Advertisement

ಅರ್ಥಪೂರ್ಣ ಕನ್ನಡ ರಾಜ್ಯೋತ್ಸವಕ್ಕೆ ನಿರ್ಧಾರ

09:32 PM Oct 18, 2019 | Lakshmi GovindaRaju |

ಚಾಮರಾಜನಗರ: ಜಿಲ್ಲಾಡಳಿತದಿಂದ ಎಲ್ಲರ ಸಹಕಾರದೊಂದಿಗೆ ನವೆಂಬರ್‌ 1ರಂದು ನಗರದಲ್ಲಿ ಕನ್ನಡ ರಾಜೋತ್ಸವವನ್ನು ಅರ್ಥಪೂರ್ಣ ಹಾಗೂ ಅದ್ಧೂರಿಯಾಗಿ ಆಚರಿಸಲು ಶುಕ್ರವಾರ ತೀರ್ಮಾನಿಸಲಾಯಿತು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯೋತ್ಸವ ಆಚರಣೆ ಪೂರ್ವಭಾವಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.

Advertisement

ದಾಖಲೆಗಳು ಕನ್ನಡದಲ್ಲೇ ಇರಲಿ: ಸಭೆಯ ಆರಂಭದಲ್ಲೇ ಕನ್ನಡಪರ ಹಾಗೂ ವಿವಿಧ ಸಂಘಟನೆಗಳ ಮುಖಂಡರು ಮಾತನಾಡಿ, ಎಲ್ಲಾ ಶಾಲೆಗಳು, ಬ್ಯಾಂಕುಗಳು, ಕಚೇರಿಗಳಲ್ಲಿ ಕಡ್ಡಾಯವಾಗಿ ಕನ್ನಡ ರಾಜ್ಯೋತ್ಸವ ಆಚರಣೆಯಾಗಬೇಕು. ಸರ್ಕಾರಿ ಕಚೇರಿ ಮಾಹಿತಿ ಫ‌ಲಕ ಹಾಗೂ ಅರ್ಜಿ- ನಮೂನೆಗಳು ಕನ್ನಡದಲ್ಲೇ ಇರಬೇಕು. ಜತೆಗೆ ಅಂಗಡಿ-ಮುಂಗಟ್ಟುಗಳ ಫ‌ಲಕಗಳು ಕನ್ನಡ ಭಾಷೆಯಲ್ಲಿ ಇರುವಂತೆ ಸೂಚನೆ ನೀಡಬೇಕು ಎಂಬ ಸಲಹೆ ನೀಡಿದರು.

ಕನ್ನಡ ಭಾಷೆ ಹಾಗೂ ಕರ್ನಾಟಕ ಏಕೀಕರಣ ಕುರಿತು ವಿಚಾರ ಸಂಕಿರಣವನ್ನು ನವೆಂಬರ್‌ ತಿಂಗಳಿನಲ್ಲಿ ಆಯೋಜಿಸಿ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಬೇಕು. ಸ್ಥಳೀಯ ಜಾನಪದ ಕಲಾವಿದರಿಗೆ ಆದ್ಯತೆ ನೀಡಿ, ಅವರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಆಗಬೇಕು ಎಂದು ಕನ್ನಡಪರ ಸಂಘಟನೆಗಳ ಮುಖಂಡರು ಪ್ರಸ್ತಾಪ ಮಾಡಿದರು.

ರಾಜ್ಯೋತ್ಸವ ಪ್ರಯುಕ್ತ ಆಯೋಜಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕನ್ನಡ ಭಾಷೆ ಮತ್ತು ಅಭ್ಯುದಯವನ್ನು ಬಿಂಬಿಸುವ ಹಾಗೂ ಜಾನಪದ ಕಲಾತಂಡಗಳಿಗೆ ಹೆಚ್ಚಿನ ಅವಕಾಶ ಒದಗಿಸಬೇಕು. ಕನ್ನಡ ಭಾಷೆಯಲ್ಲಿ ಹೆಚ್ಚಿನ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸಬೇಕು. ಜತೆಗೆ ಸರ್ಕಾರಿ ಇಲಾಖೆಗಳಲ್ಲಿ ಕನ್ನಡವನ್ನು ಉತ್ತಮ ರೀತಿಯಲ್ಲಿ ಅನುಷ್ಠಾನಗೊಳಿಸಿರುವ ಅಧಿಕಾರಿಗಳನ್ನು ಗೌರವಿಸಬೇಕು ಎಂಬುದೂ ಸೇರಿದಂತೆ ವಿವಿಧ ಸಲಹೆಗಳನ್ನು ನೀಡಿದರು.

ಡಾ.ಅಂಬೇಡ್ಕರ್‌ ಕ್ರೀಡಾಂಗಣದಲ್ಲಿ ರಾಜ್ಯೋತ್ಸವ: ಎಲ್ಲರ ಸಲಹೆಗಳನ್ನು ಆಲಿಸಿ ಮಾತನಾಡಿದ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ, ಈ ಬಾರಿಯು ನಗರದ ಡಾ.ಬಿ.ಆರ್‌. ಅಂಬೇಡ್ಕರ್‌ ಕ್ರೀಡಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಗೆ ಅಗತ್ಯ ಸಿದ್ಧತೆ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.

Advertisement

ಆಕರ್ಷಕ ಪಥ ಸಂಚಲನ, ನಾಡು ನುಡಿ ಕುರಿತು ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಬೇಕು. ಸಂಜೆ ವೇಳೆ ಶಾಲಾ-ಕಾಲೇಜುಗಳ ವಿದ್ಯಾಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಗೆ ಅಗತ್ಯ ಸಿದ್ಧತೆ ಕೈಗೊಳ್ಳಬೇಕು. ನವೆಂಬರ್‌ ತಿಂಗಳಿನಲ್ಲಿ ಜಿಲ್ಲೆಯ ಎಲ್ಲ ಚಿತ್ರಮಂದಿರಗಳಲ್ಲಿ ಕನ್ನಡ ಚಲನಚಿತ್ರಗಳನ್ನು ಕಡ್ಡಾಯವಾಗಿ ಪ್ರದರ್ಶಿಸಲು ಸೂಚನೆ ನೀಡಬೇಕು ಎಂದು ಅಧಿಕಾರಿಗಳಿಗೆ ಕಾವೇರಿ ನಿರ್ದೇಶನ ನೀಡಿದರು.

ರಾಜ್ಯೋತ್ಸವಕ್ಕೆ ಪೂರ್ವಭಾವಿಯಾಗಿ ನಗರದ ಪ್ರಮುಖ ರಸ್ತೆ, ಕ್ರೀಡಾಂಗಣ ಸುತ್ತಮುತ್ತಲ ಪ್ರದೇಶಗಳಲ್ಲಿ ವಿಶೇಷವಾಗಿ ಸ್ವಚ್ಛತೆ ಕಾರ್ಯ ಕೈಗೊಳ್ಳಬೇಕು. ಕಾರ್ಯಕ್ರಮದಂದು ತಳಿರು-ತೋರಣಗಳಿಂದ ಸಿಂಗರಿಸಬೇಕು ಎಂದು ನಗರಸಭೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ತಿಳಿಸಿದರು.

ಫ‌ಲಕಗಳು ಕನ್ನಡದಲ್ಲೇ ಇರಲಿ: ಕನ್ನಡೇತರ ಭಾಷೆಗಳಲ್ಲಿ ಫ‌ಲಕಗಳನ್ನು ಹೊಂದಿರುವ ಅಂಗಡಿಗಳ ಮಾಲಿಕರಿಗೆ ನಗರಸಭೆಯಿಂದ ನೋಟಿಸ್‌ ಜಾರಿ ಮಾಡಿ, ಕೂಡಲೇ ತೆರವುಗೊಳಿಸುವಂತೆ, ಫ‌ಲಕಗಳು ಕನ್ನಡ ಭಾಷೆಯಲ್ಲಿ ಇರುವಂತೆ ಸೂಚಿಸಲಾಗುವುದು. ಬ್ಯಾಂಕುಗಳಿಗೂ ನೋಟಿಸ್‌ ನೀಡಿ, ಕಡ್ಡಾಯವಾಗಿ ಕನ್ನಡ ರಾಜ್ಯೋತ್ಸವ ಆಚರಿಸುವಂತೆ ಹಾಗೂ ಬ್ಯಾಂಕುಗಳ ಸೂಚನಾ ಫ‌ಲಕ, ಅರ್ಜಿಗಳಲ್ಲಿ ಕನ್ನಡ ಅನುಷ್ಠಾನಗೊಳಿಸಲು ಆದೇಶಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.

ಆರ್‌ಟಿಓ ಇಲಾಖೆಗಳಲ್ಲಿ ಸಮರ್ಪಕ ರೀತಿಯಲ್ಲಿ ಕನ್ನಡ ಭಾಷೆ ಅನುಷ್ಠಾನ ಕೆಲಸವಾಗಬೇಕು. ಅಲ್ಲಿನ ಅರ್ಜಿ-ನಮೂನೆ, ಮಾಹಿತಿ ಫ‌ಲಕಗಳನ್ನು ಶೀಘ್ರವೇ ಕನ್ನಡ ಭಾಷೆಗೆ ಅನುವಾದಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಪಂ ಸಿಇಒ ಬಿ.ಎಚ್‌. ನಾರಾಯಣರಾವ್‌, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್‌. ಆನಂದ್‌, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನಿತಾ ಹದ್ದಣ್ಣನವರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಭಾರ ಸಹಾಯಕ ನಿರ್ದೇಶಕ ವೈ. ಸೋಮಶೇಖರ್‌, ಸಾಹಿತಿ ಕೆ. ವೆಂಕಟರಾಜು, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ‌ ಬಿ.ಎಸ್‌.ವಿನಯ್‌, ಕನ್ನಡ ಪರ ಸಂಘಟನೆಗಳ ಮುಖಂಡರಾದ ಶಾ. ಮುರಳಿ, ಚಾ.ರಂ. ಶ್ರೀನಿವಾಸಗೌಡ,

ಚಾ.ಗು. ನಾಗರಾಜು, ಗು. ಪುರುಷೋತ್ತಮ್‌, ಸುರೇಶ್‌ ವಾಜಪೇಯಿ, ನಿಜಧ್ವನಿ ಗೋವಿಂದರಾಜು, ಸಿ.ಕೆ. ಮಂಜುನಾಥ್‌, ವೆಂಕಟರಮಣಸ್ವಾಮಿ(ಪಾಪು), ಸಿ.ಎಂ. ನರಸಿಂಹಮೂರ್ತಿ, ಆಲೂರು ಮಲ್ಲು, ನಾಗೇಂದ್ರ, ಸೋಮ ನಾಯಕ, ಜಯಕುಮಾರ್‌, ಸಿ.ಎಂ. ಕೃಷ್ಣಮೂರ್ತಿ, ಆಲೂರು ನಾಗೇಂದ್ರ, ಅಂಬರೀಶ, ಬ್ಯಾಡಮೂಡ್ಲು ಬಸವಣ್ಣ, ಸಿ.ಎಂ.ಶಿವಣ್ಣ, ಸುರೇಶ್‌ ನಾಯಕಹರೀಶ್‌, ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next