Advertisement

ಬೀದರ ಅತಿವೃಷ್ಟಿ ಪೀಡಿತ ಜಿಲ್ಲೆಯನ್ನಾಗಿ ಘೋಷಿಸಿ

06:30 PM Sep 16, 2021 | Team Udayavani |

ಭಾಲ್ಕಿ: ಜಿಲ್ಲೆಯಾದ್ಯಂತ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದೆ. ಮುಂಗಾರಿನಲ್ಲಿ ಬೆಳೆದ ಎಲ್ಲ ಬೆಳೆಗಳು ಜಲಾವೃತಗೊಂಡು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪೀಡಿತ ಜಿಲ್ಲೆಯನ್ನಾಗಿ ಘೋಷಿಸಿ ತ್ವರಿತವಾಗಿ ಪರಿಹಾರ ವಿತರಣೆ ಕಾರ್ಯಕ್ಕೆ ಮುಂದಾಗಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ(ಸ್ವಾಭಿಮಾನಿ ಬಣ) ಜಿಲ್ಲಾ ಯುವ ಘಟಕ ಒತ್ತಾಯ ಮಾಡಿದೆ.

Advertisement

ಈ ಕುರಿತು ಪಟ್ಟಣದ ತಹಶೀಲ್ದಾರ್‌ ಕಚೇರಿಯಲ್ಲಿ ಕರವೇ ಜಿಲ್ಲಾ ಯುವ ಘಟಕದ ಅಧ್ಯಕ್ಷ ಸಂಗಮೇಶ ಗುಮ್ಮೆ ನೇತೃತ್ವದಲ್ಲಿ ತಹಶೀಲ್ದಾರ್‌ ಮೂಲಕ ಸಿಎಂಗೆ ಮನವಿ ಸಲ್ಲಿಸಿದರು. ಜಿಲ್ಲೆಯಲ್ಲಿ ಕಳೆದ 15 ದಿನಗಳ ಅಂತರದಲ್ಲಿ ಎರಡು ಬಾರಿ ಭಾರೀ ಮಳೆಯಾಗಿ ಮುಂಗಾರು ಹಂಗಾಮಿನಲ್ಲಿ ರೈತರು ಬೆಳೆದ ಹೆಸರು, ಉದ್ದು, ಸೋಯಾ ಅವರೆ, ತೊಗರಿ, ಕಬ್ಬು ಹಾಗೂ ತೋಟಗಾರಿಕೆ ಇಲಾಖೆಯ ತರಕಾರಿ ಸೇರಿ ವಿವಿಧ ಬೆಳೆಗಳು ಫಸಲು ನೀಡುವ ಹಂತದಲ್ಲಿ ನೆಲಕಚ್ಚಿವೆ.

ಇದರಿಂದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಸಾಲ ಮಾಡಿ ಬಿತ್ತನೆ ಮಾಡಿದ ರೈತರಿಗೆ ದಿಕ್ಕು ತೋಚದಂತಾಗಿದೆ. ಜೊತೆಗೆ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ನೀರಿನ ರಭಸಕ್ಕೆ ರಸ್ತೆ, ಸೇತುವೆಗಳು ಕೊಚ್ಚಿ ಹೋಗಿವೆ. ಕೂಡಲೇ ರಾಜ್ಯ ಸರಕಾರ ಪರಿಶೀಲಿಸಿ ಬೀದರ ಅತಿವೃಷ್ಟಿ ಪೀಡಿತ ಜಿಲ್ಲೆಯೆಂದು ಘೋಷಿಸಬೇಕು. ಹಾಳಾದ ರಸ್ತೆ, ಸೇತುವೆ ದುರುಸ್ತಿಗೆ ವಿಶೇಷ ಪ್ಯಾಕೇಜ್‌ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯ ಮಾಡಲಾಗಿದೆ.

ಕರವೇ ತಾಲೂಕು ಅಧ್ಯಕ್ಷ ಸಂಜುಕುಮಾರ ನಾವದಗಿ, ಪ್ರಮುಖರಾದ ಅಭಿಷೇಕ ದಾಡಗಿ, ಸುನೀಲ ಸ್ವಾಮಿ, ರಾಜಕುಮಾರ ಡಾವರಗಾಂವೆ, ಶಿವಕುಮಾರ ಕಮಠಾಣೆ, ಕುಪೇಂದ್ರ ವಂಕೆ, ಯೋಹಾನ ಹಿರ್ಗೆ, ಸಿದ್ದು ಜಮಾದಾರ್‌, ಆದೀಲ್‌ ಸೈಯದ್‌, ಸುರೇಶ ಕಾಂಬಳೆ, ಲೋಕೇಶ ಮೊಳಕೇರೆ, ಧೂಳಪ್ಪ ಮಾಳಗೊಂಡ, ಸಂತೋಷ ಹಡಪದ, ದಿಲೀಪಕುಮಾರ್‌, ಸಿಕ್ರೇಶ ನಿಂಬುರೆ, ಸತೀಶ ಮಾಳೆಗಾಂವ ಮತ್ತು ಸುಧಾಕರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next