Advertisement

Dengue ಕರಾವಳಿಯಲ್ಲಿ ಡೆಂಗ್ಯೂ ಪ್ರಕರಣ ಹೆಚ್ಚಳ : ಮುಂಜಾಗರೂಕತೆಯೇ ಮದ್ದು

12:43 AM Jul 05, 2024 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಕಳೆದ ವರ್ಷಕ್ಕಿಂತ ಎರಡು ಪಟ್ಟು ಹೆಚ್ಚಾಗಿದ್ದು, ಮುನ್ನೆಚ್ಚರಿಕಾ ದೃಷ್ಟಿ ಯಿಂದ ವೆನ್ಲಾಕ್ ಸರಕಾರಿ ಆಸ್ಪತ್ರೆಯಲ್ಲಿ ವಿಶೇಷ ವಾರ್ಡ್‌ ಮೀಸಲಿಡಲಾಗಿದೆ.

Advertisement

ಜಿಲ್ಲೆಯಾದ್ಯಂತ ಕೆಲವು ದಿನಗಳಿಂದ ಬಿಟ್ಟು ಬಿಟ್ಟು ಸುರಿಯುತ್ತಿರುವ ಮಳೆ ಯೇ ಡೆಂಗ್ಯೂ ಜ್ವರ ತರುವ ಸೊಳ್ಳೆ ಉತ್ಪತ್ತಿಗೆ ಕಾರಣವಾಗುತ್ತಿದೆ. ಈ ನಿಟ್ಟಿನಲ್ಲಿ ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ 15 ಹಾಸಿಗೆಯ ಸಾಮಾನ್ಯ ವಾರ್ಡ್‌ ಮತ್ತು 8 ಹಾಸಿಗೆಯ ವೆಂಟಿಲೇಟರ್‌ ವಾರ್ಡ್‌ ಅನ್ನು ಮೀಸಲಿಡಲಾಗಿದೆ. ತಾಲೂಕು ಮಟ್ಟದಲ್ಲೂ ನಿಗಾ ವಹಿಸಲಾಗುತ್ತಿದೆ.

ಸದ್ಯ ಜಿಲ್ಲೆಯಲ್ಲಿ 263 ಡೆಂಗ್ಯೂ ಪ್ರಕರಣಗಳಿವೆ. ಈ ಪೈಕಿ ಶೇ.50 ರಷ್ಟು ಅಂದರೆ 113 ಪ್ರಕರಣ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿದೆ. ಸದ್ಯ 30 ಮಂದಿಯಲ್ಲಿ ಸಕ್ರಿಯ ಪ್ರಕರಣಗಳಿವೆ. ಹೆಚ್ಚಿನ ಮಂದಿ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ.
ಕಳೆದ ವರ್ಷ ಈ ಸಮಯಕ್ಕೆ 120 ಪ್ರಕರಣ ಇತ್ತು. ಆದರೆ ಅಗಸ್ಟ್‌ನಿಂದ ಮೂರು ತಿಂಗಳು ಏರಿಕೆಯಾಗಿತ್ತು. ಆದರೆ, ಈ ಬಾರಿ ಜೂನ್‌ ಆರಂಭದಲ್ಲೇ ಬಿಟ್ಟು ಬಿಟ್ಟು ಮಳೆಯಾಗುತ್ತಿರುವುದು ಪ್ರಕರಣ ಹೆಚ್ಚಳಕ್ಕೆ ಕಾರಣ ಎನ್ನಲಾಗಿದೆ.

ಪಾಲಿಕೆ ವ್ಯಾಪ್ತಿಯೇ ಅಧಿಕ !
ನಗರಕ್ಕೆ ವಿವಿಧ ಜಿಲ್ಲೆ, ಹೊರ ರಾಜ್ಯದಿಂದ ಉದ್ಯೋಗ, ಶಿಕ್ಷಣ ಸಂಬಂಧ ಜನರು ಬರುತ್ತಿದ್ದು, ಅವರಲ್ಲೇ ಕೆಲವರಿಗೆ ರೋಗ ಲಕ್ಷಣ ಕಂಡು ಬರುತ್ತಿದೆ. ಕೇರಳ ಗಡಿ ಪ್ರದೇಶವೂ ಜಿಲ್ಲೆಗೆ ತಾಗಿಕೊಂಡಿದೆ. ಆದರೆ, ಸದ್ಯ ಒಂದೇ ಕಡೆ ಕ್ಲಸ್ಟರ್‌ ಮಟ್ಟದಲ್ಲಿ ಡೆಂಗ್ಯೂ ದಾಖಲಾಗುತ್ತಿಲ್ಲ, ಬದಲಾಗಿ ಅಲ್ಲಲ್ಲಿ ರೋಗ ಕಾಣಿಸಿಕೊಳ್ಳುತ್ತಿದೆ.

ಮನೆ ಮನೆ ಲಾರ್ವಾ ಸರ್ವೇ
ಜಿಲ್ಲಾದ್ಯಂತ ಲಾರ್ವಾಸರ್ವೇ ಕೈಗೊಳ್ಳಲು ಆರೋಗ್ಯ ಇಲಾಖೆ ನಿರ್ಧ ರಿಸಿದ್ದು, ಗ್ರಾಮೀಣ ಭಾಗದ ಆರೋಗ್ಯ ಸುರಕ್ಷತಾ ಅಧಿಕಾರಿಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ನಿಯೋಜಿಸಲಾಗುತ್ತಿದೆ. ಆಶಾ ಕಾರ್ಯಕರ್ತೆಯರು, ಎಂಪಿಡಬ್ಲೂ ಅಧಿಕಾರಿಗಳು, ಸ್ಥಳೀಯ ಕಾಲೇಜು ವಿದ್ಯಾರ್ಥಿಗಳು ಮನೆಗಳಲ್ಲಿ, ಅಂಗಡಿ- ಮುಂಗಟ್ಟುಗಳಲ್ಲಿ ಪ್ರತೀ ದಿನ ಲಾರ್ವಾ ಸರ್ವೇ ನಡೆಸುತ್ತಿದ್ದಾರೆ. ಡೆಂಗ್ಯೂವಿಗೆ 2020 ಮತ್ತು 2021ರಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದರು. ಬಳಿಕ ಯಾವುದೇ ಸಾವು ದಾಖಲಾಗಿಲ್ಲ. ಹೊರ ಜಿಲ್ಲೆ/ರಾಜ್ಯದವರು ಜಿಲ್ಲೆಯಲ್ಲಿ ಡೆಂಗ್ಯೂಗೆ ತುತ್ತಾಗಿ ಸಾವನ್ನಪ್ಪಿದ್ದರೆ ಅದು ಆ ಜಿಲ್ಲೆಯ ಪ್ರಕರಣವೆಂದೇ ದಾಖಲಾಗುತ್ತದೆ.

Advertisement

ಪ್ಲೇಟ್‌ಲೆಟ್‌ ಕೊರತೆಯಿಲ್ಲ
ಜಿಲ್ಲೆಯಲ್ಲಿ ಪ್ಲೇಟ್‌ಲೆಟ್‌ ಲಭ್ಯತೆ ಇದೆ. ಖಾಸಗಿ ಆಸ್ಪತ್ರೆಗಳಲ್ಲಿ ಪ್ಲೇಟ್‌ಲೆಟ್‌ ಲಭ್ಯತೆಯ ಪ್ರಕಾರವೇ ಇದೆ. ಒಂದು ವೇಳೆ ಕೊರತೆ ಉಂಟಾದರೆ ಎಂದು ಮುನ್ನೆಚ್ಚರಿಕೆಯಿಂದ ವೆನ್ಲಾಕ್ ಆಸ್ಪತ್ರೆಯೂ ಲಭ್ಯವಿರಿಸಲಾಗಿದೆ.

ಪ್ರತೀ ಶುಕ್ರವಾರ ಸೊಳ್ಳೆ ನಿರ್ಮೂಲನ ದಿನ
ಡೆಂಗ್ಯೂ ಜ್ವರ ನಿಯಂತ್ರಣಕ್ಕೆ ಪ್ರತೀ ಶುಕ್ರವಾರ ಲಾರ್ವ ಉತ್ಪತ್ತಿ ತಾಣಗಳನ್ನು ಜಿಲ್ಲಾದ್ಯಂತ ನಾಶ ಪಡಿಸಲಾಗುತ್ತಿದೆ. ಕಳೆದ ವಾರ ಅಭಿಯಾನಕ್ಕೆ ಮಂಗ ಳೂರಿನಲ್ಲಿ ಚಾಲನೆ ನೀಡಲಾಗಿದೆ. ಮನೆಯ ಸುತ್ತಮುತ್ತ ನೀರು ನಿಂತು ಲಾರ್ವ ಉತ್ಪತ್ತಿಯಾಗುವ ಸಾಧ್ಯ ತೆ ಇದೆ. ಪ್ರತೀ ಶುಕ್ರವಾರ ಸಾರ್ವಜನಿಕರು ಸ್ವತಃ ತಮ್ಮ ಮನೆಗಳು ಹಾಗೂ ಸರಕಾರಿ ಕಚೇರಿ, ಶಾಲಾ-ಕಾಲೇಜುಗಳಲ್ಲಿ ಸಿಬಂದಿ ವರ್ಗದವರು ನೀರು ತುಂಬಿರುವ ಡ್ರಮ್‌, ಟ್ಯಾಂಕಿ, ಬ್ಯಾರಲ್‌ ಇತ್ಯಾದಿ ಸ್ವತ್ಛಗೊಳಿ ಸಬೇಕು. ಅದೇ ರೀತಿ ಮಳೆ ನೀರು ನಿಲ್ಲುವ ತೊಟ್ಟಿ, ಹಳೆ ಟಯರ್‌ ಮತ್ತಿತರ ವಸ್ತುಗಳನ್ನು ವಿಲೇವಾರಿ ಮಾಡಬೇಕು, ಇದರಿಂದ ಸೊಳ್ಳೆಗಳ ಉತ್ಪತ್ತಿ ತಾಣ ನಾಶವಾಗಲಿದೆಗಿ ಡೆಂಗ್ಯೂ ಜ್ವರವನ್ನು ನಿಯಂತ್ರಿಸಬಹುದು ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು.

ಹವಾಮಾನ ಬದಲಾವಣೆ ಸಹಿತ ಮಳೆಗಾಲ ಆರಂಭದ ಹಿನ್ನೆಲೆಯಲ್ಲಿ ಹಲವೆಡೆ ಜ್ವರ ಪ್ರಕರಣ ದಾಖಲಾಗುತ್ತಿದೆ. ಸಾಮಾನ್ಯವಾಗಿ ಸಣ್ಣ ಜ್ವರ ಬಂದರೆ ಪರೀಕ್ಷೆ ಮಾಡಿಸದೆ ಮನೆಯಲ್ಲಿದ್ದು ಮಾತ್ರೆಯನ್ನು ತಿನ್ನುತ್ತಾರೆ. ಇದು ಸರಿಯಾದ ಕ್ರಮವಲ್ಲ. ಯಾವುದೇ ಜ್ವರ ಬಂದರೆ ವೈದ್ಯರಲ್ಲಿ ಪರೀಕ್ಷೆ ಮಾಡಿಸಿ.
– ಡಾ| ನವೀನ್‌ಚಂದ್ರ ಕುಲಾಲ್‌,
ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ

ಉಡುಪಿ ಜಿಲ್ಲೆಯಲ್ಲಿ ನಿಯಂತ್ರಣಕ್ಕೆ ವಿವಿಧ ಕ್ರಮ
ಉಡುಪಿ: ಜಿಲ್ಲೆಯಲ್ಲಿ ಈ ವರ್ಷ ಡೆಂಗ್ಯೂ ಪ್ರಕರಣ ಕಳೆದ ವರ್ಷಕ್ಕಿಂತ ನಾಲ್ಕು ಪಟ್ಟು ಹೆಚ್ಚಾಗಿವೆ. ಇದುವರೆಗೆ 182 ಪ್ರಕರಣಗಳು ಪತ್ತೆಯಾಗಿವೆ.

ಮಳೆಗಾಲದಲ್ಲಿ ಹೆಚ್ಚಾಗಿ ಕಂಡು ಬರುವ ಡೆಂಗ್ಯೂ ಪ್ರಕರಣಗಳನ್ನು ನಿರ್ವಹಿಸಲು ಆರೋಗ್ಯ ಇಲಾಖೆ ಜಿಲ್ಲಾಸ್ಪತ್ರೆಯಲ್ಲಿ ಪ್ರಕರಣ ವಾರ್ಡ್‌ಗಳನ್ನು ಮೀಸಲಿಟ್ಟಿಲ್ಲ. ಪ್ರಕರಣದ ಗಂಭೀರತೆಯನ್ನು ಅರಿತು ಚಿಕಿತ್ಸೆ ಒದಗಿಸಲು ಕ್ರಮ ಕೈಗೊಂಡಿದೆ.

ಕಳೆದ ವರ್ಷ ಇದುವರೆಗೆ 45 ಪ್ರಕರಣಗಳು ಪತ್ತೆಯಾಗಿದ್ದವು. ಪ್ರಸ್ತುತ ಜಿಲ್ಲಾಸ್ಪತ್ರೆಯಲ್ಲಿ 4 ಮಂದಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 20 ಮಂದಿ ರೋಗಿಗಳು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 41 ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು, ಇದು ವರೆಗೆ 2,099 ಮಂದಿಯ ರಕ್ತ ತಪಾಸಣೆ ನಡೆಸಲಾಗಿದೆ. ಈ ಪೈಕಿ ಶಂಕಿತ 292 ಪ್ರಕರಣಗಳನ್ನು ಗುರುತಿಸಿದ್ದು, ಈ ಪೈಕಿ 182 ಮಂದಿಗೆ ಸೋಂಕು ದೃಢಪಟ್ಟಿದೆ. ಜಿಲ್ಲಾಸ್ಪತ್ರೆಯ ಒಟ್ಟು 125 ಹಾಸಿಗೆಗಳಲ್ಲಿ ವಿವಿಧ ರೋಗ ಲಕ್ಷಣಗಳಿಂದ ಬಳಲುತ್ತಿರುವವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಹೆಚ್ಚುವರಿ ರೋಗಿಗಳು ಬಂದರೆ ಜಿಲ್ಲಾಸ್ಪತ್ರೆಯ ಶಿಫಾರಸಿನಡಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗುತ್ತದೆ.

ಮಣಿಪಾಲದಲ್ಲಿ ಅಧಿಕ ಪ್ರಕರಣ
ಉಡುಪಿ ತಾಲೂಕಿನಲ್ಲಿ 112, ಕುಂದಾಪುರದಲ್ಲಿ 43 ಹಾಗೂ ಕಾರ್ಕಳ ತಾಲೂಕಿನಲ್ಲಿ 27 ಪ್ರಕರಣಗಳು ದಾಖಲಾಗಿವೆ. ಮಣಿಪಾಲದ ಕೈಗಾರಿಕಾ ಪ್ರದೇಶದಲ್ಲಿ ಒಟ್ಟು 28 ಪ್ರಕರಣಗಳು ದೃಢಪಟ್ಟಿವೆ. ಉಡುಪಿ 18, ಹಿರೇಬೆಟ್ಟು 14, ಕೊಲ್ಲೂರು 10 ಸಹಿತ ವಿವಿಧೆಡೆ ಪ್ರಕರಣಗಳು ದಾಖಲಾಗಿವೆ.

ಹೆಚ್ಚು ಪ್ರಕರಣ ಕಂಡುಬಂದಿರುವ ಮಣಿಪಾಲದ ಕೈಗಾರಿಕಾ ಪ್ರದೇಶದಲ್ಲಿ ಇಲಾಖೆ ವತಿಯಿಂದ ಎರಡು ಬಾರಿ ಫಾಗಿಂಗ್‌ ಮಾಡಲಾಗಿದೆ. ಕೊಲ್ಲೂರು ಹಾಗೂ ಹಿರೇಬೆಟ್ಟು ಭಾಗದಲ್ಲಿಯೂ ಫಾಗಿಂಗ್‌ ಮಾಡಲಾಗಿದೆ. ಕೆಮಿಕಲ್‌ ಮಿಶ್ರಿತವಾಗಿರುವ ಕಾರಣ ಇದರ ಪ್ರಕರಣ ಕಂಡುಬರುವ ಭಾಗದಲ್ಲಿ ಮಾತ್ರ ಬಳಸಲಾಗುತ್ತಿದೆ ಎಂಬುದು ಇಲಾಖೆ ಅಧಿಕಾರಿಗಳ ಮಾಹಿತಿ
ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರದಲ್ಲಿ 21 ಸಾವಿರಕ್ಕೂ ಅಧಿಕ ಯುನಿಟ್‌ ರಕ್ತ ದಾಸ್ತಾನು ಇದೆ. ಪ್ಲೆಟ್‌ಲೆಟ್‌ಗಳು, ಡೆಂಗ್ಯೂಗೆ ನಿಗದಿತ ಔಷಧ ಇಲ್ಲದಿದ್ದರೂ ಪೂರಕ ಔಷಧಗಳನ್ನೆಲ್ಲ ದಾಸ್ತಾನಿದೆ. ಈಗಾಗಲೇ ಜಿಲ್ಲಾಧಿಕಾರಿಗಳು ಮುನ್ನೆ ಚ್ಚರಿಕೆ ವಹಿಸುವಂತೆ ತೋಟ ಗಾರಿಕೆ, ಕೆಎಸ್ಸಾರ್ಟಿಸಿ, ಸ್ಥಳೀಯಾಡಳಿತ, ಮೀನುಗಾರಿಕೆ ಇಲಾಖೆ ಸಹಿತ ವಿವಿಧ ಇಲಾಖೆಗಳಿಗೆ ಸೂಚಿಸಿದ್ದಾರೆ. ರಬ್ಬರ್‌ ಪ್ಲಾಂಟ್‌, ಪೈನಪಲ್‌, ಅಡಿಕೆ ತೋಟಗಳಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಲು ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಲಾಗಿದೆ. ಕೆಎಸ್ಸಾರ್ಟಿಯ ಡಿಪೋಗಳಲ್ಲಿರುವ ಟೈರ್‌ಗಳಲ್ಲಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಲು ಆದೇಶಿಸಲಾಗಿದೆ. ಚರಂಡಿ ಸಹಿತ ಸಾರ್ವಜನಿಕ ಸ್ಥಳದಲ್ಲಿ ನೀರು ನಿಲ್ಲ ದಂತೆ ಮುನ್ನೆಚ್ಚರಿಕೆ ವಹಿಸಲು ಸ್ಥಳೀ ಯಾಡಳಿತಕ್ಕೆ ಸೂಚಿಸಲಾಗಿದೆ. ಮೀನುಗಾರರು ದೋಣಿಗಳ ಅಕ್ಕಪಕ್ಕ ಟೈರ್‌ಗಳನ್ನು ಇರಿಸಿದ್ದು, ಅದರಲ್ಲಿ ನೀರು ನಿಲ್ಲುವ ಸಾಧ್ಯತೆ ಇರುವ ಕಾರಣ ಅವುಗಳನ್ನು ತೆಗೆದು ಹಗ್ಗ ಅಳವಡಿಸಲು ನಿರ್ದೇಶಿಸಲಾಗಿದೆ.

ಲಾರ್ವ ಸರ್ವೆ
ಡೆಂಗ್ಯೂ ಬಗ್ಗೆ ಪ್ರತೀ ಶಾಲೆಗಳಲ್ಲಿ ಜಾಗೃತಿ ಮೂಡಿಸಲು ಜಿ.ಪಂ.ಸಿಇಒ, ಇದಕ್ಕಾಗಿ ಪ್ರತ್ಯೇಕ ಕಾರ್ಯಪಡೆ ರಚಿಸಿ ಆರೋಗ್ಯ ಇಲಾಖೆ ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ಸೂಚಿಸಿದ್ದಾರೆ. ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಾರ್ವ ಸರ್ವೆ ನಡೆಸಲಾಗುತ್ತಿದೆ. ಜಿಲ್ಲೆಯಷ್ಟೇ ಅಲ್ಲದೆ ಹೊರಜಿಲ್ಲೆ, ರಾಜ್ಯಗಳಿಂದ ಬರುವವರಲ್ಲಿಯೂ ಡೆಂಗ್ಯೂ ಲಕ್ಷಣ ಕಂಡುಬರುತ್ತಿದೆ ಎನ್ನುತ್ತಾರೆ ವೈದ್ಯಾಧಿಕಾರಿಗಳು.

1,350 ರಕ್ತದ ಸ್ಯಾಂಪಲ್‌ ಪರೀಕ್ಷೆ
2024ರ ಜನವರಿಯಿಂದ ಈವರೆಗೂ ಡೆಂಗ್ಯೂ ಸಾಧ್ಯತ ಜ್ವರ ಪ್ರಕರಣ 1,414ಗಳಲ್ಲಿ 1,350 ಮಂದಿಯ ರಕ್ತದ ಸ್ಯಾಂಪಲ್‌ ಸಂಗ್ರಹಿಸಿ ಲ್ಯಾಬ್‌ಗ ಕಳುಹಿಸಲಾಗಿದೆ. ಅದರಲ್ಲಿ 187 ಡೆಂಗ್ಯೂ ದೃಢಪಟ್ಟಿದೆ.

ಜಿಲ್ಲಾಸ್ಪತ್ರೆಯಲ್ಲಿ ಎಲ್ಲ ರೀತಿಯ ಔಷಧಗಳ ದಾಸ್ತಾನಿದೆ. ಸಾಮಾನ್ಯ ಜ್ವರ ಬಂದರೂ ನಿರ್ಲಕ್ಷಿéಸದೇ ಸಮೀಪದ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಬೇಕು. ಮನೆಯ ಸುತ್ತಲು ಹಾಗೂ ಅಂಗಡಿಗಳಲ್ಲಿ ನೀರು ನಿಂತು ಸೊಳ್ಳೆ ಉತ್ಪತ್ತಿಯಾಗದಂತೆ ನೋಡಿಕೊಳ್ಳಬೇಕು.
-ಡಾ| ಅಶೋಕ್‌, ಜಿಲ್ಲಾ ಸರ್ಜನ್‌, ಉಡುಪಿ

ಜಿಲ್ಲೆಯಲ್ಲಿ ಡೆಂಗ್ಯೂ ಹೆಚ್ಚಳಕಂಡುಬರುತ್ತಿದೆ. ರೋಗ ಬಂದ ಬಳಿಕ ಎಚ್ಚೆತ್ತುಕೊಳ್ಳುವ ಬದಲು ರೋಗ ಬಾರದಂತೆ ಮುನ್ನೆಚ್ಚರಿಕೆ ವಹಿಸು ವುದು ಅಗತ್ಯ. ಸಮುದಾಯದ ಸಹಭಾಗಿತ್ವದಿಂದ ಮಾತ್ರ ನಿಯಂತ್ರಣ ಸಾಧ್ಯ.
-ಡಾ| ಐ.ಪಿ.ಗಡಾದ್‌, ಜಿಲ್ಲಾ ಆರೋಗ್ಯಾಧಿಕಾರಿ, ಉಡುಪಿ

 

Advertisement

Udayavani is now on Telegram. Click here to join our channel and stay updated with the latest news.

Next