ದೆಹಲಿ: ಕಾರಿನ ಬಾನೆಟ್ ಮೇಲೆ ವ್ಯಕ್ತಿಯೊಬ್ಬನನ್ನು ಎಳೆದುಕೊಂಡು ಹೋಗಿರುವ ಮತ್ತೊಂದು ವಿಡಿಯೋ ದೆಹಲಿಯಲ್ಲಿ ಭಾನುವಾರ ರಾತ್ರಿ (ಎ.30 ರಂದು) ನಡೆದಿರುವುದು ವರದಿಯಾಗಿದೆ.
ಚೇತನ್ ಎಂಬ ವ್ಯಕ್ತಿಯನ್ನು ಕಾರಿನ ಬಾನೆಟ್ ಮೇಲೆ ಎಳೆದುಕೊಂಡು ಚಾಲಕ ಹೋಗಿದ್ದಾನೆ. ನಾನೊಬ್ಬ ಕಾರು ಚಾಲಕ. ಪ್ಯಾಸೆಂಜರ್ ನ್ನು ಬಿಟ್ಟು ವಾಪಾಸ್ ಬರುತ್ತಿದ್ದ ವೇಳೆ ಕಾರಿನ ಚಾಲಕ ನನ್ನ ಕಾರಿಗೆ ಢಿಕ್ಕಿ ಹೊಡೆದಿದ್ದಾನೆ. ಯಾಕೆ ಢಿಕ್ಕಿ ಹೊಡೆದ ಎಂದು ಕೇಳಲು ಕಾರಿನಿಂದ ಇಳಿದು ನಾನು ಪ್ರಶ್ನಿಸಿದ್ದೇನೆ. ಆದರೆ ನನ್ನ ಮಾತನ್ನು ಕೇಳದೇ ಆತ ಕಾರನ್ನು ಆಶ್ರಮ್ ಚೌಕ್ ನಿಂದ ನಿಜಾಮುದ್ದೀನ್ ದರ್ಗಾದ ವರೆಗೆ (3 ಕಿ.ಮೀ) ಚಲಾಯಿಸಿದ್ದಾನೆ. ಇದರಿಂದ ನಾನು ಬಾನೆಟ್ ನಲ್ಲಿ ಸಿಲುಕಿಕೊಂಡಿದ್ದೇನೆ. ನಾನು ಎಷ್ಟು ಹೇಳಿದರೂ ಆತ ಕಾರನ್ನೇ ನಿಲ್ಲಿಸಿಲ್ಲ. ರಸ್ತೆಯಲ್ಲಿ ಪೊಲೀಸರು ನೋಡಿ ನಮ್ಮನ್ನು ಹಿಂಬಾಲಿಸಿದ್ದಾರೆ. ಆ ಬಳಿಕ ಆತ ಕಾರನ್ನು ನಿಲ್ಲಿಸಿದ್ದಾನೆ. ಕಾರಿನ ಚಾಲಕ ಮದ್ಯದ ಅಮಲಿನಲ್ಲಿದ್ದ ಎಂದು ಚೇತನ್ ಎಎನ್ ಐಗೆ ತಿಳಿಸಿದ್ದಾರೆ.
ಆದರೆ ಕಾರಿನ ಚಾಲಕ ರಾಮಚಂದ್ ಕುಮಾರ್ ಚೇತನ್ ಅವರ ಆರೋಪವನ್ನು ತಿರಸ್ಕರಿಸಿದ್ದಾರೆ. ನಾನು ಆತನ ಕಾರಿಗೇನು ಮಾಡಿಲ್ಲ. ಅವನು ಉದ್ದೇಶಪೂರ್ವಕವಾಗಿ ನನ್ನ ಕಾರಿನ ಬಾನೆಟ್ ಮೇಲೆ ಹಾರಿದ್ದಾನೆ. ನಾನು ಆತನನ್ನು ಕೆಳಗಿಳಿಯಲು ಹೇಳಿದೆ ಆದರೆ ಅವನು ಕೇಳಲಿಲ್ಲ. ನಂತರ ನಾನು ನನ್ನ ಕಾರನ್ನು ನಿಲ್ಲಿಸಿ ಏನು ಮಾಡುತ್ತಿದ್ದೀಯಾ ಎಂದು ಕೇಳಿದೆ ಎಂದು ಪೊಲೀಸರ ಬಳಿ ಹೇಳಿದ್ದಾರೆ.
ಸುಲ್ತಾನಪುರಿಯಿಂದ ಕೆಲವು ಕಿಲೋಮೀಟರ್ ದೂರದಲ್ಲಿ ಈ ಘಟನೆ ನಡೆದಿದ್ದು, ಜನವರಿ 1 ರಂದು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ 20 ವರ್ಷದ ಮಹಿಳೆಯನ್ನು ಕಾರು ಢಿಕ್ಕಿ ಹೊಡೆದು ಎಳೆದೊಯ್ದ ಘಟನೆ ಸುಲ್ತಾನಪುರಿಯಲ್ಲಿ ನಡೆದಿತ್ತು.