Advertisement

ಉಡುಪಿಯಲ್ಲಿ ಹೆಚ್ಚಿದ ನೀರಿನ ಬೇಡಿಕೆ

11:12 AM Mar 28, 2018 | Team Udayavani |

ಉಡುಪಿ: ಬಿರು ಬಿಸಿಲು ಸುಡುತ್ತಿದ್ದರೂ ಅದೃಷ್ಟವಶಾತ್‌ ಈ ಬಾರಿ ನಗರಸಭೆ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಕಾಡಿಲ್ಲ. ಕೆಲವು ಭಾಗಗಳಲ್ಲಿ ನೀರಿನ ಒತ್ತಡ ಕೊರತೆ ಸಮಸ್ಯೆ ಕಂಡುಬಂದಿದ್ದು, ಭವಿಷ್ಯದಲ್ಲಿ ನೀರಿನ ಸಮಸ್ಯೆ ನಿಭಾಯಿಸಲು ಕೆಲವು ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿದೆ. ಕೆಲವು ಎತ್ತರದ ಪ್ರದೇಶಗಳು ಮತ್ತು ಹೊರವಲಯದಲ್ಲಿರುವ ವಾರ್ಡ್‌ಗಳಲ್ಲಿ ಈಗ ಸಾಮಾನ್ಯ ದಿನಗಳಲ್ಲಿ ಸಿಗುತ್ತಿದ್ದಷ್ಟು ನೀರು ಸಿಗುತ್ತಿಲ್ಲ. ಕೆಲವೆಡೆ ನೀರಿನ ಪ್ರಶರ್‌ ಈ ವರ್ಷವೂ ಇದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಬಜೆ ಡ್ಯಾಂನಲ್ಲಿ ನೀರಿನ ಮಟ್ಟ ಹೆಚ್ಚಿದೆ. ಹಾಗೆಂದು ಈ ವಿಚಾರದಲ್ಲಿ ಭರವಸೆ ಉಳಿದಿಲ್ಲ.

Advertisement

15 ದಿನ ಬಳಿಕ ರೇಷನಿಂಗ್‌
35 ವಾರ್ಡ್‌ ಹೊಂದಿರುವ ನಗರಸಭೆ ವ್ಯಾಪ್ತಿಯಲ್ಲಿ ಸಾಮಾನ್ಯ ದಿನಗಳಲ್ಲಿ 24 ಎಂಎಲ್‌ಡಿ ನೀರು ಸರಬರಾಜಾಗುತ್ತದೆ. ಅಧಿಕಾರಿಗಳ ಪ್ರಕಾರ ಇಷ್ಟೇ ನೀರು ಈಗಲೂ ಪೂರೈಕೆಯಾಗುತ್ತಿದೆ. ಆದರೆ ವಾಸ್ತವವಾಗಿ ನೀರಿನ ಪೂರೈಕೆ ಕಡಿಮೆಯಾಗುತ್ತಾ ಬರುತ್ತಿದೆ. ಹೆಚ್ಚಿನ ಕಡೆಗಳಲ್ಲಿ 3-4 ತಾಸು ನೀರು ಪೂರೈಕೆ ಮಾಡಲಾಗುತ್ತಿದೆ. ಒತ್ತಡ ಕಡಿಮೆ ಇರುವಲ್ಲಿ ಸಮಸ್ಯೆಯಾಗಿದೆ. ‘ಸದ್ಯ ರೇಷನಿಂಗ್‌ ಆರಂಭಿಸಿಲ್ಲ. ಇನ್ನೂ 15 ದಿನ ಈಗಿನಂತೆಯೇ ನಿರಂತರ ನೀರು ಪೂರೈಸಿ, ಅನಂತರ ರೇಷನಿಂಗ್‌ ವ್ಯವಸ್ಥೆ ಜಾರಿಯ ಬಗ್ಗೆ ಯೋಚಿಸುತ್ತೇವೆ. ವಾರಾಹಿಯಿಂದ ನೀರು ತರುವ ಯೋಜನೆಯ 2ನೇ ಹಂತದ ಕಾಮಗಾರಿಗೂ ಟೆಂಡರ್‌ ಪ್ರಕ್ರಿಯೆ ನಡೆದಿದೆ’ ಎನ್ನುತ್ತಾರೆ ಪೌರಾಯುಕ್ತರು.

ಕರಂಬಳ್ಳಿ: ದೇಗುಲ ಬಾವಿಯೇ ಆಸರೆ  
ಕರಂಬಳ್ಳಿ 5 ಸೆಂಟ್ಸ್‌ ಪ್ರದೇಶದಲ್ಲಿ ನಗರಸಭೆ ನೀರು ಸಮರ್ಪಕವಾಗಿ ಬರುತ್ತಿಲ್ಲ ಎಂಬ ದೂರು ಸ್ಥಳೀಯರದ್ದು. ಇವರು ಕರಂಬಳ್ಳಿ ದೇವಸ್ಥಾನದ ಪಕ್ಕದಲ್ಲಿರುವ ಬಾವಿ ನೀರನ್ನು ಬಳಸುತ್ತಾರೆ. ಸುಮಾರು ಒಂದು ಕಿ.ಮೀನಷ್ಟು ದೂರದಿಂದ ಕೊಡದಲ್ಲಿ ನೀರು ತರುತ್ತಾರೆ. ಇದೇ ರೀತಿ ಕೊಡಂಕೂರು ಮತ್ತು ನಿಟ್ಟೂರಿನ ಕೆಲವು ಪ್ರದೇಶಗಳಲ್ಲಿಯೂ ಎರಡು ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿದೆ. ಇಲ್ಲಿಯೂ ಸಮಸ್ಯೆ ಉಲ್ಬಣವಾಗುವ ಆತಂಕ ಇದೆ.

ಬೇಡಿಕೆ ಹೆಚ್ಚಳ
2011ರ ಜನಗಣತಿ ಪ್ರಕಾರ 1,25,350 ಜನಸಂಖ್ಯೆ ಇದೆ. 45,569 ಮನೆಗಳಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಸುಮಾರು 700ರಷ್ಟು ಹೊಸ ಸಂಪರ್ಕಗಳಾಗಿವೆ. ಒಟ್ಟು 16,870 ಗೃಹಬಳಕೆ ಸಂಪರ್ಕಗಳು, 1,830 ಗೃಹೇತರ ಸಂಪರ್ಕಗಳು, 28 ವಾಣಿಜ್ಯ ಸಂಪರ್ಕಗಳಿವೆ. 18 ಪಂಚಾಯತ್‌ ಸಂಪರ್ಕಗಳಿವೆ.


ದಿನಕ್ಕೆ 6 ಸೆಂ.ಮೀ. ಇಳಿಕೆ

ಬಜೆ ಅಣೆಕಟ್ಟಿನಲ್ಲಿ ಕಳೆದ ವರ್ಷ ಇದೇ ಅವಧಿಗೆ 3.4 ಮೀ.ನಷ್ಟು ನೀರಿತ್ತು. ಈ ಬಾರಿ 5.16 ಮೀ. ನೀರಿದೆ. ಆದರೆ ದಿನಕ್ಕೆ 5-6 ಸೆಂ.ಮೀ.ನಷ್ಟು ನೀರು ಇಳಿಕೆಯಾಗುತ್ತಿದೆ. ಇಂದಿಗೂ 24 ಎಂಎಲ್‌ಡಿ ನೀರನ್ನು ಪೂರೈಸುತ್ತಿದ್ದೇವೆ. ರೇಷನಿಂಗ್‌ ಮಾಡಿದರೆ ಮಳೆಗಾಲದವರೆಗೂ ನೀರು ಲಭ್ಯ. ತಗ್ಗು ಪ್ರದೇಶದ ಜನ ತಮ್ಮ ಟ್ಯಾಂಕ್‌ ತುಂಬಿದ ಕೂಡಲೇ ನಲ್ಲಿ  ಬಂದ್‌ ಮಾಡಿದರೆ ಎತ್ತರದ ಪ್ರದೇಶಗಳಿಗೂ ನೀರಿನ ಪ್ರಶರ್‌ ಕಾಯ್ದುಕೊಳ್ಳಲು ಅನುಕೂಲಕರ ಎನ್ನುತ್ತಾರೆ ಅಧಿಕಾರಿಗಳು.   

Advertisement

ಮುಂಚಿತವಾಗಿ ಟೆಂಡರ್‌
ನಗರದಲ್ಲಿ ಈಗ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಬಜೆ ಅಣೆಕಟ್ಟಿನಲ್ಲೂ ನೀರಿನ ಮಟ್ಟ ಹೆಚ್ಚಿದೆ. ಕಳೆದ ಬಾರಿ ಬೇಸಗೆ ಕೊನೆಯಲ್ಲಿ ಟ್ಯಾಂಕರ್‌ ನೀರು ಪೂರೈಸಲಾಗಿತ್ತು. ಈ ಬಾರಿ ಟ್ಯಾಂಕರ್‌ ನೀರು ಸರಬರಾಜಿನ ಅವಶ್ಯ ಉಂಟಾಗಿಲ್ಲ. ಆದರೂ ಟ್ಯಾಂಕರ್‌ ನೀರು ಪೂರೈಕೆಗೆ ಎಲ್ಲ 35 ವಾರ್ಡ್‌ಗಳಿಗೂ ಪ್ರತ್ಯೇಕ ಟೆಂಡರ್‌ ಕರೆದಿದ್ದೇವೆ. ಚುನಾವಣಾ ನೀತಿ ಸಂಹಿತೆ ಜಾರಿಯಾಗಿರುವುದರಿಂದ ಮೊದಲೇ ಟೆಂಡರ್‌ ಪ್ರಕ್ರಿಯೆ ನಡೆಸಿ ಎಚ್ಚರಿಕೆ ವಹಿಸಿದ್ದೇವೆ.  – ಮಂಜುನಾಥಯ್ಯ, ಆಯುಕ್ತರು, ನಗರಸಭೆ

ಟ್ಯಾಂಕರ್‌ ನೀರಿಗೆ ಪೈಪೋಟಿ
ಕಳೆದ 5 ವರ್ಷಗಳಿಂದ ನಾವು ನಾಗರಿಕ ಸಮಿತಿ ವತಿಯಿಂದ ಟ್ಯಾಂಕರ್‌ ನೀರು ಪೂರೈಸಿದ್ದೇವೆ. ಈ ಬಾರಿಯೂ ನಾವು  ಟ್ಯಾಂಕರ್‌ ನೀರು ನೀಡಲು ಸಿದ್ಧ. ಚುನಾವಣೆ ಇರುವುದರಿಂದ ರಾಜಕೀಯ ಪಕ್ಷಗಳು ಟ್ಯಾಂಕರ್‌ ನೀರಿಗೆ ಗಮನಕೊಡಬಹುದು. ಈಗ ಎತ್ತರದ ಕೆಲವು ಪ್ರದೇಶಗಳಲ್ಲಿ ಮಾತ್ರ ಈಗ ನೀರು ಪೂರೈಕೆ ಸಮರ್ಪಕವಾಗಿಲ್ಲ ಎಂಬ ದೂರುಗಳಿವೆ. ನಗರಸಭಾ ವ್ಯಾಪ್ತಿಯಲ್ಲಿ ಪಾಳುಬಿದ್ದಿರುವ 29 ಹಾಗೂ ನೀರಿರುವ 19 ಬಾವಿಗಳಿವೆ. ಅವುಗಳನ್ನು ಯೋಗ್ಯವನ್ನಾಗಿಸಿದರೆ ಶಾಶ್ವರ ಪರಿಹಾರ ಸಿಗುತ್ತದೆ.    
– ನಿತ್ಯಾನಂದ ವಳಕಾಡು, ಪ್ರಧಾನ ಕಾರ್ಯದರ್ಶಿ, ನಾಗರಿಕ ಸಮಿತಿ ಉಡುಪಿ

ಮುಂಚಿತವಾಗಿ ಟೆಂಡರ್‌
ನಮಗೆ ಈಗ ನೀರು ಬರುತ್ತಿದೆ. ಆದರೆ ಪ್ರಶರ್‌ ಇಲ್ಲ. ಪ್ರಶರ್‌ನಲ್ಲಿ ಎರಡು ಗಂಟೆ ನೀರು ಕೊಟ್ಟರೂ ಸಾಕು. ಕಳೆದ ವರ್ಷ ನೀರಿನ ಸಮಸ್ಯೆ ಹೆಚ್ಚಾಗಿತ್ತು. ನಗರಸಭೆಯವರು, ಇತರ ಕೆಲವು ಸಂಘ ಸಂಸ್ಥೆಯವರು ಟ್ಯಾಂಕರ್‌ ನೀರು ಕೊಟ್ಟಿದ್ದರು.
– ಸುಲೋಚನಾ ಕೋಟ್ಯಾನ್‌, ಕೊಡಂಕೂರು ನಿವಾಸಿ

— ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next