Advertisement

ಕಿರಿಯರ ಕ್ರಿಕೆಟ್‌ನ ಬಲಿಷ್ಠರಿಗೆ ಸೋಲು

09:44 PM Feb 14, 2020 | Team Udayavani |

ಮೊನ್ನೆ ಫೆ.9ರಂದು ದ.ಆಫ್ರಿಕಾದಲ್ಲಿ 19 ವಯೋಮಿತಿ ಏಕದಿನ ವಿಶ್ವಕಪ್‌ ಕ್ರಿಕೆಟ್‌ ಮುಗಿಯಿತು. ಅಂತಿಮಪಂದ್ಯದವರೆಗೆ ಎಲ್ಲವೂ ನಿರೀಕ್ಷಿತವಾಗಿಯೇ ಸಾಗಿತ್ತು. ಅಲ್ಲಿ ಮಾತ್ರ ಭಾರತ ಸೋತು, ಯಾರೂ ಊಹಿಸಿರದ ಬಾಂಗ್ಲಾದೇಶ ತಂಡ ವಿಜೇತನಾಗಿ ಹೊರಹೊಮ್ಮಿತು! ಅಂತಿಮಪಂದ್ಯದವರೆಗೆ ಅಮೋಘವಾಗಿ ಆಡಿ ತನ್ನನ್ನು ಸೋಲಿಸಲು ಸಾಧ್ಯವೇ ಇಲ್ಲ ಎಂಬ ಛಾಪು ಮೂಡಿಸಿದ್ದ ತಂಡವೊಂದು, ಅಂತಿಮಹಂತದಲ್ಲಿ ವಿಚಿತ್ರರೀತಿಯಲ್ಲಿ ಕೈಚೆಲ್ಲಿದ್ದು ವಿಪರ್ಯಾಸವಾಗಿ ಕಂಡುಬಂತು.

Advertisement

ಇತಿಹಾಸದಲ್ಲಿ ಈ ರೀತಿಯ ಘಟನೆಗಳು ಹೊಸತೇನಲ್ಲ. ಸ್ವತಃ ಭಾರತ ತಂಡವೇ ಇಂತಹ ಏರುಪೇರನ್ನು ಮಾಡಿ ದಿಗ್ಗಜ ತಂಡಗಳನ್ನು ಕಂಗೆಡಿಸಿದೆ. ಈಗ ಅಂತಹ ಸ್ಥಿತಿ ಭಾರತಕ್ಕೇ ಎದುರಾಗಿದೆ. ಭಾರತಕ್ಕೂ ಅಂತಿಮಪಂದ್ಯದಲ್ಲಿ ಅನಿರೀಕ್ಷಿತವಾಗಿ ಏರುಪೇರನ್ನು ಅನುಭವಿಸುವುದು ಹೊಸ ಅನುಭವವೇನಲ್ಲ. 19 ವಯೋಮಿತಿ ವಿಶ್ವಕಪ್‌ ಮಟ್ಟಿಗೆ ಭಾರತ ವಿಶ್ವದ ಅತ್ಯಂತ ಬಲಿಷ್ಠ ತಂಡ.

ಇದುವರೆಗೆ ಒಟ್ಟು 13 ವಿಶ್ವಕಪ್‌ಗ್ಳು ನಡೆದಿವೆ. ಅದರಲ್ಲಿ ಭಾರತ 7 ಬಾರಿ ಫೈನಲ್‌ಗೇರಿದೆ. 4 ಬಾರಿ ಪ್ರಶಸ್ತಿ ಗೆದ್ದಿದೆ. 3 ಬಾರಿ ಮಾತ್ರ ಅಂತಿಮಹಂತದಲ್ಲಿ ಕೈಚೆಲ್ಲಿದೆ. ಈ ಮೂರೂ ಯತ್ನದಲ್ಲಿ ಎರಡು ಬಾರಿ ತನಗಿಂತ ಬಹಳ ದುರ್ಬಲ ಎದುರಾಳಿಗಳ ವಿರುದ್ಧವೇ ಸೋತು ಹೋಗಿದೆ. ಒಮ್ಮೆ ವೆಸ್ಟ್‌ ಇಂಡೀಸ್‌, ಇನ್ನೊಮ್ಮೆ ಬಾಂಗ್ಲಾದೇಶ. ಕ್ರಿಕೆಟ್‌ ಜಗತ್ತಿನಲ್ಲಿ ಬಾಂಗ್ಲಾ ಇನ್ನೂ ದೊಡ್ಡ ದೊಡ್ಡ ಹೆಜ್ಜೆಗಳನ್ನಿಟ್ಟಿಲ್ಲ.

ಬಹಳ ಅದ್ಭುತ ಫ‌ಲಿತಾಂಶಗಳನ್ನು ನೀಡಿಲ್ಲ. ಈ ಬಾರಿ ಭಾರತದಂತಹ ತಂಡವನ್ನು ಸೋಲಿಸಿ ಪ್ರಶಸ್ತಿ ಗೆದ್ದಿರುವುದು, ಅದಕ್ಕೆ ವಿದೇಶಿ ನೆಲದಲ್ಲಿ ಒಲಿದ ಅತಿದೊಡ್ಡ ಗೆಲುವು. ಇದು ಬಾಂಗ್ಲಾದ ಆತ್ಮವಿಶ್ವಾಸವನ್ನು ಬಹಳ ಎತ್ತರಕ್ಕೇರಿಸುವುದರಲ್ಲಿ ಅನುಮಾನವಿಲ್ಲ. ಅದರ ಮುಂದಿನ ಗುರಿ ಹಿರಿಯರ ವಿಭಾಗದಲ್ಲಿ ವಿಶ್ವಕಪ್‌ ಗೆಲ್ಲುವುದು. ಈಗಾಗಲೇ ಅದು ಆ ಸುಳಿವನ್ನು ಬಿಟ್ಟುಕೊಟ್ಟಿದೆ.

2000ರಲ್ಲಿ ಭಾರತಕ್ಕೆ ಮೊದಲ ಪ್ರಶಸ್ತಿ: 2000ನೇ ವರ್ಷದಲ್ಲಿ ಶ್ರೀಲಂಕಾದಲ್ಲಿ ವಿಶ್ವಕಪ್‌ ನಡೆದಿತ್ತು. ಇದು ಭಾರತೀಯ ಕ್ರಿಕೆಟ್‌ಗೆ ಸಂಜೀವಿನಿ ನೀಡಿದ ಪ್ರಶಸ್ತಿ. ಹಿರಿಯರ ತಂಡ ಆ ವೇಳೆ ಸತತ ಸೋಲುಗಳಿಂದ ತತ್ತರಿಸಿ ಹೋಗಿತ್ತು. ಅಂತಹ ಹಂತದಲ್ಲಿ ಕಿರಿಯರು ಅದ್ಭುತವೊಂದನ್ನು ಸಾಧಿಸಿ, ಪ್ರಶಸ್ತಿ ಗೆದ್ದರು. ಈ ಕೂಟದ ಮೂಲಕ ಯುವರಾಜ್‌ ಸಿಂಗ್‌, ಮೊಹಮ್ಮದ್‌ ಕೈಫ್ ದೊಡ್ಡ ತಾರೆಯರಾಗಿ ಮೂಡಿಬಂದರು. ಇಬ್ಬರೂ ಭಾರತೀಯ ಕ್ರಿಕೆಟ್‌ಗೆ ಅವಿಸ್ಮರಣೀಯ ಗೆಲುವನ್ನು ನೀಡಿದ್ದಾರೆ ಎನ್ನುವುದನ್ನು ಮರೆಯಲು ಸಾಧ್ಯವೇ ಇಲ್ಲ. ಅಂತಿಮ ಪಂದ್ಯದಲ್ಲಿ ಭಾರತ, ಆತಿಥೇಯ ಶ್ರೀಲಂಕಾವನ್ನೇ ಸೋಲಿಸಿ ಪ್ರಶಸ್ತಿ ಗೆದ್ದಿತ್ತು.

Advertisement

2008ರಲ್ಲಿ ಕೊಹ್ಲಿ, ಮನೀಷ್‌, ಜಡೇಜ ಉದಯ: ಮಲೇಷ್ಯಾದಲ್ಲಿ ಈ ಕೂಟ ನಡೆದಿತ್ತು. ಅಂತಿಮಪಂದ್ಯದಲ್ಲಿ ದ.ಆಫ್ರಿಕಾವನ್ನು ಸೋಲಿಸಿ ಭಾರತ ಪ್ರಶಸ್ತಿ ಜಯಿಸಿತು. ಈ ಕೂಟದ ಮೂಲಕ ಪ್ರಸ್ತುತ ಭಾರತೀಯ ಕ್ರಿಕೆಟನ್ನು ಆಳುತ್ತಿರುವ ಮೂವರು ಕ್ರಿಕೆಟಿಗರ ಉದಯವಾಯಿತು. ತಂಡದ ನಾಯಕ, ಸಮಕಾಲೀನ ಕ್ರಿಕೆಟ್‌ನ ಸರ್ವಶ್ರೇಷ್ಠ ಬ್ಯಾಟ್ಸ್‌ಮನ್‌ ವಿರಾಟ್‌ ಕೊಹ್ಲಿ ಹುಟ್ಟಿಕೊಂಡಿದ್ದೇ ಈ ಕೂಟದ ಮೂಲಕ. ಟಿ20, ಏಕದಿನ ತಂಡದಲ್ಲಿ ಆಡುತ್ತಿರುವ ರಾಜ್ಯದ ಮನೀಷ್‌ ಪಾಂಡೆ, ಮೂರೂ ಮಾದರಿಯಲ್ಲಿ ಸ್ಥಾನವುಳಿಸಿಕೊಂಡಿರುವ ರವೀಂದ್ರ ಜಡೇಜ ಅವರೆಲ್ಲ ಹೊರಬಂದಿದ್ದೇ ಈ ಕೂಟದ ನಂತರ. ಇನ್ನೂ ಹಲವು ವರ್ಷಗಳ ಕಾಲ ಭಾರತೀಯ ತಂಡದಲ್ಲಿ ಇವರು ಆಡುವುದು ಖಚಿತ.

2012-ಹನುಮ ವಿಹಾರಿ, ಉನ್ಮುಕ್ತ್ ಚಾಂದ್‌ ಬೆಳಕಿಗೆ: ಇದು ಆಸ್ಟ್ರೇಲಿಯದಲ್ಲಿ ನಡೆದ ಕೂಟ. ಬಲಿಷ್ಠ ಎದುರಾಳಿ ಆಸ್ಟ್ರೇಲಿಯವನ್ನು ಅದರ ನೆಲದಲ್ಲೇ ಮಣಿಸಿದ ಖ್ಯಾತಿ ಭಾರತದ್ದು. ಅಂತಿಮ ಪಂದ್ಯದಲ್ಲಿ ಉನ್ಮುಕ್ತ್ ಚಾಂದ್‌ ನೇತೃತ್ವದ ಭಾರತ, ಬಾಸಿಸ್ಟೊ ನಾಯಕತ್ವದ ಆಸ್ಟ್ರೇಲಿಯವನ್ನು 6 ವಿಕೆಟ್‌ಗಳಿಂದ ಸೋಲಿಸಿತು. 2012ರಷ್ಟರಲ್ಲಿ ಭಾರತದ ಹಿರಿಯರ ತಂಡ ಬಹಳ ಬಲಿಷ್ಠಗೊಂಡಿತ್ತು. 2011ರಲ್ಲಿ ಏಕದಿನ ವಿಶ್ವಕಪ್‌ ಗೆದ್ದಿದ್ದ ಭಾರತ, 2007ರಲ್ಲಿ ಟಿ20 ವಿಶ್ವಕಪ್ಪನ್ನೂ ಗೆದ್ದಿತ್ತು. 2012ರಲ್ಲಿ ಹೊರಜಗತ್ತಿಗೆ ಪರಿಚಯಗೊಂಡ ಇಬ್ಬರು ಪ್ರಮುಖ ಕ್ರಿಕೆಟಿಗರೆಂದರೆ ಉನ್ಮುಕ್‌¤ ಚಾಂದ್‌ ಹಾಗೂ ಹನುಮ ವಿಹಾರಿ. ವಿಹಾರಿ ಈಗ ಭಾರತ ಟೆಸ್ಟ್‌ ತಂಡದಲ್ಲಿ ನೆಲೆಯೂರಿದ್ದಾರೆ. ಆದರೆ ಭಾರತ ತಂಡದಲ್ಲಿ ಆಡಿಯೇ ಆಡುತ್ತಾರೆ ಎಂಬ ಭರವಸೆ ಮೂಡಿಸಿದ್ದ ಉನ್ಮುಕ್‌¤ ಚಾಂದ್‌, ಈಗ ದೆಹಲಿ ರಣಜಿ ತಂಡದಲ್ಲೂ ಸ್ಥಾನವುಳಿಸಿಕೊಳ್ಳಲು ಪರದಾಡುತ್ತಿದ್ದಾರೆ!

2018-ಪೃಥ್ವಿ ಶಾ ತಂಡಕ್ಕೆ ಪ್ರಶಸ್ತಿ: ಇದು ನ್ಯೂಜಿಲೆಂಡ್‌ನ‌ಲ್ಲಿ ನಡೆದ ಕೂಟ. ಇಲ್ಲಿ ಭಾರತ ಮತ್ತೂಮ್ಮೆ ಆಸ್ಟ್ರೇಲಿಯವನ್ನೇ ಅಂತಿಮಪಂದ್ಯದಲ್ಲಿ ಸೋಲಿಸಿ ವಿಶ್ವವಿಜಯೀಯಾಯಿತು. ಪೃಥ್ವಿ ಶಾ ನಾಯಕತ್ವದ ಭಾರತ ತಂಡ, ಎದುರಾಳಿ ಆಸೀಸನ್ನು 8 ವಿಕೆಟ್‌ಗಳಿಂದ ಮಣಿಸಿತು. ಇಡೀ ಕೂಟದಲ್ಲಿ ಭಾರತೀಯರು ನಿರ್ಣಾಯಕವಾಗಿ ಆಡಿ, ಎಲ್ಲ ವಿಭಾಗದಲ್ಲಿ ಎದುರಾಳಿಗಳನ್ನು ಹಣಿದರು. ಕೂಟದಲ್ಲಿ ಅಧಿಕೃತವಾಗಿ ವಿಜೇತ ತಂಡವಾಗಿ ಹೊರಹೊಮ್ಮಿತು. ಈ ಕೂಟದ ಮೂಲಕ ಪ್ರಕಟಗೊಂಡ ಅತ್ಯಂತ ಯಶಸ್ವೀ ತಾರೆ ಮುಂಬೈನ ಪೃಥ್ವಿ ಶಾ. ಭಾರತ ತಂಡದೊಳಕ್ಕೆ ಪ್ರವೇಶಿಸಿರುವ ಇನ್ನೊಬ್ಬ ತಾರೆ, ಶುಬ್ಮನ್‌ ಗಿಲ್‌. ಶಿವಂ ಮಾವಿ, ಕಮಲೇಶ್‌ ನಾಗರಕೋಟಿ ಹೆಸರು ಮಾಡಿದರೂ, ಭಾರತ ತಂಡದಲ್ಲಿ ತಮ್ಮ ಸ್ಥಾನವನ್ನು ಗಟ್ಟಿ ಮಾಡಿಕೊಂಡಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next