Advertisement

ದಿಶಾ ಸಾಲಿಯಾನ್‌ ಕೇಸಿನ ಮಾಹಿತಿಯೇ ಡಿಲೀಟ್‌!

07:52 AM Aug 03, 2020 | mahesh |

ಪಟ್ನಾ /ಮುಂಬಯಿ: ಅಚ್ಚರಿಯ ಬೆಳವಣಿಗೆಯೊಂದರಲ್ಲಿ, ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ಅವರ ಮಾಜಿ ಮ್ಯಾನೇ ಜರ್‌ ಉಡುಪಿ ಮೂಲದ ದಿಶಾ ಸಾಲಿಯಾನ್‌ ಅವರ ಆತ್ಮಹತ್ಯೆಯ ತನಿಖೆಗೆ ಸಂಬಂಧಿಸಿದ ಮಾಹಿತಿಯಿದ್ದ ಫೋಲ್ಡರ್‌ ಡಿಲೀಟ್‌ ಆಗಿದೆ!

Advertisement

ದಿಶಾ ಪ್ರಕರಣದ ತನಿಖೆ ನಡೆಸಿದ್ದ ಮುಂಬಯಿ ಪೊಲೀಸರು ಮಾಹಿತಿಯನ್ನು ಫೋಲ್ಡರ್‌ವೊಂದರಲ್ಲಿ ಸಂಗ್ರಹಿ ಸಿಟ್ಟಿದ್ದರು. ಆದರೆ ಅದು ಕಣ್ತಪ್ಪಿ ಡಿಲೀಟ್‌ ಆಗಿದೆ ಎಂದು ಈಗ ಹೇಳುತ್ತಿದ್ದಾರೆ. ಸುಶಾಂತ್‌ ಆತ್ಮಹತ್ಯೆ ಪ್ರಕರಣ ಸಂಬಂಧ ತನಿಖೆ ಆರಂಭಿಸಿರುವ ಬಿಹಾರ ಪೊಲೀಸರು, ಸುಶಾಂತ್‌ಗೂ ದಿಶಾ ಪ್ರಕರಣಕ್ಕೂ ನಂಟಿದೆಯೇ ಎಂಬುದನ್ನು ತಿಳಿದು ಕೊಳ್ಳಲು ಬಯಸಿದ್ದರು. ಈ ಹಿನ್ನೆಲೆಯಲ್ಲಿ ಮುಂಬಯಿ ಪೊಲೀಸರನ್ನು ಸಂಪರ್ಕಿಸಿ, ದಿಶಾಗೆ ಸಂಬಂಧಿಸಿದ ತನಿಖಾ ಮಾಹಿತಿ ಒದಗಿಸುವಂತೆ ಕೋರಿದ್ದರು. ಆದರೆ ಅಚ್ಚರಿಯೆಂಬಂತೆ, ಆ ಫೋಲ್ಡರ್‌ ಡಿಲೀಟ್‌ ಆಗಿದೆ ಎಂಬ ಮಾಹಿತಿಯನ್ನು ಮುಂಬಯಿ ಪೊಲೀಸರು ನೀಡಿದ್ದಾರೆ. ಈಗಾಗಲೇ ಮುಂಬಯಿ ಪೊಲೀಸರ ತನಿಖೆ ಕುರಿತು ಟೀಕೆಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಈ ವಿಚಾರ ಇನ್ನಷ್ಟು ಅನುಮಾನಗಳಿಗೆ ಕಾರಣವಾಗಿದೆ.

ಸಿದ್ಧಾರ್ಥ್ ನಾಪತ್ತೆ: ಸುಶಾಂತ್‌ ಪ್ರಕರಣ ಸಂಬಂಧ ಅವರ ಫ್ಲ್ಯಾಟ್‌ನಲ್ಲಿ ವಾಸಿಸುತ್ತಿದ್ದ ಗೆಳೆಯ ಸಿದ್ಧಾರ್ಥ್ ಪಿಥಾನಿ ಅವರ ಹೇಳಿಕೆ ಪಡೆಯಲು ಬಿಹಾರ ಪೊಲೀಸರು ಮುಂದಾಗಿದ್ದಾರೆ. ಆದರೆ ಸಿದ್ಧಾರ್ಥ್ ಅವರು ನಾಪತ್ತೆ ಯಾಗಿದ್ದು, ಪೊಲೀಸರ ಮುಂದೆ ಹಾಜರಾಗದಿದ್ದರೆ ನೋಟಿಸ್‌ ಜಾರಿ ಮಾಡಲಾಗುತ್ತದೆ ಎಂದು ಪಟ್ನಾ ವಲಯದ ಐಜಿ ಸಂಜಯ್‌ ಸಿಂಗ್‌ ಹೇಳಿದ್ದಾರೆ. 2 ದಿನಗಳ ಹಿಂದಷ್ಟೇ ಸಿದ್ಧಾರ್ಥ್ ಅವರು ಮುಂಬಯಿ ಪೊಲೀಸರಿಗೆ ಇಮೇಲ್‌ ಮೂಲಕ ಸಂದೇಶ ಕಳಿಸಿ, ರಿಯಾ ವಿರುದ್ಧ ಹೇಳಿಕೆ ನೀಡುವಂತೆ ನನ್ನ ಮೇಲೆ ಸುಶಾಂತ್‌ ಕುಟುಂಬಸ್ಥರು ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿದ್ದರು.

ಸುಶಾಂತ್‌ ಮನೆಯಲ್ಲಿ ರಿಯಾಳದ್ದೇ ನಿಯಂತ್ರಣ
ಸುಶಾಂತ್‌ ಅವರ ಮನೆಯಲ್ಲಿ ಎಲ್ಲವನ್ನೂ ಗರ್ಲ್ಫ್ರೆಂಡ್‌ ರಿಯಾ ಚಕ್ರವರ್ತಿಯೇ ನಿಯಂತ್ರಿಸುತ್ತಿದ್ದಳು. ಅವರ ಅನುಮತಿಯಿಲ್ಲದೆ ಯಾರನ್ನೂ ಸುಶಾಂತ್‌ ಕೊಠಡಿಗೆ ಪ್ರವೇಶಿಸಲು ಬಿಡುತ್ತಿಲ್ಲ. ಕೊಠಡಿಯನ್ನು ಸ್ವಚ್ಛಗೊಳಿಸಬೇಕೇ ಬೇಡವೇ ಎಂಬುದನ್ನು ಕೂಡ ಆಕೆಯೇ ನಿರ್ಧರಿಸುತ್ತಿದ್ದಳು. ಹೀಗೆಂದು ಹೇಳಿರುವುದು ಸುಶಾಂತ್‌ ಮನೆಯಲ್ಲಿ ಕಸಗುಡಿಸುತ್ತಿದ್ದ ಸಿಬಂದಿ. ಸುಶಾಂತ್‌ ಆತ್ಮಹತ್ಯೆಗೆ ಶರಣಾದ ಕೊಠಡಿಯನ್ನು ಬಿಹಾರ ಪೊಲೀಸರು ಪರಿಶೀಲಿಸಿದ್ದು, ಅವರ ಮನೆಯಲ್ಲಿದ್ದ ಸಿಬಂದಿಯನ್ನು ತನಿಖೆಗೆ ಒಳಪಡಿಸಿದಾಗ ಈ ವಿಚಾರ ಹೊರಬಿದ್ದಿದೆ.

ರಾತೋರಾತ್ರಿ ಮನೆ ಖಾಲಿ ಮಾಡಿದ ರಿಯಾ
ಬಿಹಾರ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ ಬೆನ್ನಲ್ಲೇ ರಿಯಾ ಚಕ್ರವರ್ತಿ ನಾಪತ್ತೆಯಾಗಿದ್ದಾರೆ. 3 ದಿನಗಳ ಹಿಂದೆಯೇ ಆಕೆ ತನ್ನ ಹೆತ್ತವರು ಮತ್ತು ಸೋದರನ ಜತೆಗೆ ರಾತೋರಾತ್ರಿ ಮನೆ ಖಾಲಿ ಮಾಡಿ ತೆರಳಿದ್ದಾರೆ ಎಂದು ಅವರು ವಾಸವಿದ್ದ ಕಟ್ಟಡದ ಮೇಲ್ವಿಚಾರಕರು ಹೇಳಿದ್ದಾರೆ. ದೊಡ್ಡ ಸೂಟ್‌ಕೇಸ್‌ನೊಂದಿಗೆ ನೀಲಿ ಬಣ್ಣದ ಕಾರಿನಲ್ಲಿ ಅವರು ಹೋಗಿದ್ದಾರೆ ಎಂದು ಮೇಲ್ವಿಚಾರಕರ ಹೇಳಿಕೆ ಉಲ್ಲೇಖೀಸಿ ರಿಪಬ್ಲಿಕ್‌ ಟಿವಿ ವರದಿ ಮಾಡಿದೆ. ರಿಯಾ ವಿರುದ್ಧ ಸುಶಾಂತ್‌ ತಂದೆ ದೂರು ದಾಖಲಿಸಿದ ಬಳಿಕ ವೀಡಿಯೋವೊಂದನ್ನು ಬಿಡುಗಡೆ ಮಾಡಿದ್ದ ರಿಯಾ, ಸತ್ಯಕ್ಕೆ ಜಯ ಸಿಕ್ಕೇ ಸಿಗುತ್ತದೆ. ನನಗೆ ನ್ಯಾಯಾಂಗದ ಮೇಲೆ ನಂಬಿಕೆಯಿದೆ ಎಂದು ಹೇಳಿದ್ದರು.

Advertisement

ಮಹಾರಾಷ್ಟ್ರ ಸಿಎಂ ಉದ್ಧವ್‌ ಠಾಕ್ರೆ ಅವರು ಬಾಲಿವುಡ್‌ ಮಾಫಿಯಾದ ಒತ್ತಡಕ್ಕೆ ಒಳಗಾಗಿದ್ದಾರೆ. ಸುಶಾಂತ್‌ ಸಾವಿನ ಹಿಂದಿರುವವರನ್ನು ರಕ್ಷಿಸಲು ಯತ್ನಿಸುತ್ತಿದ್ದಾರೆ. ಬಾಲಿವುಡ್‌ ಮಾಫಿಯಾಗೆ ಕಾಂಗ್ರೆಸ್‌ನ ಕೃಪಾಕಟಾಕ್ಷವಿದೆ.
ಸುಶೀಲ್‌ ಮೋದಿ, ಬಿಹಾರ ಡಿಸಿಎಂ

Advertisement

Udayavani is now on Telegram. Click here to join our channel and stay updated with the latest news.

Next