Advertisement

ನಗರದಲ್ಲಿ ಸುಸಜ್ಜಿತ ರಂಗಮಂದಿರ ನಿರ್ಮಾಣವಾಗಲಿ

01:21 PM Apr 10, 2019 | Naveen |

ದಾವಣಗೆರೆ: ರಂಗಭೂಮಿಗೆ ಹೆಸರಾದ ದಾವಣಗೆರೆಯಲ್ಲಿ ಜನಪ್ರತಿನಿಧಿಗಳು, ದಾನಿಗಳ ಸಹಕಾರದಿಂದ ಸುಸಜ್ಜಿತ ರಂಗಮಂದಿರ ನಿರ್ಮಾಣಕ್ಕೆ ಎಲ್ಲಾ ಹಿರಿಯ ನಾಗರಿಕರು
ಒತ್ತಾಯಿಸಿ ಎಂದು ಹಿರಿಯ ರಂಗತಜ್ಞ ಬಸವಲಿಂಗಯ್ಯ ಸಲಹೆ ನೀಡಿದರು.

Advertisement

ವಿದ್ಯಾನಗರದ ಕಾವ್ಯ ಮಂಟಪದಲ್ಲಿ ಮಂಗಳವಾರ ಸಾಣೇಹಳ್ಳಿಯ ಶ್ರೀ ಶಿವಕುಮಾರ ಕಲಾಸಂಘ ಹಾಗೂ ಗ್ರಂಥ ಸರಸ್ವತಿ ಪ್ರತಿಭಾರಂಗ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ
ಶಿವಸಂಚಾರ ನಾಟಕೋತ್ಸವ-19ರ ಸಮಾರೋಪ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ದಾವಣಗೆರೆಯ ಅರುಣಾ ಚಿತ್ರಮಂದಿರ ಸಮೀಪದ ರೈಲ್ವೆಹಳಿ ಬಳಿ ಈಗಾಗಲೇ
ನಿರ್ಮಿಸಲಾಗಿರುವ ಜಿಲ್ಲಾ ರಂಗ ಮಂದಿರವು ನಾಟಕ ಪ್ರದರ್ಶಕ್ಕೆ ಅಗತ್ಯವಿರುವ ಸೂಕ್ತ ವಾತಾವರಣವನ್ನು ಹೊಂದಿಲ್ಲ. ಅದರ
ನಿರ್ಮಾಣಕ್ಕೆ ಬಳಸಿದ ಮಾನವ ಶಕ್ತಿ ಹಾಗೂ ಹಣ ಎಲ್ಲವೂ ವ್ಯರ್ಥವಾಗಿದ್ದು, ನಯಾ ಪೈಸೆಗೂ ಯೋಗ್ಯವಿಲ್ಲ. ಅದು ಕೇವಲ ಶಾದಿಮಹಲ್‌ ನಂತಿದೆ. ಅಲ್ಲಿ ಕೇವಲ ಮದುವೆ ಮುಂತಾದ
ಕಾರ್ಯಕ್ರಮಗಳನ್ನು ಮಾಡಬಹುದು ವಿನಃ ಉತ್ತಮ ನಾಟಕ ಪ್ರದರ್ಶನ ಮಾಡಲು ಸಾಧ್ಯವಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಈಗಿರುವ ಜಿಲ್ಲಾ ರಂಗಮಂದಿರ ನಾಟಕ ಪ್ರದರ್ಶನಕ್ಕೆ ಸೂಕ್ತವಾಗಿರದ ಕಾರಣ ನಗರದ ಹಿರಿಯ ನಾಗರಿಕರು ಸಂಸದರ 25ಕೋಟಿ ಅನುದಾನದಲ್ಲಿ 5ಕೋಟಿ ಅನುದಾನ ಕೇಳಿ.
ಇತರೆ ದಾನಿಗಳ ಮೊರೆ ಹೋಗಿ. ನಾಟಕ ಪ್ರದರ್ಶನಕ್ಕೆ ಬೇಕಾದ ಸುಸಜ್ಜಿತ ರಂಗಮಂದಿರ ನಿರ್ಮಾಣಕ್ಕೆ ಒತ್ತಾಯಿಸಿ ಎಂದರು.

ರಾಜಕೀಯ, ವಾಣಿಜ್ಯವಾಗಿ ದಾವಣಗೆರೆ ಸಾಕಷ್ಟು ಅಭಿವೃದ್ಧಿ ಹೊಂದಿದೆ. ಆದರೆ ಸಾಂಸ್ಕೃತಿಕವಾಗಿ ಬಡವಾಗಿದೆ. ದೇಶದಲ್ಲಿ ಯಾವ ಇಲಾಖೆಗೂ ಸಿಗದಷ್ಟು ಅನುದಾನ ರಾಜ್ಯದ ಕನ್ನಡ ಸಂಸ್ಕೃತಿ ಇಲಾಖೆಗೆ ದೊರೆಯುತ್ತಿದೆ. ಅದು ಕಲಾವಿದರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಇನ್ನಷ್ಟು ಸದ್ಬಳಕೆ ಆಗಬೇಕು ಎಂದರು.

ಸಾಣೇಹಳ್ಳಿ ಶಿವಸಂಚಾರ ರಂಗ ತಂಡವು ದೇಶದುದ್ದಕ್ಕೂ ಉತ್ತಮ ಸಾಮಾಜಿಕ, ಪೌರಾಣಿಕ ನಾಟಕಗಳನ್ನು ಪ್ರದರ್ಶಿಸುತ್ತಿದ್ದು,
ಅಂತಹ ನಾಟಕಗಳನ್ನು ಇಂತಹ ಸಾರ್ವಜನಿಕರ ಬಳಕೆಯ ಪಾರ್ಕ್‌ನ ಕಾವ್ಯ ಮಂಟಪದಲ್ಲಿ ಪ್ರದರ್ಶನ ಮಾಡುವುದು ಕಲಾವಿದರಿಗೆ ಮಾಡುವ ಅವಮಾನ. ಈ ಹಿನ್ನೆಲೆಯಲ್ಲಿ ಹಿರಿಯ
ನಾಗರಿಕರು ದಾವಣಗೆರೆಯಲ್ಲಿ ಸುಸಜ್ಜಿತ ರಂಗಮಂದಿರ ನಿರ್ಮಾಣಕ್ಕೆ ಮುಂದಾಗಿ ಬಸವಲಿಂಗಯ್ಯ ಒತ್ತಾಯಿಸಿದರು.

Advertisement

ಸಾಹಿತಿ ಬಾ.ಮಾ. ಬಸವರಾಜಯ್ಯ ಮಾತನಾಡಿ, ಸಾಣೇಹಳ್ಳಿಯ ಶ್ರೀ ಶಿವಕುಮಾರ ಕಲಾಸಂಘದ ಶಿವಸಂಚಾರ ರಂಗತಂಡವು
ರಾಷ್ಟ್ರವ್ಯಾಪಿ ಮನರಂಜನೆ ಜೊತೆ ಜೊತೆಗೆ ಜನರಲ್ಲಿ ಪ್ರಜ್ಞಾವಂತಿಕೆ, ವೈಚಾರಿಕ ಮನೋಭಾವ ಬಿತ್ತುವ ಅವಿಸ್ಮರಣೀಯ ಕೆಲಸ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ವೇಳೆ ಸಾಣೇಹಳ್ಳಿಯ ಪೀಠದ ಶ್ರೀ ಪಂಡಿತಾರಾಧ್ಯ ಸ್ವಾಮೀಜಿ ರಚಿಸಿದ ಗುರುಮಾತೆ ಅಕ್ಕನಾಗಲಾಂಬಿಕೆ ನಾಟಕವನ್ನು ಶಿವಸಂಚಾರ ತಂಡದ ಕಲಾವಿದರು ಪ್ರದರ್ಶನ ಮಾಡಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್‌.ಟಿ. ಮಂಜುನಾಥ್‌, ಪ್ರತಿಮಾ ಸಭಾ ಅಧ್ಯಕ್ಷ ಎಸ್‌. ಹಾಲಪ್ಪ ಉಪಸ್ಥಿತರಿದ್ದರು. ಡಾ| ಶಿವಕುಮಾರ ಕುರ್ಕಿ ಕಾರ್ಯಕ್ರಮ ನಿರೂಪಿಸಿದರು.

ಸಾಮಾಜಿಕ ಪಿಡುಗುಗಳ ಜಾಗೃತಿ ಹೆಚ್ಚಾಗಲಿ ವೈಚಾರಿಕ ಮತ್ತು ಪೌರಾಣಿಕ ನಾಟಕ ಪ್ರದರ್ಶನಗಳು ಸಮಾಜಕ್ಕೆ ಉತ್ತಮ ಕೊಡುಗೆ ನೀಡುತ್ತಿದ್ದು, ಇದರ ಜೊತೆ ಜೊತೆಗೆ ಸಮಾಜದಲ್ಲಿ ವ್ಯಾಪಕವಾಗಿ
ಬೇರೂರಿರುವ ಬಾಲ್ಯವಿವಾಹ, ವರದಕ್ಷಿಣೆ, ಭ್ರೂಣಹತ್ಯೆಯಂತಹ
ಸಾಮಾಜಿಕ ಪಿಡುಗುಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ರಂಗ ತಂಡಗಳು ಮಾಡಬೇಕು. ಆಗ ಸಮಾಜದಲ್ಲಿನ ಶೋಷಣೆ ನಿವಾರಿಸಲು ಸಾಧ್ಯವಾಗುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ
ನ್ಯಾಯಾಧೀಶ ಅಂಬಾದಾಸ್‌ ಕುಲಕರ್ಣಿ ಜಿ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next