Advertisement

ದಯಾಳ್‌ ಹೊಸ ಹುಡುಕಾಟ “ಒಂಬತ್ತನೇ ದಿಕ್ಕು’

09:18 AM Sep 12, 2019 | Lakshmi GovindaRaju |

ಇತ್ತೀಚೆಗಷ್ಟೇ “ರಂಗನಾಯಕಿ’ ಚಿತ್ರವನ್ನು ಪೂರ್ಣಗೊಳಿಸಿ, ಅದನ್ನು ತೆರೆಗೆ ತರಲು ಸಿದ್ಧತೆ ನಡೆಸುತ್ತಿರುವ ನಿರ್ದೇಶಕ ದಯಾಳ್‌ ಪದ್ಮನಾಭನ್‌, ಸದ್ದಿಲ್ಲದೆ ಈಗ ಮತ್ತೊಂದು ಚಿತ್ರಕ್ಕೆ ಆ್ಯಕ್ಷನ್‌-ಕಟ್‌ ಹೇಳಲು ತಯಾರಾಗಿದ್ದಾರೆ. ಹೌದು, ಮಹಿಳಾ ಪ್ರಧಾನ “ರಂಗನಾಯಕಿ’ ಚಿತ್ರದ ನಂತರ ದಯಾಳ್‌ ಪದ್ಮನಾಭನ್‌, ಈ ಬಾರಿ “ಒಂಬತ್ತನೇ ದಿಕ್ಕು’ ಎನ್ನುವ ಪಕ್ಕಾ ಆ್ಯಕ್ಷನ್‌ ಕಂ ಕ್ರೈಂ-ಥ್ರಿಲ್ಲರ್‌ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ.

Advertisement

ಸದ್ಯ ಈ ಚಿತ್ರದ ಪ್ರೀ-ಪ್ರೊಡಕ್ಷನ್‌ ಕೆಲಸಗಳು ಅಂತಿಮ ಹಂತದಲ್ಲಿದ್ದು, ಚಿತ್ರ ಗುರುವಾರ (ಸೆ. 12) ಸೆಟ್ಟೇರುತ್ತಿದೆ. ಇನ್ನು “ಒಂಬತ್ತನೇ ದಿಕ್ಕು’ ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ದಯಾಳ್‌ ಪದ್ಮನಾಭನ್‌, “ಇಲ್ಲಿಯವರೆಗೆ ಒಂದರ ಹಿಂದೊಂದು ಎಕ್ಸ್‌ಪರಿಮೆಂಟಲ್‌ ಸಿನಿಮಾಗಳನ್ನು ಮಾಡಿಕೊಂಡು ಬರುತ್ತಿದ್ದೆ. ಅದರಿಂದ ಹೊರತಾಗಿರುವ ಹೊಸಥರದ ಸಬ್ಜೆಕ್ಟ್‌ನ ಕಮರ್ಷಿಯಲ್‌ ಆಗಿ ಹೇಳಬೇಕು ಅಂತ ಅಂದುಕೊಳ್ಳುತ್ತಿದ್ದಾಗ ಈ ಸಿನಿಮಾ ಮಾಡುವ ಐಡಿಯಾ ಬಂತು.

ಇದೊಂದು ಇಂದಿನ ಸ್ಟೈಲ್‌ನ ಪಕ್ಕಾ ಕಮರ್ಶಿಯಲ್‌ ಎಲಿಮೆಂಟ್ಸ್‌ ಇರುವ ಆ್ಯಕ್ಷನ್‌ ಕಂ ಕ್ರೈಂ-ಥ್ರಿಲ್ಲರ್‌ ಸಿನಿಮಾ. ಇದರಲ್ಲಿ ಕೂಡ ಕಾನೂನಿನ ಅಡಿಯಲ್ಲಿ ಬರುವ ಸೂಕ್ಷ್ಮವಾದ ವಿಷಯವೊಂದನ್ನು ಹೇಳುತ್ತಿದ್ದೇನೆ. ಅದನ್ನು ಈಗಲೇ ಬಹಿರಂಗಪಡಿಸಲಾರೆ’ ಎನ್ನುತ್ತಾರೆ. “ಇನ್ನು ಮಾಮೂಲಿ ಕಮರ್ಷಿಯಲ್‌ ಎಂಟರ್‌ಟೈನ್ಮೆಂಟ್‌ ಸಿನಿಮಾದಲ್ಲಿ ಏನೇನು ಇರುತ್ತವೆಯೋ, ಅದೆಲ್ಲವೂ “ಒಂಬತ್ತನೇ ದಿಕ್ಕು’ ಸಿನಿಮಾದಲ್ಲಿರಲಿದೆ. ಒಳ್ಳೆಯ ಆ್ಯಕ್ಷನ್‌, ಮಸ್ತ್ ಹಾಡುಗಳು, ಎಲ್ಲವನ್ನೂ ಇಲ್ಲಿ ನೋಡಬಹುದು’ ಎನ್ನುವುದು ದಯಾಳ್‌ ಮಾತು.

ಇನ್ನು “ಒಂಬತ್ತನೇ ದಿಕ್ಕು’ ಚಿತ್ರದಲ್ಲಿ ಲೂಸ್‌ಮಾದ ಯೋಗೀಶ್‌ ನಾಯಕನಾಗಿ, ಅದಿತಿ ಪ್ರಭುದೇವ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ರಮೇಶ್‌ ಭಟ್‌, ಪ್ರಶಾಂತ್‌ ಸಿದ್ಧಿ ಮೊದಲಾದವರು ಚಿತ್ರದ ಇತರೆ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. “ಚಿತ್ರದ ಮತ್ತೆರಡು ಪ್ರಮುಖ ಪಾತ್ರಗಳಿಗೆ ಡೈಲಾಗ್‌ ಕಿಂಗ್‌ ಸಾಯಿಕುಮಾರ್‌ ಮತ್ತು ಟಿ.ಎನ್‌ ಸೀತಾರಾಮ್‌ ಅವರನ್ನೂ ಕರೆತರುವ ಯೋಚನೆಯಿದ್ದು, ಅವರ ಜೊತೆ ಮಾತುಕತೆ ನಡೆಯುತ್ತಿದೆ’ ಎನ್ನುವ ಮಾಹಿತಿ ನೀಡುತ್ತಾರೆ ದಯಾಳ್‌.

ಮೊದಲ ಹಂತದಲ್ಲಿ ಸೆ. 12ರಿಂದ ಅಕ್ಟೋಬರ್‌ ಎರಡನೇ ವಾರದವರೆಗೆ “ಒಂಬತ್ತನೇ ದಿಕ್ಕು’ ಚಿತ್ರದ ಚಿತ್ರೀಕರಣ ನಡೆಯಲಿದ್ದು, ನವೆಂಬರ್‌ ಮೊದಲ ವಾರದಿಂದ ಎರಡನೇ ಹಂತದ ಚಿತ್ರೀಕರಣಕ್ಕೆ ದಯಾಳ್‌ ಆ್ಯಂಡ್‌ ಟೀಮ್‌ ಪ್ಲಾನ್‌ ಮಾಡಿಕೊಂಡಿದೆ. “ಎಲ್ಲಾ ನಮ್ಮ ಪ್ಲಾನ್‌ ಪ್ರಕಾರ ಅಂದುಕೊಂಡಂತೆ ನಡೆದರೆ, ಮುಂದಿನ ವರ್ಷದ ಜನವರಿ 26ಕ್ಕೆ “ಒಂಬತ್ತನೇ ದಿಕ್ಕು’ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆ ಇದೆ’ ಎನ್ನುತ್ತಾರೆ ದಯಾಳ್‌.

Advertisement

“ಒಂಬತ್ತನೇ ದಿಕ್ಕು’ ಚಿತ್ರದ ಹಾಡುಗಳಿಗೆ ಮಣಿಕಾಂತ್‌ ಕದ್ರಿ ಸಂಗೀತ ಸಂಯೋಜನೆಯಿದ್ದು, ಚಿತ್ರಕ್ಕೆ ರಾಕೇಶ್‌ ಛಾಯಾಗ್ರಹಣ, ಪ್ರೀತಿ ಮೋಹನ್‌ ಸಂಕಲನವಿದೆ. ಚಿತ್ರದ ಬಹುಭಾಗ ಚಿತ್ರೀಕರಣ ಬೆಂಗಳೂರು ಸುತ್ತಮುತ್ತ ನಡೆಯಲಿದೆ. ಇನ್ನು “ಒಂಬತ್ತನೇ ದಿಕ್ಕು’ ಚಿತ್ರದ ನಿರ್ಮಾಣದಲ್ಲಿ ನಿರ್ದೇಶಕ ದಯಾಳ್‌ ಪದ್ಮನಾಭನ್‌ ಅವರೊಂದಿಗೆ ನಿರ್ಮಾಪಕ ಕಂ ನಿರ್ದೇಶಕ ಗುರುದೇಶಪಾಂಡೆ ಕೂಡ ಕೈ ಜೋಡಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next