Advertisement

ಬೆಳಕಿನ ಹಬ್ಬದಲ್ಲಿ ಕೌಟುಂಬಿಕ ಬಾಂಧವ್ಯದ ಸೊಗಡು

12:07 PM Nov 16, 2020 | keerthan |

ಅದೆಷ್ಟು ಬೇಗ ದೀಪಾವಳಿ ಬಂತು ಗೊತ್ತೆ ಆಗ್ಲಿಲ್ಲ.ಅದೇ ಈ ಕೋವಿಡ್ ಹಾವಳಿಯಲ್ಲಿ ದಿನಗಳು ಕಳೆದು ಹೋಗ್ತಿರೋದೆ ಗೊತ್ತಾಗ್ಲಿಲ್ಲ ಅಲ್ವಾ? ಲಕ್ಷಾಂತರ ಜನರು ತಮ್ಮ ಪ್ರಾಣ ಕಳೆದುಕೊಂಡರು. ಸಾವಿರಾರು ಮನೆಗಳಲ್ಲಿ ದುಃಖ, ನೋವು,ಅಶಾಂತಿ ಆವರಿಸಿದ್ದಂತೂ ಸತ್ಯ. ಅಪ್ಪ, ಅಮ್ಮ, ತಮ್ಮ, ಅಣ್ಣ, ಮಗ, ಮಗಳು, ಅಜ್ಜ, ಅಜ್ಜಿ ಹೀಗೇ ಅದೆಷ್ಟೋ ಸಂಬಂಧಗಳ ಕಿತ್ತುಕೊಂಡಿದೆ ಈ ಸೋಂಕು. ಮನೆ ಮನೆಯಲ್ಲೂ ಕತ್ತಲು ಆವರಿಸಿದರೆ, ಮನಸ್ಸಿನಲ್ಲಿ ನೋವಿನ ತಮಸ್ಸು ತುಂಬಿದೆ. ಎನೇ ಆದರೂ ಎಲ್ಲದಕ್ಕಿಂತಲೂ ‘ಬದುಕು’ ದೊಡ್ಡದು

Advertisement

ಆದರೂ ಕಷ್ಟಗಳನ್ನು ನುಂಗಲೇಬೇಕು, ನೋವುಗಳ ಮರೆಯಲೇಬೇಕು, ಮತ್ತೆ ಮನೆಯಲ್ಲಿ ದೀಪ ಬೆಳಗಲೇಬೇಕು. ಸೋತು ಕೂತರೆ ನಡೆಯದು ಬದುಕು. ಕುಗ್ಗಿದರೆ ಮುನ್ನಡೆಯದು ಜಟಕಾ ಬಂಡಿ. ಸಾವುಗಳು ವಿಧಿ ಲಿಖಿತವಾದರೂ, ಇರುವ ಜೀವವನ್ನು ಕಾಯ್ದುಕೊಳ್ಳಲು ಹೋರಾಡಲೇ ಬೇಕು. ನಮ್ಮ ಆರೋಗ್ಯ ವನ್ನು ರಕ್ಷಿಸಿಕೊಳ್ಳುವುದರ ಜೊತೆಗೆ ಇತರರಿಗೂ ಯಾವ ರೋಗ ಹರಡದಂತೆ ಮುಂಜಾಗ್ರತೆ ವಹಿಸುವುದು ಅತ್ಯವಶ್ಯಕ.

ಇದು ದೀಪಾವಳಿ ಹಬ್ಬ. ದೀಪಗಳ ಹಬ್ಬ. ಬೆಳಕಿನ ಹೊಳೆಯ ಹಬ್ಬ. ಹಣತೆಯಲ್ಲಿ ಬತ್ತಿಯ ಹೊಸೆದು ಎಣ್ಣೆಯಲಿ ಜ್ಯೋತಿಯ ಹಚ್ಚಿ ಕಣ್ಣುಗಳಲ್ಲಿ ಆ ಬೆಳಕು ತುಂಬಿಸಿ ಮನದ ಕತ್ತಲೆಯ ಅಳಿಸುವ ಹಬ್ಬ. ಬೆಳಕಿನಲಿ ಹೊಸ ಕನಸ ಕಾಣುವ ಭರವಸೆಯ ಹಬ್ಬ‌. ಮನೆಯ ಮುಂದಿನ ಬಣ್ಣ ಬಣ್ಣದ ರಂಗೋಲಿಯಲ್ಲಿ ಚಿತ್ತಾರದ ಹೂರಣ. ಹೊಸ ವಸ್ತ್ರ, ಲಕ್ಷ್ಮೀ ಪೂಜೆ, ಹೊಸ ಖರೀದಿ ಒಂದು ಸಡಗರ.

ದೀಪಾವಳಿ ಆಚರಣೆ ಬಂದುದು ಹೇಗೆ?

ಹಿಂದೂ, ಸಿಖ್ಖರು, ಜೈನರ ಧರ್ಮದಲ್ಲಿ ವಿವಿಧ ವಿಶೇಷತೆಗಳಿಂದ ಆಚರಿಸುತ್ತಾರೆ.

Advertisement

ಹಿಂದೂ ಧರ್ಮ: ಶ್ರೀ ರಾಮನು ರಾವಣನನ್ನು ಗೆದ್ದು ಸೀತೆ ಮತ್ತು ಲಕ್ಷ್ಮಣರೊಂದಿಗೆ ಅಯೋಧ್ಯೆಗೆ ಮರಳಿದ ಸಮಯವೆಂದು ದೀಪಾವಳಿಯನ್ನು ಕೆಲವರು ಆಚರಿಸುತ್ತಾರೆ, ಅಮಾವಾಸ್ಯೆಯ ಹಿಂದಿನ ದಿನ (ನರಕ ಚತುರ್ದಶಿ) ಶ್ರೀಕೃಷ್ಣ ನರಕಾಸುರನನ್ನು ಸಂಹರಿಸಿದ ದಿನ ಎಂದು ಹೇಳಲಾಗುತ್ತದೆ.

ಭಾರತದಲ್ಲಿ ಸಾಂಪ್ರದಾಯಿಕವಾಗಿ ಪಂಚಾಂಗ ಚಾಂದ್ರಮಾನವನ್ನು ಅವಲಂಬಿಸಿವೆ. ಅಂದರೆ ಆಶ್ವಯುಜ ಮಾಸಕೃಷ್ಣಪಕ್ಷದ ಚತುರ್ದಶಿ, ಅಮಾವಾಸ್ಯೆ ಹಾಗೂ ಕಾರ್ತಿಕ ಮಾಸ ಶುಕ್ಲ ಪಕ್ಷದ ಪಾಡ್ಯ – ಈ ದಿನಗಳಲ್ಲಿ ದೀಪಾವಳಿಯನ್ನು ಆಚರಿಸಲಾಗುತ್ತಿದೆ. ಬಲಿ-ವಾಮನರ ಕಥೆ ಮತ್ತು ಬಲಿಯ ತ್ಯಾಗವನ್ನು ಅಮಾವಾಸ್ಯೆಯ ಮರುದಿನ ಬಲಿಪಾಡ್ಯಮಿಯಾಗಿ ಆಚರಿಸಲಾಗುತ್ತದೆ.

ದಕ್ಷಿಣ ಭಾರತದಲ್ಲಿ ಸಾಮಾನ್ಯವಾಗಿ ಮೂರು ದಿನಗಳ ಆಚರಣೆ ನಡೆಯುತ್ತದೆ. ದಕ್ಷಿಣ ಭಾರತದಲ್ಲಿ ನರಕ ಚತುರ್ದಶಿ ಪ್ರಮುಖವಾದರೆ, ಉತ್ತರ ಭಾರತದಲ್ಲಿ ಅಮಾವಾಸ್ಯೆಯಂದು ಆಚರಿಸಲಾಗುವ ಲಕ್ಷ್ಮಿ ಪೂಜೆ ಮುಖ್ಯವಾದದ್ದು.

ಸಿಖ್ ಧರ್ಮ: ಸಿಖ್ಖರ ಧರ್ಮದಲ್ಲಿಯೂ ದೀಪಾವಳಿಯು ವಿಶೇಷ ಹಬ್ಬ. 1620 ರಲ್ಲಿ ಸಿಕ್ಖರ ಆರನೆಯ ಗುರು ಹರಗೋಬಿಂದ್ ಸಿಂಗ್ ಗ್ವಾಲಿಯರ್‌ನ ಕೋಟೆಯಲ್ಲಿ ಬಂಧಿತರಾಗಿದ್ದ 52 ರಾಜರನ್ನು ಬಿಡಿಸಿ ತಂದ ದಿನವೆಂದು ಈ ಕಾಲವನ್ನು ಆಚರಿಸಲಾಗುತ್ತದೆ.

ಜೈನ್ ಧರ್ಮ: ದೀಪಾವಳಿಯು ಜೈನ ಧರ್ಮದಲ್ಲಿ ಕಡೆಯ ತೀರ್ಥಂಕರ ಮಹಾವೀರರು ಕಾರ್ತಿಕ ಚತುರ್ದಶಿಯಂದು (ಕ್ರಿ.ಪೂ 567 ಅಕ್ಟೋಬರ್ 15) ಪಾವಾಪುರಿಯಲ್ಲಿ ಮೋಕ್ಷ ಹೊಂದಿದ ದಿನವಾಗಿ ಆಚರಿಸುತ್ತಾರೆ.

ಎಲ್ಲಧರ್ಮಗಳಲ್ಲೂ ಹೊಸ ವಿಚಾರಗಳ, ಹೊಸ ಭರವಸೆಗಳ ತುಂಬುವುದೇ ಧ್ಯೇಯ.

ಮನೆಯ ಮುಂದೆ ಕಾರ್ತಿಕ ದೀಪದ ಬುಟ್ಟಿಯು ವಿಭಿನ್ನವಾಗಿರುವುದು, ಸಾಲು ಸಾಲಾಗಿ ದೀಪಗಳ ಬೆಳಗಿಸುವುದು ಕಣ್ಣಿಗೆ ಸೌಂದರ್ಯದ ದೃಶ್ಯಗಳನ್ನು ಸೃಷ್ಟಿಸುತ್ತದೆ. ಕೆಲವೊಂದು ಕಡೆ ನೀರಿನಲ್ಲು ದೀಪಗಳನ್ನು ತೇಲಿಯೂ ಬಿಡುವುದು ಪದ್ದತಿ.

ಸೂಕ್ಷ್ಮವಾಗಿ ಅವಲೋಕಿಸಿದರೆ, ಎಲ್ಲಾ ದೀಪಗಳನ್ನು ಒಂದೊಂದು ಬೆಂಕಿ ಕಡ್ಡಿಯನ್ನು ಉಪಯೋಗಿಸಿ ಹಚ್ಚುವುದಿಲ್ಲ.ಕೇವಲ ಒಂದು ಬೆಂಕಿ ಕಡ್ಡಿಯಿಂದ ಒಂದು ಹಣತೆಯ ಬೆಳಗಿ, ಅದು ಉರಿಯುವಾಗ ಸಾಲಾಗಿ ಇಟ್ಟ ಉಳಿದ ಹಣತೆಗಳನ್ನು ಒಂದರಿಂದ ಒಂದನ್ನು ಹಚ್ಚಿ ಎಲ್ಲ ದೀಪಗಳನ್ನು ಪೂರ್ಣವಾಗಿ ಬೆಳಗಿಸುವುದು ಒಂದು ಐಕ್ಯತೆಯನ್ನು, ಹಂಚಿಕೊಳ್ಳುವ ಭಾವನೆಯನ್ನು ಬಿಂಬಿಸುತ್ತದೆ. ‘ತಾನೇ ಉರಿದರೂ ದೀಪ ಮನೆಗೆ ಬೆಳಕ ಕೊಡುವುದು’ ಎನ್ನುವ ಕಸ್ತೂರಿ ನಿವಾಸ ಚಿತ್ರದ ಅವರ ಸಾಲು ಎಂದಿಗೂ ಸತ್ಯ.

ಈ ಹಬ್ಬಗಳನ್ನು ಯಾಕೆ ಆಚರಿಸಬೇಕು ಹೇಳಿ? ಪದ್ದತಿಗಳಿಗಾಗಿ? ಅಲ್ಲ.ಧರ್ಮದ ವಿಧಾನವಾಗಿ ಅಲ್ಲ. ಕರ್ತವ್ಯವಾಗಿ? ಅಲ್ಲ. ದೇವರಿಗಾಗಿ? ಅಲ್ಲ. ಬರೀ ಆಚರಣೆಗಾಗಿ? ಅಲ್ಲ. ಮತ್ತೆ ಯಾವುದಕ್ಕಾಗಿ?

ಮನುಷ್ಯನ ಪ್ರತಿದಿನವೂ, ಪ್ರತಿ ಕ್ಷಣವೂ ಎನೇನೋ ವಿಚಿತ್ರ ದಾರಿಗಳು, ಸವಾಲುಗಳು, ಅಡೆತಡೆಗಳು, ವಿಭಿನ್ನತೆಗಳನ್ನು ಎದುರಿಸುತ್ತಾನೆ. ದೈಹಿಕವಾಗಿ, ಮಾನಸಿಕವಾಗಿ, ಆಧ್ಯಾತ್ಮಿಕವಾಗಿ ಮಾನವನ ಬದುಕಿನಲ್ಲಿ ಒಂದು ಹೊಸ ಧೈರ್ಯ, ಸ್ಥೈರ್ಯ, ಆತ್ಮವಿಶ್ವಾಸ, ಚೈತನ್ಯವನ್ನು ಮತ್ತೆ ಚಿಗುರಿಸಲು, ಹೊಸ ಭರವಸೆಯ ಬಿತ್ತಲು, ಖುಷಿಯ ಹಂಚಲು, ದ್ವೇಷ ಮರೆತು ಒಬ್ಬರಿಗೊಬ್ಬರು ಮತ್ತೆ ಕೈಜೋಡಿಸಲು, ಕೂಡಿ ಬಾಳಲು, ಹೊಸ ಬದುಕ ಮತ್ತೆ ಕಟ್ಟಿ ಕೊಳ್ಳಲು, ಆಂತರಿಕ ತಮಸ್ಸನ್ನು ನಂದಿಸಿ, ಮುಗುಳ್ನಗೆಯ ಜ್ಯೋತಿ ಬೆಳಗಲು ಒಂದು ದೀಪ ಬೆಳಗುವ ಆಚರಣೆಯಿದು.

ಡಾ.ಅರ್ಚನಾ ಎನ್ ಪಾಟೀಲ

ಹಾವೇರಿ

Advertisement

Udayavani is now on Telegram. Click here to join our channel and stay updated with the latest news.

Next