Advertisement

ಪಿ.ಬಿ.ರಸ್ತೆಗಿನ್ನು ಆಕರ್ಷಕ ಕಳೆ; ಮೂಡಿದೆ ಹೊಸಬೆಳಕು

07:10 PM Jul 11, 2021 | Team Udayavani |

ಹುಬ್ಬಳ್ಳಿ: ರಾಜಧಾನಿ ಬೆಂಗಳೂರಿನಿಂದ ರಾತ್ರಿ ವೇಳೆ ಹುಬ್ಬಳ್ಳಿ ಪ್ರವೇಶಿಸುವವರಿಗೆ ಇನ್ನು ಬೆಳಕಿನ ಭವ್ಯ ಸ್ವಾಗತ ಸಿಗಲಿದೆ.

Advertisement

ಹೌದು. ಲೋಕೋಪಯೋಗಿ ಇಲಾಖೆಯ 1.25 ಕೋ.ರೂ. ಅನುದಾನದಲ್ಲಿ ಹುಬ್ಬಳ್ಳಿಯ ಗಬ್ಬೂರು ಕ್ರಾಸ್‌ನಿಂದ ಬಿಡ್ನಾಳ ಕ್ರಾಸ್‌ ವರೆಗೆ ಅಳವಡಿಸಿರುವ ಕೋನಿಕಲ್‌ ಡೆಕೋರೇಟಿವ್‌ ದೀಪಗಳು ಶನಿವಾರ ಉದ್ಘಾಟನೆಗೊಂಡಿದ್ದು, ಜಗಮಗಿಸುವ ವರ್ಣರಂಜಿತ ದೀಪಗಳಿಂದ ಪಿ.ಬಿ.ರಸ್ತೆಗೆ ಇದೀಗ ಆಕರ್ಷಕ ಮೆರಗು ದೊರೆತಂತಾಗಿದೆ. ಕತ್ತಲಿನಲ್ಲಿದ್ದ ರಸ್ತೆಗೆ “ಹೊಸ ಬೆಳಕು’ ಮೂಡಿದಂತಾಗಿದೆ.

ಹುಬ್ಬಳ್ಳಿ-ಧಾರವಾಡ ಅವಳಿ ನಗರವು ರಾಜ್ಯದಲ್ಲೇ 2ನೇ ಅತಿ ದೊಡ್ಡ ಮಹಾನಗರ ಎಂಬ ಖ್ಯಾತಿ ಹೊಂದಿದೆ. ಆದರೆ ಬೆಂಗಳೂರು, ಮಂಗಳೂರು, ಮೈಸೂರು, ದಾವಣಗೆರೆ, ಶಿವಮೊಗ್ಗ ಸೇರಿದಂತೆ ದಕ್ಷಿಣ ಕರ್ನಾಟಕ ಭಾಗದ ಇನ್ನಿತರೆ ಪ್ರದೇಶಗಳಿಂದ ಹುಬ್ಬಳ್ಳಿಗೆ ಆಗಮಿಸುವ ಪರ ಊರಿನ ಜನತೆಗಂತೂ ಹುಬ್ಬಳ್ಳಿಯಂಥ ದೊಡ್ಡ ಮಹಾನಗರಕ್ಕೆ ಬಂದ ಅನುಭವವೇ ಆಗುತ್ತಿರಲಿಲ್ಲ ಎಂಬ ಅಳಲು ಇತ್ತು. ಇಕ್ಕಟ್ಟಾದ ಮುಖ್ಯ ರಸ್ತೆ, ಆ ರಸ್ತೆಯುದ್ದಕ್ಕೂ ಗ್ಯಾರೇಜ್‌, ಟೈರ್‌, ಆಟೋಮೊಬೈಲ್‌ ಸೇರಿದಂತೆ ಇನ್ನಿತರೆ ಅಂಗಡಿಗಳು. ಆ ಅಂಗಡಿಗಳ ಮುಂದೆ ಸಾಲುಗಟ್ಟಿ ನಿಲ್ಲುತ್ತಿದ್ದ ವಾಹನಗಳಿಂದ ಗಬ್ಬೂರು ವೃತ್ತ ಮಾರ್ಗವಾಗಿ ನಗರ ಪ್ರವೇಶಿಸುವುದು ದುಸ್ಸಾಹಸವಾಗಿತ್ತಲ್ಲದೇ, ಬೇರೆ ಜಿಲ್ಲೆಗಳಿಂದ ಬರುವ ಪ್ರಯಾಣಿಕರಿಗೆ ಇದ್ಯಾವ ಸೀಮೆ ಮಹಾನಗರ ಅನ್ನುವ ರೀತಿಯಲ್ಲಿತ್ತು. ಇವೆಲ್ಲವನ್ನರಿತ ಶಾಸಕ ಪ್ರಸಾದ ಅಬ್ಬಯ್ಯ ಅವರು ತಾವು ಪ್ರಥಮ ಬಾರಿಗೆ ಶಾಸಕರಾಗಿ ಆಯ್ಕೆಯಾದ ಕೂಡಲೇ ಕ್ಷೇತ್ರಕ್ಕೆ ಏನಾದರೂ ಹೊಸತು ನೀಡಬೇಕೆಂಬ ಹಂಬಲ, ಕ್ಷೇತ್ರದ ಅಭಿವೃದ್ಧಿ ಬಗೆಗಿನ ಅತೀವ ಕಾಳಜಿ, ಸತತ ಪರಿಶ್ರಮದ ಫಲವಾಗಿ ಗಬ್ಬೂರು ಕ್ರಾಸ್‌ನಿಂದ ಚೆನ್ನಮ್ಮ ವೃತ್ತದವರೆಗೆ 44 ಕೋ.ರೂ. ವೆತ್ಛದಲ್ಲಿ ಚತುಷ್ಪಥ ರಸ್ತೆ ನಿರ್ಮಿಸಿದ್ದಾರೆ.

ಚತುಷ್ಪಥ ರಸ್ತೆ ಪೂರ್ಣಗೊಂಡ ಬಳಿಕ ಆ ರಸ್ತೆಗೆ ಹೊಸತನದ ಆಕರ್ಷಕ ಮೆರಗು ನೀಡಲು ನಿರ್ಧರಿಸಿದ ಶಾಸಕರು, ದ್ವಿತೀಯ ಬಾರಿಗೆ ಆಯ್ಕೆಯಾದ ನಂತರ ಲೋಕೋಪಯೋಗಿ ಇಲಾಖೆಯ ಒಟ್ಟು 3.25 ಕೋ.ರೂ. ಅನುದಾನದಲ್ಲಿ ಕ್ಷೇತ್ರದ ವಿವಿಧೆಡೆ ಆಕರ್ಷಕ ಕೋನಿಕಲ್‌ ಬೀದಿ ದೀಪಗಳನ್ನು ಅಳವಡಿಸಲು ನಿರ್ಧರಿಸಿದ್ದು, ಮೊದಲ ಹಂತದಲ್ಲಿ ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರದ ಹೆಬ್ಟಾಗಿಲಿನಂತಿರುವ ಗಬ್ಬೂರು ಕ್ರಾಸ್‌ನಿಂದ ಬಿಡ್ನಾಳ ಕ್ರಾಸ್‌ವರೆಗಿನ 1.6 ಕಿ.ಮೀ.ವರೆಗಿನ ಪಿ.ಬಿ.ರಸ್ತೆಯಲ್ಲಿ 1.25 ಕೋ.ರೂ. ವೆಚ್ಚದಲ್ಲಿ ಜಗಮಗಿಸುವ ಬೀದಿ ದೀಪಗಳನ್ನು ಅಳವಡಿಸಿ, ಕ್ಷೇತ್ರದ ಸೌಂದಯಿìಕರಣಕ್ಕೆ ಮುನ್ನುಡಿ ಬರೆದಿದ್ದಾರೆ.

ಒಟ್ಟು 66 ಪೋಲ್‌ ಗಳಲ್ಲಿ 132 ಬೀದಿದೀಪಗಳಿದ್ದು, ಜಗಮಗಿಸುವ ವರ್ಣರಂಜಿತ ಅಲಂಕಾರಿಕ ದೀಪಗಳಿಂದ ರಾತ್ರಿ ವೇಳೆ ಈ ರಸ್ತೆಯಲ್ಲಿ ಸಂಚರಿಸುವವರಿಗೆ ಹೊಸತನದ ಅನುಭವ ನೀಡುತ್ತಿವೆ. ಆರಂಭದಿಂದ ಕೊನೆ ಭಾಗದವರೆಗೂ ಕಾಂಕ್ರೀಟ್‌ ರಸ್ತೆಗಳಿಂದ ಕಂಗೊಳಿಸುತ್ತಿರುವ ಕ್ಷೇತ್ರ ವ್ಯಾಪ್ತಿಯ ಮಂಟೂರು ರಸ್ತೆಯಲ್ಲಿ ದ್ವಿತೀಯ ಹಂತದಲ್ಲಿ 2 ಕೋ.ರೂ. ಅನುದಾನದಲ್ಲಿ ತಬೀಬಲ್ಯಾಂಡ್‌ ಸರ್ಕಲ್‌ನಿಂದ ಹರಿಶ್ಚಂದ್ರ ಕಾಲನಿಯ ಕಿರು ಸೇತುವೆವರೆಗೆ ಕೈಗೊಂಡಿರುವ ಆಕರ್ಷಕ ಕೋನಿಕಲ್‌ ಬೀದಿ ದೀಪಗಳ ಅಳವಡಿಕೆ ಕಾರ್ಯ ಸಹ ಭರದಿಂದ ಸಾಗಿದ್ದು, ಅವು ಸಹ ಶೀಘ್ರ ಉದ್ಘಾಟನೆಗೊಳ್ಳಲಿವೆ. ಕೆಲವೇ ವರ್ಷಗಳ ಹಿಂದೆ ಕಾಲಿಡಲೂ ಆಗದಂತಿದ್ದ ಕ್ಷೇತ್ರದ ಅನೇಕ ಪ್ರದೇಶಗಳಲ್ಲೀಗ ಕಾರುಗಳು ಸಹ ಸುಗಮವಾಗಿ ಓಡಾಡುವಂತಾಗಿವೆ.

Advertisement

ಎಲ್ಲೆಡೆ ಸಿಸಿ ರಸ್ತೆ, ಗಟಾರು, ಯುಜಿಡಿ, ಆಕರ್ಷಕ ಬೀದಿ ದೀಪ, ಉದ್ಯಾನವನ, ಆಸ್ಪತ್ರೆ, ಆಂಬ್ಯುಲೆನ್ಸ್‌, ಕುಡಿಯುವ ನೀರಿನ ಸೌಲಭ್ಯ, ಅಂಗನವಾಡಿ ಕಟ್ಟಡ, ಸಮುದಾಯ ಭವನಗಳು, ಸರ್ಕಾರಿ ಶಾಲೆಗಳಿಗೆ ಸ್ಮಾರ್ಟ್‌ಕ್ಲಾಸ್‌, ಕ್ಷೇತ್ರ ವ್ಯಾಪ್ತಿಯಲ್ಲಿ ಮಿನಿ ಬಸ್‌ಗಳ ಸಂಚಾರ ಆರಂಭ ಹೀಗೆ ಅನೇಕ ಜನಪರ ಕಾರ್ಯ ಮಾಡಿರುವ ಶಾಸಕರು, ಇದೀಗ 3.25 ಕೋ.ರೂ. ಅನುದಾನದಲ್ಲಿ ಕ್ಷೇತ್ರದ ವಿವಿಧೆಡೆ ಆಕರ್ಷಕ ಬೀದಿ ದೀಪಗಳನ್ನು ಅಳವಡಿಸುವ ಮೂಲಕ ಕ್ಷೇತ್ರದ ಸೌಂದರ್ಯಿಕರಣಕ್ಕೆ ಒತ್ತು ನೀಡಿದ್ದಾರೆ. ಕ್ಷೇತ್ರದ ಹೆಬ್ಟಾಗಿಲಂತಿರುವ ಗಬ್ಬೂರು ಕ್ರಾಸ್‌ ಬಳಿಯ ಪಿ.ಬಿ ರಸ್ತೆಯ ಅಂದವನ್ನು ಕಣ್ಣು ಕುಕ್ಕುವಂತೆ ಅತ್ಯಾಕರ್ಷಗೊಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next