Advertisement

ಪ್ರಕೃತಿ ವಿಕೋಪದ ತುರ್ತು ಪರಿಹಾರ ಹೆಚ್ಚಳಕ್ಕೆ ಬೇಡಿಕೆ

10:18 AM Sep 27, 2019 | sudhir |

ಕೋಟ: ಕೋಟತಟ್ಟು ಗ್ರಾಮಸಭೆ ಸೆ. 25ರಂದು ಗ್ರಾ.ಪಂ. ಅಧ್ಯಕ್ಷ ರಘು ತಿಂಗಳಾಯ ಅವರ ಅಧ್ಯಕ್ಷತೆಯಲ್ಲಿ ಇಲ್ಲಿನ ಕಾರಂತ ಕಲಾಭವನದಲ್ಲಿ ಜರಗಿತು. ಪಶು ಇಲಾಖೆಯ ಅಧಿಕಾರಿ ಡಾ| ಅರುಣ್‌ ಕುಮಾರ್‌ ಮಾಗದರ್ಶಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು.

Advertisement

ಸೌಜನ್ಯದಿಂದ ವರ್ತಿಸಲು ಮೆಸ್ಕಾಂಗೆ ಕರೆ
ವಿದ್ಯುತ್‌ ಬಿಲ್‌ ಪಾವತಿ ವಿಳಂಬವಾದರೆ ಮನೆ ಗಳಿಗೆ ವಸೂಲಿ ಮಾಡುವವರಂತೆ ಬಂದು ಫ್ಯೂಸ್‌ ಕಿತ್ತು ಸಂಪರ್ಕ ಕಡಿತಗೊಳಿಸಲಾಗುತ್ತದೆ. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲೂ ಒಳಗಡೆ ಬಂದು ಫ್ಯೂಸ್‌ ತೆಗೆದುಕೊಂಡು ಹೋದ ಉದಾಹರಣೆ ಇದೆ. ದೊಡ್ಡ-ದೊಡ್ಡ ಉದ್ಯಮದಾರರು ಲಕ್ಷಾಂತರ ಹಣ ಬಾಕಿ ಉಳಿಸಿಕೊಂಡರೆ ಕೇಳುವವರಿಲ್ಲ.

ಆದರೆ ಬಡವರ ನೂರು-ಇನ್ನೂರು ರೂ. ಬಿಲ್‌ಗೆ ಈ ರೀತಿ ಮಾಡಲಾಗುತ್ತದೆ. ಸಿಬಂದಿಗೆ ಇಷ್ಟೊಂದು ಉದ್ಧಟತನ ಸರಿಯಲ್ಲ. ಗ್ರಾಹಕರ ಜತೆ ಸೌಜನ್ಯವಾಗಿ ವರ್ತಿಸಿ. ಒಂದೆರಡು ಬಾರಿ ಎಚ್ಚರಿಕೆ ನೀಡಿ ಕ್ರಮ ತೆಗೆದುಕೊಳ್ಳಿ ಎಂದು ಗ್ರಾಮಸ್ಥರು ಕೇಳಿಕೊಂಡರು.

ಮೆಸ್ಕಾಂ ಜನಸಂಪರ್ಕ ಸಭೆ ನಡೆಯುವಾಗ ಸ್ಥಳೀಯಾಡಳಿತಕ್ಕೆ ಯಾವುದೇ ಮಾಹಿತಿ ಇರುವುದಿಲ್ಲ. ಈ ಬಾರಿ ಸೆ. 26ರಂದು ಈ ಸಭೆ ನಡೆಯುತ್ತಿದ್ದು ಈ ತನಕ ನಮ್ಮ ಗ್ರಾಮ ಪಂಚಾಯ ತ್‌ಗೆ ಮಾಹಿತಿ ಬಂದಿಲ್ಲ. ಹೀಗಾಗಿ ಸಭೆಯನ್ನು ಮುಂದೂಡಬೇಕು ಮತ್ತು ಮುಂದೆ ಸೂಕ್ತ ಪ್ರಚಾರ ನೀಡಿ ಸಭೆ ನಡೆಸಬೇಕು ಎಂದು ಗ್ರಾ.ಪಂ. ಅಧ್ಯಕ್ಷ ರಘು ತಿಂಗಳಾಯ ತಿಳಿಸಿದರು.

ಕೋಟತಟ್ಟು ಕೃಷಿ ಇಲಾಖೆಯ ಮಾದರಿ ಗ್ರಾಮ
ಕೃಷಿ ಇಲಾಖೆ ಕೋಟತಟ್ಟು ಗ್ರಾಮವನ್ನು ಮಾದರಿ ಗ್ರಾಮವಾಗಿ ಸ್ವೀಕರಿಸಿದೆ. ಈ ಬಗ್ಗೆ ರೈತರಿಗೆ ಗುರುತು ಚೀಟಿಯನ್ನು ನೀಡಿದ್ದು ಇದರ ಮೂಲಕ ಕೆಲವು ಸೌಲಭ್ಯಗಳು ದೊರೆಯಲಿವೆ. ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಬಹುದು ಎಂದು ಕೃಷಿ ಅಧಿಕಾರಿ ಚಂದ್ರಶೇಖರ ಉಪಾಧ್ಯ ತಿಳಿಸಿದರು.

Advertisement

ಸಭೆಯ ಆರಂಭದಲ್ಲಿ ಮೀನುಗಾರಿಕೆ ಸೇರಿದಂತೆ ಹಲವು ಇಲಾಖೆಗಳ ಅಧಿಕಾರಿಗಳು ಗೈರಾದ ಕುರಿತು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು ಮತ್ತು ಕೋಟತಟ್ಟು ಬಾರಿಕೆರೆಯ ಮನೆಯೊಂದರಲ್ಲಿ ವಿದ್ಯುತ್‌ ಅವಘಡ ನಡೆದಾಗ ಮೆಸ್ಕಾಂ ಇಲಾಖೆಯವರು ಸೂಕ್ತವಾಗಿ ಸ್ಪಂದನೆ ನೀಡಿಲ್ಲ ಎಂದು ಗ್ರಾಮಸ್ಥರು ತಿಳಿಸಿದರು. ಕೃಷಿ ಇಲಾಖೆಯ ಸೌಲಭ್ಯಗಳ ಹಂಚಿಕೆಗೆ ಪಾರದರ್ಶಕ ವ್ಯವಸ್ಥೆಯಾಗಬೇಕು ಎನ್ನುವ ಮನವಿ ಕೇಳಿ ಬಂತು.

ತುರ್ತು ಪರಿಹಾರ ಹೆಚ್ಚಳಕ್ಕೆ ಆಗ್ರಹ
ಪ್ರಕೃತಿ ವಿಕೋಪ ಸಂದರ್ಭ ಮನೆ ಮುಂತಾದವು ಗಳಿಗೆ ಹಾನಿಯಾದಾಗ ಸ್ಥಳೀಯಾಡಳಿತದಿಂದ ಕೇವಲ 1 ಸಾವಿರ ರೂ. ತುರ್ತು ಪರಿಹಾರ ನೀಡಲಾಗುತ್ತದೆ. ಈ ಮೊತ್ತ ಹೆಚ್ಚಳಗೊಳಿಸಬೇಕು. ಇಲ್ಲವಾದರೆ ಈ ಕನಿಷ್ಠ ತುರ್ತು ಪರಿಹಾರವನ್ನೇ ಸ್ಥಗಿತಗೊಳಿಸಿ ಎಂದು ಫಲಾನುಭವಿಯೋರ್ವರು ಬೇಡಿಕೆ ಸಲ್ಲಿಸಿದರು. ಈ ಕುರಿತು ಸಂಬಂಧಪಟ್ಟ ಇಲಾಖೆಗೆ ಮನವಿ ಮಾಡುವುದಾಗಿ ಭರವಸೆ ಕೇಳಿ ಬಂತು.

ಗ್ರಾಮಸ್ಥರ ಪರವಾಗಿ ರವೀಂದ್ರ ತಿಂಗಳಾಯ, ರಂಜಿತ್‌ ಬಾರಿಕೆರೆ, ಯೋಗೀಂದ್ರ ಪುತ್ರನ್‌, ರತ್ನಾಕರ ಬಾರಿಕೆರೆ, ಮಂಜುನಾಥ ಭಂಡಾರಿ ಪಡುಕರೆ ಮುಂತಾದವರು ವಿಷಯ ಪ್ರಸ್ತಾವಿಸಿದರು. ಪಿಡಿಒ ಶೈಲಜಾ ಕಾರ್ಯ ಕ್ರಮ ನಿರೂ ಪಿ ಸಿ ದರು. ಉಪಾಧ್ಯಕ್ಷ ಲೋಕೇಶ್‌ ಶೆಟ್ಟಿ ಹಾಗೂ ಸದಸ್ಯರು ಉಪಸ್ಥಿತರಿದ್ದರು. ವಿವಿಧ ಅಧಿಕಾರಿಗಳು ಇಲಾಖೆ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು.

ಕೋಟ ಸ. ಆರೋಗ್ಯ ಕೇಂದ್ರದಲ್ಲಿ ಆಯುಷ್ಮಾನ್‌ನೋಂದಣಿ
ಕೋಟ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಯುಷ್ಮಾನ್‌ ಯೋಜನೆಯ ನೋಂದಣಿ ಆರಂಭಗೊಂಡಿದ್ದು, ಸೋಮ ವಾರ, ಮಂಗಳವಾರ, ಬುಧವಾರ ನೋಂದಣಿ ನಡೆಯುತ್ತದೆ. ಆದರೆ ತಾಂತ್ರಿಕ ಕಾರಣಗಳಿಂದಾಗಿ ದಿನವೊಂದಕ್ಕೆ ಕೇವಲ 30-40 ಅರ್ಜಿ ಸ್ವೀಕರಿಸಲು ಸಾಧ್ಯವಿದೆ. ಆದ್ದರಿಂದ ಪೂರ್ವಾನುಮತಿಯೊಂದಿಗೆ ಬರುವುದು ಉತ್ತಮ ಎಂದು ವೈದ್ಯಾಧಿಕಾರಿ ಡಾ| ವಿಶ್ವನಾಥ ತಿಳಿಸಿದರು.

ಸ.ಆರೋಗ್ಯ ಕೇಂದ್ರದಲ್ಲಿ ಹೆರಿಗೆ ಸೌಲಭ್ಯ
ಕೋಟ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಸೂತಿ ತಜ್ಞರು ಲಭ್ಯವಿದ್ದಾರೆ ಹಾಗೂ ಗೀತಾನಂದ ಫೌಂಡೇಶನ್‌ ಮೂಲಕ ಆನಂದ ಸಿ. ಕುಂದರ್‌ ಅವರು 15-18 ಲಕ್ಷ ರೂ.ಮೌಲ್ಯದ ತಾಂತ್ರಿಕ ಉಪಕರಣಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಆದ್ದರಿಂದ ಆರೋಗ್ಯ ಕೇಂದ್ರದಲ್ಲಿ ಉತ್ತಮ ಹೆರಿಗೆ ಸೌಲಭ್ಯವಿದ್ದು ಸ್ಥಳೀಯರು ಈ ಸೌಲಭ್ಯವನ್ನು ಬಳಸಿಕೊಳ್ಳಬೇಕು ಎಂದು ವೈದ್ಯಾಧಿಕಾರಿಗಳು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next