ಬೆಂಗಳೂರು: ವಿಧಾನಸೌಧದ ಕೂಗಳತೆ ದೂರದಲ್ಲಿರುವ ಶಾಸಕರ ಭವನದ 5ನೇ ಮಹಡಿಯಿಂದ ಬಿದ್ದು ಕೆಎಸ್ಆರ್ಟಿಸಿ ನೌಕರ ಅನುಮಾನಸ್ಪದವಾಗಿ ಮೃತಪಟ್ಟ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.
ಮಾವಳ್ಳಿ ನಿವಾಸಿ ಶಿವಶಂಕರ್ (55) ಮೃತರು. ಈ ಸಂಬಂಧ ವಿಧಾನಸೌಧ ಪೊಲೀಸರು ಅನುಮಾನಸ್ಪಾದ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಶಿವಶಂಕರ್ ಅವರಿಗೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಪುತ್ರ ಇದ್ದಾನೆ. ಕುಟುಂಬ ಮಾವಳ್ಳಿಯಲ್ಲಿ ನೆಲೆಸಿದೆ.
ಶಿವಶಂಕರ್, 18 ವರ್ಷಗಳಿಂದ ಕೆಎಸ್ಆರ್ಟಿಸಿ ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಪ್ರತಿ ಭಾನುವಾರ ಶಾಸಕರ ಭವನದ ಒಂದನೇ ಮಹಡಿಯಲ್ಲಿರುವ ಕೆಎಸ್ಆರ್ಟಿಸಿ ಮುಂಗಡ ಟಿಕೆಟ್ ಕಾಯ್ದಿರಿಸುವ ಕೌಂಟರ್ನಲ್ಲಿ ಟಿಕೆಟ್ಗಳನ್ನು ನೋಂದಣಿ ಮಾಡುವ ಕೆಲಸ ಮಾಡುತ್ತಿದ್ದರು.
ಭಾನುವಾರ ಬೆಳಗ್ಗೆ ಎಂದಿನಂತೆ ಮಾವಳ್ಳಿಯಿಂದ ಶಾಸಕರ ಭವನಕ್ಕೆ ಬಂದು ಕರ್ತವ್ಯಕ್ಕೆ ಹಾಜರಾಗದ್ದರು. ಮಧ್ಯಾಹ್ನ 2.30ರ ಸುಮಾರಿಗೆ ಊಟ ಮುಗಿಸಿಕೊಂಡು ನಂತರ ಲಿಫ್ಟ್ ಮೂಲಕ ಐದನೇ ಮಹಡಿಗೆ ಹೋಗಿದ್ದಾರೆ. ಅಲ್ಲಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ.
ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಬಿದ್ದ ಶಬ್ದ ಕೇಳಿ ಶಾಸಕರ ಭವನದಲ್ಲಿದ್ದ ಸಾರ್ವಜನಿಕರು, ಪಕ್ಕದ ಹೋಟೆಲ್ ಸಿಬ್ಬಂದಿ ಬಂದು ನೋಡಿದಾಗ ಶಿವಶಂಕರ್ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಶಿವಶಂಕರ್ ಆತ್ಮಹತ್ಯೆ ಮಾಡಿಕೊಂಡಿದ್ದಾರಾ? ಅಥವಾ ಆಯತಪ್ಪಿ ಬಿದ್ದಿದ್ದಾರಾ? ಇಲ್ಲವೇ ಯಾರಾದರೂ ತಳ್ಳಿದ್ದಾರೆಯೇ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ.
ಶಾಸಕರ ಭವನ ಹಾಗೂ ಘಟನಾ ಸ್ಥಳದಲ್ಲಿರುವ ಸಿಸಿ ಕ್ಯಾಮೆರಾ ದೃಶ್ಯಾವಳಿ ವಶಕ್ಕೆ ಪಡೆದು ಪರಿಶೀಲಿಸಲಾಗುತ್ತಿದೆ. ಮೊದಲ ಮಹಡಿಯ ಕಚೇರಿಯಿಂದ ಐದನೇ ಮಹಡಿಗೆ ಯಾವ ಕಾರಣಕ್ಕೆ ಹೋಗಿಸªರು ಎಂಬುದು ಗೊತ್ತಾಗಿಲ್ಲ. ಸದ್ಯ ಅನುಮಾನಸ್ಪದ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ಹೇಳಿದರು.