Advertisement

ತಾತ್ಕಾಲಿಕ ಉಪಕೇಂದ್ರ ನಿರ್ಮಿಸಲು ಆಗ್ರಹ

01:45 PM Dec 25, 2017 | Team Udayavani |

ಕೊಣಾಜೆ: ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರಸ್ತೆ, ಇತರ ಮೂಲಸೌಕರ್ಯಗಳು ಅಭಿವೃದ್ಧಿಯ ಪಥದತ್ತ ಸಾಗುತ್ತಿದೆ. ಹಲವು ವರ್ಷಗಳ ಬೇಡಿಕೆಯಾದ ಟ್ರಾಫಿಕ್‌ ಪೊಲೀಸ್‌ ವ್ಯವಸ್ಥೆ ಪ್ರಾರಂಭಗೊಂಡಿದೆ. ಆದರೆ, ಅಗ್ನಿಶಾಮಕ ಠಾಣೆ ಸ್ಥಾಪನೆಗೆ ಜಾಗ ಮೀಸಲಿಟ್ಟು, 7 ವರ್ಷ ಕಳೆದರೂ ಸರಕಾರದ ಆದೇಶ ಇನ್ನೂ ಬಂದಿಲ್ಲ!

Advertisement

ಉಳ್ಳಾಲ, ದೇರಳಕಟ್ಟೆ, ಕೊಣಾಜೆ, ಮುಡಿಪು ಪ್ರದೇಶಗಳಲ್ಲಿ ಶೈಕ್ಷಣಿಕ, ಆರೋಗ್ಯ, ಕೈಗಾರಿಕ ಕ್ಷೇತ್ರಗಳು ಅಭಿವೃದ್ಧಿಯಾಗುತ್ತಿವೆ. ಮನೆ, ಅಂಗಡಿಗಳೂ ಹೆಚ್ಚಿದ್ದು, ಬೇಸಗೆ ಸಂದರ್ಭದಲ್ಲಿ ಬಯಲು, ಗುಡ್ಡ ಪ್ರದೇಶಗಳಲ್ಲಿ ಒಣಗಿದ ಹುಲ್ಲಿಗೆ ಬೆಂಕಿ ತಗುಲಿ ಅನಾಹುತಗಳು ಸಂಭವಿಸುತ್ತಿವೆ. ಪಾಂಡೇಶ್ವರ ಠಾಣೆಯಿಂದಲೇ ಅಗ್ನಿ ಶಾಮಕ ದಳದ ವಾಹನಗಳು ಬರಬೇಕು. ಸುಮಾರು 20ರಿಂದ 25 ಕಿ.ಮೀ. ದೂರದಲ್ಲಿರುವ ಮುಡಿಪು ಪ್ರದೇಶಕ್ಕೆ ತಲುಪುವ ಹೊತ್ತಿಗೆ ಅನಾಹುತ ಸಂಭವಿಸಿರುತ್ತದೆ. ಮೋರ್ಗನ್ಸ್‌ ಗೇಟ್‌ ಬಳಿ ರೈಲ್ವೇ ಗೇಟ್‌ನಿಂದಾಗಿ ಒಮ್ಮೊಮ್ಮೆ 15ರಿಂದ 30 ನಿಮಿಷ ವ್ಯರ್ಥವಾಗುತ್ತಿದೆ.

ಎರಡು ಎಕರೆ ಪ್ರದೇಶ ಮೀಸಲು
ಅಗ್ನಿಶಾಮಕ ಠಾಣೆ ಸ್ಥಾಪನೆಗೆ ಸಂಬಂಧಿಸಿದಂತೆ ಕೊಣಾಜೆ ಸಮೀಪದ ಕಂಬಳಪದವು ಬಳಿ ಎರಡು ಎಕರೆ ಪ್ರದೇಶವನ್ನು ಇನ್ಫೋಸಿಸ್‌ ಸಂಸ್ಥೆ ಕೆಐಡಿಬಿಯಿಂದ ಖರೀದಿಸಿ 2010ರಲ್ಲಿ ಸರಕಾರಕ್ಕೆ ಹಸ್ತಾಂತರ ಮಾಡಿದೆ. ಸ್ಥಳೀಯ ಶಾಸಕ, ಪ್ರಸ್ತುತ ಸಚಿವರೂ ಆಗಿರುವ ಯು.ಟಿ. ಖಾದರ್‌ ಅವರು ಠಾಣೆ ಸ್ಥಾಪನೆ ಕುರಿತಾಗಿ ಭರವಸೆ ನೀಡಿದ್ದರೂ, ಸರಕಾರದ ಮಟ್ಟದಲ್ಲಿ ಮಹತ್ವದ ಬದಲಾವಣೆಯಾಗಿಲ್ಲ.

ಪಾಂಡೇಶ್ವರದ ಮೇಲೆ ಅವಲಂಬನೆ
ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಉಳ್ಳಾಲ , ಕೊಣಾಜೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಅಗ್ನಿ ಆಕಸ್ಮಿಕಗಳು
ನಡೆದರೆ ಪಾಂಡೇಶ್ವರದ ಅಗ್ನಿಶಾಮಕ ದಳ ಕಾರ್ಯಪ್ರವೃತ್ತವಾಗುತ್ತದೆ. ಪಾಂಡೇಶ್ವರ ಠಾಣೆ ವ್ಯಾಪ್ತಿಯಲ್ಲಿ 2015ರಲ್ಲಿ 188, 2016ರಲ್ಲಿ 241 ಅಗ್ನಿ ಆಕಸ್ಮಿಕಗಳು ವರದಿಯಾಗಿವೆ. 2017ರ ಡಿಸೆಂಬರ್‌ ವರೆಗೆ 176 ಪ್ರಕರಣಗಳು ದಾಖಲಾಗಿದೆ. ಶೇ. 70 ಭಾಗ ಮಂಗಳೂರು ವ್ಯಾಪ್ತಿಯ ಉಳ್ಳಾಲ ಮತ್ತು ಕೊಣಾಜೆಯಲ್ಲೇ ಸಂಭವಿಸಿದವು. ಮಂಗಳೂರು ಕ್ಷೇತ್ರ ವ್ಯಾಪ್ತಿಯಲ್ಲಿ ಶಾಶ್ವತವಾಗಿ ಅಗ್ನಿಶಾಮಕ ಠಾಣೆ ಸ್ಥಾಪನೆಯಾದರೆ ಅನಾಹುತಗಳು ನಡೆದಾಗ ಶೀಘ್ರ ಸ್ಪಂದನೆ ಸಾಧ್ಯ.

ಜನರಲ್ಲಿ ಜಾಗೃತಿ ಮೂಡಲಿ
ಮಳೆಗಾಲದಲ್ಲಿ ಪ್ರಕೃತಿ ವಿಕೋಪಗಳು ಅನಿರೀಕ್ಷಿತವಾಗಿರುತ್ತದೆ. ಆದರೆ ಬೇಸಗೆಯಲ್ಲಿ ಸುಡು ಬಿಸಿಲಿಗೆ ಅಗ್ನಿ ಅನಾಹುತ ಸಂಭವಿಸಲು ಜನರ ಅಸಡ್ಡೆಯೇ ಶೇ. 80ರಷ್ಟು ಕಾರಣವಿರುತ್ತದೆ. ಸೇದಿ ಎಸೆದ ಬೀಡಿ – ಸಿಗರೇಟ್‌ಗಳಿಂದಲೂ ಬೆಂಕಿ ಹೊತ್ತಿಕೊಂಡಿದ್ದಿದೆ. ಮನೆ ಪಕ್ಕದ ಹುಲ್ಲಿಗೆ ಬೆಂಕಿ ಕೊಟ್ಟಾಗಲೂ ಅನಾಹುತಗಳಾಗಿವೆ. ಈ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಆಗಬೇಕಾಗಿದೆ.

Advertisement

ತಾತ್ಕಾಲಿಕ ಉಪಕೇಂದ್ರ ಅಗತ್ಯ 
ತಾತ್ಕಾಲಿಕವಾಗಿ ಉಪಕೇಂದ್ರ ಪ್ರಾರಂಬಿಸುವ ಅಗತ್ಯವಿದೆ. ಮುಖ್ಯವಾಗಿ ಬಂಟ್ವಾಳ ತಾಲೂಕು ವ್ಯಾಪ್ತಿಯ ಕುರ್ನಾಡು, ಪಜೀರು, ನರಿಂಗಾನ, ಇರಾ, ಕೈರಂಗಳ -ಬಾಳೆಪುಣಿ, ಪಜೀರು, ಮಂಗಳೂರು ತಾಲೂಕು ವ್ಯಾಪ್ತಿಯ ಪಾವೂರು,
ಹರೇಕಳ, ಆಂಬ್ಲಿಮೊಗರು, ಬೋಳಿಯಾರ್‌ ಪ್ರದೇಶಗಳನ್ನು ಸೇರಿಸಿ ಉಪ ಕೇಂದ್ರಗಳು ಪ್ರಾರಂಭಗೊಂಡರೆ, ತ್ವರಿತವಾಗಿ ಸ್ಥಳಕ್ಕೆ ಧಾವಿಸಿ ಅನಾಹುತ ತಡೆಗಟ್ಟಲು ಸಾಧ್ಯ.

ತಾತ್ಕಾಲಿಕ ಅಗ್ನಿಶಾಮಕ ಉತ್ತಮ
ಮುಡಿಪು ವ್ಯಾಪ್ತಿಯಲ್ಲಿ ಕೈಗಾರಿಕ ವಲಯ ಆಗುವ ನಿಟ್ಟಿನಲ್ಲಿ ಅಗ್ನಿಶಾಮಕ ಠಾಣೆ ಸ್ಥಾಪಿಸುವುದಕ್ಕಾಗಿ ಇನ್ಫೋಸಿಸ್‌ ಸಂಸ್ಥೆ ಜಾಗ ಖರೀದಿಸಿ ಸರಕಾರಕ್ಕೆ ನೀಡಿತ್ತು. ನೂತನ ಠಾಣೆ ಆರಂಭವಾದರೆ ಸಾರ್ವಜನಿಕರಿಗೆ ಸಹಕಾರಿಯಾಗಲಿದ್ದು, ಅಲ್ಲಿಯವರೆಗೆ ಈ ಪ್ರದೇಶದಲ್ಲಿ ತಾತ್ಕಾಲಿಕವಾಗಿ ಅಗ್ನಿಶಾಮಕ ವಾಹನವನ್ನು ನಿಯೋಜಿಸಿದರೆ ಉತ್ತಮ. 
ಅಬ್ದುಲ್‌ ಜಲೀಲ್‌, ಮೋಂಟುಗೋಳಿ

ಆದೇಶ ನೀಡಲಿ
ತಾಲೂಕಿಗೊಂದು ಅಗ್ನಿಶಾಮಕ ಠಾಣೆ ಸ್ಥಾಪನೆಗೆ ಸರಕಾರದ ಆದೇಶ ಇದೆ. ಹೊಸ ತಾಲೂಕಿಗಳಿಗೆ ಠಾಣೆ ಸ್ಥಾಪನೆಗೆ ಸಂಬಂಧಿಸಿದಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮಂಗಳೂರು ತಾಲೂಕಿನ ಮೂಲ್ಕಿ ಮತ್ತು ಮುಡಿಪುವಿನಲ್ಲಿ (ಕೊಣಾಜೆ ಸಮೀಪದ ಕಂಬಳಪದವು) ಅಗ್ನಿಶಾಮಕ ಠಾಣೆ ಪ್ರಾರಂಭಕ್ಕೆ ಸಂಬಂಧಿಸಿದ ಕಡತಗಳು ಸರಕಾರ ಕೈಯಲ್ಲಿದ್ದು, ಸರಕಾರ ಆದೇಶ ನೀಡಿದರೆ ಠಾಣೆ ಪ್ರಾರಂಭಿಸಲಾಗುವುದು.
–   ಪಿ.ಎನ್‌. ಶಿವಶಂಕರ
    ಮುಖ್ಯ ಅಗ್ನಿಶಾಮಕ ಅಧಿಕಾರಿ, ಮಂಗಳೂರು

ವಸಂತ ಕೊಣಾಜೆ

Advertisement

Udayavani is now on Telegram. Click here to join our channel and stay updated with the latest news.

Next