Advertisement

ಕನ್ನಡ ಪತ್ರಿಕೆ ನಡೆಸಿದ್ದ ತಿಲಕ್‌ ಮರಿಮಗ ದೀಪಕ್‌

07:20 AM Sep 03, 2017 | |

ಬಾಲಗಂಗಾಧರ ತಿಲಕ್‌ 1920ರಲ್ಲಿ ನಿಧನ ಹೊಂದಿದ ಬಳಿಕ ಅವರನ್ನು ಗುರುಗಳೆಂದು ಪರಿಗಣಿಸಿದ ಗಾಂಧೀಜಿಯವರ ಸೂಚನೆಯಂತೆ ಆರಂಭಗೊಂಡ ತಿಲಕ್‌ ಮಹಾರಾಷ್ಟ್ರ ವಿದ್ಯಾಪೀಠ ವಿ.ವಿ. ಕುಲಪತಿ ಡಾ| ದೀಪಕ್‌ ಜೆ. ತಿಲಕ್‌ ಅವರು ಬಾಲಗಂಗಾಧರ ತಿಲಕರ ಮರಿಮಗ. ಇವರು ಕನ್ನಡಿಗರು ಹೆಚ್ಚಿಗೆ ಇರುವ ಮಹಾರಾಷ್ಟ್ರದ ಶೋಲಾಪುರದಲ್ಲಿ “ಕೇಸರಿ ಘರ್ಜನೆ’ ಎಂಬ ಕನ್ನಡ ದಿನ ಪತ್ರಿಕೆಯನ್ನು 1992ರಲ್ಲಿ ಆರಂಭಿಸಿದ್ದರು. ಕಲಬುರಗಿಯಲ್ಲಿ ಪ್ರಕಾಶನವಾಗುತ್ತಿದ್ದ ಪತ್ರಿಕೆ ಶೋಲಾಪುರದಲ್ಲಿ ಮುದ್ರಣಗೊಳ್ಳುತ್ತಿತ್ತು. ಮೂರು ವರ್ಷ ಈ ಪತ್ರಿಕೆ ನಡೆದಿತ್ತು. ಸುಮಾರು 15,000 ಪ್ರತಿ ಮುದ್ರಣಗೊಳ್ಳುತ್ತಿತ್ತು. ಹಣಕಾಸು ಮುಗ್ಗಟ್ಟಿನಿಂದ ಮುನ್ನಡೆಸಲಾಗಲಿಲ್ಲ.  

Advertisement

– ಬಾಲಗಂಗಾಧರ ತಿಲಕರು ಎಲ್ಲಿ, ಏಕೆ, ಯಾವಾಗ ಗಣೇಶೋತ್ಸವವನ್ನು ಆರಂಭಿಸಿದರು?  
ಉ: 1893ರಲ್ಲಿ ತಿಲಕರು ಪುಣೆಯ ಎರಡು ಮೂರು ಕಡೆಗಳಲ್ಲಿ ಪ್ರಥಮ ಗಣೇಶೋತ್ಸವ ಆರಂಭಿಸಿದರು. ಈಗ 125ನೆಯ ವರ್ಷ. ಅದಕ್ಕೂ ಹಿಂದೆ ಪೇಶ್ವೆಯವರು ಗಣೇಶನ ಹಬ್ಬವನ್ನು ನಡೆಸುತ್ತಿದ್ದರು. ಸ್ವರಾಜ್ಯ, ಸ್ವಾತಂತ್ರ್ಯ ಅವರ ಮುಖ್ಯ ಉದ್ದೇಶವಾಗಿತ್ತು. ಎಲ್ಲ ಜಾತಿಯವರೂ ಒಂದಾಗಿ ಧಾರ್ಮಿಕ ಚಟುವಟಿಕೆಗಳನ್ನು ನಡೆಸಲು ಹತ್ತು ದಿನಗಳ ಗಣೇಶೋತ್ಸವವನ್ನು ಆರಂಭಿಸಿದರು. ಕೆಲವೇ ವರ್ಷಗಳಲ್ಲಿ ಮುಂಬೈಗೆ ವಿಸ್ತರಣೆಯಾಗಿ ಬಳಿಕ ಇದು ಮಧ್ಯಪ್ರದೇಶ, ಉತ್ತರಪ್ರದೇಶ, ಕೋಲ್ಕತ್ತಗಳಲ್ಲಿ ಆರಂಭವಾಯಿತು. ಭಜನೆ, ಕೀರ್ತನೆ, ಮೇಳವನ್ನು ಸ್ವರಾಜ್ಯದ ದೃಷ್ಟಿಯಲ್ಲಿ ನಡೆಸುತ್ತಿದ್ದರು. ತಿಲಕರು ಗಣೇಶೋತ್ಸವದಲ್ಲಿಯೂ ಸ್ವರಾಜ್ಯ ಕಲ್ಪನೆಯನ್ನು ಜಾರಿಗೊಳಿಸಿದರು. ಈಗ ಪುಣೆಯಲ್ಲಿ ಅನಂತ ಚತುರ್ದಶಿಯಂದು ವಿಸರ್ಜನೆ ದಿನ 400-500 ಗಣಪತಿ ವಿಗ್ರಹಗಳ ಮೆರವಣಿಗೆ ಒಂದೇ ರಸ್ತೆಯಲ್ಲಿ ಹೋಗುತ್ತವೆ. 

– ತಿಲಕರ ಸ್ವಾತಂತ್ರ್ಯ, ಸ್ವರಾಜ್ಯ, ಸ್ವದೇಶೀ ನೀತಿಯನ್ನು ವಿವರಿಸುತ್ತೀರಾ?
ಉ: 1905ರಲ್ಲಿ ಕೋಲ್ಕತ್ತ ಕಾಂಗ್ರೆಸ್‌ ಅಧಿವೇಶನದಲ್ಲಿ ಸ್ವರಾಜ್ಯ, ಸ್ವದೇಶೀ ನೀತಿ, ರಾಷ್ಟ್ರೀಯ ಶಿಕ್ಷಣ ಇತ್ಯಾದಿ ವಿಷಯಗಳಲ್ಲಿ ನವೀನ ಕಾಂಗ್ರೆಸ್‌ನವರು ಬೆಂಬಲ ಕೊಟ್ಟಿರಲಿಲ್ಲ. ನಮ್ಮ ಕೈಗಾರಿಕೆಗಳು ಬದುಕಬೇಕಾದರೆ ಸ್ವದೇಶೀ ನೀತಿ ಅಗತ್ಯ. ಇದು ಅಹಿಂಸಾ ಅಸ್ತ್ರ ಎಂದು ತಿಲಕರು ಪ್ರತಿಪಾದಿಸಿದರು. ಕೊನೆಗೆ ನಿರ್ಣಯ ಅಂಗೀಕಾರವಾಯಿತು. ಇದರಿಂದ ಶೇ.80 ಬ್ರಿಟಿಷ್‌ ಸಾಮಗ್ರಿಗಳ ವ್ಯಾಪಾರ ಕುಸಿತವಾಯಿತು. ಮೆಂಚೆಸ್ಟರ್‌ ಮಿಲ್ಲುಗಳು ಬಾಗಿಲು ಹಾಕಿದವು. ಬ್ರಿಟಿಷ್‌ ಸಂಸತ್ತಿನಲ್ಲಿ ಚರ್ಚೆ ಆಯಿತು. 1906ರಲ್ಲಿ ಸೂರತ್‌ ಕಾಂಗ್ರೆಸ್‌ ಅಧಿವೇಶನದಲ್ಲಿ ಕಾಂಗ್ರೆಸ್‌ ವಿಭಜನೆಯಾಯಿತು. 1908ರಲ್ಲಿ “ಕೇಸರಿ’ ಪತ್ರಿಕೆಯ ಲೇಖನಕ್ಕಾಗಿ ಬರ್ಮಾದ ಮಂಡಾಲೆ ಜೈಲಿನಲ್ಲಿ 1914ರವರೆಗೆ ಆರು ವರ್ಷ ಶಿಕ್ಷೆ ವಿಧಿಸಿದರು. ಆಗ ಆರೋಗ್ಯವೂ ಕುಂಠಿತವಾದ ಕಾರಣ ತಣ್ತೀಜ್ಞಾನ, ವೇದಾಂತದಲ್ಲಿ ಆಸಕ್ತಿ ಕುದುರಿ ಹೋಗುತ್ತಾರೆಂದು ಬ್ರಿಟಿಷರು ಭಾವಿಸಿದ್ದರು. 1915ರಲ್ಲಿ ಹೋಮ್‌ರೂಲ್‌ ಚಳವಳಿ ಆರಂಭಗೊಂಡಾಗ ಬೆಳಗಾವಿ ಸಹಿತ ದೇಶಾದ್ಯಂತ ಸಂಚರಿಸಿದರು. 1916ರಲ್ಲಿ ಲಖನೌ ಅಧಿವೇಶನದಲ್ಲಿ ತಿಲಕರ ಮಾರ್ಗದರ್ಶನದಲ್ಲಿ ಮುಸ್ಲಿಂ ಲೀಗ್‌, ಹಿಂದೂಮಹಾಸಭಾ, ಕಾಂಗ್ರೆಸ್‌ ಎಲ್ಲರೂ ಒಟ್ಟಾಗಿ ಸ್ವರಾಜ್ಯವನ್ನು ಪ್ರತಿಪಾದಿಸಿದರು. ಆಗಲೇ ತಿಲಕರು “ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು’ ಎಂದು ಘೋಷಿಸಿದ್ದು. 

– ಗಣೇಶೋತ್ಸವದಂತೆ ಶಿವಾಜಿ ಜಯಂತಿ ಆರಂಭಿಸಿದ ಬಗೆ..
ಶಿವಾಜಿ ರೀತಿಯಲ್ಲಿ ಹೋರಾಟದ ಕೆಚ್ಚೆದೆ ಮೂಡಬೇಕೆಂದು ಅದನ್ನು ಆರಂಭಿಸಿದರು. ಶಿವಾಜಿ ಯಾರೆಂದೇ ಗೊತ್ತಿಲ್ಲದ ಕೋಲ್ಕತ್ತದಲ್ಲಿಯೂ ಶಿವಜಯಂತಿ, ಅಲ್ಲಿ ನಡೆಯುತ್ತಿದ್ದ ನವರಾತ್ರಿ ರೀತಿ ಜನಪ್ರಿಯಗೊಂಡಿತು. ಈಗ ಅದು ರಾಜಕೀಯಗೊಂಡು ಶಿವಸೇನೆಯವರೊಂದು ದಿನ, ಸರಕಾರದವರೊಂದು ದಿನ ಮಾಡುತ್ತಿದ್ದಾರೆ. ತಿಲಕರು ಆರಂಭಿಸಿದ ದಿನವನ್ನೇ ಸರಕಾರದವರು ಅಂಗೀಕರಿಸಿದ್ದಾರೆ. 

-“ಕೇಸರಿ’ ಪತ್ರಿಕೆಯಲ್ಲಿ ನೀವು ಸಂಪಾದಕರಾಗಿ ಸೇವೆ ಸಲ್ಲಿಸಿದ್ದೀರಿ. ಇದರ ವಿಕಾಸ ಹೇಗಿದೆ?
ಉ: ಪಶ್ಚಿಮ ಮಹಾರಾಷ್ಟ್ರದಲ್ಲಿ ಇದರ ಪ್ರಸರಣವಿದೆ. 1981ರ ಬಳಿಕ ಮಾಧ್ಯಮ ಕ್ಷೇತ್ರದಲ್ಲಿ ಸ್ಪರ್ಧೆಗಳು ಆರಂಭವಾಗಿದೆ. ಆಗಲೇ ತಿಲಕರು ಜಾಗವನ್ನು ಖರೀದಿಸಿ ಅರ್ಧ ಟ್ರಸ್ಟ್‌ಗೆ ಕೊಟ್ಟರು. ಇದರಲ್ಲಿ ಪತ್ರಿಕೆ ಆರಂಭಿಸಿ ಉಳಿದ ಅರ್ಧದಲ್ಲಿ ತಾವಿದ್ದರು. ಟ್ರಸ್ಟ್‌ಗೆ ತನ್ನದೇ ಮಿತಿಗಳಿರುತ್ತವೆ. ಇದೇ ಸ್ಥಳದಲ್ಲಿ ಮ್ಯೂಸಿಯಂ ಮಾಡಿದ್ದೇವೆ. ಈಗಿನ ಮಾಧ್ಯಮ ಸ್ಪರ್ಧೆಯನ್ನು ಟ್ರಸ್ಟ್‌ ಆಗಿ ಎದಿರಿಸುವುದು ಕಷ್ಟ. ನಾನು ಶೋಲಾಪುರ, ಅಮ್ಮನಗರ್‌, ಸಾಂಗ್ಲಿಯಲ್ಲಿ ಆವೃತ್ತಿಯನ್ನು ಆರಂಭಿಸಿದೆ. ಎರಡು ಕಡೆ ನಿಂತು ಹೋಯಿತು. ಪುಣೆ, ಸಾಂಗ್ಲಿಯಲ್ಲಿ  ಚೆನ್ನಾಗಿಯೇ ನಡೆಯುತ್ತಿದೆ. ಶೋಲಾಪುರದಲ್ಲಿ 1992ರಲ್ಲಿ “ಕೇಸರಿ ಘರ್ಜನೆ’ ಎಂಬ ಕನ್ನಡ ಪತ್ರಿಕೆ ಆರಂಭಿಸಿದೆ.
ಅದು ಡಿಟಿಪಿ ಅಳವಡಿಸಿದ ಮೊದಲ ಪತ್ರಿಕೆ ಆಗಿತ್ತು. ಕ್ರಮೇಣ ಬಿಜಾಪುರ, ಕಲಬು ರಗಿಯಲ್ಲಿ ಆವೃತ್ತಿ ಮಾಡಬಹುದೆಂಬ ಕಲ್ಪನೆ ಇತ್ತು. ಆದರೆ ನಷ್ಟ ಉಂಟಾಗಿ ಮೂರು ವರ್ಷಗಳಲ್ಲಿ ನಿಲ್ಲಿಸಬೇಕಾಯಿತು. 

Advertisement

– ತಿಲಕರ ಪರಂಪರೆ ಬಗೆಗೆ…
ಉ: ನಮ್ಮದು ಸಣ್ಣ ಕುಟುಂಬ. ಬಾಲ ಗಂಗಾಧರ ತಿಲಕರ ತಂದೆ ಹೆಸರು ಗಂಗಾಧರ. ಇವರ ಮೂಲ ಹೆಸರು ಕೇಶವ. ಜನರು ಚಿಕ್ಕವ ಎಂಬ ಅರ್ಥದಲ್ಲಿ ಬಾಲ ಎಂದು ಕರೆದಂತೆ, ಇದೇ ಹೆಸರು ಖಾಯಂ ಆಯಿತು. ಗಂಗಾಧರರು ಶಾಲಾ ಇನ್ಸ್‌ ಪೆಕ್ಟರರಾಗಿದ್ದರು. ವರ್ಗಾವಣೆಯ ಹುದ್ದೆಯಾದ ಕಾರಣ ಪುಣೆಗೆ ಬಂದು ನೆಲೆ ನಿಂತರು. ಬಾಲ ಗಂಗಾಧರ ತಿಲಕರಿಗೆ ಮೂರು ಗಂಡು, ಮೂರು ಹೆಣ್ಣು ಮಕ್ಕಳು. ಇಬ್ಬರು ಗಂಡು ಮಕ್ಕಳಲ್ಲಿ ಒಬ್ಬರು ಕಾಯಿಲೆಯಿಂದ ಮೃತ ಹೊಂದಿದ್ದರು. ಇನ್ನೊಬ್ಬರು ರಾಮಚಂದ್ರ ಮದುವೆಯಾಗಲಿಲ್ಲ. ಮತ್ತೂಬ್ಬ ಮಗ ಶ್ರೀಧರ ತಿಲಕರಿಂದ ಪರಂಪರೆ ಮುಂದುವರಿದಿದೆ. ಇವರಿಬ್ಬರೂ ಡಾ| ಅಂಬೇಡ್ಕರ್‌ ಅವರಿಗೆ ನಿಕಟವರ್ತಿಗಳಾಗಿದ್ದರು. ಅವರಿಗೆ ಜಯಂತ ತಿಲಕ್‌ ಮತ್ತು ಶ್ರೀಕಾಂತ್‌ ತಿಲಕ್‌ ಇಬ್ಬರು ಮಕ್ಕಳು. ಜಯಂತ ತಿಲಕರಿಗೆ ನಾನೊಬ್ಬನೇ ಮಗ. ಜಯಂತರು ಗೋವಾ ವಿಮೋಚನೆಯ ಹೋರಾಟಗಾರರು. ಮಹಾರಾಷ್ಟ್ರ ವಿಧಾನ ಪರಿಷತ್ತಿನ ಸ್ಪೀಕರ್‌ ಆಗಿದ್ದರು. ಸಂಸದರೂ ಆಗಿದ್ದರು. ನನ್ನ ಮಗ ರೋಹಿತ್‌ ತಿಲಕ್‌ ನಮ್ಮ ವಿವಿಧ ಟ್ರಸ್‌ ಗಳನ್ನು ನೋಡಿಕೊಳ್ಳುತ್ತಿದ್ದಾರೆ. ರೋಹಿತ್‌ ಕಾಂಗ್ರೆಸ್‌ ಪಕ್ಷದಲ್ಲಿ ಸಕ್ರಿಯನಾಗಿದ್ದು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧಿಸಿದ್ದ. ಶ್ರೀಕಾಂತ್‌ ಕೇಸರಿ ಪತ್ರಿಕೆಯ ಪ್ರೊಡಕ್ಷನ್‌ ಮೆನೇಜರ್‌ ಆಗಿದ್ದರು. ಶ್ರೀಕಾಂತರ ಮಗ ಶೈಲೇಶ್‌ ಕೇಸರಿಯ ಪ್ರಸರಣ ವ್ಯವಸ್ಥಾಪಕರಾಗಿದ್ದಾರಲ್ಲದೆ ಬೇರೆ ಉದ್ಯಮಗಳೂ ಇವೆ. ಈತ ಬಿಜೆಪಿಯಲ್ಲಿ ಸಕ್ರಿಯ. ಶೈಲೇಶ್‌ ಪತ್ನಿ ಮುಕ್ತಾ ಪುಣೆಯ ಮೇಯರ್‌ ಆಗಿದ್ದಾರೆ. 

– ತಿಲಕರ ಹೆಸರಲ್ಲಿ, ಇತರ ಟ್ರಸ್ಟುಗಳ ಮೂಲಕ  ನಡೆಯುತ್ತಿರುವ ಸಾಮಾಜಿಕ ಚಟುವಟಿಕೆಗಳಿಗೆ ಹಣಮೂಲಎಲ್ಲಿಂದ?
ಉ: ಸಭಾಂಗಣಗಳೇ ಮೊದಲಾದ ಸ್ಥಿರಾಸ್ತಿಗಳನ್ನು ಟ್ರಸ್ಟ್‌ ಗಳು ಹೊಂದಿವೆ. ಇದರಿಂದ ಬಂದ ಹಣಕಾಸಿಂದ ಎಲ್ಲ ಟ್ರಸ್ಟ್‌ಗಳೂ ವ್ಯವಸ್ಥಿತವಾಗಿ ನಡೆಯುತ್ತಿವೆ. ಸರಕಾರದ ಅನುದಾನದಿಂದಲ್ಲ. 

– ತಿಲಕ್‌ ಮಹಾರಾಷ್ಟ್ರ ವಿದ್ಯಾಪೀಠದ ಹಿನ್ನೆಲೆ, ಬೆಳವಣಿಗೆ…
ಉ: ಬಾಲಗಂಗಾಧರ ತಿಲಕರು ನಿಧನರಾದ ಬಳಿಕ ಮಹಾತ್ಮಾ ಗಾಂಧೀಜಿಯವರು ತಿಲಕರ ಹೆಸರಿನಲ್ಲಿ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯನ್ನು ತೆರೆಯಬೇಕೆಂದು ಸಲಹೆ ನೀಡಿದಂತೆ ತಿಲಕ್‌ ಮಹಾರಾಷ್ಟ್ರ ವಿದ್ಯಾಪೀಠ ಆರಂಭವಾಯಿತು. ಮುಖ್ಯವಾಗಿ ಸಮಾಜ ವಿಜ್ಞಾನ, ಆಯುರ್ವೇದ, ವೇದದ ಕುರಿತು ಆರಂಭಗೊಂಡ ವಿದ್ಯಾಸಂಸ್ಥೆ ಈಗ ಡೀಮ್ಡ್ ವಿ.ವಿ.ಯಾಗಿ ನರ್ಸಿಂಗ್‌, ದೂರ ಶಿಕ್ಷಣ, ಬಿಎಡ್‌, ಎಂಎಡ್‌, ಬಿಎಸ್ಸಿ, ಡಿಪ್ಲೊಮಾ ಎಂಜಿನಿಯರಿಂಗ್‌, ಎಲ್‌ಎಲ್‌ಬಿ ಕೋರ್ಸುಗಳನ್ನು ಜಾರಿಗೊಳಿಸಿದೆ. ಈಗ 16,000 ವಿದ್ಯಾರ್ಥಿಗಳಿದ್ದಾರೆ. ಚರಕನ ಎಲ್ಲ ಗ್ರಂಥಗಳನ್ನು ಡಿಜಿಟಲ್‌ ಸಾಫ್ಟ್ವೇರ್‌ನಲ್ಲಿ ಸಂಗ್ರಹಿಸಿದ್ದೇವೆ. ಹೆಸರಾಂತ ರಾಜಕಾರಣಿಗಳಾದ ವೈ.ಬಿ.ಚವಾಣ್‌, ಎಸ್‌. ಬಿ.ಚವಾಣ್‌, ಶಿವರಾಜ ಪಾಟೀಲ್‌, ಸುಶೀಲ್‌ಕುಮಾರ್‌ ಶಿಂಧೆ ಮೊದಲಾದವರು ಕುಲಾಧಿಪತಿಗಳಾಗಿ ಸೇವೆ ಸಲ್ಲಿಸಿದ್ದಾರೆ. ನಾನು ಕುಲಪತಿಯಾಗಿದ್ದೇನೆ. ಈ ಸಂಸ್ಥೆಗಿಂತಲೂ ವೇದದ ಬಗೆಗೆ ಹೆಚ್ಚು ಸಂಶೋಧನೆ ನಡೆಸುತ್ತಿರುವ ವೇದ ಶಾಸ್ತ್ರೋಕ್ತ ತೇಜಸ್ಸಭಾದ ಅಧ್ಯಕ್ಷನಾಗಿಯೂ ಇದ್ದೇನೆ. ಇದರಲ್ಲಿ ಲಿಪಿಯಲ್ಲದೆ ಮಂತ್ರ ಉಚ್ಚಾರಣೆಯ ದಾಖಲೀಕರಣಗೊಳಿಸಿದ್ದೇವೆ. ಪ್ರತಿವರ್ಷ 400-500 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತುಕೊಳ್ಳುತ್ತಾರೆ. 

– ತಿಲಕರ ವ್ಯಕ್ತಿತ್ವವನ್ನು ನೀವು ಹೇಗೆ ಬಣ್ಣಿಸುತ್ತೀರಿ?
ಉ: ತಿಲಕರು ಏನೇ ಮಾಡ ಹೊರಟರೂ ಯೋಜನಾಬದ್ಧ ವಾಗಿರುತ್ತಿತ್ತು. ಮೂಲತಃ ಅವರು ಒಬ್ಬ ಸಂಶೋಧಕರು. ವೇದಗಳು ಸುಮಾರು 4,000 ವರ್ಷಗಳಷ್ಟು ಹಿಂದಿನವು, ಗ್ರಹ, ನಕ್ಷತ್ರಗಳ ವಿಷಯಗಳು ವೇದಗಳಲ್ಲಿ ಇವೆ ಎಂಬುದನ್ನು ಸಂಶೋಧನೆಯಿಂದ ತಾರ್ಕಿಕವಾಗಿ, ಸಂಶೋಧನೆಯಿಂದ ಅವರು ಪ್ರತಿಪಾದಿಸಿದ್ದರು. ಎಲ್ಲರನ್ನೂ ಸೇರಿಸಿಕೊಂಡು ಯೋಜನೆಗಳನ್ನು ರೂಪಿಸುತ್ತಿದ್ದರು. ಅವರು ಆ ಕಾಲದಲ್ಲಿ ಬ್ರಿಟಿಷರು ನಡೆಸುತ್ತಿದ್ದ ಭಾರತೀಯ ರೂಪಾಯಿ ಅಪಮೌ ಲ್ಯದ ಬಗೆಗೆ ಎಚ್ಚರಿಸಿದ್ದರು. ಸ್ವದೇಶೀ ಕಲ್ಪನೆ ಅವರಿಗೆ ಇದ್ದದ್ದು, ಅದಕ್ಕೆ ಕ್ರಿಯಾಯೋಜನೆ ರೂಪಿಸಿದ್ದನ್ನು ಈಗಾಗಲೇ ವಿವರಿಸಿದ್ದೇನೆ. ಆ ಕಾಲದ ಭಾರತದ ನಾಯಕರು ಬ್ರಿಟಿಷ್‌ ಸರಕಾರಕ್ಕೆ ಪತ್ರದ ಮೂಲಕ ಆಕ್ಷೇಪಣೆಗಳನ್ನು ಸಲ್ಲಿಸುತ್ತಿದ್ದರೆ ತಿಲಕರು ಸಾಮಾನ್ಯ ಭಾಷೆಯಲ್ಲಿ ಅದನ್ನು ಜನರಿಗೆ ಪತ್ರಿಕೆಗಳ ಮೂಲಕ ತಿಳಿಸಿ ಜನಜಾಗೃತಿ ರೂಪಿಸುತ್ತಿದ್ದರು. “ಕೇಸರಿ’ ಎನ್ನುವುದು ಮರಾಠಿ ಪತ್ರಿಕೆಯಾದರೂ ಅದರಲ್ಲಿ ತಿಲಕರು ಬರೆಯುತ್ತಿದ್ದ ಲೇಖನಗಳು ಮಧ್ಯಪ್ರದೇಶದ ಯಾರೋ ನಡೆಸುತ್ತಿದ್ದ “ಕೇಸರಿ” ಹಿಂದಿ ಪತ್ರಿಕೆಯಲ್ಲಿ, ಕೇರಳದ “ಮಲ ಯಾಳ ಮನೋರಮಾ’ದಲ್ಲಿ ಭಾಷಾಂತರವಾಗಿ ಪ್ರಕಟವಾಗು ತ್ತಿತ್ತು.  ಎಲ್ಲರೂ ಸನ್ಯಾಸ ಸ್ವೀಕರಿಸಲು ಸಾಧ್ಯವಿಲ್ಲ. ಎಲ್ಲರೂ ಕರ್ಮ ಮಾಡಲೇಬೇಕು. ಅದನ್ನೇ ಫ‌ಲಾಪೇಕ್ಷೆ ಇಲ್ಲದೆ ನಿಷ್ಕಾಮವಾಗಿ ಮಾಡಿದರೆ ಸಾಮಾನ್ಯ ಜನರಿಗೂ ಮೋಕ್ಷ ಸಾಧ್ಯ ಎಂದು ಪ್ರತಿಪಾದಿಸಿದ್ದು ಅರವಿಂದ ಘೋಷ್‌ ಮೊದಲಾದ ವರ ಮೇಲೆ ಪರಿಣಾಮ ಬೀರಿದೆ. ಧಾರ್ಮಿಕ ಮುಖಂಡರು ಸನ್ಯಾಸವನ್ನು ಸ್ವೀಕರಿಸಿದ್ದರೂ ಧ್ಯಾನಸ್ಥರಾಗಿ ಉಳಿಯದೆ ಮಠ ಸಂಸ್ಥಾಪನೆಗಳನ್ನು ನಿಷ್ಕಾಮ ಕರ್ಮಯೋಗದ ಆಧಾರದಲ್ಲಿಯೇ ಸ್ಥಾಪಿಸಿದರು ಎಂಬುದನ್ನು ತಿಲಕ್‌ ಪ್ರತಿಪಾದಿಸುತ್ತಿದ್ದರು.

ಸಂದರ್ಶನ: ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next