವೃದ್ಧಿ ಇಲಾಖೆ ಸೂಚಿಸಿದೆ. ಆದರೆ ಗ್ರಾಮೀಣಾಭಿವೃದ್ದಿ ಇಲಾಖೆಯಿಂದ ಯಾವುದೇ ಸೂಚನೆ ಬಂದಿಲ್ಲ.
-ಡಾ| ಕೆ. ಆನಂದ್‌, ಸಿಇಒ, ದ.ಕ. ಜಿಲ್ಲಾ ಪಂಚಾಯತ್‌

-ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next