Advertisement

23ರಿಂದ ಆಯುರ್ವೇದ ಚಿಕಿತ್ಸಾ ವಿಧಾನಗಳ ಪ್ರದರ್ಶನ

10:42 AM Apr 21, 2022 | Team Udayavani |

ಹುಬ್ಬಳ್ಳಿ: ಆಯುರ್ವೇದ ವೈದ್ಯ ಪದ್ಧತಿಯ ಚಿಕಿತ್ಸಾ ವಿಧಾನಗಳ ಸಮಗ್ರ ಮಾಹಿತಿಯ ಬೃಹತ್‌ ಪ್ರದರ್ಶನ ಆಯುರ್‌ ಎಕ್ಸಪೋ-2022 ಅನ್ನು ಏ.23ರಿಂದ 25ರವರೆಗೆ ಮೂರು ದಿನಗಳ ಕಾಲ ಇಲ್ಲಿನ ಗೋಕುಲ ರಸ್ತೆ ಬಸವೇಶ್ವರ ನಗರದ ಸಂಜೀವಿನಿ ಆಯುರ್ವೇದ ಮಹಾವಿದ್ಯಾಲಯದ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಕಾಲೇಜ್‌ನ ಪ್ರಾಂಶುಪಾಲ ಡಾ|ಎಸ್‌.ಕೆ. ಬನ್ನಿಗೋಳ ತಿಳಿಸಿದರು.

Advertisement

ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಸಂಜೀವಿನಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ (ಎಸ್‌ಎಎಂಸಿಎಚ್‌) ವತಿಯಿಂದ ಆಯೋಜಿಸಿರುವ ಆಯುರ್‌ ಎಕ್ಸಪೋಗೆ ಏ. 23ರಂದು ಬೆಳಗ್ಗೆ 10:00 ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ.

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ| ಕೆ.ಸುಧಾಕರ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ, ಕೈಮಗ್ಗ ಮತ್ತು ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಶಾಸಕ ಅಮೃತ ದೇಸಾಯಿ ಅತಿಥಿಗಳಾಗಿ ಆಗಮಿಸಲಿದ್ದಾರೆ. ಕೆಎಸ್‌ಜಿಡಿಡಬ್ಲ್ಯೂಇ ಫೌಂಡೇಶನ್‌ ಅಧ್ಯಕ್ಷ ಡಾ|ಕೆ.ಎಸ್‌.ಶರ್ಮಾ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

24ರಂದು ಬೆಳಗ್ಗೆ 10 ಗಂಟೆಗೆ ವ್ಯಕ್ತಿತ್ವ ವಿಕಸನ ಕಾರ್ಯಕ್ರಮವನ್ನು ಆಯುಷ್‌ ನಿರ್ದೇಶನಾಲಯದ ಆಯುಕ್ತ ರಾಮಚಂದ್ರ ಉದ್ಘಾಟಿಸಲಿದ್ದಾರೆ. ಶಾಸಕರಾದ ಅರವಿಂದ ಬೆಲ್ಲದ, ಪ್ರಸಾದ ಅಬ್ಬಯ್ಯ, ಆರ್‌ಜಿಯುಎಚ್‌ಎಸ್‌ ರಜಿಸ್ಟ್ರಾರ್‌ ಡಾ|ಎನ್‌. ರಾಮಕೃಷ್ಣ ರೆಡ್ಡಿ, ಸುರೇಶ ಕುಲಕರ್ಣಿ ಅತಿಥಿಗಳಾಗಿ ಆಗಮಿಸಲಿದ್ದಾರೆ.

25ರಂದು ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ನವದೆಹಲಿಯ ಎನ್‌ಸಿಐಎಸ್‌ಎಂ ಅಧ್ಯಕ್ಷ ವೈದ್ಯ ಜಯಂತ ದಿಯೊಪೂಜಾರಿ ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ಯ, ಶಾಸಕ ಸಿ.ಎಂ. ನಿಂಬಣ್ಣವರ, ಡಾ|ರಘುರಾಮ ಭಟ್‌ ಯು., ಡಾ|ಬಿ.ಎಸ್‌.ಪ್ರಸಾದ, ಡಾ|ಬಿ.ಎಸ್‌. ಶ್ರೀಧರ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದರು.

Advertisement

ಮೂರು ದಿನಗಳವರೆಗೆ ನಡೆಯುವ ಪ್ರದರ್ಶನದಲ್ಲಿ ಪ್ರತಿದಿನ ಇಬ್ಬರಂತೆ ಆರು ಸಂಪನ್ಮೂಲ ವೈದ್ಯರಾದ ಸಂತೋಷ ಭಾರತಿ ಗುರೂಜಿ, ತನ್ಮಯ ಗೋಸ್ವಾಮಿ, ಗಿರಿಧರ ಖಜೆ, ವಿಜಯಲಕ್ಷ್ಮಿಬಾಳೇಕುಂದ್ರಿ, ವೆಂಕಟರಮಣ ಹೆಗಡೆ ಹಾಗೂ ಕನೇರಿಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮಿಗಳು ಅನುಭವ ಹಂಚಿಕೊಳ್ಳಲಿದ್ದಾರೆ.

ಎಕ್ಸಪೋದಲ್ಲಿ ಆಯುರ್ವೇದದ ವಿವಿಧ ವಿಶಿಷ್ಟ ಚಿಕಿತ್ಸಾ ಪದ್ಧತಿಗಳ ಹಾಗೂ ಉಪಕರಣಗಳು, ಗ್ರಂಥಗಳು, ಪುಸ್ತಕಗಳು ಮತ್ತು ಔಷಧಿ ಹಾಗೂ ಔಷಧಿ ಸಸ್ಯಗಳ ಪ್ರದರ್ಶನ, ಸಾರ್ವಜನಿಕರಿಗೆ ಯೋಗಾಸನಗಳ ಪ್ರಾತ್ಯಕ್ಷಿಕೆ ಪ್ರದರ್ಶನ, ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು, ಆರೋಗ್ಯವಂತ ಶಿಶು ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಆಯುರ್‌ ಎಕ್ಸಪೋ ಪ್ರತಿದಿನ ಬೆಳಗ್ಗೆ 10 ರಿಂದ ರಾತ್ರಿ 9  ಗಂಟೆವರೆಗೆ ನಡೆಯಲಿದೆ ಎಂದರು. ಎಸ್‌ಎಎಂಸಿಎಚ್‌ ಅಧ್ಯಕ್ಷ ಮೋಹನ ಲಿಂಬಿಕಾಯಿ ಮಾತನಾಡಿ, ದೇಶಿ ಪದ್ಧತಿಯ ಔಷಧಿ ಜನಸಾಮಾನ್ಯರಿಗೆ ತಲುಪಿಸಲು ಆಯುರ್‌ ಎಕ್ಸಪೋ ಆಯೋಜಿಸಲಾಗಿದೆ.

ಯಾವ ರೋಗಕ್ಕೆ ಯಾವ ಮದ್ದು ಉಪಯುಕ್ತ ಎಂಬುದರ ಬಗ್ಗೆ ಹಾಗೂ ಮನೆ ಮದ್ದು ಕುರಿತು ತಿಳಿಸಲಾಗುವುದು. ಎಕ್ಸಪೋದಲ್ಲಿ ಒಟ್ಟು 60 ಮಳಿಗೆಗಳಿದ್ದು, ಅದರಲ್ಲಿ 37 ಆಯುರ್ವೇದ ಇತಿಹಾಸ, ಬೆಳವಣಿಗೆಯ, ವಿವಿಧ ಚಿಕಿತ್ಸಾ, ಹಳೆಯ ಹಾಗೂ ಇತ್ತೀಚಿನ ಸಂಶೋಧನೆಗಳ ಕುರಿತ ಪ್ರಾತ್ಯಕ್ಷಿಕೆಯ ಮಳಿಗೆಗಳಿರಲಿವೆ.

ಚಿಂತಕರು, ವೈದ್ಯರು, ವಿದ್ಯಾರ್ಥಿಗಳು, ಸಾರ್ವಜನಿಕರು ಪಾಲ್ಗೊಂಡು ಆಯುರ್ವೇದ ಕುರಿತು ತಿಳಿಯಬಹುದು. ರಾಜ್ಯದಲ್ಲಿ ಮೊದಲ ಬಾರಿಗೆ ಇಂತಹ ಮೇಳ ಹಮ್ಮಿಕೊಳ್ಳಲಾಗಿದೆ ಎಂದರು.

ಕೆಎಸ್‌ಜಿಡಿಡಬ್ಲ್ಯೂಇ ಫೌಂಡೇಶನ್‌ ಅಧ್ಯಕ್ಷ ಡಾ| ಕೆ.ಎಸ್‌.ಶರ್ಮಾ ಮಾತನಾಡಿ, ಭಾರತದ ಸಾಂಪ್ರದಾಯಿಕ ಔಷಧ ಪದ್ಧತಿ ಬಗ್ಗೆ ಡಬ್ಲ್ಯೂಎಚ್‌ಒ ಸಹ ಪ್ರಶಂಸೆ ವ್ಯಕ್ತಪಡಿಸಿದೆ. ಹೀಗಾಗಿ ವಿಶ್ವದ ಲಕ್ಷ್ಯ ಭಾರತದತ್ತ ವಾಲುತ್ತಿದೆ. ವಾಸಿಯಾಗದ ರೋಗಿಗಳು ಸಹ ಆಯುರ್ವೇದ ಪದ್ಧತಿಯ ಚಿಕಿತ್ಸೆಯಿಂದ ಗುಣಮುಖರಾಗಿದ್ದಾರೆ. ಜನರು ತಮ್ಮ ಆರೋಗ್ಯಕ್ಕೆ ಮಹತ್ವ ಕೊಡುತ್ತಿಲ್ಲ. ಆಯುರ್ವೇದ ಪರ್ಯಾಯ ಚಿಕಿತ್ಸೆಯ ಪದ್ಧತಿ ಅಲ್ಲ. ಅದು ಭಾರತದ ಪುರಾತನ ಚಿಕಿತ್ಸಾ ಪದ್ಧತಿಯಾಗಿದ್ದು, ಆಧುನಿಕ ವೈದ್ಯ ಪದ್ಧತಿಯೇ ಪರ್ಯಾಯ ಪದ್ಧತಿ ಆಗಬೇಕು. ಕಾರಣ ಜನರು ಆಯುರ್ವೇದ ಪದ್ಧತಿ ಚಿಕಿತ್ಸೆಗೆ ಪ್ರಥಮ ಪ್ರಾಶಸ್ತ್ಯ ನೀಡಬೇಕು ಎಂದರು.

ಡಾ|ಸಿ.ಸಿ.ಹಿರೇಮಠ, ಡಾ|ಅಶೋಕ ಬಿಂಗಿ, ಡಾ| ಮಹೇಶ ದೇಸಾಯಿ, ಡಾ|ರಾಮು ತೇಗೂರ, ಡಾ| ರವೀಂದ್ರ ಗುರವ, ಡಾ|ಸೋಮಶೇಖರ ಹುದ್ದಾರ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next