Advertisement

ಬೆಳೆ ವಿಮೆ ರೈತರ ಖಾತೆಗೆ ಜಮೆ ಮಾಡಲು ಆಗ್ರಹ

03:35 PM Apr 26, 2017 | Team Udayavani |

ಕಲಬುರಗಿ: ಜೇವರ್ಗಿ ತಾಲೂಕಿನ ಬೆಳೆ ವಿಮೆ ಕಟ್ಟಿರುವ ರೈತರ ಖಾತೆಗಳಿಗೆ ಕೂಡಲೇ ವಿಮಾ ಪರಿಹಾರ ಹಣ ಹಾಕಬೇಕು ಎಂದು ಆಗ್ರಹಿಸಿ ಮಂಗಳವಾರ ಅಶೋಕ ಸಾಹು ಗೋಗಿ ಅಭಿಮಾನಿಗಳ ಸಂಘದ ನೇತೃತ್ವದಲ್ಲಿ ರೈತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಿದರು.

Advertisement

ತಾಲೂಕಿನಲ್ಲಿ ಕಳೆದ ವರ್ಷ ಮಳೆ ಬರದೆ ಮುಂಗಾರು ಬೆಳೆ ಸಂಪೂರ್ಣ ಹಾಳಾಗಿತ್ತು. ಈ ಹಂತದಲ್ಲಿ ಬೆಳೆ ವಿಮೆ ಕಟ್ಟಿರುವ ರೈತರಿಗೆ ಪರಿಹಾರ ಹಣ ಮಂಜೂರಾಗಿ ಜಿಲ್ಲಾಧಿಕಾರಿ ಖಾತೆಗೆ ಜಮೆ ಆಗಿದೆ. ಆದರೆ, ಶೇ. 25ರಷ್ಟು ರೈತರಿಗೆ ಮಾತ್ರವೇ ವಿಮೆ ಹಣ ಸಿಕ್ಕಿದೆ.  

ಉಳಿದ ಶೇ. 75 ರಷ್ಟು ವಿಮೆ ಕಂತು ಕಟ್ಟಿರುವ ರೈತರಿಗೆ ಹಣ ಪಾವತಿ ಮಾಡಲಾಗಿಲ್ಲ. ಇದರಿಂದ ರೈತರ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ ಎಂದು ದೂರಿದ್ದಾರೆ. ಈ ಕುರಿತು ಬ್ಯಾಂಕುಗಳಲ್ಲಿ ವಿಚಾರಿಸಿದರೆ, ಇನ್ನೂ ಬಂದಿಲ್ಲ, ಬಂದ ಬಳಿಕ ಹಣ ಖಾತೆಗೆ ಜಮೆ ಮಾಡುವುದಾಗಿ ಹೇಳುತ್ತಾರೆ.

ಇದರಿಂದ ರೈತರಿಗೆ ಏನೂ ತಿಳಿಯದಂತಾಗಿದೆ. ಆದ್ದರಿಂದ ಮೇ 5ನೇ ತಾರೀಖೀನೊಳಗೆ ಶೇ. 75ರಷ್ಟು ರೈತರ ಖಾತೆಗಳಿಗೆ ಹಣ ಪಾವತಿ ಮಾಡದೆ ಇದ್ದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರು ಮಾಡಿರುವ ಸಾಲ ಮನ್ನಾ ಮಾಡಬೇಕು. 

ಬೇಸಿಗೆಯಲ್ಲಿ ಉಂಟಾಗುವ ಕುಡಿಯುವ ನೀರಿನ ತೊಂದರೆ, ಮೇವಿನ ಕೊರತೆ ನೀಗಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸನ್ನದ್ಧವಾಗಬೇಕು. ತುರ್ತು ಪರಿಸ್ಥಿತಿ ನಿರ್ಮಾಣವಾದರೆ ಕೂಡಲೇ ತಾಲೂಕಿನಲ್ಲಿ ಗೋಶಾಲೆಗಳನ್ನು ಆರಂಭಿಸಬೇಕು ಎಂದು ಆಗ್ರಹಿಸಿದರು. 

Advertisement

ಅಶೋಕ ಸಾಹು ಗೋಗಿ, ಮಹಾಂತೇಶ ಗೌಡ ಬಿರಾದಾರ, ಶರಣಗೌಡ ಗೌನಳ್ಳಿ, ಕಲ್ಯಾಣರಾಯಗೌಡ ಪಾಟೀಲ, ಸಿದ್ದು ಪಾಟೀಲ, ಚೆನ್ನು ಮುಡಬಿ, ಗುಣವಂತರಾಯ ಗೌಡ ಪಾಟೀಲ, ಡಾ| ಮಾಂತಗೌಡ ಪಾಟೀಲ ಸೊನ್ನ, ಮಲಶೆಟ್ಟೆಪ್ಪಗೌಡ  ಹಿರೇಗೌಡ, ಮಹೇಶ ಕೋಳಕೂರ, ಮಲ್ಲಿಕಾರ್ಜುನ ನಾಟೀಕಾರ, ಮಲ್ಲು ಅವರಾದಿ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next