Advertisement

ಹುಬ್ಬಳ್ಳಿ-ಅಂಕೋಲಾ ರೈಲು ಆರಂಭಕ್ಕೆ ಆಗ್ರಹ

11:07 AM Jan 16, 2019 | Team Udayavani |

ಅಂಕೋಲಾ: ಹೋರಾಟಗಾರ ವಾಟಾಳ್‌ ನಾಗರಾಜ ಕಾರವಾರದಲ್ಲಿ ಜ.17 ರಂದು ನಡೆಸುತ್ತಿರುವ ಹುಬ್ಬಳ್ಳಿ ಅಂಕೋಲಾ ರೈಲ್ವೆ ಮಾರ್ಗದ ಕುರಿತಾದ ಹೋರಾಟಕ್ಕೆ ರೈಲ್ವೆ ಹೊರಾಟ ಸಮಿತಿ ಸಂಪೂರ್ಣ ಬೆಂಬಲ ನೀಡುತ್ತಿದ್ದು ಅಂದು ನಡೆಯುವ ಹೋರಾಟದಲ್ಲಿ ತಾಲೂಕಿನ ಎಲ್ಲ ಸಾರ್ವಜನಿಕರು ಪಾಲ್ಗೊಳ್ಳಿ ಎಂದು ಹೋರಾಟ ಸಮಿತಿ ಅಧ್ಯಕ್ಷ ರಮಾನಂದ ನಾಯಕ ಕರೆ ನೀಡಿದ್ದಾರೆ.

Advertisement

ಅವರು ಪತ್ರಿಗೋಷ್ಠಿಯಲ್ಲಿ ಮಾತನಾಡಿ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗದ ಕುರಿತು ಟಿ.ಎಸ್‌. ರಾಮಚಂದ್ರನ್‌ ಸಮಿತಿ ಆರು ತಿಂಗಳ ಅಧ್ಯಯನ ನಡೆಸಿ ಬದಲಿ ವ್ಯವಸ್ಥೆ ನೀಡಿ ಪರಿಸರ ಹಾನಿಯಾಗದಂತೆ ಬದಲಿ ಅರಣ್ಯ ಬೆಳೆಸುವಂತೆ ಪೂರಕವಾದ ವರದಿ ನೀಡಿತ್ತು. ಹಾಗೆ ಸಿಇಸಿ ವರದಿ ಈ ಯೋಜನೆಗೆ ಪೂರಕವಾಗಿತ್ತು. ಅದನ್ನಾಧರಿಸಿ ಸುಪ್ರೀಂ ಕೋರ್ಟ್‌ ಹಸಿರು ನ್ಯಾಯಪೀಠ ಈ ಯೋಜನೆಗೆ ಹಸಿರು ನಿಶಾನೆ ನೀಡಿತ್ತು. ಬಳಿಕ ವನ್ಯಜೀವಿ ಸಂರಕ್ಷಣಾ ಮಂಡಳಿ ಕ್ಯಾತೆ ತೆಗೆದು ತಡೆ ತಂದಿದೆ. ಇದು ಪರಿಸರವಾದಿಗಳ ಕುಮ್ಮಕ್ಕು ಸ್ವಹಿತಾಸಕ್ತಿಯನ್ನೊಳಗೊಂಡಿದೆ. ಪರಿಸರವಾದಿಗಳು ಅಭಿವೃದ್ಧಿ ಪೂರಕ ಯೋಜನೆಗೆ ಬೆಂಬಲ ನೀಡಿ ವಾಣಿಜ್ಯೋದ್ಯಮ ಪ್ರವಾಸೋದ್ಯಮಕ್ಕೆ ಅಭಿವೃದ್ಧಿಗೆ ಅನುಕೂಲ ಮಾಡಿ ಎಂದರು. ಹೋರಾಟ ಸಮಿತಿ ಸದಸ್ಯ ಸಾಹಿತಿ ವಿಷ್ಣು ನಾಯ್ಕ ಮಾತನಾಡಿ ಕರಾವಳಿ ಭಾಗ ಮತ್ತು ಇಲ್ಲಿಯ ಬಂದರುಗಳು ಅಭಿವೃದ್ಧಿ ಆಗಬೇಕಾದರೆ ಕರಾವಳಿ ಮತ್ತು ಬಯಲುಸೀಮೆ ಜೋಡಿಸುವ ರೈಲ್ವೆ ಯೋಜನೆ ಅನುಷ್ಠಾನಗೊಳಿಸಬೇಕು. ಕೇವಲ ರಾಜಕೀಯ ಮತ್ತು ಪರಿಸರವಾದಿಗಳ ಸ್ವಹಿತಾಸಕ್ತಿಗಾಗಿ ಯೋಜನೆ ನನೆಗುದಿಗೆ ಬಿದ್ದಿದೆ.

ರಾಜೇಂದ್ರ ನಾಯ್ಕ ಮಾತನಾಡಿ ಢೋಂಗಿ ಪರಿಸರವಾದಿಗಳು ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆಗೆ ಅಡ್ಡಗಾಲು ಹಾಕುತ್ತಿದ್ದಾರೆ. ಅದೇ ಇವರು ಜಿಲ್ಲೆಗೆ ತಂದು ಸುರಿಯುತ್ತಿರುವ ಮಾರಕ ಯೋಜನೆಗಳಾದ ಕೈಗಾ ಸ್ಥಾವರಕ್ಕೆ ಯಾಕೆ ವಿರೋಧ ವ್ಯಕ್ತಪಡಿಸುತ್ತಿಲ್ಲ ಎಂದು ಸವಾಲು ಹಾಕಿದ್ದಾರೆ.

ಡಿ.ಎನ್‌. ನಾಯಕ, ಭಾಸ್ಕರ ನಾರ್ವೇಕರ, ಆರ್‌.ಟಿ. ಮಿರಾಶಿ, ಪಾಂಡರಂಗ ಗೌಡ, ಉಮೇಶ ನಾಯ್ಕ, ಮೋಹಿನಿ ನಾಯ್ಕ, ಹನುಮಂತ ಗೌಡ, ರಾಘು ಕಾಕರಮಠ, ವಿಜಯಕುಮಾರ ನಾಯ್ಕ, ಪುರುಷೋತಮ ನಾಯ್ಕ, ರಾಘು ನಾಯ್ಕ, ಗಜೇಂದ್ರ ನಾಯ್ಕ, ಸುನೀಲ ತಾಮ್ಸೆ, ಶ್ರೀಧರ ನಾಯ್ಕ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next