Advertisement
ತೊಕ್ಕೊಟ್ಟು ಕಡೆಯಿಂದ ದೇರಳಕಟ್ಟೆ ಸಂಪರ್ಕಿಸುವ ರಸ್ತೆಯಲ್ಲಿ ದಿನವೊಂದಕ್ಕೆ ಸಾವಿರಾರು ವಾಹನ ಸಂಚರಿಸುತ್ತಿದ್ದು, ಆಸ್ಪತ್ರೆ ಎದುರು ವಾಹನ ದಟ್ಟಣೆಯ ಹಿನ್ನಲೆಯಲ್ಲಿ ದೇರಳಕಟ್ಟೆಯಿಂದ ಬ್ಯಾರಿಸ್ ಟರ್ನಿಂಗ್ ಪಾಯಿಂಟ್ ವರೆಗೆ ರಸ್ತೆ ಅಗಲೀಕರಣ (ಚತುಷ್ಪಥ ರಸ್ತೆ) ಕಾಮಗಾರಿ ಒಂದು ತಿಂಗಳಿನಿಂದ ನಡೆಯುತ್ತಿದ್ದು, ಮಣ್ಣು ತುಂಬಿಸುವ ಕೆಲಸ ಆಗುತ್ತಿತ್ತು. ಆದರೆ ರವಿವಾರ ಸುರಿದ ಮಳೆಗೆ ರಸ್ತೆಯಲ್ಲಿದ್ದ ಮಣ್ಣು ಕೆಸರುಮಯವಾಗಿದ್ದು ವಾಹನಗಳು 200ಮೀ.ದೂರವನ್ನು ಕ್ರಮಿಸಲು ಸುಮಾರು 15ನಿಮಿಷ ಪರದಾಡುವ ಸ್ಥಿತಿ ನಿರ್ಮಾಣವಾಯಿತು.
ರಾತ್ರಿವರೆಗೂ ಈ ರಸ್ತೆಯಲ್ಲಿ ಸಂಚರಿಸುವುದೇ ದುಸ್ತರವಾದಾಗ ಕೋಟೆಕಾರು ಮಾಡೂರು ಮಾರ್ಗವಾಗಿ ವಾಹನಗಳು ಸಂಚರಿಸಿತು. ದೇರಳಕಟ್ಟೆಯಿಂದ ಮಂಗಳೂರು ಸಂಚರಿಸುವ ವಾಹನಗಳು ಈ ರಸ್ತೆಯಾಗಿ ಸಂಚರಿಸಿದರೆ, ತೊಕ್ಕೊಟ್ಟು ಕಡೆಯಿಂದ ದೇರಳಕಟ್ಟೆ ಸಂಚರಿಸುವ ವಾಹನಗಳ ಚಾಲಕರು ಮಾಹಿತಿಯ ಕೊರತೆಯಿಂದ ರಸ್ತೆ ದಾಟಲು ಪರದಾಡಬೇಕಾಯಿತು. ಸ್ಥಳೀಯರು ಸುಗಮ ಸಂಚಾರಕ್ಕೆ ಅನುವುಮಾಡಿಕೊಟ್ಟರು.