Advertisement

ನಿದ್ದೆಗೆಡಿಸಿದ ಯುಜಿಡಿ ಕಾಮಗಾರಿ ವಿಳಂಬ

01:33 PM Jun 01, 2019 | Team Udayavani |

ಬ್ಯಾಡಗಿ: ಯುಜಿಡಿ (ಒಳಚರಂಡಿ) ಕಾಮಗಾರಿ ಮಂದಗತಿಯಿಂದ ಸಾಗಿದ್ದು ಪಟ್ಟಣದ ರಸ್ತೆಗಳಲ್ಲಿ ತಗ್ಗು ಗುಂಡಿಗಳು ಜೀವಂತವಾಗಿವೆ. ಕಳೆದ ವರ್ಷ ಮಳೆಗಾಲದಲ್ಲಿ ಇಂಥ ತಗ್ಗುಗುಂಡಿಗಳಲ್ಲಿ ಬಿದ್ದು ಗಾಯಗೊಂಡು ನೋವು ಅನುಭವಿಸಿದವರಿಗೇನೂ ಕೊರತೆಯಿಲ್ಲ. ಅಗಲೀಕರಣವಾಗದ ಮುಖ್ಯರಸ್ತೆಯಲ್ಲಿ ಇದ್ದ ಚರಂಡಿಗಳು ಮುಚ್ಚಿ ಹೋಗಿದ್ದು ಮಳೆಗಾಲದಲ್ಲಿ ಜಲಾವೃತಗೊಂಡು ನಡುಗಡ್ಡೆಯಂತಾಗಲಿದೆ. ಪ್ಲಾಷ್ಟಿಕ್‌ ಮಾರಾಟ ನಿಷೇಧ ಪರಿಣಾಮಕಾರಿಯಾಗಿ ಸ್ಥಗಿತಗೊಳ್ಳದ ಕಾರಣ ಬೇಸಿಗೆಯಲ್ಲಿ ಕಟ್ಟಿಕೊಂಡ ಚರಂಡಿಗಳು ಮಳೆಗಾಲದಲ್ಲಿ ರಸ್ತೆ ಮೇಲೆ ನೀರು ಹರಿಯುವಂತೆ ಮಾಡುತ್ತಿದೆ. ಪ್ರಸಕ್ತ ವರ್ಷದ ಮಳೆಗಾಲ ಆರಂಭವಾಗುತ್ತಿದೆ ಸ್ಥಳೀಯ ಪುರಸಭೆ ಮಾತ್ರ ಯಾವುದೇ ಮುಂಜಾಗ್ರತಾ ಕ್ರಮ ತಗೆದುಕೊಂಡಿಲ್ಲ ಜನರನ್ನು ಇಂಥ ಅನಿವಾರ್ಯ ಸ್ಥಿತಿಗೆ ತಳ್ಳಿರುವ ಪುರಸಭೆಗೆ ನಿತ್ಯವೂ ಹಿಡಿಶಾಪ ಹಾಕುತ್ತಿದ್ದಾರೆ.

Advertisement

ಅಂತಾರಾಷ್ಟ್ರೀಯ ಖ್ಯಾತಿ ಮೆಣಸಿನಕಾಯಿ ಮಾರುಕಟ್ಟೆ ಹೊಂದಿರುವ ಬ್ಯಾಡಗಿ ಪಟ್ಟಣವನ್ನು ನೈರ್ಮಲ್ಯ ಮುಕ್ತನ್ನಾಗಿಸಬೇಕೆಂಬ ಉದ್ದೇಶದಿಂದ 2016ರಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಯೋಜನೆಯಡಿ ರೂ.64.49 ಕೋಟಿ ವೆಚ್ಚದಲ್ಲಿ ಯುಜಿಡಿ ಕಾಮಗಾರಿ ಅನುಷ್ಠಾನಗೊಳ್ಳುತ್ತಿದೆ, ಆದರೆ ಸದರಿ ಯೋಜನೆಯೊಂದು ಸಾರ್ವಜನಿಕರು ನಿದ್ದೆಗೆಡಿಸಿರುವುದು ವಿಪರ್ಯಾಸ ಸಂಗತಿ.

ಗೋಳಿಗೆ ತಳ್ಳುವುದು ಎಷ್ಟರಮಟ್ಟಿಗೆ ಸರಿ?: ಅಭಿವೃದ್ಧಿ ಕಾಮಗಾರಿಗಳು ನಗರ ಪ್ರದೇಶಗಳಿಗೆ ಅವಶ್ಯಕವೂ ಹೌದು ಎಂಬುದನ್ನು ಅಲ್ಲಗಳೆಯುವಂತಿಲ್ಲ. ಆದರೆ ಕಳೆದ 3 ವರ್ಷಗಳಿಂದ ನಡೆಯುತ್ತಿರುವ ಯುಜಿಡಿ ಕಾಮಗಾರಿ ಪಟ್ಟಣದ ಬಹುತೇಕ ಎಲ್ಲ ಪ್ರದೇಶದಲ್ಲಿಯೂ ನಡೆಸಲಾಗುತ್ತಿದೆ, ಕೆಲ ವಾರ್ಡ್‌ಗಳಲ್ಲಿ ಮೊದಲ ಹಂತದ ಕಾಮಗಾರಿ ಮುಗಿದಿದೆ. ಆದರೆ ಪ್ರಗತಿಯಲ್ಲಿರುವ ಬಹಳಷ್ಟು ರಸ್ತೆಗಳು ಪ್ರಸಕ್ತ ಮಳೆಗಾಲದಲ್ಲಿ ಹೊಸದೊಂದು ಸಮಸ್ಯೆಯನ್ನು ಸೃಷ್ಟಿ ಮಾಡುತ್ತಿರುವುದರಲ್ಲಿ ಸಂಶಯವಿಲ್ಲ. ಹೀಗಾಗಿ ಸಾರ್ವಜನಿಕರನ್ನು ಗೋಳಿಗೆ ತಳ್ಳುತ್ತಿರುವುದಂತೂ ಸತ್ಯ.

ಯುಜಿಡಿಯವರ ಕೈಯಲ್ಲಿದೆ ಜನರ ಜೀವ: ಪಟ್ಟಣದಲ್ಲಿರುವ ಅತ್ಯಂತ ಚಿಕ್ಕದಾದ ರಸ್ತೆಗಳಲ್ಲಿಯೂ ಸಹ ಯುಜಿಡಿ ಕಾಮಗಾರಿ ಆರಂಭವಾಗಿದೆ, ವೇಗ ಮಿತಿಯಿಲ್ಲದೇ ಸಂಚರಿಸುವ ವಾಹನ ಸವಾರರು ಗುಂಡಿಗಳ ಬಗ್ಗೆ ಗಮನ ಕೊಡದೇ ಹೋದರೆ ಅಷ್ಟೇ ಕಥೆ ಮಗಿಯಿತು. ಮಳೆಗಾಲದಲ್ಲಂತೂ ರಸ್ತೆಯ ಮೇಲೆ ಬಿದ್ದಿರುವ ಮಣ್ಣು ಕೆಸರಾಗಿ ಪರಿವರ್ತನೆಯಾಗಲಿದೆ. ಇದರಿಂದ ದ್ವಿಚಕ್ರ ವಾಹನ ಸವಾರರಿಗೆ ಮಾತ್ರ ಅಪಾಯ ಕಟ್ಟಿಟ್ಟ ಬುತ್ತಿ, ಆದರೆ ಎಲ್ಲ ರಸ್ತೆಗಳಲ್ಲಿಯೂ ಮಣ್ಣಿನ ಗುಡ್ಡೆಗಳು ಮಾತ್ರ ಹಾಗೆಯೇ ಇವೆ ಇದರ ಬಗ್ಗೆ ಗಮನಹರಿಸಬೇಕಾದ ಪುರಸಭೆ ಮಾತ್ರ ಎಚ್ಚೆತ್ತುಕೊಂಡಿಲ್ಲ.

ಸೂಚನಾ ಫಲಕಗಳಿಲ್ಲ: ಯುಜಿಡಿ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಯಾವುದೇ ಸೂಚನಾ ಫಲಕಗಳನ್ನು ಅಳವಡಿಸುತ್ತಿಲ್ಲ, ಹೀಗಾಗಿ ಹೊಸದಾಗಿ ಪಟ್ಟಣ ಪ್ರವೇಶಿಸುವ ಜನರಿಗೆ ತಗ್ಗು ಗುಂಡಿಗಳ ಮಾಹಿತಿ ಸಿಗುವುದಿಲ್ಲ, ಇಂಥ ಅವಾಂತರಕ್ಕೆ ಅಗಸನಹಳ್ಳಿ ಪ್ರದೇಶದಲ್ಲಿ ಸೂಚನಾ ಫಲಕಗಳನ್ನು ಹಾಕದಿರುವ ಕಾರಣ ಬೈಕ್‌ ಸವಾರನೊಬ್ಬ ಗುಂಡಿಯಲ್ಲಿ ಬಿದ್ದು ಗಾಯಗೊಂಡ ಪರಿಣಾಮ ಗುತ್ತಿಗೆದಾರ ಸ್ವತಃ ಆಸ್ಪತ್ರೆ ಖರ್ಚನ್ನೂ ಸಹ ಕೊಟ್ಟಿದ್ದಾನೆ. ಶಿವಪುರ ಬಡಾವಣೆ ದರ್ಗಾ ಪಕ್ಕದಲ್ಲಿ ತೆಗೆಯಲಾಗಿದ್ದ ಗುಂಡಿಯಲ್ಲಿ ಬೈಕ್‌ ಸವಾರ ಬಿದ್ದಿದ್ದಾನೆ. ಇಂಥ ಉದಾಹರಣೆಗಳಿಗೇನೂ ಕೊರತೆಯಿಲ್ಲ. ಯುಜಿಡಿ ಕಾಮಗಾರಿ ಗುಂಡಿಗಳು ಯಾವುದೇ ಸಂದರ್ಭದಲ್ಲಿಯೂ ಸಾರ್ವಜನಿಕರ ಪಾಲಿಗೆ ಸಾವಿನ್ನು ಆಹ್ವಾನಿಸುತ್ತಿವೆ.

Advertisement

ನಡುಗಡ್ಡೆಯಾಗುತ್ತಿದೆ ಮುಖ್ಯರಸ್ತೆ: ಮುಖ್ಯರಸ್ತೆ ಅಗಲೀಕರಣ ಕಾಮಗಾರಿ ವಿಳಂಬವಾಗಿದ್ದರಿಂದ ಎರಡೂ ಕಡೆಗಳಲ್ಲಿ ಚರಂಡಿಗಳಿಲ್ಲದಂತಾಗಿದೆ. ಹೀಗಾಗಿ ಮಳೆಗಾಲ ಬಂತೆಂದರೇ ಸಾಕು, ಮುಖ್ಯರಸ್ತೆ ಸುಮಾರು 500 ಮೀ. ನಷ್ಟು ಉದ್ದದಷ್ಟು ನೀರಿನಿಂದ ಜಲಾವೃತಗೊಂಡು ನಡುಗಡ್ಡೆಯಂತಾಗಲಿದೆ. ಬೃಹತ್‌ ವಾಹನಗಳು ಸಂಚರಿಸಿದಾಗಲೊಮ್ಮೆ ನೇರವಾಗಿ ಅಂಗಡಿಯೊಳಕ್ಕೆ ನೀರು ನುಗ್ಗುತ್ತಿದೆ, ಇಷ್ಟಾದರೂ ಸಹ ಪುರಸಭೆ ತಾತ್ಕಾಲಿಕವಾಗಿಯಾದರೂ ಚರಂಡಿಗಳನ್ನು ನಿರ್ಮಿಸಲು ಮುಂದಾಗದೇ ಇರುವುದು ವಿಪರ್ಯಾಸದ ಸಂಗತಿ.

ವಿಷಯುಕ್ತ ನೀರೇ ಗತಿ: ಯುಜಿಡಿ ಕಾಮಗಾರಿಗಳಲ್ಲಿ ಜೆಸಿಬಿ ವಾಹನ ಬಳಸಲಾಗುತ್ತಿದೆ. ಚಾಲಕರ ಬೇಜವಾಬ್ದಾರಿತನಕ್ಕೆ ಪಕ್ಕದಲ್ಲಿರುವ ಕುಡಿಯುವ ನೀರು ಪೂರೈಕೆ ಪೈಪ್‌ಲೈನ್‌ಗೆ ಧಕ್ಕೆಯಾಗುತ್ತಿದೆ. ಮಳೆಗಾಲದಲ್ಲಿ ಯುಜಿಡಿ ಗುಂಡಿಗಳಲ್ಲಿ ತುಂಬಿಕೊಂಡ ನೀರು ಒಡೆದ ಪೈಪ್‌ಗ್ಳ ಮೂಲಕ ಶುದ್ಧವಾದ ನೀರಿನಲ್ಲಿ ಮಿಶ್ರಣಗೊಳ್ಳುತ್ತಿದೆ. ಇದರಿಂದ ವಿಷಯುಕ್ತ ನೀರು ಸಾರ್ವಜನಿಕರಿಗೆ ಕುಡಿಯಲು ಪೂರೈಕೆಯಾಗುತ್ತಿದೆ. ಜೆಸಿಬಿಯಿಂದ ಗುಂಡಿಗಳನ್ನು ತೆಗೆಯುವಾಗ ಪುರಸಭೆ ಸಿಬ್ಬಂದಿ ಸ್ಥಳದಲ್ಲಿದ್ದು ಪೈಪ್‌ಲೈನ್‌ ಸರಿಪಡಿಸುತ್ತಿಲ್ಲ. ಇವರ ಬೇಜವಾಬ್ದಾರಿ ವರ್ತನೆಯಿಂದ ಸಾರ್ವಜನಿಕರಿಗೆ ವಿಷಯುಕ್ತ ನೀರೇ ಗತಿ ಎನ್ನುವಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next