ತಲ್ಲೂರು: ಉಪ್ಪಿನಕುದ್ರು ಶಾಲೆ ಬಳಿಯಿಂದ ಬೇಡರಕೊಟ್ಟಿಗೆ ಬೊಬ್ಬರ್ಯ ದೈವಸ್ಥಾನದವರೆಗಿನ ಸುಮಾರು 2 ಕಿ.ಮೀ. ರಸ್ತೆ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದ್ದು, ಕೇವಲ ಜಲ್ಲಿ ಕಲ್ಲು ಮಾತ್ರ ಹಾಕಲಾಗಿದ್ದು, ಇದರಿಂದ ಈಗ ಮಳೆಗಾಲದಲ್ಲಿ ಈ ರಸ್ತೆಯಲ್ಲಿ ಸಂಚಾರ ಸಮಸ್ಯೆಯಾಗುವ ಆತಂಕ ಜನರದ್ದಾಗಿದ್ದು, ಅದಕ್ಕೂ ಮೊದಲು ಕಾಮಗಾರಿ ಪೂರ್ಣ ಗೊಳಿಸಲು ಸ್ಥಳೀಯರು ಆಗ್ರಹಿಸಿದ್ದಾರೆ.
ಇನ್ನೀಗ ಕೆಲವೇ ದಿನಗಳಲ್ಲಿ ಮಳೆಗಾಲ ಆರಂಭವಾಗಲಿದ್ದು, ಈ ರಸ್ತೆಯ ಕಾಮಗಾರಿ ಅದಕ್ಕೂ ಮೊದಲು ಪೂರ್ಣಗೊಳ್ಳುವುದು ಅನುಮಾನವೆನಿಸಿದೆ. ಸುಮಾರು 2 ಕಿ.ಮೀ. ಉದ್ದಕ್ಕೂ ರಸ್ತೆಯಲ್ಲಿ ಜಲ್ಲಿ ಕಲ್ಲು ಮಾತ್ರ ಹಾಕಲಾಗಿದ್ದು, ಕಾಂಕ್ರೀಟ್ ಕಾಮಗಾರಿ ಈ ಸಲ ಆಗುವುದು ಕೂಡ ಕಷ್ಟವೆನಿಸಿದೆ.
3 ರಸ್ತೆಗಳಿಗೆ 10 ಕೋ.ರೂ. ಅನುದಾನ
ಬೇಡರಕೊಟ್ಟಿಗೆ ಬೊಬ್ಬರ್ಯ ದೈವಸ್ಥಾನದವರೆಗಿನ ರಸ್ತೆ, ಗುಜ್ಜಾಡಿ ಗ್ರಾಮದ ಮಂಕಿ ಮಯ್ಯರ ಮನೆ ವರೆಗಿನ ರಸ್ತೆ ಹಾಗೂ ಮೋವಾಡಿ ಐತಾಳ್ರ ಮನೆಯವರೆಗಿನ ಒಟ್ಟು 3 ರಸ್ತೆಗಳ ಡಾಮರೀಕರಣಕ್ಕೆ 10 ಕೋ.ರೂ. ಅನುದಾನ ಲೋಕೋಪಯೋಗಿ ಇಲಾಖೆಯಿಂದ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆಯಡಿ ಮಂಜೂರಾಗಿದೆ. ಒಟ್ಟು 9.69 ಕಿ.ಮೀ. ದೂರದ ರಸ್ತೆ ಡಾಮರೀಕರಣ ಆಗಬೇಕಿತ್ತು. ಇದರಲ್ಲಿ ಮಂಕಿ ರಸ್ತೆ ಹಾಗೂ ಮೋವಾಡಿ ಬಳಿಯ ರಸ್ತೆ ಕಾಮಗಾರಿ ಮುಗಿದಿದೆ. ಆದರೆ ಬೇಡರಕೊಟ್ಟಿಗೆ ರಸ್ತೆ ಕಾಮಗಾರಿ ಪೂರ್ಣಗೊಂಡಿಲ್ಲ.
ವಿಳಂಬ ಯಾಕೆ?
ಈಗಾಗಲೇ ಈ ರಸ್ತೆಯ ಎರಡೂ ಬದಿಯ ತಡೆಗೋಡೆ ನಿರ್ಮಾಣ ಕಾಮಗಾರಿ ಕೊನೆಯ ಹಂತದಲ್ಲಿದೆ. ರಸ್ತೆಗೆ ಜಲ್ಲಿ ಕಲ್ಲು ಹಾಕಲಾಗಿದೆ. ಬೊಬ್ಬರ್ಯ ದೈವಸ್ಥಾನದ ಸ್ವಲ್ಪ ಹಿಂದಿರುವ ಕೊಳ್ಕೆರೆಯ ಬಳಿ ತಡೆ ಗೋಡೆ ಕುಸಿದು, ಸಮಸ್ಯೆಯಾಗಿತ್ತು. ಇದರಿಂದ ಕಾಮಗಾರಿ ಸ್ವಲ್ಪ ಮಟ್ಟಿಗೆ ವಿಳಂಬವಾಗಿದೆ ಎನ್ನುವುದು ಅಧಿಕಾರಿಗಳ ಹೇಳಿಕೆ.