Advertisement

ದೂರದೃಷ್ಟಿಯವರ ಕೊರತೆ, ಸಮೀಪದೃಷ್ಟಿಯವರ ಒರತೆ

07:36 AM Jun 10, 2023 | Team Udayavani |

ಶಿವಮೊಗ್ಗ ಜಿಲ್ಲೆಯ ಎಣ್ಣೆಕೊಪ್ಪ ಮಲ್ಲಿಕಾರ್ಜುನ ಗೌಡರು 1950ರ ದಶಕದಲ್ಲಿ ಎರಡು ಬಾರಿ ಶಾಸಕರಾಗಿ ಉತ್ತಮ ಹೆಸರು ಪಡೆದಿದ್ದರೂ ಆಗಲೇ ಭ್ರಮನಿರಸನವಾಯಿತಂತೆ. “ಪಕ್ಷದೊಳಗೆ ಮತ್ತು ಬೇರೆ ಬೇರೆ ಪಕ್ಷಗಳ ಮಧ್ಯೆ ವಿರೋಧ ಬೆಳೆಸುವುದೇ ಶಾಸನ ಸಭೆಯ ಸದಸ್ಯರ ಪ್ರಧಾನ ಕೆಲಸ ಎಂಬುದನ್ನು ಅರಿಯಲು ಅವರಿಗೆ ಬಹಳ ಕಾಲ ಬೇಕಾ ಗಲಿಲ್ಲ. ಗೌಡರು ವ್ಯವಹಾರ ಚತುರ. ಮತ್ತೆ ಸ್ಪರ್ಧಿಸಬೇಕೆಂದು ಕೋರಿದಾಗ ಅವರು ನಿರಾಕರಿಸಿ ಭೂದಾನ, ಸರ್ವೋ ದಯ ಕಾರ್ಯದಲ್ಲಿ ತೊಡಗಿಕೊಂಡರು’ ಎಂಬುದನ್ನು ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಬುದ್ಧಿಜೀವಿ ಎಚ್‌.ಎಸ್‌. ದೊರೆಸ್ವಾಮಿ ಅವರು ಕೃತಿಯೊಂದರಲ್ಲಿ ದಾಖಲಿಸಿದ್ದಾರೆ. ದ.ಕ. ಜಿಲ್ಲೆಯ ಪುತ್ತೂರು ವಿಧಾನಸಭೆಗೆ ತಾನೂ, ಲೋಕಸಭೆಗೆ ಅಣ್ಣ ಕೆ.ಆರ್‌.ಕಾರಂತರೂ 1952ರ ಪ್ರಥಮ ಚುನಾ ವಣೆಯಲ್ಲಿ ಸ್ಪರ್ಧಿಸಿದ ಅನುಭವ ವನ್ನು ಡಾ| ಶಿವರಾಮ ಕಾರಂತರು ದಾಖಲಿಸಿದ್ದಾರೆ. ಸ್ವಾತಂತ್ರ್ಯ ಸಿಕ್ಕಿದ ತತ್‌ಕ್ಷಣವೇ ನಾವು ಎಂತಹ ರಾಜಕಾರಣ ನಡೆಸಲು ಆರಂಭಿಸಿದೆವು ಎಂಬುದನ್ನು ಅರಿಯಬಹುದು.

Advertisement

ಪತ್ರಕರ್ತರು, ಲೇಖಕರು, ಕಥೆ- ಕಾದಂಬರಿಕಾರರಾಗಿದ್ದ ಮಾರ್ಪಳ್ಳಿ ಹರಿದಾಸ ರಾವ್‌ (1919-1954) 1930ರ ದಶಕದ ಚಿತ್ರಣವನ್ನು “ಬಾಳಿನ ಗಿಡ’ ಕಾದಂಬರಿಯಲ್ಲಿ ಬಣ್ಣಿಸಿದ್ದಾರೆ. ಕಥಾನಕವು ಬಡತನದ ಬೇಗೆಯಲ್ಲಿ ಬೆಂದಿದ್ದ ಅವರ ತಂದೆ ಗೋವಿಂದ ರಾಯರದ್ದೇ ಅನುಭವ. ಅವರ ಮಗ ಎಸೆಸೆಲ್ಸಿ ಓದಿದ ಬಳಿಕ ಕಾಲೇಜಿಗೆ ಹೋಗಬೇಕೆಂದುಕೊಂಡಾಗ ಆರ್ಥಿಕ ಕಾರಣಗಳಿಂದ ನಿರಾಕರಿಸಬೇಕಾಯಿತು. ಮಂಗಳೂರಿನಲ್ಲಿ ಜಿಲ್ಲಾ ಬೋರ್ಡ್‌ ಕಚೇರಿಯಲ್ಲಿ ಗುಮಾಸ್ತನಾಗಿದ್ದ ಹಿರಿಯ ಮಗ ತಂದೆಗೆ ಹೇಳಿದ ಮಾತಿದು: “ಅಪ್ಪಯ್ಯ, ನಮ್ಮಂತಹ ಬಡವರಿಗೆ ಕಾಲೇಜು ಶಿಕ್ಷಣ ಸಾಧ್ಯವೆ? ಅದೆಲ್ಲ ದೊಡ್ಡ ಜಮೀನಾªರರ ಮಕ್ಕಳಿಗೋ, ಸಿರಿ ವಂತ ವ್ಯಾಪಾರಿಗಳ ಮಕ್ಕಳಿಗೋ ಹೇಳಿ ದ್ದು. ದುಡ್ಡು ಹೇಗೆ ಖರ್ಚು ಮಾಡ ಬೇಕೆಂದು ಅವರಿಗೆ ತೋರುವುದಿಲ್ಲ. ಅದಕ್ಕಾಗಿ ಕಾಲೇಜು ಓದುವುದು ಒಂದು ದಾರಿ ಅವರಿಗೆ.

ಮಂಗಳೂರಿನಲ್ಲಿ ನಾನು ದಿನಂಪ್ರತಿ ನೋಡುತ್ತಿದ್ದೇನೆ. ಅವರ ಉಡುಗೆ ತೊಡುಗೆಗಳೇನು? ಶೋಕಿ ಏನು? ಅವರು ಚಾ, ಸಿನೆಮಾ, ಸಿಗರೇ ಟುಗಳಿಗೆ ವೆಚ್ಚ ಮಾಡುವ ಹಣ ನಮ್ಮೆ ರಡು ಸಂಸಾರಗಳಿಗೆ ಸಾಕು. ಬಡವರ ಮಕ್ಕಳಿಗಾಗಿ ಸರಕಾರ ಕಟ್ಟಿಲ್ಲ ಕಾಲೇಜನ್ನು. ಬಡವರೆಲ್ಲರೂ ಕಲಿಯಬೇಕೆಂದು ಸರಕಾರ ಬಯಸುವುದೂ ಇಲ್ಲ. ಏಕೆಂ ದರೆ ಕಲಿತ ಬಡವರು ನಾಳೆ ತಮಗೆ ತಿರುಗಿ ನಿಲ್ಲುವರೆಂದು ಬ್ರಿಟಿಷರಿಗೆ ಗೊತ್ತು. ಶ್ರೀಮಂತರ ಮಕ್ಕಳಿಗೆ ಯಾವು ದೂ ಬೇಡ. ಗಾಂಧಿಯವರೂ ಬೇಡ, ಗಾಂಧೀ ರಾಜ್ಯವೂ ಬೇಡ. ಗಾಂಧೀ ರಾಜ್ಯ ಬಂದ ಮೇಲೆ ಅದನ್ನು ಸುಸೂತ್ರ ನಡೆಯಲು ಬಿಟ್ಟಾರೆಂದು ತಿಳಿದಿದ್ದೀರಾ? ಇದು ಬೇಕು, ಅದು ಬೇಡ ಎಂದು ಒಬ್ಬ ನನ್ನು ಮತ್ತೂಬ್ಬ ಸುಲಿದು ತಿನ್ನಲುಂಟು. ಅವನು ಅಣ್ಣ, ಇವನು ತಮ್ಮನೆಂದೂ ನೋಡಲಾರರು. ಹಾವು ಹಾವೇ. ಗಾಂಧೀ ರಾಜ್ಯ ಬಂದ ಮೇಲೆ ಹಾವಿನ ವಿಷವೇನೂ ಕಡಿಮೆ ಯಾಗುವುದಿಲ್ಲ’

ಕಾಲೇಜು ಶಿಕ್ಷಣ ಕೊಡಿಸದಿದ್ದರೆ ದೇಶಾಂತರ ಹೋಗುತ್ತೇನೆಂದು ಸೆಟೆದು ನಿಂತ ಚಿಗುರು ಮೀಸೆಯ ಮಗ “ಗಾಂಧೀ ಮಹಾರಾಜ್‌ ಕೀ ಜೈ’ ಎಂದು ಸ್ವಾತಂತ್ರ್ಯ ಚಳವಳಿಯಲ್ಲಿ ಧುಮುಕಿದ…
ಸ್ವಾತಂತ್ರ್ಯ ಬಂದು 75 ವರ್ಷಗಳ ಬಳಿಕ ನಡೆದ ಇತ್ತೀಚಿನ ಚುನಾವಣೆಗೆ ಮುನ್ನ ಒಂದು ಪಕ್ಷದವರು ಇನ್ನೊಂದು ಪಕ್ಷದವರನ್ನು ಮತ್ತು ತಮ್ಮದೇ ಪಕ್ಷದವರನ್ನು ಖೆಡ್ಡಾಕ್ಕೆ ಬೀಳಿಸುತ್ತಿದ್ದ ಪರಿ ಮುನ್ನೋಟವಿಲ್ಲದ ನಾಯಕರ ದೊಡ್ಡ ಪಡೆ ಹೆಚ್ಚುತ್ತಿರುವ ಸಂಕೇತವೆನಿಸುತ್ತಿತ್ತು.

ಬಜರಂಗ ದಳವೇ ಮೊದಲಾದ ವಿಷಯಗಳು ಎರಡೂ ಪಕ್ಷಗಳಲ್ಲಿ ಹುಟ್ಟು ಹಾಕಿದ ವಾಕ್ಸಮರ ದೂರದೃಷ್ಟಿಯ ನಾಯಕರ ಕೊರತೆ, ಸಮೀಪದೃಷ್ಟಿ ನಾಯಕರ ಒರತೆಯನ್ನು ತೋರಿಸುತ್ತದೆ. “ಸಿಕ್ಕಿದ್ದೇ ಚಾನ್ಸು’ ಎಂದು ಅವರವರ ಬುದ್ಧಿಮತ್ತೆಗೆ ಸರಿಯಾಗಿ ಬಳಸಿ ಕೊಂಡರೆಂದರೆ ತಪ್ಪಾಗದು. ಈಗಲೂ ಲಿಂಗಾಯತ, ಕೇಸರೀಕರಣ, ಸಂಸತ್‌ ಭವನ ಮೊದಲಾದ ವಿಷಯಗಳ ಬಗ್ಗೆ ವಾದ ಪ್ರತಿವಾದಗಳು ನಡೆಯುತ್ತಲೇ ಇವೆ. ಇಂತಹ ಚರ್ಚೆಗಳು ಧನಾತ್ಮಕವಾ ಗುವ ಬದಲು ಜನರ ಶಕ್ತಿಯನ್ನು ವಿಪರೀ ತ ಪೋಲಾಗುವಂತೆ ಮಾಡುತ್ತವೆ. ಹೀಗೆ ಕೋಟ್ಯಂತರ ಮಾನವ ದಿನಗಳು ದುವ್ಯಯವಾಗುತ್ತಲೇ ಇವೆ. ಅಭಿವೃ ದ್ಧಿಗೆಂದು ಮೀಸಲಿಟ್ಟ ಹಣ ಎಷ್ಟು ಉಪಯೋಗವಾಗಿದೆ, ಎಷ್ಟು ದುರುಪ ಯೋಗವಾಗಿದೆ ಎಂದು ವಾದ, ಪ್ರತಿ ವಾದಗಳು ನಡೆದುದಕ್ಕಿಂತ ಹೆಚ್ಚು ಒಣ ಚರ್ಚೆಗಳೇ ನಡೆಯುತ್ತಿವೆ. ಬರೆಹಗಾರ ರೂ ಸರಕಾರ ಬದಲಾದಂತೆ ತಮ್ಮ ವರಸೆ ಗಳನ್ನು ಬದಲಾಯಿಸುತ್ತಾರೆ. ಒಬ್ಬರೇ ಬೇರೆ ಬೇರೆ ಇಸಂ ಹೊತ್ತ ಮಾಧ್ಯ ಮಗಳಿಗೆ ತಕ್ಕುದಾಗಿ ಬರೆದು “ಕೈ ಚಳಕ’ ತೋರಿಸುತ್ತಾರೆ. ಎಂಥದ್ದೇ ಕೊಳಕು ನೀರಿನಲ್ಲಾದರೂ ಮೀನು ಹಿಡಿ ಯು ವುದಕ್ಕೆ ಆಸಕ್ತಿ ತೋರುವಂತೆ ಸುದೀರ್ಘ‌ ಅವಧಿಯಲ್ಲಿ ಆಡಳಿತಾರೂಢರು ಜನ ರನ್ನು ಸ್ವಾರ್ಥಪರರನ್ನಾಗಿ ಸಿದ್ಧ ಪಡಿ ಸುತ್ತಿದ್ದಾರೆಂದರೆ ಅದನ್ನು “ಫಿಶಿಂಗ್‌ ಇನ್‌ ಟ್ರಬಲ್ಡ್‌ ವಾಟರ್‌’ ಗಾದೆಗೆ ಹೋ ಲಿಸಬಹುದು.

Advertisement

ಕೇವಲ 30, 50 ವರ್ಷಗಳ ಹಿಂದಿನ ಸಮಾಜಕ್ಕೂ ಈಗಿನ ಸ್ಥಿತಿಗೂ ಅಜ ಗಜಾಂತರವಿರುವಾಗ ನೂರು, ಐನೂರು, ಸಾವಿರ ವರ್ಷಗಳ ಬಳಿಕ ಸಮಾಜ ಹೇಗಿರಬಹುದು? ಹೇಗಾ ಗಬಹುದು? ಎಂಬ ಕನಿಷ್ಠ ಜ್ಞಾ ನವೂ ಕಂಡುಬರುತ್ತಿಲ್ಲ. ಈಗ (ಐದು ವರ್ಷ) ಲಾಭವಾದರೆ ಸಾಕು, ಮುಂದೆ ಏನಾದರೆ ನಮ ಗೇನು? ಎಂಬ ಸ್ವಾರ್ಥಚಿಂತನೆ ಮಾತ್ರ ಎದ್ದು ಕಾಣುತ್ತದೆ. ಸ್ಥಾನ ಮಾನಕ್ಕೆ ತಕ್ಕಂತೆ ಅಧಿಕಾರಿಗಳ್ಳೋ ಕಾನೂನು ವ್ಯಾಪ್ತಿ ಯಲ್ಲಿಯೇ ಸರಕಾರದ ಬೊಕ್ಕ ಸಕ್ಕೆ ಮಾಡುವ ಅಂಧಾದುಂಧಿ ವೆಚ್ಚ ರಾಜಕಾ ರಣಿಗಳ ಲಂಗುಲಗಾಮಿಲ್ಲದ ಗೌಜಿ ಗದ್ದಲದಲ್ಲಿ ಬೆಳಕು ಕಾಣುವುದಿಲ್ಲ. ಇವ ರಿಬ್ಬರ ಜುಗಲ್‌ಬಂದಿಯಿಂದಾಗಿಯೇ ಪ್ರತೀ ಮಗುವೂ ಸಾಲ ಗಾರನಾಗಿ ಹುಟ್ಟುತ್ತಿದೆ.
ಪಕ್ಷದೊಳಗೇ ಬಣಗಳನ್ನು ಸೃಷ್ಟಿ ಸುವುದು, ವಿವಾದಗಳನ್ನು ಹುಟ್ಟುಹಾಕಿ ಜನರ ಗಮನ ಬೇರೆ ಕಡೆ ಸೆಳೆಯು ವುದು, ನಿರ್ಲಜ್ಜ ಸ್ವಾರ್ಥಪರತೆ ಮೆರೆ ಯುವುದೇ ಮೊದಲಾದ ಈಗಿನ ವಿದ್ಯ ಮಾನಗಳನ್ನು ಗಮನಿಸುವಾಗ ಬಹಳಷ್ಟು ಹಿಂದಿನ ಮಲ್ಲಿಕಾರ್ಜುನ ಗೌಡರು, ಶಿವರಾಮ ಕಾರಂತರು, ಹರಿದಾಸ ರಾಯರು ಉತ್ತಮ ಭವಿಷ್ಯ ಕಾರರು ಎಂದೆನಿಸುವುದಿಲ್ಲವೆ?

“ರಾಜಕಾರಣಿಗಳು ತತ್ಕಾಲೀನ ವಿಷಯಗಳಲ್ಲಿ ಮುಳುಗಿರುತ್ತಾರೆ. ಮುತ್ಸದ್ಧಿಗಳೆನಿಸುವವರು ಮುಂದಿನ ಪೀಳಿಗೆಗಳ ಕಾಲದ ಬಗೆಗೆ ಚಿಂತನೆ ಯಲ್ಲಿರುತ್ತಾರೆ’ ಎನ್ನುವ ಹೆಸರಾಂತ ಲೀಡರ್‌ಶಿಪ್‌ ಕನ್ಸಲ್ಟೆಂಟ್‌ ಡಾ| ಮೈಲ್ಸ್‌ ಮುನ್ರೊà ಮಾತು ಅರ್ಥಪೂರ್ಣ ಎನಿ ಸುತ್ತದೆ. ಮುತ್ಸದ್ಧಿಗಳು ಹೆಚ್ಚಾದರೆ ಮಾತ್ರ ಸಮಯ ಸಾಧಕರಿಗೆ ತುಸು ಕಡಿ ವಾಣ ಬೀಳಬಹುದೋ ಏನೋ…

ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next