Advertisement

ಪುತ್ತೂರು, ಸುಳ್ಯ ತಾಲೂಕು: ಜ್ವರ ಬಾಧಿತರ ಸಂಖ್ಯೆ ಹೆಚ್ಚಳ ಡೆಂಗ್ಯೂ ಜ್ವರ: ಮಹಿಳೆ ಸಾವು

12:09 AM Jun 13, 2020 | Sriram |

ಪುತ್ತೂರು/ಸುಳ್ಯ: ಕೋವಿಡ್-19 ಮಹಾಮಾರಿ ನಡುವೆ ಪುತ್ತೂರು ಮತ್ತು ಸುಳ್ಯ ತಾಲೂಕಿನ ಹಲವು ಗ್ರಾಮಗಳಲ್ಲಿ ಡೆಂಗ್ಯೂ ಜ್ವರ ಬಾಧೆ ಕಾಣಿಸಿಕೊಂಡಿದೆ. ಪುತ್ತೂರು ತಾಲೂಕಿನ ಬೆಟ್ಟಂಪಾಡಿಯಲ್ಲಿ ಜೂ. 11ರಂದು ಓರ್ವ ಮಹಿಳೆ ಡೆಂಗ್ಯೂಗೆ ಬಲಿಯಾದ ಬೆನ್ನಲ್ಲೇ ಆತಂಕ ಮನೆ ಮಾಡಿದೆ.

Advertisement

ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಜ್ವರ ಬಾಧಿತರ ಸಂಖ್ಯೆ ಹೆಚ್ಚಳಗೊಳ್ಳುತ್ತಿದ್ದು, ಪರಿಸ್ಥಿತಿ ಎದುರಿಸಲು ಆರೋಗ್ಯ ಇಲಾಖೆ ಕೂಡ ಸಿದ್ಧತೆಯಲ್ಲಿ ತೊಡಗಿದೆ. ಜೂನ್‌ ತಿಂಗಳ 10 ದಿನಗಳಲ್ಲಿ ಎರಡು ತಾಲೂಕಿನಲ್ಲಿ 100ಕ್ಕೂ ಹೆಚ್ಚು ಪ್ರಕರಣಗಳು ಕಂಡು ಬಂದಿವೆ. ಸಾಂಕ್ರಾಮಿಕ ಜ್ವರ ಹಬ್ಬುವಿಕೆ ಪ್ರಮಾಣ ಕೂಡ ವೃದ್ಧಿ ಆಗುತ್ತಿದೆ.

ಈ ಹಿಂದೆ ತತ್ತರಿಸಿದ ತಾಲೂಕು
ಐದಾರು ವರ್ಷಗಳ ಕಾಲ ಚಿಕುನ್‌ ಗುನ್ಯಾ, ಡೆಂಗ್ಯೂ ಜ್ವರ ಉಭಯ ತಾಲೂಕುಗಳ ಜನಜೀವನವನ್ನೇ ತತ್ತರಿಸಿತ್ತು. ಸೊಳ್ಳೆಯಿಂದ ಹಬ್ಬುವ ಈ ಎರಡು ಕಾಯಿಲೆಗಳ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ತನ್ನ ಪರಿಮಿತಿಯಲ್ಲಿ ಪ್ರಯತ್ನಿಸಿದ್ದರೂ ಕೃಷಿ ಆಧಾರಿತ ಪರಿಸರದಲ್ಲಿ ಸೊಳ್ಳೆ ನಿಯಂತ್ರಣ ಸಾಧ್ಯವಾಗದ ಕಾರಣ, ಜ್ವರ ಬಾಧೆಯಿಂದ ಜನರಿಗೆ ಮುಕ್ತಿ ಸಿಗಲಿಲ್ಲ. ಈ ವರ್ಷವು ಮುಂಗಾರು ಮಳೆ ಆರಂಭಕ್ಕೆ ಮೂರು ತಿಂಗಳು ಮೊದಲೇ ಡೆಂಗ್ಯೂ ಜ್ವರ ಬಾಧೆ ಕಾಡಿದ್ದು ಈಗ ಏರಿಕೆ ಕಾಣುತ್ತಿದೆ.

ಮಳೆ ನೀರಿನ ಶೇಖರಣೆಯ ಸ್ಥಳ, ಅಡಿಕೆ, ರಬ್ಬರ್‌ ತೋಟಗಳಲ್ಲಿ ಸೊಳ್ಳೆ ವಿಪರೀತ ಪ್ರಮಾಣದಲ್ಲಿ ಕಾಣಿಸಿಕೊಂಡಿದೆ. ಮನೆ ಪರಿಸರದಲ್ಲಿ ರಾತ್ರಿ ವೇಳೆ ಸೊಳ್ಳೆ ಕಾಟ ಹೆಚ್ಚಾಗಿದೆ. ದೀರ್ಘ‌ ಬಿಸಿಲು ಅಥವಾ ನಿರಂತರ ಮಳೆ ಬಂದು ಹೊಂಡದಿಂದ ನೀರು ಆವಿಯಾಗಿ ಅಥವಾ ಹರಿದು ಹೋದಲ್ಲಿ ಸೊಳ್ಳೆ ಉತ್ಪಾದನೆಗೆ ಕಡಿವಾಣ ಬಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಬರಲಿದೆ ಅನ್ನುತ್ತದೆ ಆರೋಗ್ಯ ಇಲಾಖೆ.

ಆರೋಗ್ಯ ಇಲಾಖೆಯಿಂದ ಜಾಗೃತಿ
ಎರಡು ವರ್ಷಗಳ ಪರಿಸ್ಥಿತಿ ಅರಿತಿರುವ ಆರೋಗ್ಯ ಇಲಾಖೆ ಈಗಾಗಲೇ ಸಾಂಕ್ರಾಮಿಕ ರೋಗ ತಡೆಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಅಲ್ಲಲ್ಲಿ ಫಾಗಿಂಗ್‌, ಜಾಥಾ, ಆಶಾ ಕಾರ್ಯಕರ್ತರ ಮುಖೇನ ಮನೆ-ಮನೆ ಭೇಟಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮುನ್ನೆಚ್ಚೆರಿಕೆಯ ಕರಪತ್ರ ಇತ್ಯಾದಿ ಕ್ರಮಕ್ಕೆ ಮುಂದಾಗಿದೆ.

Advertisement

ಜನವರಿ-ಜೂನ್‌ ವರೆಗಿನ ಪ್ರಕರಣ
ಜನವರಿಯಿಂದ ಜೂನ್‌ 10ರ ತನಕ ಕಡಬ ಪ್ರಾ. ಆ. ಕೇಂದ್ರದ ವ್ಯಾಪ್ತಿಯಲ್ಲಿ 5, ಕೊಯಿಲ-24, ಪುತ್ತೂರು ತಾಲೂ ಕಿನ ಉಪ್ಪಿನಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ 17, ಈಶ್ವರ ಮಂಗಲ-4, ನೆಲ್ಯಾಡಿ-3, ಕಾಣಿ ಯೂರು-1, ಕೊಳ್ತಿಗೆ-4, ಪಾಣಾಜೆ-128, ಸರ್ವೆ-9, ಶಿರಾಡಿ-6, ತಿಂಗಳಾಡಿ-39 ಪ್ರಕರಣಗಳು ಕಂಡು ಬಂದಿವೆ. ಜನವರಿ ಯಿಂದ ಜೂನ್‌ 7ರ ತನಕ ಉಭಯ ತಾಲೂಕುಗಳಲ್ಲಿ ಒಟ್ಟು 258 ಡೆಂಗ್ಯೂ ಜ್ವರ ಪ್ರಕರಣಗಳು ದೃಢಪಟ್ಟಿವೆ.

ಜಾಗೃತಿಯೇ ಸವಾಲು!
ಮನೆ ಪರಿಸರದಲ್ಲಿ ಸ್ವಚ್ಛತೆ ಇಲ್ಲದಿರುವುದು, ದೀರ್ಘ‌ ಕಾಲ ನೀರು ಶೇಖರಣೆ, ಹೊಂಡಗಳಲ್ಲಿ ನೀರು ತುಂಬಿರುವುದು ಲಾರ್ವಗಳ ಸೃಷ್ಟಿಗೆ ಕಾರಣವಾಗುತ್ತದೆ. ಇಂತಹ ರೋಗ ಹರಡಬಲ್ಲ ತಾಣಗಳ ನಿರ್ಮೂಲನೆ ಬಗ್ಗೆ ಎಚ್ಚರಿಕೆ ವಹಿಸುವಂತೆ ಆರೋಗ್ಯ ಇಲಾಖೆ ಸಿಬಂದಿ ಮನೆ ಮನೆಗೆ ತೆರಳಿ ಮನವಿ ಮಾಡಿದರೂ ಇದರ ಪರಿಪಾಲನೆ ಬಗ್ಗೆ‌ ಜನರಲ್ಲಿನ ನಿರ್ಲಕ್ಷ್ಯ ಕೂಡ ರೋಗ ಹಬ್ಬಲು ಕಾರಣವಾಗಿದೆ.

ರಾತ್ರಿ ಹೊತ್ತು ಸೊಳ್ಳೆ ಕಾಟದಿಂದ ಪಾರಾಗಲು ಸೊಳ್ಳೆ ಪರದೆ ಬಳಸಬೇಕು. ಜ್ವರ ಬಂದ ಸಂದರ್ಭ ಸ್ವಯಂ ಚಿಕಿತ್ಸೆಗೆ ಒಳಗಾಗುವುದರಿಂದ ರೋಗ ಉಲ್ಬಣಗೊಂಡು ಪ್ರಾಣಕ್ಕೆ ಎರವಾದ ಉದಾಹರಣೆಗಳಿವೆ. ಹಾಗಾಗಿ ರೋಗ ಬಂದ ತತ್‌ಕ್ಷಣ ಸಮೀಪದ ಆಸ್ಪತ್ರೆಗೆ ಭೇಟಿ ನೀಡಿ ಔಷಧ ಪಡೆದುಕೊಳ್ಳಬೇಕು ಎನ್ನುತ್ತಾರೆ ಆರೋಗ್ಯ ಅಧಿಕಾರಿಗಳು.

ಜಾಗೃತಿ ಅಗತ್ಯ
ತಾಲೂಕಿನ ಅರಂ ತೋಡು, ಮಡಪ್ಪಾಡಿ, ಮರ್ಕಂಜ, ಜಾಲ್ಸೂರು ಮೊದಲಾದೆಡೆ ಡೆಂಗ್ಯೂ ಪ್ರಕರಣ ಕಂಡು ಬಂದಿದ್ದು, ಪ್ರಸ್ತುತ ನಿಯಂತ್ರಣಕ್ಕೆ ಬಂದಿದೆ. ಜಾಗೃತಿ ಬಗ್ಗೆ ಮನೆ ಮನೆಗೆ ತೆರಳಿ ಅರಿವು ಮೂಡಿ ಸಲಾಗುತ್ತಿದೆ. ಮುನ್ನೆಚ್ಚೆರಿಕೆ ಕ್ರಮಗಳ ಬಗ್ಗೆ ಜನರು ಆದ್ಯತೆ ನೀಡಿದರೆ ಮಾತ್ರ ನಿಯಂತ್ರಣ ಸಾಧ್ಯವಿದೆ.
– ಡಾ| ಸುಬ್ರಹ್ಮಣ್ಯ ಎ.,
ತಾ| ಆರೋಗ್ಯಧಿಕಾರಿ, ಸುಳ್ಯ

Advertisement

Udayavani is now on Telegram. Click here to join our channel and stay updated with the latest news.

Next