ಸಿಂಧನೂರು: ತಾಲೂಕಿನ ಚಿಕ್ಕಬೇರ್ಗಿ ಗ್ರಾಮದಲ್ಲಿ ಅಸ್ಪೃಶ್ಯತೆ ಆಚರಣೆ ಮಾಡಲಾಗುತ್ತಿದೆ. ಕಾರಣ ಅಸ್ಪೃಶ್ಯತೆ ಆಚರಣೆ
ಮುಕ್ತ ಗ್ರಾಮವನ್ನಾಗಿ ಮಾಡಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಸಮತಾ ದಲಿತ ಮಹಾಸಭಾ ತಹಶೀಲ್ದಾರ ಮೂಲಕ ಸಮಾಜ ಕಲ್ಯಾಣ ಖಾತೆ ಸಚಿವ ಆಂಜನೇಯ ಅವರಿಗೆ ಮನವಿ ಸಲ್ಲಿಸಿತು.
ಆ.7ರಂದು ಪೊಲೀಸ್ ರಕ್ಷಣೆಯೊಂದಿಗೆ ದಲಿತ ಯುವಕರು ಸೇರಿ ಬಸವೇಶ್ವರ ದೇವಸ್ಥಾನದಲ್ಲಿ ಪ್ರವೇಶ ಮಾಡಿದ ಮಾರನೆ ದಿನವೇ ಹೋಟೆಲ್, ಕ್ಷೌರದ ಅಂಗಡಿ ಮುಚ್ಚಿಕೊಳ್ಳಲಾಯಿತು. ಜಾತ್ರೆ ಸ್ಥಗಿತಗೊಳಿಸಲಾಯಿತು.
ಗ್ರಾಮದಲ್ಲಿ ದೇವಸ್ಥಾನ, ಹೋಟೆಲ್, ಬಾವಿ, ಕ್ಷೌರದ ಅಂಗಡಿ ಮತ್ತು ಖಾಸಗಿ ವ್ಯಕ್ತಿಗಳು ವಿದ್ಯಾರ್ಥಿಗಳಿಗೆ ಮಾಡುವ ಮನೆ ಪಾಠಗಳಿಗೆ ಅವಕಾಶ ಕೊಡುತ್ತಿಲ್ಲ. ಗ್ರಾಮದಲ್ಲಿ ಪ್ರಸ್ತುತ ಉದ್ವಿಗ್ನ ಸ್ಥಿತಿ ಇದ್ದು, ಆದ್ದರಿಂದ ಜಿಲ್ಲಾಧಿಕಾರಿ, ಕಂದಾಯ ಉಪವಿಭಾಗಾಧಿಕಾರಿ ಮತ್ತು ಜನಪ್ರತಿನಿಧಿಗಳು ಗ್ರಾಮಕ್ಕೆ ಭೇಟಿ ನೀಡಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಲಾಯಿತು.
ಪ್ರಭಾರಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದ ದಲಿತ ಮಹಾಸಭಾದ ಮುಖಂಡರು ಬಂದ್ ಮಾಡಿರುವ ಹೋಟೆಲ್ ಮತ್ತು ಕಟಿಂಗ್ ಶಾಪ್ಗ್ಳನ್ನು ಪುನಃ ಪ್ರಾರಂಭಿಸಬೇಕು. ಗ್ರಾಮದ ದಲಿತ ಕುಟುಂಬಗಳಿಗೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.
ತಾಲೂಕು ಘಟಕದ ಅಧ್ಯಕ್ಷ ಮೌನೇಶ ಹತ್ತಿಗುಡ್ಡ, ಉಪಾಧ್ಯಕ್ಷ ಎಸ್. ವೆಂಕಣ್ಣ, ನಿಂಗಪ್ಪ ಬೇರ್ಗಿ, ವೆಂಕೋಬ ಪೇಟೆ, ಕನಕಪ್ಪ ಪೂಜಾರಿ, ಶರಣಪ್ಪ ಹತ್ತಿಗುಡ್ಡ, ಮೂರ್ತಿ, ಮಲ್ಲಿಕಾರ್ಜುನ, ಶಿವಲಿಂಗ, ನಾಗಲಿಂಗ, ಯಲ್ಲಪ್ಪ ಚಿಕ್ಕಬೇರ್ಗಿ, ಯಂಕಪ್ಪ ಚಿಕ್ಕಬೇರ್ಗಿ ಭಾಗವಹಿಸಿದ್ದರು.