Advertisement

ಆಲಮಟ್ಟಿ-ನಾರಾಯಣಪುರ ಸಂಪರ್ಕ ರಸ್ತೆ ದುರಸ್ತಿಗೆ ಆಗ್ರಹ

05:54 PM Dec 15, 2021 | Team Udayavani |

ಮುದ್ದೇಬಿಹಾಳ: ಇಲ್ಲಿನ ಶಾಸಕ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಎ.ಎಸ್‌. ಪಾಟೀಲ ನಡಹಳ್ಳಿಯವರು ಮುದ್ದೇಬಿಹಾಳ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿರುವ ಆಲಮಟ್ಟಿಯ ಲಾಲ್‌ ಬಹಾದ್ದೂರ್‌ ಶಾಸ್ತ್ರಿ ಮತ್ತು ನಾರಾಯಣಪುರದ ಬಸವಸಾಗರ ಜಲಾಶಯ ಸಂಪರ್ಕಿಸುವ ಸಂಪೂರ್ಣ ಹದಗೆಟ್ಟ ಮುಖ್ಯ ರಸ್ತೆ ದುರಸ್ತಿ ಮತ್ತು ಹಸ್ತಾಂತರ ಕುರಿತು ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ಎರಡನೇ ದಿನವಾದ ಮಂಗಳವಾರ ಲಿಖೀತ ಪ್ರಶ್ನೆ ಮೂಲಕ ಧ್ವನಿ ಎತ್ತಿದ್ದು ಅದಕ್ಕೆ ಜಲ ಸಂಪನ್ಮೂಲ ಸಚಿವರಾಗಿರುವ ಗೋವಿಂದ ಕಾರಜೋಳ ಸಕಾರಾತ್ಮಕ ಸ್ಪಂದನೆ ನೀಡಿದ್ದಾರೆ.

Advertisement

ಕೆಬಿಜೆಎನ್ನೆಲ್‌ ವ್ಯಾಪ್ತಿಯಲ್ಲಿ ಬರುವ ಆಲಮಟ್ಟಿ, ನಾರಾಯಣಪುರ ಆಣೆಕಟ್ಟು ಸಂಪರ್ಕ ಕಲ್ಪಿಸುವ ಏಕೈಕ ರಸ್ತೆ ಇದಾಗಿದೆ. ಆಲಮಟ್ಟಿಯಿಂದ ನಿಡಗುಂದಿ, ಮುದ್ದೇಬಿಹಾಳ, ನಾಲತವಾಡ ಮಾರ್ಗವಾಗಿ ನಾರಾಯಣಪುರ ಚೆಕ್‌ಪೋಸ್ಟ್‌ವರೆಗೆ ಸಂಪರ್ಕ ಕಲ್ಪಿಸುವ ಈ ರಸ್ತೆ ತುಂಬಾ ಹಾಳಾಗಿ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಈ ರಸ್ತೆಯು ಕೆಬಿಜೆಎನ್ನೆಲ್‌ ವ್ಯಾಪ್ತಿಯಲ್ಲಿದ್ದು ಇದುವರೆಗೂ ಇದನ್ನು ಸುಧಾರಣೆ ಮಾಡದಿರಲು ಕಾರಣಗಳೇನು?, ಈ ರಸ್ತೆ ಪುನರ್‌ ನಿರ್ಮಾಣಕ್ಕೆ ಪ್ರಸ್ತಾವನೆಯು ವಿಭಾಗದಿಂದ ನಿಗಮದ ಕೇಂದ್ರ ಕಚೇರಿಗೆ ಬಂದಿದೆಯೇ? ಬಂದಿದ್ದಲ್ಲಿ ಮಂಜೂರಾತಿಗಾಗಿ ಕೈಗೊಂಡ ಕ್ರಮವೇನು?, ಸಾರ್ವಜನಿಕರು ಹಾಗೂ ರೈತರ ಹಿತದೃಷ್ಟಿಯಿಂದ ಪ್ರಸಕ್ತ ಸಾಲಿನಲ್ಲಿ ಈ ರಸ್ತೆಯ ಪುನರ್‌ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗುವುದೇ? ಇಲ್ಲವಾದಲ್ಲಿ ಇದಕ್ಕೆ ಕಾರಣಗಳೇನು ಅನ್ನೋದರ ಕುರಿತು ವಿವರಣೆ ನೀಡಬೇಕು ಎಂದು ಪ್ರಶ್ನೋತ್ತರ ಅವಧಿಯಲ್ಲಿ ಪ್ರಸ್ತಾಪಿಸಿದ್ದರು.

ನಡಹಳ್ಳಿಯವರ ಪ್ರಶ್ನೆಗೆ ಉತ್ತರ ನೀಡಿದ ಸಚಿವ ಕಾರಜೋಳ, ಈ ರಸ್ತೆ 1964ರಲ್ಲಿ ರಸ್ತೆಗಳು ಇಲ್ಲದ ಸಂದರ್ಭ ನೀರಾವರಿ ಇಲಾಖೆ ರಸ್ತೆ ಮಾಡಿಕೊಂಡು ಡ್ಯಾಂ ಕಾಮಗಾರಿಗೆ ಅನುಕೂಲ ಮಾಡಿಕೊಳ್ಳಲಾಗಿತ್ತು. 2015ರವರೆಗೂ ಈ ರಸ್ತೆ ನೀರಾವರಿ ಇಲಾಖೆಯಲ್ಲೇ ಇತ್ತು. ಇಂದು ಆ ರಸ್ತೆ ರಾಜ್ಯ ಹೆದ್ದಾರಿ-61 ಆಗಿ ಮೇಲ್ದರ್ಜೆಗೆ ಏರಿದೆ. ನಬಾರ್ಡ್‌ನಲ್ಲಿ 15.69 ಕೋಟಿ ಕಾಮಗಾರಿಗೆ ಖರ್ಚು ಮಾಡಿ 2015 ಸೆಪ್ಟೆಂಬರ್‌ 14ರ ನಂತರ ಪಿಡಬ್ಲ್ಯೂಡಿಗೆ ಈ ರಸ್ತೆಯನ್ನು ಹಸ್ತಾಂತರಿಸಲಾಗಿತ್ತು. ಇದನ್ನು ತಿರುಗಿ ನೀರಾವರಿ ಇಲಾಖೆಯೇ ನಿರ್ವಹಣೆ ಮಾಡಬೇಕು ಎಂದು ಶಾಸಕರು ಒತ್ತಾಯ ಮಾಡಿದ್ದಾರೆ.

ಈ ರಸ್ತೆ ಎರಡೂ ಡ್ಯಾಂಗಳ ಮಧ್ಯೆ ಇರುವಂಥದ್ದು ಎನ್ನುವ ಕಾರಣವನ್ನು ಶಾಸಕರು ನೀಡಿದ್ದಾರೆ. ಖಂಡಿತವಾಗಿಯೂ ಪಿಡಬ್ಲ್ಯೂಡಿಯವರ ಜೊತೆ ಸಭೆ ಮಾಡಿ ಪಿಡಬ್ಲ್ಯೂಡಿಯವರು ಆ ರಸ್ತೆಯನ್ನು ಶಾಶ್ವತವಾಗಿ ನೀರಾವರಿ ಇಲಾಖೆಗೆ ಹಸ್ತಾಂತರಿಸಿದರೆ ಪರಿಶೀಲನೆ ಮಾಡುತ್ತೇವೆ ಎಂದು ಉತ್ತರಿಸಿದರು.

ಇದಕ್ಕೆ ತೃಪ್ತರಾಗದ ನಡಹಳ್ಳಿಯವರು, ಸಚಿವರು ನಮ್ಮ ಜಿಲ್ಲೆಯವರೇ ಆಗಿದ್ದು ಅವರಿಂದ ನಾನು ಪರಿಶೀಲಿಸುವ ಉತ್ತರ ಬಯಸಿಲ್ಲ. ನಾನು ಸಭಾಧ್ಯಕ್ಷರ ಮುಖಾಂತರ ವಿನಂತಿಸುವುದೇನೆಂದರೆ ಎರಡೂ ಡ್ಯಾಂ ಸಂಪರ್ಕಿಸಲು ಪರ್ಯಾಯ ರಸ್ತೆಯೇ ಇಲ್ಲ. ಆದ್ಧರಿಂದ ಕೂಡಲೇ ಆ ರಸ್ತೆಯನ್ನು ಹಸ್ತಾಂತರ ಮಾಡಿಕೊಂಡು ದುರಸ್ತಿ ಮಾಡಬೇಕು ಇಲ್ಲವೇ ಹೊಸದಾಗಿ ನಿರ್ಮಾಣ ಮಾಡಬೇಕು ಎಂದು ಕೋರುವುದಾಗಿ ತಿಳಿಸಿದರು.

Advertisement

ಇದಕ್ಕೆ ಸ್ಪಂದಿಸಿದ ಸಚಿವರು ಪಿಡಬ್ಲ್ಯೂಡಿ ಎಸಿಎಸ್‌ ಮತ್ತು ನೀರಾವರಿ ಇಲಾಖೆ ಎಸಿಎಸ್‌ ಜಂಟಿ ಸಭೆ ನಡೆಸಿ ರಸ್ತೆಯನ್ನು ಬಿಟ್ಟು ಕೊಡಲು ಒಪ್ಪಿದರೆ ಶಾಶ್ವತವಾಗಿ ಪಿಡಬ್ಲ್ಯೂಡಿಯಿಂದ ನಿರ್ವಹಣೆ ಮಾಡುತ್ತೇವೆ ಎಂದು ಅಧಿವೇಶನದಲ್ಲಿ ಭರವಸೆ ನೀಡಿ ಚರ್ಚೆ ಮುಕ್ತಾಯಗೊಳಿಸಿದರು. ಆದರೆ ಈ ವೇಳೆ ಜಲ ಸಂಪನ್ಮೂಲ ಸಚಿವರಾಗಿರುವ ಕಾರಜೋಳ ಅವರು ಪಿಡಬ್ಲ್ಯೂಡಿಯಿಂದ ನಿರ್ವಹಣೆ ಮಾಡುತ್ತೇವೆ ಎಂದು ಹೇಳಿದ್ದು ಗೊಂದಲ ಉಂಟು ಮಾಡಿದಂತಾಗಿತ್ತು.

ಸಚಿವರು ಅಧಿವೇಶನದಲ್ಲಿ ನನ್ನ ಪ್ರಶ್ನೆಗೆ ಉತ್ತರಿಸುವಾಗ ಪಿಡಬ್ಲ್ಯೂಡಿಯಿಂದ ನಿರ್ವಹಣೆ ಮಾಡುತ್ತೇವೆ ಎಂದು ಹೇಳಿಕೆ ನೀಡಿದ್ದು ಬಾಯಿ ತಪ್ಪಿನಿಂದ ಆಗಿರಬಹುದು. ಅದು ನೀರಾವರಿ ಇಲಾಖೆಯಿಂದ ಎಂದಾಗಬೇಕಿತ್ತು. ಆದರೆ ಅಧಿವೇಶನದಲ್ಲಿ ಇದು ರೆಕಾರ್ಡ್‌ ಆಗಿದೆ. ಏನೂ ಮಾಡೋಕಾಗೊಲ್ಲ. ಇದೇ ಪ್ರಶ್ನೆಯನ್ನು ಪಿಡಬ್ಲ್ಯೂಡಿ ಸಚಿವರಿಗೂ ಕೇಳಿದ್ದೇನೆ. ಅವರಿಂದ ಇನ್ನೂ ಉತ್ತರ ಬಂದಿಲ್ಲ. -ಎ.ಎಸ್‌. ಪಾಟೀಲ ನಡಹಳ್ಳಿ, ಶಾಸಕರು, ಮುದ್ದೇಬಿಹಾಳ

Advertisement

Udayavani is now on Telegram. Click here to join our channel and stay updated with the latest news.

Next