Advertisement

ಹಿಂದೂ ಪರ ಸಂಘಟನೆಗಳ ನಿಷೇಧಕ್ಕೆ ಆಗ್ರಹ

12:42 PM Jun 14, 2018 | Team Udayavani |

ಕಲಬುರಗಿ: ಚಿಂತಕರಾದ ಪತ್ರಕರ್ತೆ ಗೌರಿ ಲಂಕೇಶ, ಡಾ| ಎಂ.ಎಂ. ಕಲಬುರ್ಗಿ, ಮಹಾರಾಷ್ಟ್ರದ ಡಾ| ಬೋಲ್ಕರ್‌, ಗೋವಿಂದ ಪನ್ಸಾರೆ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮಸೇನೆ ಹಾಗೂ ಸನಾತನ ಸಂಸ್ಥೆ ಮತ್ತಿತರ ಹಿಂದೂ ಪರ ಸಂಘಟನೆಗಳನ್ನು ನಿಷೇಧಿಸಬೇಕೆಂದು ಆಗ್ರಹಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಜಗತ್‌ ವೃತ್ತದಲ್ಲಿ ಡಾ| ಅಂಬೇಡ್ಕರ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು.

Advertisement

ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿ, ಗೌರಿ ಲಂಕೇಶರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳನ್ನು ಬಂಧಿಸಿದ ಕರ್ನಾಟಕ ಪೊಲೀಸ್‌ ಇಲಾಖೆ ನಿಷ್ಪಕ್ಷಪಾತವಾಗಿ ಮುಂದಿನ ಕ್ರಮ ಕೈಗೊಳ್ಳಲು ಸಮಗ್ರ ತನಿಖೆ ನಡೆಸಲು ಸ್ವಾತಂತ್ರ್ಯ ಹಾಗೂ ನೈತಿಕ ಧೈರ್ಯ ನೀಡಬೇಕು. ಯಾವ ಕಾರಣಕ್ಕೂ ತನಿಖೆ ದುರ್ಬಲಗೊಳಿಸುವ ವಿದ್ಯಮಾನಗಳು ನಡೆಯಬಾರದೆಂದು ಆಗ್ರಹಿಸಿದರು.

ಹಂತಕರು ಶ್ರೀರಾಮಸೇನೆ ಹಾಗೂ ಸನಾತನ ಸಂಸ್ಥೆಯಂತಹ ಬಲಪಂಥಿಯ ಸಂಘಟನೆಗಳ ನಂಟು ಹೊಂದಿರುವುದು ಬೆಳಕಿಗೆ ಬಂದಿದೆ. ಆದ್ದರಿಂದ ಇಂತಹ ಸಂಘಟನೆಗಳನ್ನು ನಿಷೇಧಿಸಬೇಕೆಂದು ಒತ್ತಾಯಿಸಿದರು. ಡಾ| ಎಂ.ಎಂ. ಕಲಬುರ್ಗಿ, ಡಾ| ದಾಬೋಲ್ಕರ್‌ ಹಾಗೂ ಗೋವಿಂದ ಪನ್ಸಾರೆ ಹಂತಕರನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ನೀಲಾ ಕೆ., ಡಾ| ಪ್ರಭು ಖಾನಾಪುರೆ, ಆರ್‌.ಕೆ. ಹುಡಗಿ, ಡಾ| ಕಾಶೀನಾಥ ಅಂಬಲಗೆ, ಅರ್ಜುನ ಭದ್ರೆ, ಡಾ| ಮಲ್ಲೇಶಿ ಸಜ್ಜನ್‌, ಚಂದಮ್ಮಾ ಗೋಳಾ, ಅಶ್ವಿ‌ನಿ ಮದನಕರ, ಪ್ರಿಯಾಂಕಾ ಮಾವಿನಕರ, ಶಾಂತೇಶ ಕೋಡ್ಲೆ, ಮಸ್ತಾನ ಬಿರಾದಾರ ಹಾಗೂ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next