Advertisement

ನಾಗರಿಕತೆಯ ನಡುವೆಯೂ ಗ್ರಾಮೀಣ ಸಂಸ್ಕೃತಿ ಉಳಿವಿಗೆ ಪಾಂಡವರು ಸಾಕ್ಷಿ

05:41 PM Oct 25, 2022 | Team Udayavani |

ರಬಕವಿ-ಬನಹಟ್ಟಿ: ಗ್ರಾಮೀಣ ಪ್ರದೇಶಗಳು ನಮ್ಮ ಸಂಸ್ಕೃತಿಯ ಮೂಲ ನೆಲೆಗಳು. ನಮ್ಮ ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ, ಭಾಷೆ ಮತ್ತು ವೇಷ ಭೂಷಣ ಇಂದು ಉಳಿದಿರುವುದು ಹಳ್ಳಿಗಾಡಿನಲ್ಲಿ ಮಾತ್ರ.

Advertisement

ಅಂತೆಯೇ ಗ್ರಾಮೀಣ ಪ್ರದೇಶದಲ್ಲಿ ಆಚರಿಸಲ್ಪಡುವ ಹಬ್ಬಗಳು ಕೂಡಾ ವಿಶಿಷ್ಟತೆ ಹಾಗೂ ಸಂಪ್ರದಾಯಬದ್ಧವಾದವುಗಳು ಅವುಗಳ ಆಚರಣೆಗೆ ವಿಶೇಷವಾದ ಅರ್ಥವಿರುತ್ತದೆ. ಇತ್ತಿಚೀಗೆ ಆಧುನಿಕತೆಯಿಂದ ನಗರ ಪ್ರದೇಶಗಳಲ್ಲಿ ಆಚರಿಸುವ ಹಬ್ಬಗಳಿಗೆ ಹೈಟೆಕ್ ಟಚ್ ಬಂದಿರಬಹುದು ಆದರೆ ನಮ್ಮ ಗ್ರಾಮೀಣ ಪ್ರದೇಶಗಳಲ್ಲಿ ಹಬ್ಬಗಳು ತಮ್ಮ ಮೂಲ ಸೊಗಡನ್ನು ಉಳಿಸಿಕೊಂಡು ಬಂದಿರುವುದು ಹೆಮ್ಮೆಯ ಸಂಗತಿಯೇ ಸರಿ.

ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಹಬ್ಬವೂ ಒಂದಿಲ್ಲೊಂದು ವೈಶಿಷ್ಟ್ಯಯತೆಯನ್ನು ಒಳಗೊಂಡು ಸೌಹಾರ್ದದಿಂದ ಆಚರಿಸುತ್ತಾ, ನಮ್ಮ ಪೂರ್ವಜರು ಹಾಕಿ ಕೊಟ್ಟ ಸಂಪ್ರದಾಯ, ಪರಂಪರೆಯನ್ನು ಗ್ರಾಮೀಣ ಜನತೆ ಈಗಲೂ ಪಾಲಿಸುತ್ತಾ ಬಂದಿದ್ದಾರೆ. ಅಂತೆಯೇ ದೀಪಾವಳಿಯ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಹಾಕುವ ಪಾಂಡವರು(ಪಾಂಡ್ರವ್ವ)ಗಳು ನಾಗರೀಕತೆ ಬೆಳೆದಂತೆ ಕಡಿಮೆಯಾಗುತ್ತಾ ಬರುತ್ತಿದೆ. ಇದು ಹಳ್ಳಿಗಳಲ್ಲಿ ಮಾತ್ರ ಹೆಚ್ಚಾಗಿ ಕಾಣಸಿಗುತ್ತದೆ. ದೀಪಾವಳಿ ಹಬ್ಬಕ್ಕೂ ಪೂರ್ವ ಮೊದಲೆರಡು ದಿನ ಮಹಿಳೆಯರು ಕೈ ಬುಟ್ಟಿಯನ್ನು ತೆಗೆದುಕೊಂಡು ಹೋಗಿ ಆಕಳ ಸಗಣಿಯನ್ನು ತುಂಬಿಕೊಂಡು ಬಂದು, ಅದನ್ನು ಮನೆಯಲ್ಲಿಟ್ಟು ನಂತರ ಹಬ್ಬದ ಮೊದಲದಿನ ನರಕ ಚತುರ್ದಶಿಯಂದು 5 ಪಾಂಡವರನ್ನು, ಅಮವಾಸ್ಯೆಯಂದು 9 ಹಾಗೂ ದೀಪಾವಳಿಯ ಪಾಡ್ಯೆಯಂದು 11 ಪಾಂಡವರನ್ನು ಸಗಣಿಯಿಂದ ಆಕಾರ ಮಾಡಿ, ಮನೆಯ ಪಡಸಾಲೆಯ ಒಂದು ಕಡೆಗೆ ಪ್ರತಿಷ್ಠಾಪಿಸಿ ನಂತರ ಅವುಗಳನ್ನು ಪೂಜಿಸಿ ಕಣಗಲದ ಹಳದಿ ಹೂಗಳನ್ನು ತಂದು ಪೂಜಿಸುತ್ತಾರೆ. ಮತ್ತು ಮೂರು ದಿವಸಗಳ ಕಾಲ ಮನೆಯಲ್ಲಿ ಮಾಡಿದ ಸಿಹಿ ಅಡುಗೆಯನ್ನು ನೈವೇದ್ಯ ಮಾಡುತ್ತಾರೆ. ನಂತರ ಪಾಡ್ಯೆಯ ದಿವಸ ಎಲ್ಲ ಪಾಂಡವರನ್ನು ಮತ್ತೊಮ್ಮೆ ಪೂಜಿಸಿ, ನೈವೇದ್ಯ ಮಾಡಿ ಸೂರ್ಯ ಮುಳಗುವ ಮುಂಚೆ ಮನೆಯ ಮಾಳಿಗೆಯ ಮೇಲಿಡುತ್ತಾರೆ. ಕೆಲವರು ಕಡೆ ಪಾಡ್ಯೆಯ ದಿನ ಕೂಡಾ ಪಾಂಡವರನ್ನು ಹಾಕಿ ಪೂಜಿಸುತ್ತಾರೆ.

ಹಬ್ಬಗಳು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಭಿನ್ನವಾಗಿ ಆಚರಿಸಲ್ಪಡುತ್ತವೆ. ಇಂದು ಹಳ್ಳಿಗಳಲ್ಲಿ ಹಾಕುವ ಪಾಂಡವರು ಇಂದು ನಮ್ಮ ಗ್ರಾಮೀಣ ಹೆಣ್ಣು ಮಕ್ಕಳ ಭಾಷೆಯಲ್ಲಿ ಅದು ಪಾಂಡ್ರವ್ವ ಎಂದು ರೂಢಿಯಾಗಿದೆ.

ಹಿನ್ನಲೆ: ದೀಪಾವಳಿ ಹಬ್ಬದ ಶುಭ ಸಂದರ್ಭದಲ್ಲಿ ಶಗಣಿಯಿಂದ ಈ ಪಾಂಡವರನ್ನು ಮಾಡಲು ಕಾರಣವೆಂದರೆ, ಇದು ಅತ್ಯಂತ ಶಕ್ತಿಯುತವಾದ ಗೊಬ್ಬರ ಅದಕ್ಕೆ ಅದನ್ನು ಸಾಂಕೇತಿಕವಾಗಿ ಪೂಜಿಸುವುದರ ಸಲುವಾಗಿ ಪಾಂಡವರನ್ನು ಮಾಡಲಾಗುತ್ತದೆ ಎಂಬ ಪ್ರತೀತಿ ಇದೆ.

Advertisement

ಪಾಂಡವರು ಎಂದರೆ:  ಗ್ರಾಮೀಣ ಭಾಗದಲ್ಲಿ ಗ್ರಾಮದ ಪ್ರಮುಖರು ಪಂಚರು ಮತ್ತು ಯಾವುದೇ ಕಾರ್ಯ ಮಾಡಬೇಕಾದರು ಈ ಪಂಚರು ಬೇಕೆ ಬೇಕು. ನಂತರ ಯಾವುದೇ ಬೆಳೆಯನ್ನು ಕೊಯ್ಲು ಮಾಡಬೇಕೆಂದರೂ ಪಂಚ ಮುತೈದೆಯರಿಗೆ ಉಡಿ ತುಂಬುತ್ತಾರೆ. ರಾಶಿ ಮಾಡುವ ಸಂದರ್ಭದಲ್ಲಿ ಐದು ಜನರಿಗೆ ದವಸ-ಧಾನ್ಯಗಳನ್ನು ದಾನವಾಗಿ ನೀಡುತ್ತಾರೆ.

ಕೆಲವು ಭಾಗದಲ್ಲಿ ಸಗಣಿಯಿಂದ ಕೋಟೆಯನ್ನು ಮಾಡಿ ಅದರಲ್ಲಿ ಐದು ಜನ ಪಂಚರನ್ನು ಪ್ರತಿಷ್ಠಾಪಿಸುತ್ತಾರೆ. ಇದು ಪಂಚರ ಪೂಜೆ ಹಾಗೂ ರಕ್ಷಣೆಯ ಸಂಖೇತ. ಜನರು ಪಂಚರ ರಕ್ಷಣೆಯನ್ನು ಮಾಡಿದರೆ  ಪಂಚರು ಜನರ ರಕ್ಷಣೆ ಮಾಡುತ್ತಾರೆ ಎಂಬುದು ವಿಶ್ವಾಸ. ಇನ್ನೂ ಪಂಚರು ಅಂದರೆ ಐದು ಜನ. ಪಾಂಡವರು ಕೂಡಾ ಐದು ಜನ ಆದ್ದರಿಂದ ಸಾಮಾನ್ಯವಾಗಿ ಯಾವುದೇ ಪ್ರದೇಶದಲ್ಲಿ ಐದು ಜನ ಇದ್ದರೇ ಅವರನ್ನು ಪಂಚ ಪಾಂಡವರು ಎಂದು ಕರೆಯುತ್ತಾರೆ ಇದೇ ಕಾರಣಕ್ಕೆ ಇದಕ್ಕೆ ಪಾಂಡವರು(ಪಾಂಡ್ರವ್ವ) ಹೆಸರೂ ಬಂದಿರಬಹುದು.

ಕೆಲವು ಕಡೆ ದೀಪಾವಳಿಯ ಸಂದರ್ಭದಲ್ಲಿ ಹಿರಿಯರನ್ನು ಗೌರವಿಸುವುದುಂಟು ಆದ್ದರಿಂದ ಪಂಚರನ್ನು ಪೂಜಿಸುವುದರ ಸಲುವಾಗಿ ಸಗಣಿಯಿಂದ ಮೂರ್ತಿಗಳನ್ನು ಮಾಡಿ ದೀಪಾವಳಿಯ ಸಂದರ್ಭದಲ್ಲಿ ಅವರನ್ನು ಗೌರವಿಸಲಾಗುತ್ತದೆ.

ಇಂತಹ ಇತಿಹಾಸವಿರುವ ಪಾಂಡವರು(ಪಾಂಡ್ರವ್ವ)ಗಳು ಆಧುನಿಕತೆಗೆ ತಕ್ಕಂತೆ ಮಾಯವಾಗುತ್ತಿದ್ದು, ಇದರ ಆಚರಣೆ ಪ್ರದೇಶದಿಂದ ಪ್ರದೇಶಕ್ಕೆ ಬಿನ್ನವಾಗಿರುವುದು ವಿಶೇಷ. ಅಲ್ಲದೇ ಇಂತಹ ವಿಶೇಷತೆಗಳು ನಮಗೆ ಹೆಚ್ಚಾಗಿ ಕಂಡು ಬರುವುದು ಗ್ರಾಮೀಣ ಪ್ರದೇಶದ ಸಾಂಪ್ರದಾಯಸ್ತ ಕುಟುಂಬಗಳಲ್ಲಿ ಮಾತ್ರ. ಇಂತಹ ಹಬ್ಬಗಳನ್ನು ಸಂಪ್ರದಾಯಬದ್ಧವಾಗಿ ಆಚರಣೆ ಮಾಡಿದರೆ ಮಾತ್ರ ನಮ್ಮ ಸಂಸ್ಕೃತಿ ಉಳಿಯಲು ಸಾಧ್ಯ. ಇಂತಹ ಸಂಸ್ಕೃತಿಯ ಉಳಿವಿಗಾದರೂ ನಾವು ಹಬ್ಬಗಳ ಆಚರಣೆ ಮಾಡಲೇಬೇಕು.

‘ಇದು ಪ್ರಜೆಗಳು ಪಾಂಡವರಿಗೆ ಆಶ್ರಯ ಕೊಡುವಂತಹ ಆಚರಣೆಯಾಗಿದೆ. ಜನರು ಮೂಢನಂಬಿಕೆಗಳನ್ನು ಕೈಬಿಡಬೇಕು. ಆದರೆ ಮೂಲ ನಂಬಿಕೆಗಳನ್ನಲ್ಲ. ಏಕೆಂದರೆ ಅವು ನಮ್ಮ ಪರಂಪರೆ ಹಾಗೂ ಸಂಸ್ಕೃತಿಗೆ ಸಾಕ್ಷಿಯಾಗಿವೆ. ಮೂಲ ನಂಬಿಕೆಗಳಲ್ಲಿ ಅನೇಕ ಬಗೆಯ ಐತಿಹ್ಯಗಳು ಹುದುಗಿವೆ. ಈ ಐತಿಹ್ಯಗಳೇ ನಮ್ಮ ಇತಿಹಾಸವನ್ನು ಕಟ್ಟಿಕೊಡಲು ಸಹಾಯ ಮಾಡುವ ಅಂಶಗಳಾಗಿವೆ. ಇಂತಹ ಹಬ್ಬ ಪಾರಂಪಾರಿಕ ಆಚರಣೆಯಲ್ಲಿ ಅನೇಕ ಅರ್ಥಗಳು ಹುದುಗಿವೆ’– ಸಿದ್ಧರಾಜ ಪೂಜಾರಿ, ಹಿರಿಯ ಸಾಹಿತಿಗಳು, ವಿಮರ್ಶಕರು, ರಬಕವಿ-ಬನಹಟ್ಟಿ

-ಕಿರಣ ಶ್ರೀಶೈಲ ಆಳಗಿ 

Advertisement

Udayavani is now on Telegram. Click here to join our channel and stay updated with the latest news.

Next