ಸಿರುಗುಪ್ಪ: ಮರಳು ಸಾಗಾಣೆ ಮಾಡದಂತೆ ತಾಲೂಕಿನ ಬಾಗೇವಾಡಿ ಗ್ರಾಮಸ್ಥರು ಬುಧವಾರ ಮರಳು ತುಂಬಲು ಬಂದಿದ್ದ ಲಾರಿಗಳನ್ನು ತಡೆದು ಪ್ರತಿಭಟನೆ ನಡೆಸಿದರು. ಲೋಕೋಪಯೋಗಿ ಇಲಾಖೆ ಯಿಂದ ಸರ್ಕಾರಿ ವಿವಿಧ ಯೋಜನೆಗಳ ಕಾಮಗಾರಿಗೆ ಬೇಕಾದ ಮರಳು ಒದಗಿಸುವ ಉದ್ದೇಶದಿಂದ ತಾಲೂಕಿನ ಬಾಗೇವಾಡಿ ಗ್ರಾಮದಲ್ಲಿ ಇತ್ತೀಚೆಗೆ ಮರಳು ವಿತರಣಾ ಕೇಂದ್ರ ಸ್ಥಾಪಿಸಲಾಗಿತ್ತು. ಕಳೆದ ಎರಡು ದಿನಗಳಿಂದ ಗುತ್ತಿಗೆದಾರರು ಗ್ರಾಮದಲ್ಲಿ ಮರಳಿಗೆ ಲಗ್ಗೆ ಇಟ್ಟಿದ್ದರು.
ಇದರಿಂದ ಆತಂಕಗೊಂಡ ಗ್ರಾಮಸ್ಥರು, ಕುಡಿವ ನೀರಿನ ಮೂಲ ತುಂಗಭದ್ರಾ ನದಿಯಾಗಿದ್ದು, ಮರಳು ಸಾಗಣೆಯಿಂದ ಅಂತರ್ಜಲ ಮಟ್ಟ ಕುಸಿಯಲಿದೆ. ಮುಂದಿನ ಬೇಸಿಗೆಯಲ್ಲಿ ಕುಡಿವ ನೀರಿಗೆ ತೊಂದರೆಯಾಗಲಿದೆ. ಹೀಗಾಗಿ ನದಿಯಲ್ಲಿನ ಮರಳು ಸಾಗಣೆಯನ್ನು ಸಂಪೂರ್ಣ ನಿಷೇಧಿಸಬೇಕೆಂದು ಒತ್ತಾಯಿಸಿ ಮರಳು ಸಾಗಾಣಿಕೆಗೆ ಬಂದಿದ್ದ ನೂರಾರು ಲಾರಿಗಳನ್ನು ತಡೆದು ಪ್ರತಿಭಟನೆ ನಡೆಸಿದರು. ತಾಲೂಕಿನ ಬಾಗೇವಾಡಿ ಗ್ರಾಪಂ ಇಂದಿಗೂ ಸಹ ಬೇಸಿಗೆಯಲ್ಲಿ ಕುಡಿವ ನೀರಿಗಾಗಿ ಕೆರೆ ನಿರ್ಮಿಸಿಲ್ಲ. ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಕುಡಿವ ನೀರಿನ ಮೂಲವಿಲ್ಲದೆ ನದಿಯಲ್ಲಿರುವ ನೀರನ್ನೇ ಅವಲಂಬಿಸಲಾಗಿದೆ. ಹಲವಾರು ವರ್ಷಗಳಿಂದ ಉತ್ತಮ ಮಳೆಯಿಂದ ನದಿಯಲ್ಲಿ ನೀರಿನ ಕೊರತೆ ಇಲ್ಲದೆ ಗ್ರಾಮಸ್ಥರಿಗೆ ನೀರಿನ ಸಮಸ್ಯೆಆಗುತ್ತಿರಲಿಲ್ಲ. ಜತೆಗೆ ಅಂತರ್ಜಲ ಕೈಕೊಟ್ಟಿರಲಿಲ್ಲ. ಆದರೆ ಕಳೆದ ವರ್ಷ ಬೇಸಿಗೆ ಪೂರ್ವದಲ್ಲೇ ನದಿಯಲ್ಲಿ ನೀರು ಸಂಪೂರ್ಣ ಬತ್ತಿ ಬಿಂದಿಗೆ ನೀರಿಗೂ ಹರಸಾಹಸ ಪಡುವಂತಾಗಿತ್ತು ಎಂದು ಗ್ರಾಮಸ್ಥರು ಕಿಡಿಕಾರಿದರು.
ಲೋಕೋಪಯೋಗಿ ಇಲಾಖೆ ಸುಪರ್ದಿಯಲ್ಲಿ ನಡೆಯಬೇಕಾಗಿರುವ ಮರಳು ಗುತ್ತಿಗೆಯನ್ನು ಇಲಾಖೆ ಮಧ್ಯವರ್ತಿ ಗುತ್ತಿಗೆದಾರರೊಬ್ಬನಿಗೆ ಮರಳು ಪೂರೈಕೆಗೆ ಅವಕಾಶ ಕಲ್ಪಿಸಿದ್ದಾರೆ ಎಂಬ ಸಂಶಯ ಇದೆ. ಜತೆಗೆ ಮರಳು ಸಾಗಣೆಯ ಸ್ಥಳದಲ್ಲಿ ಯಾವುದೇ ತೂಕದ ಯಂತ್ರಗಳು ಇಲ್ಲದೆ ನಿಗದಿತ ತೂಕಕ್ಕಿಂತಲೂ ಹೆಚ್ಚು ಮರಳು ಸಾಗಣೆಗೆ ಕುಮ್ಮಕ್ಕು ನೀಡಲಾಗುತ್ತಿದೆ. ಇನ್ನೂ ನಿಯಮ ಪಾಲನೆಯ ನೆಪದಲ್ಲಿ ಹಾಕಿರುವ ಸಿಸಿ ಕ್ಯಾಮೆರಾಗಳು ಕೇವಲ ನೆಪಮಾತ್ರಕ್ಕೆ ಸೀಮಿತವಾಗಿದ್ದು, ಒಂದು ಕಂಪ್ಯೂಟರ್ ಮಾನೀಟರ್ ಇಲ್ಲದೆ ಕೇವಲ ತೋರಿಕೆಗೆ ಮಾತ್ರ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಜಿಪಿಎಸ್ ಅಳವಡಿಸಿದ ಲಾರಿಗಳಿಗೆ ಮರಳು ಸಾಗಣೆ ಅವಕಾಶ ಇರುವುದು ಬೆಳಗ್ಗೆ 10.30 ಗಂಟೆಯಿಂದ ಸಂಜೆ 5 ಗಂಟೆವರೆಗೆ ಮಾತ್ರ. ಆನ್ ಲೈನ್ ಪರ್ಮಿಟ್ ಪಡೆಯಲು ಸಾಧ್ಯವಾಗುವುದು ಕೇವಲ 50 ರಿಂದ 80 ಮಾತ್ರ. ಆದರೆ ಮರಳಿಗಾಗಿ ಜಿಲ್ಲೆಯ ವಿವಿಧ ಕಡೆಯ ಗುತ್ತಿಗೆದಾರರು ಜಿಲ್ಲಾಧಿಕಾರಿಗಳಿಗೆ ನೀಡಿರುವ ಗುತ್ತಿಗೆ ಅದೇಶ ಪತ್ರವನ್ನು ನೀಡಿ ಪ್ರಸಕ್ತ 580 ಲಾರಿಗಳಿಗೆ ತುಂಬುವಷ್ಟು ಮರಳಿಗೆ ಪರವಾನಗಿ ನೀಡಲು ಅವಕಾಶ ಸಿಕ್ಕಿದೆ. ಇದರಿಂದಾಗಿ ಗುತ್ತಿಗೆದಾರರು ಸರ್ಕಾರಿ ಕಾಮಗಾರಿಗಳ ಹೆಸರಿನಲ್ಲಿ ಮರಳು ಅಕ್ರಮವಾಗಿ ಬೇರೆಡೆಗೆ ಸಾಗಣೆ ಮಾಡಲಾಗುತ್ತಿದೆ. ಅಲ್ಲದೆ, ನಿಗದಿತ ಸಮಯದಲ್ಲಿ ಮಾತ್ರ ಮರಳು ಸಾಗಣೆ ಮಾಡಬೇಕೆಂಬ ನಿಯಮ ಇದ್ದರೂ, ನಿಯಮ ಗಾಳಿಗೆ ತೂರಿ ರಾತ್ರೋರಾತ್ರಿ ಮರಳು ಸಾಗಣೆ ಮಾಡಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದರು.
ಸ್ಥಳಕ್ಕೆ ಆಗಮಿಸಿದ ಎಎಸ್ಐ ಪಂಪಾಪತಿ, ನೀವು ಸರಿಯಾದ ಕಾರಣವಿಲ್ಲದೆ ಪರವಾನಗಿ ಪಡೆದ ಲಾರಿಗಳನ್ನು ತಡೆಯಲು ಬರುವುದಿಲ್ಲ. ಆದರೆ ನೀವು ತಹಶೀಲ್ದಾರ್ಗೆ ಮನವಿ ನೀಡಿ ಸಮಸ್ಯೆ ಪರಿಹರಿಸಿಕೊಳ್ಳುವಂತೆ ಸಲಹೆ ನೀಡಿದರು. ತಹಶೀಲ್ದಾರ್ಗೆ ಮನವಿ ಸಲ್ಲಿಸಿ ಅಂತಿಮ ತೀರ್ಮಾನ ಕೈಗೊಳ್ಳುವವರೆಗೆ ಮರಳು ಸಾಗಣೆ ಮಾಡಬಾರದು ಎಂದು ಗ್ರಾಮಸ್ಥರು ಒತ್ತಾಯಿಸಿದರು.
ನಮ್ಮ ಗ್ರಾಮದ ನದಿಯಿಂದ ಮರಳು ಸಾಗಿಸುವುದರಿಂದ ನದಿಯಲ್ಲಿ ಅಂತರ್ಜಲ ಕುಸಿದು ಬೇಸಿಗೆಯಲ್ಲಾಗುವ ನೀರಿನ ಕೊರತೆ ನೀಗಿಸಲು ಮರಳು ಸಾಗಾಣಿಕೆಯನ್ನು ತಕ್ಷಣವೆ ಅಧಿಕಾರಿಗಳು ನಿಲ್ಲಿಸಬೇಕು.
ಬಾವಿಕಟ್ಟೆ ಪಂಪನಗೌಡ, ಬಾಗೇವಾಡಿ ಗ್ರಾಪಂ ಅಧ್ಯಕ್ಷ