Advertisement

ಸೋಲನ್ನೇ ಸೋಲಿಸಿ

03:21 PM Sep 17, 2018 | |

ಜೀವನ ಎಂದರೆ ಆಸೆ, ನೋವು, ನಲಿವು ಮತ್ತು ಸುಮಧುರ ನೆನಪುಗಳ ಆಗರ. ಜೀವನ ನಾವು- ನೀವು ಅಂದುಕೊಂಡಂತೆ ಇಲ್ಲ. ಹಲವು ವೇಳೆ ಸರಾಗವಾಗಿ ಸಾಗುತ್ತಿರುವಂತೆ ಕಂಡರೂ, ಅಂತರಾತ್ಮದಲ್ಲಿ ಏನೋ ಕೊರತೆ ಕಾಡುತ್ತಿರುತ್ತದೆ, ಏನೋ ಹೊಸದನ್ನು ಬೇಡುತ್ತಿರುತ್ತದೆ. ಜೀವನೋಪಾಯಕ್ಕಾಗಿ ಏನೆಲ್ಲ ಮಾಡಿದರೂ, ಜೀವನವು ನಮ್ಮಿಂದ ಮತ್ತಷ್ಟು ಅಧಿಕ ಶ್ರಮ, ಸಾಮರ್ಥ್ಯ ಮತ್ತು ಬದ್ಧತೆಯನ್ನು ಬಯಸುತ್ತಲೇ ಇರುತ್ತದೆ. ಆದರೆ ಕೆಲವೊಮ್ಮೆ ಎದುರಾಗುವ ಸವಾಲುಗಳು ಮತ್ತು ಸಮಸ್ಯೆಗಳಿಂದಾಗಿ ಸಂಪೂರ್ಣ ನಿಷ್ಕ್ರಿಯವಾಗಿ ಬಿಡುತ್ತೇವೆ. ಆಗ ನಮ್ಮ ತಾರ್ಕಿಕ ಜ್ಞಾನವನ್ನು ಬಳಸಿಕೊಳ್ಳಲೇಬೇಕಾದ ಅನಿವಾರ್ಯತೆಯನ್ನು ನಾವು ತಿಳಿದುಕೊಳ್ಳಬೇಕು. ಜತೆಗೆ ನಾವೇಕೆ ಸೋಲುತ್ತೇವೆ ಎಂಬುದರ ಕಾರಣಗಳನ್ನು ಹುಡುಕಿ ಪರಿಹಾರ ದತ್ತ ಮುಖ ಮಾಡಬೇಕು.

Advertisement

ಬದುಕಿನಲ್ಲಿ ಸೋಲುಗಳು ಎದುರಾಗುತ್ತವೆ ಎಂಬ ವಿಚಾರವು ಯಾವತ್ತಿಗೂ ಚಿಂತೆ ಮತ್ತು ದುಃಖಕ್ಕೆ ಕಾರಣವಾಗುವಂತ ಅಂಶವಲ್ಲ. ಅದರ ಬದಲಿಗೆ ಇದು ನಮಗೆ ಬೆಳೆಯಲು ಮತ್ತು ಹೊಸ ಹಾದಿಗಳನ್ನು ಪರಿಚಯಿಸಲು ಒದಗಿ ಬಂದಿರುವ ಅವಕಾಶ ಎಂದು ಭಾವಿಸಬೇಕು. ಇದಕ್ಕಾಗಿ ಮೊದಲು ಸೋಲಿಗೆ ಕಾರಣವಾಗುವ ಅಂಶಗಳ ಕುರಿತೂ ನಾವು ಚಿಂತಿಸಬೇಕಾದ ಅನಿವಾರ್ಯತೆ ಇದೆ.

ಸ್ಪಷ್ಟತೆಯಿಲ್ಲ
ಸೋಲಿಗೆ ಪ್ರಮುಖ ಕಾರಣವೇ ಸ್ಪಷ್ಟತೆ ಇಲ್ಲದಿರುವುದು. ನಮಗೆ ಏನು ಬೇಕು ಎಂಬುದರ ಕುರಿತು ಸ್ಪಷ್ಟತೆಯಿಲ್ಲದಿದ್ದರೆ ನಾವು ಯಾವ ಕಡೆಗೆ ಮುಖಮಾಡಬೇಕು ಎಂಬುದೇ ತಿಳಿಯುವುದಿಲ್ಲ. ಹೀಗಾಗಿ ಸ್ಪಷ್ಟತೆ ಬದುಕಿನ ಯಶಸ್ಸಿಗೆ ಪ್ರಥಮ ಸೋಪಾನ ಎಂಬುದನ್ನು ಮರೆಯಬಾರದು.

ನಂಬಿಕೆ ಇರಿಸಿಕೊಳ್ಳಿ
ಯಶಸ್ಸಿನ ಮೂಲ ಗುಟ್ಟೆ ನಂಬಿಕೆ. ಜೀವನದಲ್ಲಿ ಯಶಸ್ವಿಯಾಗಬೇಕೆನ್ನುವವರು ಮೊದಲು ತಮ್ಮನ್ನು ತಾವು ನಂಬುವುದನ್ನು ಕಲಿಯಬೇಕು. ನಂಬಿಕೆಯಿಲ್ಲದೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಬಹುತೇಕ ಜನರು ತಮ್ಮ ಕುರಿತಾಗಿ ಜನ ಏನು ಆಲೋಚಿಸುತ್ತಾರೆ ಎಂಬುದನ್ನು ಮೊದಲು ಯೋಚಿಸುತ್ತಾರೆ. ಇದೇ ಅವರನ್ನು ಯಶಸ್ಸಿನ ಹಾದಿಯಿಂದ ವೈಫ‌ಲ್ಯದ ಹಾದಿಗೆ ಕೊಂಡೊಯ್ಯುತ್ತದೆ.

ಕಾರ್ಯ ಸಾಧ್ಯವಲ್ಲದ ಗುರಿಗಳು
ಸಾಧ್ಯವಿಲ್ಲದ ಗುರಿಗಳನ್ನು ಬೆನ್ನಟ್ಟಲು ಹೋಗುವುದು ಜನರು ಜೀವನದಲ್ಲಿ ಸೋಲನ್ನು ಅನುಭವಿಸಲು ಇರುವ ಪ್ರಮುಖ ಕಾರಣಗಳಲ್ಲಿ ಒಂದು. ವಾಸ್ತವಿಕವಲ್ಲದ ಗುರಿಗಳು ನಿಮ್ಮನ್ನು ಆರಂಭದಿಂದಲೆ ಕೆಳ ಮುಖವಾಗಿ ಎಳೆಯಲು ಆರಂಭಿಸುತ್ತವೆ. ಮಹತ್ವಾಕಾಂಕ್ಷೆಯುಳ್ಳ ಗುರಿಯನ್ನು ಹೊಂದುವುದು ತಪ್ಪಲ್ಲ, ಆದರೆ ಅದನ್ನು ಒಮ್ಮೆಲೆ ಕಾರ್ಯರೂಪಕ್ಕೆ ತರುವ ಬದಲಿಗೆ ಸಣ್ಣ ಸಣ್ಣ ಗುರಿಗಳನ್ನು ಪೂರೈಸಿಕೊಂಡು, ಅದನ್ನು ಸಾಧಿಸುವ ಮೂಲಕ ದೊಡ್ಡ ಗುರಿಯತ್ತ ಹೋಗುವ ಕಾರ್ಯವನ್ನು ಮಾಡಬೇಕು. ಯಾರಿಗಾದರೂ ಏಕ ಪ್ರಯತ್ನದಲ್ಲಿ ಹತ್ತರ ಮೆಟ್ಟಿಲೆರುವದು ಕಷ್ಟ. ಒಂದರ ಬಳಿಕ ಒಂದನ್ನು ಏರಬೇಕಲ್ಲವೇ.

Advertisement

ಗುರಿಯ ಕಡೆಗೆ ನಡೆಯಿರಿ
ಕೌಟುಂಬಿಕ ಒತ್ತಡ ಮತ್ತು ಒತ್ತಡ ರಹಿತ ಬಾಳು ನಿಮ್ಮನ್ನು ಒಂದು ಪರಿಧಿಯೊಳಗೆ ಕೂಡಿ ಹಾಕಿ ಬಿಡುತ್ತದೆ. ಇಂತಹ ಜೀವನ ಇತರರಿಗಾಗಿ ಸವೆದು ಹಾಳಾಗುತ್ತದೆಯೇ ಹೊರತು, ಯಶಸ್ಸಿನತ್ತ ಅವರ ಚಿತ್ತ ಹರಿಯುವುದಿಲ್ಲ. ಆದ್ದರಿಂದ ನಿಮಗೆ ಏನು ಸರಿಯೆನಿಸುವುದೋ ಅದನ್ನೇ ಮಾಡಿ, ಇತರರನ್ನು ತೃಪ್ತಿಪಡಿಸುವುದರಲ್ಲಿಯೇ ಕಳೆದು ಹೋಗುವುದು ಸಾದುವಲ್ಲದ ಕಾರ್ಯ. 

ವೈಫ‌ಲ್ಯ ಭೀತಿ
ಯಾವುದೇ ಕೆಲ ಸಕ್ಕೂ ಮುನ್ನ ಸೋಲುತ್ತೇವೆ ಎಂಬ ಭಾವನೆಯು ಮೊದಲು ಕಾಡುತ್ತದೆ. ಸೋಲಿನ ಭಯ ಒಂದು ಅಡೆ-ತಡೆಯಂತೆ ಎಂದು ಯಾರು ಯೋಚಿಸುವುದಿಲ್ಲ. ಸೋಲಿನ ಭಯವನ್ನು ಹೊಂದುವುದು ಒಂದೇ ಸೋಲನ್ನು ಸ್ವೀಕರಿಸುವುದೂ ಒಂದೇ.

ಯೋಜನೆಯ ಕೊರತೆ
ಯಶಸ್ಸಿನತ್ತ ಸಾಗುವವರ ಒಂದು ದೊಡ್ಡ ಸಾಧನ- ಸಾಮರ್ಥ್ಯವೇ ಯೋಜನೆ. ಇದರ ಮೇಲೆಯೇ ಸೋಲು ಮತ್ತು ಗೆಲುವು ನಿರ್ಧಾರವಾಗುತ್ತದೆ.

ಶಿಸ್ತು-ಸಂಯಮ
ಒಂದು ಯೋಜನೆಯನ್ನು ಸಿದ್ಧಪಡಿಸಿಕೊಂಡರೆ, ಅದರಂತೆ ನೀವು ಕಾರ್ಯನಿರ್ವಹಿಸಲು ಶಿಸ್ತು ಅತ್ಯವಶ್ಯಕ. ಇದುವರೆಗೆ ಜೀವನದಲ್ಲಿ ಮಹತ್ತರವಾದುದನ್ನು ಸಾಧಿಸಿದವರೆಲ್ಲರು ಒಪ್ಪುವ ಒಂದೇ ವಿಚಾರ ಅದು ಶಿಸ್ತು.

ಜೀವನದಲ್ಲಿ ನಕಾರಾತ್ಮಕತೆ
ಜೀವನದಲ್ಲಿ ನಕಾರಾತ್ಮಕತೆಯನ್ನು ನಮ್ಮಿಂದ ದೂರವಿಡುವುದು ತೀರಾ ಅಗತ್ಯವಾಗಿದೆ. ನಕಾರಾತ್ಮಕತೆಯು ನಮ್ಮಲ್ಲಿರುವ ಗೆಲ್ಲುವ ಚೈತನ್ಯವನ್ನೇ ಹಾಳು ಮಾಡಿಬಿಡುತ್ತದೆ ಎಂಬುದು ನೆನಪಿರಲಿ.

ಸೋಮಾರಿತನ
ಸೋಮಾರಿತನ ಬಿಟ್ಟು ಬಿಡಿ. ಸುಮ್ಮನೆ ಕೈಕಟ್ಟಿ ಕುಳಿತಿರುವವನನ್ನು ಸೊಳ್ಳೆಗಳು ಹುಡುಕಿಕೊಂಡು ಬರಬಹುದೇ ಹೊರತು ಯಶಸ್ಸಲ್ಲ. ಯಶಸ್ಸಿಗಾಗಿ ಸತತ ತುಡಿಯುವವನು, ಮಿಡಿಯುವವನು ಜೀವನದಲ್ಲಿ ಏಕಾಂಗಿ ಇರಲಾರ.

ಉತ್ಸಾಹ
ಯಾವುದೇ ಅಡ್ಡಿ-ಆತಂಕಗಳು ಬಂದರೂ ಉತ್ಸಾಹವನ್ನು ಕಳೆದುಕೊಳ್ಳಬೇಡಿ. ಉತ್ಸಾಹವು ನಿಮ್ಮನ್ನು ಯಶಸ್ಸಿನತ್ತ ಕೊಂಡೊಯ್ಯುವ ಇಂಧನದಂತೆ. ಉತ್ಸಾಹದ ಕೊರತೆಯೆ ಜೀವನದಲ್ಲಿ ಸೋಲಿಗೆ ಪ್ರಮುಖ ಕಾರಣವೂ ಹೌದು.

ಸ್ವಯಂ ಮೌಲ್ಯಮಾಪನ
ನಮ್ಮನ್ನು ನಾವು ಮೌಲ್ಯಮಾಪನ ಮಾಡಿಕೊಳ್ಳುವ ಸಂದಿಗ್ನತೆ ಇದೆ. ಇಂತಹ ಸ್ಪಧಾತ್ಮಕ ಯುಗದಲ್ಲಿ ಇದು ಅನಿವಾರ್ಯವಾದುದೂ ಹೌದು. ಈಗಿರುವ ಸ್ಥಾನ (ಸ್ಟೇಟಸ್‌) ಮತ್ತು ಯಶಸ್ಸಿಗೆ ನೀವು ವ್ಯಯಿಸಬೇಕಾದ ಶ್ರಮ, ನಿಮ್ಮ ದೌರ್ಬಲ್ಯ, ಸಾಮರ್ಥ್ಯ ಹೀಗೆ ಇವೆಲ್ಲವೂ ಈ ಸ್ವಯಂ ಮೌಲ್ಯಮಾಪಮದಿಂದ ಬೆಳಕಿಗೆ ಬರುತ್ತದೆ.

 ಕಾರ್ತಿಕ್‌ ಅಮೈ

Advertisement

Udayavani is now on Telegram. Click here to join our channel and stay updated with the latest news.

Next