Advertisement

ಮಾಲಿನ್ಯ ಸ್ಥಿತಿ ಗಂಭೀರ: ಇನ್ನೆರಡು ದಿನ ದೆಹಲಿ, ನೋಯ್ಡಾಗಳಲ್ಲಿ ಶಾಲೆಗಳಿಗೆ ರಜೆ

11:38 AM Nov 14, 2019 | Team Udayavani |

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಅದರ ಸುತ್ತಮುತ್ತಲ ಪ್ರದೇಶಗಳಲ್ಲಿ ವಾಯು ಮಾಲಿನ್ಯ ಪ್ರಮಾಣ ಮತ್ತೆ ಗಂಭೀರ ಸ್ಥಿತಿಯನ್ನು ತಲುಪಿದೆ. ಹಾಗಾಗಿ ಈ ಭಾಗಗಳಲ್ಲಿ ನವಂಬರ್ 14 ಮತ್ತು 15ರಂದು ಶಾಲೆಗಳಿಗೆ ರಜೆ ಘೋಷಿಸಿ ರಾಜ್ಯಸರಕಾರ ಆದೇಶ ಹೊರಡಿಸಿದೆ. ಇದೇ ರೀತಿಯಲ್ಲಿ ನೋಯ್ಡಾದಲ್ಲೂ ಶಾಲೆಗಳಿಗೆ ಮುಂದಿನ ಎರಡು ದಿನಗಳ ಕಾಲ ರಜೆ ಘೋಷಿಸಲಾಗಿದೆ.

Advertisement

ರಾಷ್ಟ್ರರಾಜಧಾನಿಯಲ್ಲಿ ಬುಧವಾರದಂದು ವಾಯು ಗುಣಮಟ್ಟ ಸೂಚ್ಯಂಕ 453ಕ್ಕೆ ಕುಸಿದಿತ್ತು. ಬೆಳಿಗ್ಗೆ 10 ಗಂಟೆಯ ಸಮಯದಲ್ಲಿ ಈ ಮಟ್ಟ 416ನ್ನು ತಲುಪಿ ಗಂಭೀರ ಮುನ್ನೆಚ್ಚರಿಕೆಗೆ ಕಾರಣವಾಗಿತ್ತು. ಇನ್ನು ಗಾಝಿಯಾಬಾದ್ (445), ನೋಯ್ಡಾ ಮತ್ತು ಗ್ರೇಟರ್ ನೋಯ್ಡಾ (436) ಹಾಗೂ ಫರೀದಾಬಾದ್ (404) ಗಳಲ್ಲೂ ಸಹ ವಾಯು ಗುಣಮಟ್ಟ ಸೂಚ್ಯಂಕ ಅಪಾಯಕಾರಿ ಮಟ್ಟಕ್ಕೆ ಇಳಿದಿತ್ತು.

ದಟ್ಟ ಹೊಗೆ ದೆಹಲಿ ಸುತ್ತಮುತ್ತ ಆಕಾಶದಲ್ಲಿ ಬುಧವಾರ ಪೂರ್ತಿ ಹರಡಿಕೊಂಡಿತ್ತು. ಪಂಜಾಬ್ ಮತ್ತು ಹರ್ಯಾಣ ರಾಜ್ಯಗಳಲ್ಲಿ ರೈತರು ತಮ್ಮ ಗದ್ದೆಗಳಲ್ಲಿ ಕಳೆಗಳಿಗೆ ಭಾರೀ ಪ್ರಮಾಣದಲ್ಲಿ ಬೆಂಕಿಯಿಡುತ್ತಿರುವುದು ಈ ಸ್ಥಿತಿಗೆ ಪ್ರಮುಖ ಕಾರಣವೆನ್ನಲಾಗುತ್ತಿದೆ.

ರಾಷ್ಟ್ರ ರಾಜಧಾನಿಯಲ್ಲಿ ಶಾಲೆಗಳನ್ನು ಮುಚ್ಚುವಂತೆ ವಾತಾವರಣ ಮಾಲಿನ್ಯ ತಡೆ ಹಾಗೂ ನಿಯಂತ್ರಣ ಪ್ರಾಧಿಕಾರ ಬುಧವಾರ ಸಾಯಂಕಾಲ ಒತ್ತಾಯಿಸಿತ್ತು ಹಾಗೂ ಮುಂದಿನ ಶುಕ್ರವಾರದವರೆಗೆ ದೆಹಲಿ ಹಾಗೂ ರಾಷ್ಟ್ರ ರಾಜಧಾನಿ ವ್ಯಾಪ್ತಿ ಪ್ರದೇಶದಲ್ಲಿರುವ ಕಲ್ಲಿದ್ದಲು ಹಾಗೂ ಇಂಧನ ಆಧಾರಿತ ಎಲ್ಲಾ ಕಾರ್ಖಾನೆಗಳಲ್ಲಿ ಉತ್ಪಾದನೆಯನ್ನು ಸ್ಥಗಿತಗೊಳಿಸುವಂತೆ ಇದು ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next