Advertisement

ದೇಸಾಯರ ವಾಡೆ ಇದಕ್ಕುಂಟು ನೂರಾರು ವರ್ಷಗಳ ಇತಿಹಾಸ

03:50 AM Nov 03, 2018 | |

ವಿಜಯನಗರದ ಅರಸರು ಹಾಗೂ ಬಹುಮನಿ ಸುಲ್ತಾನರ ಆಸ್ಥಾನದಲ್ಲಿದ್ದ ತಿಪ್ಪರಸ ಎಂಬುವವರು, ಮಣೇಧಾಳ ಗ್ರಾಮದಲ್ಲಿ ನೆಲೆ ನಿಂತು ವಾಡೆಯೊಂದನ್ನು ಕಟ್ಟಿಸಿದರಂತೆ. ಅದು ಕಾಲಕ್ರಮೇಣ, ದೇಸಾಯಿ ಮನೆತನದವರಿಗೆ ನಿಜಾಮರಿಂದ ಇನಾಮಿನ ರೂಪದಲ್ಲಿ ಸಿಕ್ಕಿತಂತೆ. ಹಾಗೆನ್ನುತ್ತದೆ ಇತಿಹಾಸ.

Advertisement

 ಕುಷ್ಟಗಿ ತಾಲೂಕಿನ ಮೆಣೇಧಾಳದಲ್ಲಿ ಒಂದು ವಾಡೆ ಇದೆ. 19ನೇ ಶತಮಾನದ ಪೂರ್ವಾರ್ಧದಲ್ಲಿ ನಿರ್ಮಾಣ  ಮಾಡಿದ್ದು ಎನ್ನಲಾದ ಮೆಣೇಧಾಳ ವಾಡೆ ಇಂದಿಗೂ ಗಟ್ಟಿ ಮುಟ್ಟಾಗಿದೆ.  ಈ ವಾಡೆಯ ನಿರ್ಮಾಣಕ್ಕೆ ಸಿಮೆಂಟ್‌ ಇಲ್ಲ. ಬಿಳಿಸುಣ್ಣ, ಉಸುಕು, ಲೋಳೆಸರ, ಬೆಲ್ಲ, ಹತ್ತಿ ಸೇರಿದಂತೆ ಇನ್ನಿತರ ಕಚ್ಚಾ ವಸ್ತುಗಳನ್ನು ಬಳಸಿ, ಎತ್ತಿನ ಗಾಣದ ಮೂಲಕ ಹದಮಾಡಿದ ಮಿಶ್ರಣದಿಂದ ತಯಾರಾದ ಇಟ್ಟಿಗೆಗಳಿಂದ ಈ ಕಟ್ಟಡ ನಿರ್ಮಾಣಮಾಡಿದ್ದಾರೆ. ಸಾವಿರ ವರ್ಷಗಳ ಇತಿಹಾಸ ಹೊಂದಿದೆ ಎನ್ನಲಾದ ಈ ವಾಡೆ, ಈಗಲೂ ಜಬರದಸ್ತಾಗಿದೆ.  ಇದು ನಿಜಾಮರಿಂದ ಬಹುಮಾನದ ರೂಪದಲ್ಲಿ ದೊರಕಿದ್ದು ಎನ್ನಲಾಗಿದೆ.  ಬಹುಮಾನ ಪಡೆದವರು ಅಂದಿನ ದೇಸಾಯಿ ಕುಟಂಬದವರು. ಅಂದಿನ ನಿಜಾಮರು ಇನಾಮು ಕೊಟ್ಟಿದ್ದ ದೇಸಾಯಿಯ ವಂಶಸ್ಥರು ಅದೇ ವಾಡಿಯಲ್ಲಿ (ಮಹಲ್‌)ನಲ್ಲಿ ನಾಲ್ಕು ತಲೆಮಾರಿನಿಂದ ವಾಸಿಸುತ್ತಿದ್ದಾರೆ. ಸದ್ಯ, ದೇಸಾಯಿ ಮನೆತನದ ವಂಶಾವಳಿಯ ಆನಂದರಾವ್‌ ದೇಸಾಯಿ ಅವರ ಕುಟುಂಬದ ಹತ್ತು ಜನ ಇಲ್ಲಿದ್ದಾರೆ. ಈತ್ತೀಚಿಗೆ ಕನ್ನಡ ಮತ್ತು ತೆಲುಗು ಭಾಷೆಯ ಸ್ವರ್ಣ ಮಹಲ್‌ ಎಂಬ ಚಿತ್ರದ ಚಿತ್ರೀಕರಣವನ್ನು ಈ ವಾಡೆಯಲ್ಲಿ ಮಾಡಿದ್ದಾರೆ. 

 ಈ ಮನೆಯ ಇತಿಹಾಸವೇ ರೋಚಕ 
   ವಿಜಯನಗರದ ಕೃಷ್ಣದೇವರಾಯನ ಮಹಾಮಂತ್ರಿಯಾಗಿದ್ದ ತಿಮ್ಮರಸ ಮತ್ತು ಬಹುಮನಿ ದೊರೆಗಳ ಆಸ್ಥಾನಗಳಲ್ಲಿದ್ದ ತಿಪ್ಪರಸ ಎಂಬುವವರು ಈ ಮೆಣೇಧಾಳ ವಾಡೆಯ ಮೂಲ ಪುರುಷರಂತೆ.  ವಿಜಯಪುರ ಭಾಗದಿಂದ ವಲಸೆ ಬಂದ  ತಿಪ್ಪರಸರು, ಮೆಣೇಧಾಳ ಗ್ರಾಮದಲ್ಲಿ ನೆಲೆನಿಂತು, ಈ ಗ್ರಾಮವನ್ನೇ ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡರೆಂಬ ಉಲ್ಲೇಖ ಇತಿಹಾಸದಲ್ಲಿದೆ. ತಿಪ್ಪರಸರ ನಂತರ, ದೇಸಾಯಿ ಮನೆತನದವರು ವಾಡೆಗೆ ವಾರಸುದಾರರಾಗಿ ಅಧಿಕಾರದ ಸೂತ್ರ ಹಿಡಿದರು. ಒಂದನೇ ಸ್ವಾಮಿರಾವ್‌ ದೇಸಾಯಿ, ವಾಡೆಯನ್ನು ನವೀಕರಿಸಿದರು. ತದ ನಂತರ ಒಂದನೇ ವೆಂಕಟರಾವ್‌, ಎರಡನೇ ಸ್ವಾಮಿರಾವ್‌, ವಾಡೆಯ ಕಾರ್ಯಕ್ಷೇತ್ರವನ್ನು ವಿಸ್ತರಿಸಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಂಡರು. ನವಾಬ್‌ರು, ನಿಜಾಮರು ಇವರ ಪ್ರಾಮಾಣಿಕ ಸೇವೆಯನ್ನು ಮೆಚ್ಚಿ, 25 ಹಳ್ಳಿಗಳ ಜಹಗೀರುಗಳ ಕಂದಾಯವನ್ನು ಇವರಿಗೆ ದೊರಕುವಂತೆ ಹುಕುಂ ಹೊರಡಿಸಿ, ಬಿಲ್‌ ಮುಕ್ತೇದಾರನ ಅಧಿಕಾರ ನೀಡಿದರಂತೆ. ಇದು ಇತಿಹಾಸದಿಂದ ತಿಳಿದು ಬರುವ ಮಾಹಿತಿ. 

    ಈ ದೇಸಾಯಿಯವರ ಅಧಿಕಾರದ ವ್ಯಾಪ್ತಿ 25 ಗ್ರಾಮಗಳ 14 ಸಾವಿರ ಪಟ್ಟಾ ಜಮೀನುಗಳು.  ಸುಮಾರು 2 ಸಾವಿರ ಎಕರೆಗಳಷ್ಟನ್ನು ದರ್ಗಾ ಮತ್ತು ದೇವಸ್ಥಾನಗಳ ಪೂಜಾರಿಗಳಿಗೆ ಇನಾಮು ನೀಡಿದ್ದರು. ಸ್ವಾಮಿರಾವ್‌ ದೇಸಾಯಿ ಅತ್ಯಂತ ಮೇಧಾವಿ, ಚಾಣಾಕ್ಷಬುದ್ಧಿಯ ಕರುಣಾಮಯಿ ಯಾಗಿದ್ದರು.

Advertisement

    ತಮ್ಮ ಅಧಿಕಾರಾದ ವ್ಯಾಪ್ತಿಯಲ್ಲಿದ್ದ ಪ್ರತಿ ಗ್ರಾಮಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಕೆರೆಗಳನ್ನು ನಿರ್ಮಿಸಿದರು. ಹಳ್ಳಿಗಳ ಸಮಸ್ಯೆಗಳನ್ನು ನವಾಬರು ಮತ್ತು ನಿಜಾಮರ ಗಮನಕ್ಕೆ ತಂದು ಅವರಿಂದ ಹೆಚ್ಚಿನ ಆರ್ಥಿಕ ಸಹಾಯ ಪಡೆಯುತ್ತಿದ್ದರು.  ನಿಜಾಮರ ಸೈನ್ಯದಲ್ಲಿ ಕ್ಯಾಪ್ಟನ್‌ ಆಗಿದ್ದ ಲಿಯೋನಾರ್ಡ ಮನ್‌ ಎಂಬ ಬ್ರಿಟಿಷ್‌ ವ್ಯಕ್ತಿಯ ನೇತೃತ್ವದಲ್ಲಿ, 1928 ರಿಂದ 1935 ರವರೆಗೆ ಸುಮಾರು ನೂರಕ್ಕೂ ಹೆಚ್ಚು ಬಾವಿಗಳನ್ನು ತೋಡಿಸಿದರು. 

 ಹೀಗಾಗಿ, ವಾಡೆಯ ಮುಖ್ಯದ್ವಾರದ ಮೇಲೆ ಇವರ ಲಾಂಛನವಾದ  ಗಂಡ ಭೇರುಂಡದ ಚಿತ್ರವನ್ನು ಕೆತ್ತಲಾಗಿದೆ. ಈ ಲಾಂಛನವನ್ನು ಈ ದೇಸಾಯಿಯವರ ಅಡಳಿತಕ್ಕೆ ನೀಡಲಾಗಿತ್ತು. ಈಗ ಇದೇ ಲಾಂಛನವನ್ನು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯವರು ಬಳಸುತ್ತಿದ್ದಾರೆ. ದೇಶಕ್ಕೆ 1947ರ ಆಗಸ್ಟ್‌ 15ರಂದು ಸ್ವಾತಂತ್ಯÅ ಸಿಕ್ಕರೂ, ಹೈದರಾಬಾದ್‌ ನಿಜಾಮರ ಆಳ್ವಿಕೆಯಲ್ಲಿದ್ದ ರಾಯಚೂರ, ಕಲಬುರಗಿ, ಬೀದರ್‌ ಜಿಲ್ಲೆಗಳಿಗೆ ಸ್ವಾತಂತ್ರ್ಯ ಸಿಕ್ಕಿದ್ದು 17-9-1948   ರಂದು. ಅಂದೇ ಮಿಲಿಟರಿಯವರ ಸಮ್ಮುಖದಲ್ಲಿ ವಾಡೆಯ ಮೇಲೆ ಹಾರುತಿದ್ದ ನಿಜಾಮರ ಧ್ವಜವನ್ನು ಇಳಿಸಿ ತ್ರಿವರ್ಣ ಧ್ವಜವನ್ನು ಹಾರಿಸಲಾಯಿತು. ಭಾರತ ಸರ್ಕಾರದ ಪರಿಧಿಯೊಳಗೆ ಬಂದ ನಂತರ 25 ಗ್ರಾಮಗಳ ಜಹಗೀರನ್ನೂ ಕಸಿದುಕೊಳ್ಳಲಾಯಿತು. ಉಳುವವನೇ ಹೊಲದೊಡೆಯ  ಒಡೆಯ ಕಾನೂನಿನ ಅಡಿಯಲ್ಲಿ ಅವರಿಗೆ ಭೂಮಿ ಸೇರಿದವು. ವಾಡೆಯ ವೈಭವ ನಿಧಾನಕ್ಕೆ ಕ್ಷೀಣಿಸಿತು. 

ವಾಡೆಯ ಒಳ ಭಾಗದಲ್ಲಿ ಒಂದು ಮಹಲ್‌ ಕೂಡ ಇತ್ತಂತೆ. ಅದೀಗ ಮಹಲ್‌ ಬಿದ್ದು ಹೋಗಿದೆ. ಆದರೆ ಕಲಾತ್ಮಕವಾಗಿ ಶ್ರೀಗಂಧದ ಕಟ್ಟಿಗೆಯಲ್ಲಿ ನಿರ್ಮಿಸಿರುವ ಗಣೇಶನ ಮಂಟಪ ಈಗಲೂ ಆಕರ್ಷಕವಾಗಿದೆ.  ಸಧ್ಯ ಈ ವಾಡೆಯಲ್ಲಿ ಸ್ವಾಮಿರಾವ್‌ ಅವರ ಮೊಮ್ಮಕ್ಕಳಿದ್ದಾರೆ.

-ಈ ವಾಡೆಯು ಎರಡು ಎಕರೆ ಹತ್ತೂಂಬತ್ತು ಗುಂಟೆ ಪ್ರದೇಶದಲ್ಲಿದೆ. ಇದರಲ್ಲಿ ಒಂದು ಎಕರೆಯಷ್ಟು ಮನೆ ಇದೆ. ಹಿಂದೆ 40 ರೂಂಗಳು ಇದ್ದವು. ಈಗ 28 ಮಾತ್ರ ಇದೆ.  ಮೇಲ್‌ ಮಹಡಿ ಕೂಡ ಇದೆ. ಆ ಕಾಲದಲ್ಲಿ ಇದನ್ನು ರಾಜವಾಡೆ ಅನ್ನುತ್ತಿದ್ದರಂತೆ.  “ನಾವು ಒಟ್ಟು ಮೂರು ಕುಟುಂಬದಿಂದ 20 ಜನ ವಾಸ ಮಾಡುತ್ತಿದ್ದೇವೆ ‘ಎನ್ನುತ್ತಾರೆ   ವಾಡೆಯ ವಂಶಸ್ಥ ಆನಂದರಾವ್‌ ದೇಸಾಯಿ ಮೆಣೇಧಾಳ.

ಎನ್‌. ಶಾಮೀದ್‌ ತಾವರಗೇರಾ

Advertisement

Udayavani is now on Telegram. Click here to join our channel and stay updated with the latest news.

Next