Advertisement

ಎಫ್ಎಸ್‌ಎಲ್‌ ವರದಿ ವಿಳಂಬದಿಂದ ತನಿಖೆಗೆ ತೊಡಕು

01:18 PM Oct 10, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ ಅಪರಾಧ ಪ್ರಕರಣಗಳ ಕುರಿತು ಸಾಕ್ಷ್ಯಾಧಾರ ಮಾಹಿತಿ ಕಲೆ ಹಾಕಲು ಮಹತ್ವದ ಪಾತ್ರ ವಹಿಸುವ ವಿಧಿ ವಿಜ್ಞಾನ ಪ್ರಯೋಗಾಲಯ ವರದಿ ವಿಳಂಬದಿಂದ ಶೇ.30 ಪ್ರಕರಣಗಳ ತನಿಖೆ ಕುಂಟುತ್ತಾ ಸಾಗುವಂತಾಗಿದೆ.

Advertisement

ಆಪರಾಧ ಪ್ರಕರಣಗಳಿಗೆ ತಕ್ಕಂತೆ ಪೊಲೀಸರು ನೀಡುವ ಸಾಕ್ಷ್ಯಾಧಾರದ ನೈಜತೆ ಪರಿಶೀಲಿಸಿ ತ್ವರಿತವಾಗಿ ವರದಿ ನೀಡಬೇಕಾಗಿರುವ ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್ಎಸ್‌ಎಲ್‌) ಸಿಬ್ಬಂದಿ ಹಾಗೂ ಆಧುನಿಕ ತಂತ್ರಜ್ಞಾನದ ಕೊರತೆಯಿಂದ ವಿಳಂಬ ಮಾಡುತ್ತಿದೆ. ಹೀಗಾಗಿ, ಕೊಲೆ, ಅತ್ಯಾಚಾರ, ಅನುಮಾನಾಸ್ಪದ ಸಾವು, ರಸ್ತೆ ಅಪಘಾತ, ಮರಣೋತ್ತರ ಪರೀಕ್ಷಾ ವರದಿಗಳು, ನಕಲಿ ದಾಖಲೆ ಸೃಷ್ಟಿ, ಡಿಎನ್‌ಎ, ಮಾದಕ ವಸ್ತು ಸೇವನೆ, ಮೊಬೈಲ್‌ ದಾಖಲೆ, ವಿಡಿಯೋ- ಆಡಿಯೋ, ಸಿಸಿ ಕ್ಯಾಮರಾದಲ್ಲಿ ಸೆರೆಯಾಗುವ ದೃಶ್ಯಗಳಿಗೆ ಸಂಬಂಧಿಸಿದ ಗಂಭೀರ ಪ್ರಕರಣಗಳ ಪೈಕಿ ರಾಜಧಾನಿಯಲ್ಲೇ 5,052 ಕೇಸ್‌ಗಳು ಎಫ್ಎಸ್‌ ಎಲ್‌ ವರದಿಗಾಗಿ ಕಾದು ಕುಳಿತಿವೆ.

ಉಳಿದಂತೆ ಜಿಲ್ಲೆಗಳಲ್ಲಿ 1,300ಕ್ಕೂ ಅಧಿಕ ಪ್ರಕರಣಗಳಲ್ಲಿ ವರದಿ ನೀಡುವುದು ಬಾಕಿ ಇವೆ. ಎಫ್ ಎಸ್‌ಎಲ್‌ ವರದಿಯೇ ಈ ಪ್ರಕರಣಗಳಿಗೆ ಬಲವಾದ ಸಾಕ್ಷ್ಯಾಧಾರಗಳಾಗಿದ್ದು, ಇವುಗಳನ್ನು ಉಲ್ಲೇಖೀಸದಿದ್ದರೆ ನ್ಯಾಯಾಲಯದಲ್ಲಿ ಪ್ರಕರಣ ಖುಲಾಸೆಗೊಳ್ಳುವ ಸಾಧ್ಯತೆ ಹೆಚ್ಚಾಗಿವೆ. ಎಫ್ಎಸ್‌ಎಲ್‌ನಿಂದ ವಿಳಂಬವಾಗಿ ವರದಿ ಬರುತ್ತಿರುವ ಪರಿಣಾಮ ರಾಜ್ಯದಲ್ಲಿ ತನಿಖಾ ಹಂತದಲ್ಲಿರುವ ಶೇ.30 ಪ್ರಕರಣಗಳು ಮುಚ್ಚಿ ಹೋಗುತ್ತಿವೆ ಎಂದು ಪೊಲೀಸ್‌ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಬೆಂಗಳೂರು, ದಾವಣಗೆರೆ, ಮಂಗಳೂರು, ಕಲುºರ್ಗಿ, ಬೆಳಗಾವಿ, ಮೈಸೂರು, ಹುಬ್ಬಳ್ಳಿ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ತಲಾ 1 ಎಫ್ಎಸ್‌ಎಲ್‌ ಕೇಂದ್ರಗಳಿವೆ. ಆದರೆ, ಇವುಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳ ಸೌಲಭ್ಯ ಒದಗಿಸಿಲ್ಲ. ಹೀಗಾಗಿ ಕೆಲ ಸೂಕ್ಷ್ಮ ಪ್ರಕರಣಗಳಲ್ಲಿ ಹೈದ್ರಾಬಾದ್‌, ಡೆಹ್ರಡೂನ್‌ ಸೇರಿ ಹೊರ ರಾಜ್ಯಗಳಿಂದ ಎಫ್ಎಸ್‌ಎಲ್‌ ವರದಿ ತರಿಸಿಕೊಳ್ಳುವುದು ಅನಿವಾರ್ಯವಾಗಿದೆ. ಜತೆಗೆ, ಎಫ್ಎಸ್‌ಎಲ್‌ಗೆ 705 ಸಿಬ್ಬಂದಿ ಮಂಜೂರಾತಿ ನೀಡಲಾಗಿದೆ. ಈ ಪೈಕಿ 162 ಹುದ್ದೆಗಳು ಇನ್ನೂ ಖಾಲಿ ಇವೆ.

ಎಫ್ಎಸ್‌ಎಲ್‌ ಕಾರ್ಯ ವಿಧಾನ ಹೇಗೆ ? : ಕರ್ನಾಟದಲ್ಲಿ ಇದುವರೆಗೆ 15 ಸಾವಿರಕ್ಕೂ ಅಧಿಕ ಪ್ರಕರಣಗಳು ತನಿಖಾ ಹಂತದಲ್ಲಿವೆ. ಕೆಲ ಸೂಕ್ಷ್ಮ ಅಪರಾಧ ಪ್ರಕರಣಗಳಲ್ಲಿ ಪತ್ತೆಯಾಗುವ ಸಾಕ್ಷ್ಯಗಳನ್ನು ಪರಿಶೀಲನೆಗಳಿಗಾಗಿ ಎಫ್ಎಸ್‌ಎಲ್‌ಗೆ ಕಳುಹಿಸಲಾಗುತ್ತದೆ. ಸಂಬಂಧಿಸಿದ ಅಧಿಕಾರಿಗಳು ಈ ಸಾಕ್ಷ್ಯವನ್ನು ಪರಿಶೀಲಿಸಿ ಎಫ್ಎಸ್‌ಎಲ್‌ನ ಆಯಾ ವಿಭಾಗಕ್ಕೆ ರವಾನಿಸುತ್ತಾರೆ. ಪ್ರಕರಣದ ತನಿಖಾಧಿಕಾರಿಗಳು ದಾಖಲೆಯಲ್ಲಿ ಉಲ್ಲೇಖೀಸಿದ ಅಂಶಗಳ ಕುರಿತು ಇಲ್ಲಿನ ಸೈಂಟಿಫಿಕ್‌ ಅಧಿಕಾರಿಗಳು ತಂತ್ರಜ್ಞಾನದ ಸಹಾಯದಿಂದ ಕೂಲಂಕಷವಾಗಿ ಸಾಕ್ಷ್ಯಗಳಲ್ಲಿರುವ ಅಂಶಗಳನ್ನು ಪರಿಶೀಲಿಸುತ್ತಾರೆ. ಪರಿಶೀಲನೆ ವೇಳೆ ಕಂಡು ಬರುವ ಅಂಶಗಳ ಬಗ್ಗೆ ವರದಿಯಲ್ಲಿ ಉಲ್ಲೇಖೀಸಿ ಕೆಲ ಪ್ರಕ್ರಿಯೆಗಳ ಮೂಲಕ ತನಿಖಾಧಿಕಾರಿಗಳಿಗೆ ಕಳುಹಿಸುತ್ತಾರೆ. ಈ ವರದಿಯಲ್ಲಿ ಉಲ್ಲೇಖೀಸಿರುವ ಅಂಶಗಳನ್ನು ತೆಗೆದುಕೊಂಡು ತನಿಖಾಧಿಕಾರಿಗಳು ತನಿಖೆ ಮುಂದುವರೆಸುತ್ತಾರೆ.

Advertisement

ಪ್ರತಿ ಕೇಸ್‌ಗಳ ಎಫ್ಎಸ್‌ ಎಲ್‌ ವರದಿಯನ್ನು ತಿಂಗಳೊಳಗೆ ನೀಡಬೇಕೆಂಬುದು ನಮ್ಮ ಗುರಿ. ಈ ನಿಟ್ಟಿನಲ್ಲಿ ಕಳೆದ 2 ವರ್ಷಗಳಲ್ಲಿ ಸಾಕಷ್ಟು ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿ, ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಕ್ರಮ ನಡೆಯುತ್ತಿದೆ. -ಧರ್ಮೇಂದ್ರ ಕುಮಾರ್‌ ಮೀನಾ, ನಿರ್ದೇಶಕರು, ಎಫ್ಎಸ್‌ಎಲ್ ‌

 

-ಅವಿನಾಶ್‌ ಮೂಡಂಬಿಕಾನ

Advertisement

Udayavani is now on Telegram. Click here to join our channel and stay updated with the latest news.

Next