Advertisement

ಅನುದಾನ ವಿಳಂಬ: ಹೊಸ ಡಿಸಿ ಕಚೇರಿ ಸಂಕೀರ್ಣ ಕಾಮಗಾರಿ ತಟಸ್ಥ !

10:20 PM Dec 14, 2022 | Team Udayavani |

ಪಡೀಲ್‌: ಪಾರಂಪರಿಕ ಕಟ್ಟಡ ಶೈಲಿಯಲ್ಲಿ ನಗರದ ಪಡೀಲ್‌ನಲ್ಲಿ ನಿರ್ಮಾಣ ಹಂತದಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಧಿಕಾರಿ ಕಚೇರಿಗಳ ನೂತನ ಸಂಕೀರ್ಣದ ಎರಡನೇ ಹಂತದ ಕಾಮಗಾರಿಗೆ ಅನುದಾನ ದೊರೆಯದೆ ಬಾಕಿಯಾಗಿದೆ!

Advertisement

ಸಂಕೀರ್ಣದ ಸಂಪೂರ್ಣ ಕಾಮಗಾರಿ ಮುಗಿ ಸಲು ಎರಡನೇ ಹಂತದ ಯೋಜನೆ ವರ್ಷದ ಹಿಂದೆಯೇ ಸಿದ್ಧಪಡಿಸಲಾಗಿದ್ದು, ಅದಕ್ಕೆ 29 ಕೋಟಿ ರೂ. ಅಂದಾಜು ಪಟ್ಟಿ ತಯಾರಿಸಿ, ಸರಕಾರಕ್ಕೆ ಕಳುಹಿಸಲಾಗಿತ್ತು. ಆದರೆ ಸರಕಾರದಲ್ಲಿ ಮಾತ್ರ ಇನ್ನೂ ಅನುಮೋದನೆ ದೊರಕದೆ ಕಾಮಗಾರಿ ಸದ್ಯ ಸ್ಥಗಿತ ಹಂತದಲ್ಲಿದೆ.

2014ರಲ್ಲಿಯೇ ನೂತನ ಜಿಲ್ಲಾಧಿಕಾರಿ ಕಚೇರಿ ನಿರ್ಮಾಣಕ್ಕೆ ಆಡಳಿತಾತ್ಮಕ ಮಂಜೂರಾತಿ ದೊರಕಿತ್ತು. ಅರಣ್ಯ ಇಲಾಖೆ ಜಾಗದ ಹಸ್ತಾಂತರ, ಮರ ಕಡಿಯುವ ವಿರುದ್ಧ ಪರಿಸರವಾದಿಗಳು ನ್ಯಾಯಾಲಯದ ಮೊರೆ ಹೋಗಿದ್ದರಿಂದ ಚೆನ್ನೈಯ ಹಸಿರು ಪೀಠದಲ್ಲಿ ವ್ಯಾಜ್ಯ ಮುಗಿದು, 2018ರ ಮಾರ್ಚ್‌ ತಿಂಗಳಲ್ಲಿ ಗೃಹ ನಿರ್ಮಾಣ ಮಂಡಳಿಯು ಕಾಮಗಾರಿ ಆರಂಭಿಸಿತ್ತು.
ಪ್ರಥಮ ಹಂತದ ಒಟ್ಟು ಸುಮಾರು 55 ಕೋಟಿ ರೂ. ಮೊತ್ತದ ಕಾಮಗಾರಿ ನಡೆದಿದೆ. ಸರಕಾರದ ವಿವಿಧ ಇಲಾಖೆಗಳು ಅನುಮೋದನೆ ನೀಡುವಾಗ ತಡ ಮಾಡಿದ್ದರಿಂದ ಮೊದಲ ಹಂತದ ಕಾಮಗಾರಿಯೂ ವಿಳಂಬವಾಗಿತ್ತು.

ಮೊದಲ ಹಂತ ಬಹುತೇಕ ಪೂರ್ಣವಾಗಿ ಎರಡನೇ ಹಂತ ನಡೆಸಲು ಸರಕಾರ ಅನುದಾನ ಅಗತ್ಯವಾಗಿತ್ತು. ಈ ಸಂಬಂಧ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್‌ ಕುಮಾರ್‌ ಅವರು ಕಾಮಗಾರಿ ನಡೆಯುವ ಸ್ಥಳಕ್ಕೆ ಹಲವು ತಿಂಗಳ ಹಿಂದೆ ಭೇಟಿ ನೀಡಿ ಪರಿಶೀಲಿಸಿದ್ದು, ಬಾಕಿ ಕಾಮಗಾರಿಗೆ ಆವಶ್ಯಕ 29 ಕೋ.ರೂ ಬಿಡುಗಡೆಗೆ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದ್ದರು.

ಆದರೆ ಆ ಬಳಿಕ ಸರಕಾರಿ ಮಟ್ಟದಲ್ಲಿ ಇದರ ಕಡತ ಮುಂದುವರಿಯಲೇ ಇಲ್ಲ. ಪರಿಣಾಮವಾಗಿ ಕಾಮಗಾರಿ ಆರಂಭಕ್ಕೆ ತೊಡಕು ಮುಂದು ವರಿದಿದೆ.

Advertisement

2.26 ಲಕ್ಷ ಚದರ ಅಡಿ ಕಟ್ಟಡ
ಒಟ್ಟು 2.26 ಲಕ್ಷ ಚದರ ಅಡಿ ಕಟ್ಟಡದಲ್ಲಿ ಕಂದಾಯ ಇಲಾಖೆ ಕಚೇರಿಗಳ ಜತೆಯಲ್ಲಿ ಸುಮಾರು 38 ಇಲಾಖೆಗಳ ಕಚೇರಿಗಳು ಇಲ್ಲಿಗೆ ಬರಲಿವೆ. ಮಿನಿ ಸಭಾಂಗಣ, ಜಿಲ್ಲಾಧಿಕಾರಿ ಕೋರ್ಟ್‌ ಹಾಲ್‌, ಸಚಿವರು, ಸಂಸದರಿಗೆ ಕಚೇರಿ, ಕ್ಯಾಂಟಿನ್‌ ಮತ್ತಿತರ ಸೌಲಭ್ಯವಿದೆ. ಸುಮಾರು 200 ವಾಹನ ಪಾರ್ಕಿಂಗ್‌ ವ್ಯವಸ್ಥೆ ಇರಲಿದೆ.

ಡಿಸಿ ಸಂಕೀರ್ಣ-ಆಗಬೇಕಾದದ್ದು ಏನು?
55 ಕೋ.ರೂ. ಮೊದಲ ಹಂತದಲ್ಲಿ ಬಿಡುಗಡೆಯಾಗಿದ್ದು, ಅಷ್ಟು ಮೊತ್ತದ ಕಾಮಗಾರಿ ಬಹುತೇಕ ಪೂರ್ಣವಾಗಿದೆ. ಇದರಲ್ಲಿ ಕಟ್ಟಡ, ಮೇಲ್ಛಾವಣಿ, ಬಾಗಿಲು ರೇಲಿಂಗ್‌ ಕಾಮಗಾರಿ ಮುಗಿದಿದೆ. ಎರಡನೇ ಹಂತದ ಕಾಮಗಾರಿಯಲ್ಲಿ ಸಂಪೂರ್ಣ ಕಟ್ಟಡದ ಫಿನಿಶಿಂಗ್‌, ಎರಡು ಲಿಫ್ಟ್‌ ಅಳವಡಿಕೆ, ಸಭಾಂಗಣದಲ್ಲಿ ಎಸಿ ಮತ್ತು ಕುರ್ಚಿ ಸಹಿತ ಒಟ್ಟು ಪೀಠೊಪಕರಣ, ಕೇಬಲ್‌ ನೆಟ್‌ವರ್ಕ್‌, ಪೈಂಟಿಂಗ್‌, ಕಟ್ಟಡದ ಪಕ್ಕದ ಮಳೆ ನೀರು ಹರಿಯುವ ಚರಂಡಿ ಅಭಿವೃದ್ಧಿ, ಆವರಣ ಗೋಡೆ ಮತ್ತು ಸಂಪೂರ್ಣ ಇಂಟರ್‌ಲಾಕ್‌ ಅಳವಡಿಸಿ ಅಭಿವೃದ್ಧಿ ಇತ್ಯಾದಿ ಕಾಮಗಾರಿಗಳು ನಡೆಯಬೇಕಿದೆ. ಇದಕ್ಕೆ ಸುಮಾರು 29 ಕೋ.ರೂ ಅಂದಾಜಿಸಲಾಗಿದೆ.

ಅಂದಾಜುಪಟ್ಟಿಗೆ ಸರಕಾರ ಅನುಮೋದನೆ ನೀಡಿದರೆ ಟೆಂಡರ್‌ ಪ್ರಕ್ರಿಯೆ ಮುಗಿದು ಕಾಮಗಾರಿ ಮುಗಿಸಲು ಇನ್ನೂ ಒಂದು ವರ್ಷ ಬೇಕಾಗಬಹುದು.

2ನೇ ಹಂತದ ಕಾಮಗಾರಿ
ಪಡೀಲ್‌ನಲ್ಲಿ ಹೊಸ ಜಿಲ್ಲಾಧಿಕಾರಿ ಸಂಕೀರ್ಣದ ಮೊದಲ ಹಂತದ ಕಾಮಗಾರಿ ಬಹುತೇಕ ಪೂರ್ಣವಾಗಿದೆ. ಎರಡನೇ ಹಂತದ ಕಾಮಗಾರಿಗೆ 29 ಕೋ.ರೂ. ಅನುದಾನ ಮಂಜೂರಾತಿಗೆ ಸರಕಾರಕ್ಕೆ ಬರೆಯಲಾಗಿದೆ. ಸರಕಾರದ ಮಂಜೂರಾತಿಗೆ ಪ್ರಯತ್ನಿಸಲಾಗುತ್ತಿದೆ. ಆದಾದ ಅನಂತರ ಕಾಮಗಾರಿ ವೇಗ ಪಡೆಯಲಿದೆ.
– ವಿಜಯ್‌ ಕುಮಾರ್‌, ಸಹಾಯಕ ಕಾರ್ಯಪಾಲಕ ಅಭಿಯಂತ, ಗೃಹ ಮಂಡಳಿ

Advertisement

Udayavani is now on Telegram. Click here to join our channel and stay updated with the latest news.

Next