Advertisement

Theft Case ದಕ್ಷಿಣ ಕನ್ನಡ, ಉಡುಪಿಗೆ “ಚಡ್ಡಿ ಗ್ಯಾಂಗ್‌’ ಪ್ರವೇಶ ?

11:35 PM Jul 07, 2024 | Team Udayavani |

ಮಂಗಳೂರು: ದ.ಕ, ಉಡುಪಿ ಭಾಗದಲ್ಲಿ “ಚಡ್ಡಿ ಗ್ಯಾಂಗ್‌’ ಎಂಬ ಕಳ್ಳರ ತಂಡ ಕ್ರಿಯಾಶೀಲ ವಾಗಿರುವ ಮಾಹಿತಿ ಪೊಲೀಸರಿಗೆ ಲಭಿಸಿದೆ.

Advertisement

ಹೈದರಾಬಾದ್‌, ಮಧ್ಯಪ್ರದೇಶ, ರಾಜಸ್ಥಾನ ಮೊದಲಾದೆಡೆಗಳ ಕಳ್ಳರನ್ನು ಹೊಂದಿರುವ ಗ್ಯಾಂಗ್‌ ಈ ಹಿಂದೆಯೂ ದ.ಕ., ಶಿವಮೊಗ್ಗ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮನೆ ಕಳ್ಳತನ ಕೃತ್ಯ ನಡೆಸಿತ್ತು. ಶನಿವಾರ ರಾತ್ರಿ ಮಂಗಳೂರು ಉರ್ವ ಪೊಲೀಸ್‌ ಠಾಣಾ ವ್ಯಾಪ್ತಿಯ ಕೋಡಿಕಲ್‌ನಲ್ಲಿ ಮನೆ ಕಳ್ಳತನ ಘಟನೆ ನಡೆದಿದ್ದು ಇದೇ ತಂಡ ಕೃತ್ಯವೆಸಗಿರುವ ಬಗ್ಗೆ ಪೊಲೀಸರು ಸಂದೇಹ ವ್ಯಕ್ತಪಡಿಸಿದ್ದಾರೆ.

ಏನಿದು ಚಡ್ಡಿ ಗ್ಯಾಂಗ್‌?
ಮೈಮೇಲೆ ಚಡ್ಡಿ, ಬನಿಯಾನ್‌, ತಲೆ ಮೇಲೊಂದು ಬಟ್ಟೆ ಸುತ್ತಿಕೊಳ್ಳುವ ಈ ಗ್ಯಾಂಗ್‌ನ ಸದಸ್ಯರು ಸೊಂಟದಲ್ಲಿ ಆಯುಧಗಳನ್ನು ಹೊಂದಿರುತ್ತಾರೆ. ಸಾಮಾನ್ಯವಾಗಿ ನಿರಂತರ ಮಳೆಯಾಗುವ ದಿನಗಳಲ್ಲಿ ರಾತ್ರಿ ವೇಳೆ ಮನೆಮಂದಿ ಗಾಢ ನಿದ್ದೆಯಲ್ಲಿರುವಾಗ ಇಂತಹ ತಂಡ ಕಾರ್ಯಾಚರಣೆಗೆ ಇಳಿಯುತ್ತದೆ ಎನ್ನುತ್ತಾರೆ ಪೊಲೀಸರು.

ಮನೆಮಂದಿ ಮಲಗಿದ್ದಾಗ ಕಳವು
ರವಿವಾರ ನಸುಕಿನ ವೇಳೆ ಕೋಡಿಕಲ್‌ನ ವಿವೇಕಾ ನಂದ ನಗರದಲ್ಲಿ ಮನೆಯವರು ಮಲಗಿದ್ದಾಗ ಕಳ್ಳರು ನುಗ್ಗಿದ್ದಾರೆ. 2.04ರ ಸುಮಾರಿಗೆ ಮನೆಯ ಕಿಟಕಿಯ ಸರಳುಗಳನ್ನು ಕಿತ್ತು ಒಳನುಗ್ಗಿರುವ ಸುಮಾರು 5 ಮಂದಿ ಕಳ್ಳರ ತಂಡ ಮನೆಯ ಕೋಣೆಯೊಂದರಲ್ಲಿ ಜಾಲಾಡಿ ಬಳಿಕ ಮನೆಯವರು ಮಲಗಿದ್ದ ಬೆಡ್‌ರೂಮ್‌ಗೂ ಪ್ರವೇಶಿಸಿದೆ. ಕಪಾಟಿನಲ್ಲಿ ಇಟ್ಟಿದ್ದ 10,000 ರೂ. ನಗದು ಕಳವು ಮಾಡಿದೆ. ಘಟನೆ ಮರುದಿನ ಎದ್ದಾಗಲೇ ಮನೆ ಮಂದಿಯ ಗಮನಕ್ಕೆ ಬಂದಿದೆ ಎನ್ನಲಾಗಿದೆ. ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಡ್ಡಿಯಲ್ಲೇ ಬಂದಿದ್ದ ಕಳ್ಳರು
ಕೃತ್ಯ ನಡೆದಿರುವ ಮನೆಯ ಪಕ್ಕದ ಮನೆಯೊಂದರಲ್ಲಿ ಅಳವಡಿಸಿದ್ದ ಸಿಸಿ ಕೆಮರಾದಲ್ಲಿ ಕಳ್ಳರ ಕೃತ್ಯದ ಕೆಲವು ದೃಶ್ಯಗಳು ಸೆರೆಯಾಗಿವೆ. ಚಡ್ಡಿ ಧರಿಸಿರುವ 5 ಮಂದಿ ಕಳ್ಳರು ಕೈಯಲ್ಲಿ ಟಾರ್ಚ್‌ ಹಿಡಿದುಕೊಂಡು ಮನೆಯ ಬಳಿ ನಸುಕಿನ ವೇಳೆ 2.04ಕ್ಕೆ ಒಳಪ್ರವೇಶಿಸಿ 3.42ಕ್ಕೆ ವಾಪಸಾಗಿದ್ದಾರೆ. ಓರ್ವನ ಬಳಿ ಬ್ಯಾಗ್‌ ಇತ್ತು. ಈ ಮನೆ ರಸ್ತೆ ಪಕ್ಕದಲ್ಲೇ ಇದ್ದು ಇದರ ಅಕ್ಕಪಕ್ಕವೂ ಮನೆಗಳಿವೆ. ಕಳ್ಳರು ಮನೆಯಿಂದ ಹೊರಗೆ ಬರುವಾಗ ರಸ್ತೆಯಲ್ಲಿ ವಾಹನವೊಂದು ಹಾದು ಹೋಗಿದೆ. ಅದನ್ನು ಕಂಡು ಗೇಟ್‌ ಬಳಿಯಲ್ಲೇ ನಿಂತ ಕಳ್ಳರು ಅನಂತರ ರಸ್ತೆಗೆ ಬಂದಿದ್ದಾರೆ. ಅಲ್ಲದೆ ಬೊಗಳುತ್ತಿದ್ದ ನಾಯಿಯ ಕಡೆಗೆ ಓರ್ವ ಕಳ್ಳ ಕಲ್ಲು ಎಸೆಯುತ್ತಿರುವುದು ಕೂಡ ಸಿಸಿ ಕೆಮರಾ ದೃಶ್ಯದಲ್ಲಿದೆ. ಕಳ್ಳರ ಡ್ರೆಸ್‌ ಕೋಡ್‌ ನೋಡಿದರೆ ಅದು ಚಡ್ಡಿ ಗ್ಯಾಂಗ್‌ನ ಡ್ರೆಸ್‌ಕೋಡ್‌ನ್ನು ಹೋಲುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ನಿರಾತಂಕದಿಂದ ಕೃತ್ಯ
ಕಳ್ಳರು ಟಾರ್ಚ್‌ಗಳನ್ನು ಹಿಡಿದು ಕಳವು ಮಾಡಲು ಮನೆಯನ್ನು ಯಾವುದೇ ಆತಂಕವಿಲ್ಲದ ರೀತಿಯಲ್ಲಿ ಹುಡುಕಾಡುತ್ತಿದ್ದರು. ಮಾತ್ರವಲ್ಲದೆ ಸಿಸಿ ಕೆಮರಾದಲ್ಲಿ ದಾಖಲಾಗಿರುವ ದೃಶ್ಯದಂತೆ ಅವರು ಆ ಮನೆಯಲ್ಲಿ ಸರಿಸುಮಾರು 1.40 ಗಂಟೆ ಉಳಿದುಕೊಂಡಿದ್ದರು. ಮನೆಯಿಂದ ಹೊರಬಂದವರು ರಸ್ತೆಪಕ್ಕದ ಮೆಟ್ಟಿಲುಗಳಲ್ಲಿ ಇಳಿದುಕೊಂಡು ಹೋಗಿದ್ದರು.

ಬಳ್ಕುಂಜೆಯಲ್ಲಿಯೂ ಕೃತ್ಯ ?
ಕಳೆದ ಗುರುವಾರ ಬಳ್ಕುಂಜೆ ನೀರಳಿಕೆಯ ಎರಡು ಮನೆಗಳಲ್ಲಿ ಕಳ್ಳತನ ನಡೆದಿತ್ತು. ಒಂದು ಮನೆಯ ಹಿಂಭಾಗದ ಬಾಗಿಲಿನ ಚಿಲಕ ಒಡೆದು ಮನೆಯೊಳಗೆ ಪ್ರವೇಶಿಸಿದ್ದ ಕಳ್ಳರು ಚಿನ್ನ, ನಗದು ಕಳವು ಮಾಡಿದ್ದರು. ಇದೇ ಪರಿಸರದ ಮತ್ತೂಂದು ಮನೆಯಲ್ಲಿಯೂ ಕಳ್ಳತನ ನಡೆಸಿದ್ದರು. ಈ ಕೃತ್ಯಗಳನ್ನು ಕೂಡ “ಚಡ್ಡಿ ಗ್ಯಾಂಗ್‌’ ನಡೆಸಿರಬಹುದೇ ಎಂಬ ಸಂಶಯ ವ್ಯಕ್ತವಾಗಿದೆ.

ದರೋಡೆ ಪ್ರಕರಣ ಆತಂಕ ಮೂಡಿಸಿತ್ತು
ಕಳೆದ ಜೂ. 21ರಂದು ಮಂಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಉಳಾಯಿಬೆಟ್ಟು ಪೆರ್ಮಂಕಿಯಲ್ಲಿ ಪದ್ಮನಾಭ ಕೋಟ್ಯಾನ್‌ ಅವರ ಮನೆಯಲ್ಲಿ ಸುಮಾರು 10 ಮಂದಿಯ ತಂಡ ಚೂರಿಯಿಂದ ಇರಿದು, ಮನೆಯವರನ್ನು ಕಟ್ಟಿ ಹಾಕಿ ಚಿನ್ನ, ನಗದು ದರೋಡೆ ನಡೆಸಿತ್ತು. ಈ ಪ್ರಕರಣದಲ್ಲಿ ಹಲವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿತ್ತು. ಇದೀಗ ಚಡ್ಡಿ ಗ್ಯಾಂಗ್‌ನ ಕೃತ್ಯ ಮತ್ತೆ ನಾಗರಿಕರಲ್ಲಿ ಆತಂಕ ಮೂಡಿಸಿದೆ.

ಎಚ್ಚರ ವಹಿಸಲು ಪೊಲೀಸರ ಸೂಚನೆ
“ಚಡ್ಡಿ ಗ್ಯಾಂಗ್‌’ ಅಥವಾ ಇತರ ಕಳ್ಳರ ಕೃತ್ಯಗಳ ಹಿನ್ನೆಲೆಯಲ್ಲಿ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಮಂಗಳೂರು ಪೊಲೀಸರು ಮನವಿ ಮಾಡಿದ್ದಾರೆ.
-ರಾತ್ರಿ ಸಮಯ ಮನೆಯ ಕಿಟಕಿ ಬಾಗಿಲುಗಳನ್ನು ಭದ್ರವಾಗಿ ಹಾಕಿಕೊಳ್ಳಬೇಕು.
-ಬೆಲೆಬಾಳುವ ಸೊತ್ತುಗಳನ್ನು ಮನೆಯಲ್ಲಿಡದೆ ಬ್ಯಾಂಕ್‌ನ ಸೇಫ್‌ ಲಾಕರ್‌ನಲ್ಲಿಡಬೇಕು.
-ತಮ್ಮ ಮನೆಯ ಮತ್ತು ವಾಸ್ತವ್ಯದ ಪರಿಸರದಲ್ಲಿ ಇರುವ ಸಿಸಿ ಕೆಮರಾಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು.
-ಯಾವುದೇ ಅಪರಿಚಿತ/ಸಂಶಯಾಸ್ಪದ ವ್ಯಕ್ತಿಗಳು, ಮಹಿಳೆಯರು ಕಂಡು ಬಂದಲ್ಲಿ ಕೂಡಲೇ ತುರ್ತು ಕರೆ ಸೇವೆ 112 ಅಥವಾ ಪೊಲೀಸ್‌ ಠಾಣೆಗೆ ಕರೆ ಮಾಡಿ ತಿಳಿಸಬೇಕು.
-ವಸತಿ/ಬಡಾವಣೆ/ಪರಿಸರದಲ್ಲಿ ದಾರಿ ದೀಪ, ಸಾರ್ವಜನಿಕ ದೀಪಗಳು ಉರಿಯುತ್ತಿರುವ ಬಗ್ಗೆ ದೃಢಪಡಿಸಿಕೊಳ್ಳಬೇಕು. ಇಲ್ಲದಿದ್ದಲ್ಲಿ ಮೆಸ್ಕಾಂ/ಮಂಗಳೂರು ಮಹಾನಗರ ಪಾಲಿಕೆ/ಸ್ಥಳೀಯ ಕಾರ್ಪೊರೇಟರ್‌ಗಳಿಗೆ ತಿಳಿಸಬೇಕು.
-ಒಂಟಿ ಮನೆಗಳು/ಲಾಕ್ಡ್ ಹೌಸ್‌/ಹಿರಿಯ ನಾಗರಿಕರು/ಮಹಿಳೆಯರು ಮಾತ್ರ ವಾಸ್ತವ್ಯ ಇರುವ ಮನೆಗಳು ಇದ್ದಲ್ಲಿ ಬೀಟ್‌ ಪೊಲೀಸ್‌ರಿಗೆ ಮಾಹಿತಿಯನ್ನು ನೀಡಬೇಕು.

Advertisement

Udayavani is now on Telegram. Click here to join our channel and stay updated with the latest news.

Next