Advertisement

ಹಳ್ಳಿಗಳಲ್ಲಿ ಗುಂಡಿತೋಡಿ ಮುಚ್ಚದೆ ಬಿಡುವವರ ವಿರುದ್ಧ ಕ್ರಮಕ್ಕೆ ಆಗ್ರಹ

07:23 AM Jan 31, 2019 | Team Udayavani |

ಹೊನ್ನಾಳಿ: ಲೋಕೋಪಯೋಗಿ ಇಲಾಖೆಗೆ ಸಂಬಂಧಪಟ್ಟ ಗ್ರಾಮಾಂತರ ಪ್ರದೇಶದಲ್ಲಿ ರಸ್ತೆಗಳನ್ನು ಅಗೆದು ಗುಂಡಿ ತೋಡಿ ಮುಚ್ಚದೆ ಹಾಗೆ ಬಿಡುತ್ತಿದ್ದಾರೆ. ಇದರಿಂದ ಅನೇಕ ಅಪಘಾತಗಳು ಜರುಗುತ್ತಿದ್ದು, ಇಲಾಖೆ ಇಂಜಿನಿಯರ್‌ಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಾಪಂ ಉಪಾಧ್ಯಕ್ಷ ಎಸ್‌.ಪಿ. ರವಿಕುಮಾರ್‌ ಹೇಳಿದರು.

Advertisement

ತಾಪಂ ಸಾಮರ್ಥ್ಯಸೌಧದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ಹಳ್ಳಿಗಳ ಲೋಕೋಪಯೋಗಿ ರಸ್ತೆಗಳಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಕೆಲ ರೈತರು ಪೈಪ್‌ಲೈನ್‌ ಹಾಕಿಕೊಳ್ಳಲು ಗುಂಡಿ ತೋಡಿ ಗುಂಡಿ ಮುಚ್ಚದೆ ಹಾಗೇ ಬಿಟ್ಟಿದ್ದಾರೆ. ಇದರಿಂದ ಈಚೆಗೆ ಹನುಮನಹಳ್ಳಿ ಬಳಿ ಬೈಕ ಸವಾರನೊಬ್ಬ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ. ಗುಂಡಿ ತೋಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಲೋಕೋಪಯೋಗಿ ಎಇಇ ಭೀಮಾನಾಯ್ಕ, ರಸ್ತೆಗೆ ಅಡ್ಡವಾಗಿ ಗುಂಡಿ ತೆಗೆಯುವವರಿಗೆ ನೋಟಿಸ್‌ ನೀಡಿದ್ದೇವೆ. ಮುಂದಿನ ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದರು.

ಪಂಚಾಯತ್‌ ರಾಜ್ಯ ಇಂಜಿನಿಯರ್‌ ಮಂಜುನಾಥ ಕಪಾಲಿ ಮಾತನಾಡಿ, ನಬಾರ್ಡ್‌ ವತಿಯಿಂದ ಹಮ್ಮಿಕೊಂಡಿದ್ದ ಹಳೆ ಕಾಮಗಾರಿಗಳನ್ನು ಫೂರ್ಣಗೊಳಿಸಲಾಗಿದೆ. 1.5 ಕೋಟಿ ರೂ. ವೆಚ್ಚದ ಅರಕೆರೆ ಗ್ರಾಮದ ರಸ್ತೆ ಮತ್ತು ಬೆಳಗುತ್ತಿ ಗ್ರಾಮದ ರಸ್ತೆ ಹೊಸ ಕಾಮಗಾರಿಗಳು ಪ್ರಾರಂಭಗೊಂಡಿವೆ ಎಂದು ಹೇಳಿದರು.

ಈ ವೇಳೆ ಮಾತನಾಡಿದ ಇಒ ಕೆ.ಸಿ. ಮಲ್ಲಿಕಾರ್ಜುನ, ಪಂಚಾಯತ್‌ ರಾಜ್‌ ಇಲಾಖೆಯಿಂದ 8 ರಿಂದ 9 ಕಾಮಗಾರಿಗಳ ಟೆಂಡರ್‌ ಪ್ರಕ್ರಿಯೆ ನಡೆಯಬೇಕಿದೆ. ಈಗಾಗಲೆ ಜನವರಿ ತಿಂಗಳು ಮುಗಿದು ಫೆಬ್ರವರಿ ತಿಂಗಳು ಬರುತ್ತಿದೆ. ಕಾಮಗಾರಿಗಳಿಗೆ ವೇಗವಾದ ಚಾಲನೆ ಕೊಡಿ ಎಂದು ಹೇಳಿದರು.

Advertisement

ಕೃಷಿ ಅಧಿಕಾರಿ ಬಸಪ್ಪ ಮಾತನಾಡಿ, ತಾಲೂಕಿನಲ್ಲಿ 680 ಕೃಷಿ ಹೊಂಡಗಳ ನಿರ್ಮಾಣದ ಗುರಿಯಿದ್ದು, ಈಗಾಗಲೇ 178 ಕೃಷಿ ಹೊಂಡಗಳ ನಿರ್ಮಾಣವಾಗಿದೆ. ಇದಕ್ಕಾಗಿ 1.75 ಕೋಟಿ ರೂ.ವೆಚ್ಚವಾಗುತ್ತದೆ ಎಂದರು.

ತಾಪಂ ಇಒ ಕೆ.ಸಿ. ಮಲ್ಲಿಕಾರ್ಜುನ ಮಾತನಾಡಿ, ಕೃಷಿ ಇಲಾಖೆಯಿಂದ ರೈತರಿಗೆ ಉಪಯೋಗವಾಗುವ ರಚನಾತ್ಮಕ ಕಾರ್ಯಕ್ರಮಗಳನ್ನು ಕೃಷಿ ಅಧಿಕಾರಿಗಳು ಹಮ್ಮಿಕೊಳ್ಳಬೇಕು ಎಂದು ಸೂಚಿಸಿದರು.

ಈಚೆಗೆ ನ್ಯಾಮತಿ ತಾಲೂಕು ಕೇಂದ್ರದಲ್ಲಿ ಪ್ರಥಮ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆದ ಸಂದರ್ಭದಲ್ಲಿ ಸಾರ್ವಜನಿಕರು ಹಾಗೂ ಶಾಲಾ ಮಕ್ಕಳು ಸಮ್ಮೇಳಾನಧ್ಯಕ್ಷರ ಮೆರವಣಿಗೆ ಕಾರ್ಯಕ್ರಮದಲ್ಲಿ ಸರತಿ ಸಾಲಿನಲ್ಲಿ ನಡೆದು ಹೋಗುತ್ತಿದ್ದರೆ ಶಾಲಾ ಶಿಕ್ಷಕರು ರಸ್ತೆ ಬಳಿ ನಿಂತು ನೋಡುತ್ತಿದ್ದರು. ಸಮ್ಮೇಳನದಲ್ಲಿ ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲೇ ಇಲ್ಲ. ಇದಕ್ಕೆ ಬಿಇಒ ಅವರು ಉತ್ತರ ನೀಡಬೇಕು ಎಂದು ತಾಪಂ ಉಪಾಧ್ಯಕ್ಷ ಎಸ್‌.ಪಿ. ರವಿಕುಮಾರ್‌ ಮತ್ತು ಸದಸ್ಯ ಸಿದ್ದಲಿಂಗಪ್ಪ ಒತ್ತಾಯಿಸಿದರು.

ಬಿಇಒ ರಾಜೀವ್‌ ಪ್ರತಿಕ್ರಿಯಿಸಿ, ಎಲ್ಲ ಶಿಕ್ಷಕರು ಹಾಗೂ ಮಕ್ಕಳು ತಪ್ಪದೇ ಸಮ್ಮೇಳನದಲ್ಲಿ ಭಾಗವಹಿಸಲು ಸೂಚಿಸಲಾಗಿತ್ತು ಎಂದಾಗ ಸದಸ್ಯರು ಕೇವಲ ಸೂಚನೆ ನೀಡಿದರೆ ಸಾಲದು ಗೈರಾದ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ನ್ಯಾಮತಿ ತಾಲೂಕಿನ ಬೆಸ್ಕಾಂ ಲೈನ್‌ಮ್ಯಾನ್‌ಗಳಿಗೆ ದೂರವಾಣಿ ಕರೆ ಮಾಡಿದರೆ ಕರೆ ಸ್ವೀಕರಿಸುವುದಿಲ್ಲ. ಕೆಲವರು ಸ್ವೀಕರಿಸಿ ಇಲಾಖೆ ಸ್ಥಿರ ದೂರವಾಣಿಗೆ ಕರೆ ಮಾಡಿ ಎಂದು ಅಸಡ್ಡೆ ಉತ್ತರ ನೀಡುತ್ತಾರೆ. ಇದಕ್ಕೆ ಇಲಾಖಾಧಿಕಾರಿಗಳನ್ನು ನೇರವಾಗಿ ಹೊಣೆ ಮಾಡಲಾಗುವುದು ಎಂದು ನ್ಯಾಮತಿ ತಾಲೂಕು ತಾಪಂ ಸದಸ್ಯರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಬೆಸ್ಕಾಂ ಎಇಇ ರವಿಕಿರಣ್‌ ತಕ್ಷಣ ಎಲ್ಲ ಲೈನ್‌ಮ್ಯಾನ್‌ಗಳಿಗೆ ಸೂಚನೆ ನೀಡಿ ಕರೆ ಸ್ವೀಕರಿಸಿ ಕೆಲಸ ಮಾಡುವಂತೆ ಎಚ್ಚರಿಕೆ ನೀಡುತ್ತೇನೆ ಎಂದು ಹೇಳಿದರು.

ಸಮಾಜ ಕಲ್ಯಾಣ ಇಲಾಖೆ, ಅರಣ್ಯ ಇಲಾಖೆ, ತೋಟಗಾರಿಕೆ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳ ಅಧಿಕಾರಿಗಳು ಮಾಹಿತಿ ನೀಡಿದರು.

ತಾಪಂ ಅಧ್ಯಕ್ಷೆ ಚಂದ್ರಮ್ಮ ಹಾಲೇಶಪ್ಪ ಅಧ್ಯಕ್ಷತೆ ವಹಿಸಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಲ್‌. ರಂಗಪ್ಪ, ಸದಸ್ಯರಾದ ಸಿ.ಆರ್‌. ಶಿವಾನಂದ್‌, ಅಬೀದಲಿ ಖಾನ್‌, ವಿಜಯಕುಮಾರ್‌, ತಿಪ್ಪೇಶಪ್ಪ ಮಾತನಾಡಿದರು.

ಸದಸ್ಯರಾದ ಸುಲೋಚನಮ್ಮ ಪಾಲಾಕ್ಷಪ್ಪ, ಮರಿಕನ್ನಪ್ಪ, ರೇಖಾ ಉಮೇಶ್‌ನಾಯ್ಕ, ಪುಷ್ಪಾ ದೇವೀರಪ್ಪ, ಕವಿತಾ ಪ್ರಭಗೌಡ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next