Advertisement

ಸಕ್ಕರೆ ಉದ್ಯಮಿಗಳ ಕೈಗೆ ಡಿಸಿಸಿ ಬ್ಯಾಂಕ್‌! ರಂಗೇರಿದ ತೆರೆಮೆರೆ ಕಸರತ್ತು

01:11 PM Oct 19, 2020 | sudhir |

ಬಾಗಲಕೋಟೆ: ಜಿಲ್ಲೆಯ ಸಹಕಾರ ಸಂಘಗಳ ಹಿರಿಯಣ್ಣ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಚುನಾವಣೆ ಈ ಸಲ ಭಾರಿ
ಪ್ರತಿಷ್ಠೆ-ತುರುಸಿನಿಂದ ನಡೆಯುತ್ತಿದೆ. ಈ ಬಾರಿ 13 ನಿರ್ದೇಶಕ ಸ್ಥಾನಗಳಿಗೆ ಬಹುತೇಕ ಸಕ್ಕರೆ ಉದ್ಯಮಿಗಳೇ ಆಯ್ಕೆಯಾಗುವ
ಸಾಧ್ಯತೆಯೂ ದಟ್ಟವಾಗಿದೆ.

Advertisement

ಹೌದು. ಡಿಸಿಸಿ ಬ್ಯಾಂಕ್‌ಗೆ ಈ ಬಾರಿ ಮೂರು ನಿರ್ದೇಶಕ ಸ್ಥಾನಗಳು ಹೆಚ್ಚಾಗಿವೆ. ಕಳೆದ ಬಾರಿ ಇದ್ದ 10 ಸ್ಥಾನಗಳು ಈ ಬಾರಿ
13ಕ್ಕೆ ಏರಿಕೆಯಾಗಿದ್ದು, ರಬಕವಿ-ಬನಹಟ್ಟಿ ತಾಲೂಕು ಪಿಕೆಪಿಎಸ್‌, ಇಳಕಲ್ಲ ತಾಲೂಕು ಪಿಕೆಪಿಎಸ್‌ನಿಂದ ತಲಾ ಒಂದೊಂದು ಕ್ಷೇತ್ರ ಹಾಗೂ ನೇಕಾರ-ಉಣ್ಣೆ ನೇಕಾರರ ಸಹಕಾರಿ ಸಂಘಗಳ ಕ್ಷೇತ್ರವನ್ನು ಇಬ್ಭಾಗ ಮಾಡಿ, ನೇಕಾರ ಮತ್ತು ಉಣ್ಣೆ ನೇಕಾರ ಪ್ರತ್ಯೇಕ ಮಾಡಲಾಗಿದೆ. ಆದರೆ, ಹೊಸ ತಾಲೂಕುಗಳಲ್ಲಿ ಮುಖ್ಯವಾಗಿ ಗುಳೇದಗುಡ್ಡ ಹಾಗೂ ತೇರದಾಳಕ್ಕೆ ಅವಕಾಶ ಸಿಕ್ಕಿಲ್ಲ.

ಡಿಸಿಸಿ ಬ್ಯಾಂಕ್‌ ಮೇಲೇಕೆ ಕಣ್ಣು?: ಜಿಲ್ಲೆಯ ರಾಜಕೀಯ ಪ್ರಭಾವಿಗಳು, ಸಕ್ಕರೆ ಕಾರ್ಖಾನೆ ಮಾಲಿಕರು, ಪ್ರತಿಷ್ಠಿತರು ಡಿಸಿಸಿ ಬ್ಯಾಂಕ್‌ ಚುನಾವಣೆಯನ್ನು ಇಷ್ಟೇಕೆ ಪ್ರತಿಷ್ಠೆಯಾಗಿ ಮಾಡಿಕೊಂಡಿದ್ದಾರೆಂಬುದು ಸಾಮಾನ್ಯ ಜನರ ಪ್ರಶ್ನೆ. ಸಾಮಾನ್ಯ
ರೈತರು, ಜನರು ಡಿಸಿಸಿ ಬ್ಯಾಂಕ್‌ ಚುನಾವಣೆ ಬಗ್ಗೆ ಅಷ್ಟೊಂದು ತಲೆಯೂ ಕೆಡಿಸಿಕೊಂಡಿಲ್ಲ. ನಾವು ಅದರ ಮತದಾರರಲ್ಲ ಬಿಡಿ
ಎಂಬ ಅಸಡ್ಡೆ ತೋರಿಸುತ್ತಲೇ ಇದ್ದಾರೆ. ಆದರೆ, ಈ ಚುನಾವಣೆ, ಇಷ್ಟೊಂದು ಪ್ರತಿಷ್ಠೆಯಾಗಲು, ಅದರ ಲಾಭ ಉಂಡ ಪ್ರಭಾವಿಗಳಿಗೆ ಮಾತ್ರ ಗೊತ್ತು ಎಂಬ ಮಾತು ಕೇಳಿ ಬರುತ್ತಿದೆ.

ಡಿಸಿಸಿ ಬ್ಯಾಂಕ್‌ ನಿರ್ದೇಶಕರಾದವರಿಗೆ ಹಲವು ಅನುಕೂಲಗಳಿವೆ. ಹಣದ ಹರಿವೂ ಬರುತ್ತದೆ ಎಂಬುದು ಕೆಲವರ ಅಭಿಪ್ರಾಯ.
ಇದಕ್ಕೆ ಕಾರಣವೂ ಇದೆ. ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಸಿಗುತ್ತಿದ್ದು, ಹಲವರು ರೈತರ ಹೆಸರಿನಲ್ಲಿ ಈ ಪ್ರಯೋಜನ ಪಡೆದವರಿದ್ದಾರೆ. ಇನ್ನು ಸರ್ಕಾರ ಬಂದಾಗೊಮ್ಮೆ ರೈತರ ಸಾಲ ಮನ್ನಾ ಮಾಡುತ್ತಿದ್ದು, ಈ ಸಾಲ ಮನ್ನಾ ವಿಷಯದಲ್ಲಿ ಹಲವರು ಹಣ ಹೊಡೆದ ಪ್ರಸಂಗಗಳೂ ಜಿಲ್ಲೆಯಲ್ಲಿ ನಡೆದಿವೆ. ಇದೇ ವಿಷಯಕ್ಕೆ ಜಿಲ್ಲೆಯ ಕೆಲವು ಪಿಕೆಪಿಎಸ್‌ ವ್ಯವಸ್ಥಾಪಕರ ಮೇಲೆ ಪ್ರಕರಣ ದಾಖಲಾದರೆ, ಕೆಲವರು ಅಮಾನತುಗೊಂಡು ಬಳಿಕ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ತಮಗೆ ಬೇಕಾದವರಿಗೆ, ಬೇಕಾದವರ ಹೆಸರಿನಲ್ಲಿ ಶೂನ್ಯ ಬಡ್ಡಿಯಲ್ಲಿ ಸಾಲ, ಮನ್ನಾ ಆದಾಗ ಅದರ ಲಾಭ ಪಡೆಯುವುದು ಒಂದು ಪದ್ಧತಿ ಇದೆ.

Advertisement

ನೇಮಕಾತಿಯಲ್ಲೂ ಹಣ: ಇನ್ನು ಡಿಸಿಸಿ ಬ್ಯಾಂಕ್‌ನಡಿ ಜಿಲ್ಲೆಯ 9 ತಾಲೂಕಿನಲ್ಲಿ ಹಲವು ಶಾಖೆಗಳಿದ್ದು, ಐದು ವರ್ಷಗಳಲ್ಲಿ
ಹಲವು ಹುದ್ದೆಗಳ ನೇಮಕಾತಿ ನಡೆಯುತ್ತದೆ. ನಿವೃತ್ತಿಯಾದವರು, ನಿಧನರಾದವರ ಹುದ್ದೆಗಳಿಗೆ ಹೊಸಬರ ನೇಮಕ ನಡೆಯುವ ಜತೆಗೆ ಹೊಸ ಶಾಖೆಗಳಿಗೆ ಹೊಸ ಸಿಬ್ಬಂದಿ ನೇಮಕಾತಿಯೂ ನಡೆಯುತ್ತದೆ. ಕಳೆದ ಐದು ವರ್ಷದಲ್ಲಿ ಒಮ್ಮೆ 43 ಹಾಗೂ ಒಮ್ಮೆ 7 ವಿವಿಧ ಹುದ್ದೆಗಳಿಗೆ ನೇಮಕ ನಡೆದಿದೆ. ಈ ನೇಮಕಾತಿ, ಹಣವಿಲ್ಲದೇ ನಡೆಯಲ್ಲ. ಒಂದೊಂದು ಹುದ್ದೆಗೂ 35ರಿಂದ 40 ಲಕ್ಷ ಹಣ ಹರಿದಾಡಿತು ಎಂಬ ಪ್ರಭಲ ಆರೋಪ ಕೇಳಿ ಬಂದಿತ್ತು.

ನೋಟು ನಿಷೇಧದ ವೇಳೆ ದಾಳಿ ನಡೆದಿತ್ತು : ಕೇಂದ್ರದ ಸರ್ಕಾರ ಹಳೆಯ 500 ಮತ್ತು 1 ಸಾವಿರ ಮುಖ ಬೆಲೆಯ ಹಳೆಯ ನೋಟು ನಿಷೇಧ ಮಾಡಿದಾಗ ಪ್ರಭಾವಿಗಳೇ ಇರುವ ಡಿಸಿಸಿ ಬ್ಯಾಂಕ್‌ನಲ್ಲಿ ಕೋಟಿ ಕೋಟಿ ಲೆಕ್ಕದ ಹಳೆಯ ಹಣ ಜಮೆಯಾಗಿದ್ದವು. ರೈತರು, ಖಾತೆ ಹೊಂದಿರುವ ಸಾಮಾನ್ಯ ಜನರ ಹೆಸರಿನಲ್ಲಿ ಹಳೆಯ ನೋಟು ಬ್ಯಾಂಕ್‌ಗೆ ಬಂದವು. ಇದು ಕೇಂದ್ರ ಸರ್ಕಾರದ ಪಡಸಾಲೆವರೆಗೂ ವಾಸನೆ ಹೋಗಿತ್ತು. ಹೀಗಾಗಿ ಆದಾಯ ತೆರಿಗೆ ಇಲಾಖೆಯ ಸಹಿತ ವಿವಿಧ ಅಧಿಕಾರಿಗಳ ತಂಡ ಡಿಸಿಸಿ ಬ್ಯಾಂಕ್‌ ಮೇಲೆ ದಾಳಿ ನಡೆಸಿತ್ತು. ಎರಡು ದಿನಗಳ ಕಾಲ ಸಮಗ್ರ ಪರಿಶೀಲನೆ ನಡೆಸಿ ಹೋಗಿತ್ತು. ಆದರೆ, ಮುಂದೆ ಏನಾಯಿತೆಂಬುದು ಜಿಲ್ಲೆಯ ಜನರಿಗೆ ತಿಳಿಯಲೇ ಇಲ್ಲ.

ಸಕ್ಕರೆ ಉದ್ಯಮಿಗಳ ಕೈಗೆ ಬ್ಯಾಂಕ್‌: ಈ ಬಾರಿಯ ನಿರ್ದೇಶಕ ಸ್ಥಾನಗಳ ಚುನಾವಣೆಗೆ ಬಹುತೇಕ ಸಕ್ಕರೆ ಉದ್ಯಮಿಗಳು ಸ್ಪರ್ಧಿಸಿದ್ದಾರೆ. ಅವರೆಲ್ಲ ಗೆದ್ದು, ಡಿಸಿಸಿ ಬ್ಯಾಂಕ್‌ ಆಡಳಿತದಲ್ಲಿ ಭಾಗಿಯಾಗಬೇಕೆಂಬ ಪ್ರತಿಷ್ಠೆಗೂ ಬಿದ್ದಿದ್ದಾರೆ. ಹೀಗಾಗಿ ಹಣದ ಆಮಿಷವೂ ಜೋರಾಗಿ ಸದ್ದು ಮಾಡುತ್ತಿದೆ. ಇಷ್ಟೊಂದು ಹಣ ಖರ್ಚು ಮಾಡಿ, ಡಿಸಿಸಿ ಬ್ಯಾಂಕ್‌ ನಲ್ಲೇನು ಮಾಡುವುದಿದೆ ಎಂದು ಪ್ರಶ್ನೆ ಮಾಡುವ ಅಮಾಯಕರೂ ಇದ್ದಾರೆ. ಆದರೂ, ಜಿಲ್ಲೆಯಲ್ಲಿ ಸಹಕಾರ ರಾಜಕೀಯ ಬಲು ಜೋರಾಗಿ ನಡೆಯುತ್ತಿದೆ.

– ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next