Advertisement
ಕಾಸರಗೋಡು: ಸಿಪಿಎಂ ನೇತೃತ್ವದ ಎಡರಂಗ ಸರಕಾರ ಕೇರಳದಲ್ಲಿ ಪ್ರಜಾತಂತ್ರ ಮೌಲ್ಯಗಳನ್ನು, ವ್ಯವಸ್ಥೆಗಳನ್ನು ಧ್ವಂಸ ಮಾಡುತ್ತಿದೆ ಎಂದು ಬಿಜೆಪಿ ಕೇರಳ ರಾಜ್ಯ ಉಪಾಧ್ಯಕ್ಷ ಕೆ.ಪಿ. ಶ್ರೀಶನ್ ಮಾಸ್ಟರ್ ಆರೋಪಿಸಿದರು.ಕೇರಳ ಸರಕಾರದ ಹಿಂಸಾ ಪ್ರವೃತ್ತಿ ಮತ್ತು ಪೊಲೀಸ್ ದೌರ್ಜನ್ಯವನ್ನು ಪ್ರತಿಭಟಿಸಿ ಬಿಜೆಪಿ ನೇತೃತ್ವದ ಎನ್ಡಿಎ ಕಾಸರಗೋಡು ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ಆಯೋಜಿಸಿದ ಜನಪರ ಧರಣಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ಶರಣಂ’ ಘೋಷಣೆ ಮೊಳಗಿಸಿದ ಅಯ್ಯಪ್ಪ ಭಕ್ತರನ್ನು ಜೈಲಿಗಟ್ಟುತ್ತಿರುವ ಪೊಲೀಸರು ಹಿಂಸೆಯಲ್ಲಿ ನಿರತರಾದ ಸಿಪಿಎಂ ಕಾರ್ಯಕರ್ತರನ್ನು ಬಂಧಿಸದೆ ರಾಜಾರೋಷವಾಗಿ ರಸ್ತೆ ಯಲ್ಲಿ ತಿರುಗಾಡಲು ಬಿಡುತ್ತಿರುವ ಪೊಲೀಸರು ಎಡರಂಗದ ಕೈಗೊಂಬೆಗಳಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು. ಶಬರಿಮಲೆ ವಿಚಾರದಲ್ಲಿ ಕೇರಳ ಸರಕಾರ ನಡೆದುಕೊಂಡ ರೀತಿ ಅತ್ಯಂತ ನಿಂದನಾರ್ಹ ಎಂದ ಅವರು ಶಬರಿಮಲೆಯ ಹೆಸರಿನಲ್ಲಿ ಅಯ್ಯಪ್ಪ ಭಕ್ತರನ್ನು, ಬಿಜೆಪಿ, ಸಂಘ ಪರಿವಾರದ ಕಾರ್ಯಕರ್ತರನ್ನು ಬಂಧಿಸಿ ಜೈಲಿಗಟ್ಟಿದ ಮಾತ್ರಕ್ಕೆ ಸರಕಾರದ ವಿರುದ್ಧ ಹೋರಾಟ ನಿಲ್ಲದು. ಪಿಣರಾಯಿ ವಿಜಯನ್ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವ ತನಕ ಹೋರಾಟ ನಡೆಸುವುದಾಗಿ ಅವರು ಹೇಳಿದರು. ಪಿಣರಾಯಿ ವಿಜಯನ್ ಸಿಪಿಎಂನ ಕೊನೆಯ ಮುಖ್ಯಮಂತ್ರಿ ಎಂದ ಅವರು ಇನ್ನು ಎಂದೆಂದಿಗೂ ಎಡರಂಗ ಸರಕಾರ ಅಧಿಕಾರಕ್ಕೆ ಬರದು ಎಂದರು.