Advertisement

ರಸ್ತೆಗಳ ಮಾಹಿತಿ ಫಲಕ ಅಳವಡಿಸಿ

11:20 AM Feb 13, 2020 | Naveen |

ದಾವಣಗೆರೆ: ಸಾರ್ವಜನಿಕರ ಅನುಕೂಲಕ್ಕಾಗಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಸ್ತೆಗಳ ಮಾಹಿತಿಯ ನಾಮಫಲಕಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Advertisement

ಬುಧವಾರ, ತಮ್ಮ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ, ಮಾತನಾಡಿದ ಅವರು, ರಾಷ್ಟ್ರೀಯ ಹೆದ್ದಾರಿಗಳಲ್ಲಿ ನಾಮಫಲಕಗಳು ಇಲ್ಲದಿರುವುದರಿಂದ ಸಾರ್ವಜನಿಕರು ಸುತ್ತಿ ಬಳಸಿ ತಮ್ಮ ಗ್ರಾಮ ಮತ್ತು ನಗರ ತಲುಪಬೇಕಿದೆ. ಆದ್ದರಿಂದ ರಾಷ್ಟ್ರೀಯ ಹೆದ್ದಾರಿ ಮತ್ತು ಪ್ರಮುಖ ರಸ್ತೆಗಳಲ್ಲಿ ಆ ರಸ್ತೆಗಳು ಯಾವ ನಗರ ಮತ್ತು ಗ್ರಾಮ ಸಂಪರ್ಕಿಸುತ್ತವೆ ಎಂಬ ಮಾಹಿತಿಯ ನಾಮಫಲಕಗಳನ್ನು ಅಳವಡಿಸಬೇಕು. ಇದರಿಂದಾಗಿ ಸಾರ್ವಜನಿಕರ ಸಮಯ ಉಳಿತಾಯವಾಗುತ್ತದೆ ಎಂದರು.

ಪ್ರಾದೇಶಿಕ ಸಾರಿಗೆ ಅಧಿಕಾರಿ ಬಣಕಾರ್‌, ರಸ್ತೆ ಅಪಘಾತಗಳಲ್ಲಿ ಉಂಟಾಗುವ ಸಾವಿನ ಪ್ರಮಾಣ ಕಡಿಮೆ ಮಾಡಲು ಕ್ರಮ ಕೈಗೊಳಲಾಗುತ್ತಿದೆ. 2019ನೇ ಸಾಲಿನಲ್ಲಿ ಶೇ.10ರಷ್ಟು ರಸ್ತೆ ಅಪಘಾತಗಳನ್ನು ತಗ್ಗಿಸಲು ಹೊಂದಿದ್ದ ಗುರಿಯಲ್ಲಿ ಶೇ3.96ರಷ್ಟು ಮಾತ್ರ ಸಾಧ್ಯವಾಗಿದೆ. ಕನಿಷ್ಟ ಶೇ.10 ಇಳಿಕೆಗೆ ಅಗತ್ಯ ಕ್ರಮ ಕೈಗೊಳ್ಳಬೇಕಿದೆ ಎಂದರು.

ನಗರ ಉಪವಿಭಾಗದ ಡಿವೈಎಸ್ಪಿ ಮತ್ತು ಮಹಾನಗರ ಪಾಲಿಕೆ ಆಯುಕ್ತರು ನಗರದ 7 ಕಡೆಗಳಲ್ಲಿ ಟ್ಯಾಕ್ಸಿ ನಿಲುಗಡೆಗೆ ಸ್ಥಳ ನಿಗದಿ ಮಾಡಿ ವರದಿ ಸಲ್ಲಿಸಿದ್ದು, ಈ ಸ್ಥಳಲ್ಲಿ ಟ್ಯಾಕ್ಸಿ ಮತ್ತು 3 ಮತ್ತು 4 ಚಕ್ರಗಳ ಸರಕು ಸಾಗಾಣಿಕೆ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಬಹುದಾಗಿದೆ ಎಂದು ಸಭೆ ಗಮನಕ್ಕೆ ತಂದರು.

ಕೆ.ಎಸ್‌.ಆರ್‌.ಟಿ.ಸಿ. ಎದುರಿನ ಎಪಿಎಂಸಿ ಜಾಗದಲ್ಲಿ 5 ತ್ರಿಚಕ್ರ ಗೂಡ್ಸ್‌ ಆಟೋಗಳ ನಿಲುಗಡೆ, ಲೋಕಿಕೆರೆ ರಸ್ತೆಯ ಶಶಿ ಸೋಪ್‌ ಫ್ಯಾಕ್ಟರಿ ಹತ್ತಿರದ ಸಾರ್ವಜನಿಕರ ರಸ್ತೆಯ ಪಕ್ಕದಲ್ಲಿ 25 ಮೂರು ಮತ್ತು ನಾಲ್ಕು ಚಕ್ರದ ಗೂಡ್ಸ್‌ ಆಟೋಗಳು, ಕೆ.ಆರ್‌. ಮಾರ್ಕೆಟ್‌ ಗುಜರಿ ಲೈನ್‌ನಲ್ಲಿ 3 ವಾಹನಗಳು, ಕಾಯಿಪೇಟೆಯಲ್ಲಿ 5 ವಾಹನಗಳು, ಕೆ.ಆರ್‌. ಮಾರ್ಕೆಟ್‌ನ ಹಳೆ ಹೆರಿಗೆ ಆಸ್ಪತ್ರೆಯ ಹತ್ತಿರ 5 ವಾಹನಗಳು, ಕೆ.ಆರ್‌. ರಸ್ತೆ ಚರ್ಚ್‌ ಹತ್ತಿರ 10 ವಾಹನಗಳು, ಹಳೇ ಸಬ್‌ ರಿಜಿಸ್ಟ್ರಾರ್‌ ಆಫೀಸ್‌ ಬಳಿಯ ಮಂಡೀಪೇಟೆಯ ರಸ್ತೆಗೆ ಹೊಂದಿಕೊಂಡಿರುವ ರೈಲ್ವೆ ಗೂಡ್ಸ್‌ ಶೇಡ್‌ ಹತ್ತಿರ 5 ವಾಹನಗಳ ನಿಲುಗಡೆಗೆ ಸ್ಥಳ ಗುರುತಿಸಲಾಗಿದೆ. ಈ ಸ್ಥಳಗಳಲ್ಲಿ ವಾಹನ ನಿಲುಗಡೆಗೆ ಅನುಮತಿ ನೀಡಬೇಕಾಗಿದೆ ಎಂದು ಸಭೆಗೆ ತಿಳಿಸಿದರು.

Advertisement

ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ಅಪಘಾತಗಳು ಸಂಭವಿಸುವ ಸ್ಥಳ ಪರಿಶೀಲನೆ ನಡೆಸಬೇಕು. ಅಪಘಾತಗಳನ್ನು ಕಡಿಮೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಆರ್‌ಟಿಓ ಬಣಕಾರ್‌ ಮಾತನಾಡಿ, ದಾವಣಗೆರೆ ತಹಶೀಲ್ದಾರ್‌ ಹಾಗೂ ಜಿಲ್ಲಾ ಲಾರಿ ಮಾಲೀಕರ ಸಂಘದ ಅಧ್ಯಕ್ಷರು ಜಂಟಿಯಾಗಿ ಸ್ಥಳ ಪರಿಶೀಲಿಸಿ ಟ್ರಕ್‌ ಟರ್ಮಿನಲ್‌ ನಿರ್ಮಾಣಕ್ಕಾಗಿ ನಗರದ ಹಳೇ ಬಾತಿ ಗ್ರಾಮದ ಜಾಗ ಸೂಕ್ತ ಎಂದು ತಿಳಿಸಿದ್ದಾರೆ. ತಮ್ಮ ಹಾಗೂ ಎಸ್ಪಿ ಕಚೇರಿಗಳ ಮುಂಭಾಗದ ರಿಂಗ್‌ರೋಡ್‌ ಕಾಮಗಾರಿ ಸ್ಥಗಿತಗೊಂಡಿದೆ. ಇದರಿಂದ ಸಂಚಾರಕ್ಕೆ ಸಮಸ್ಯೆಯಾಗಿದೆ ಎಂದು ಸಭೆಗೆ ತಿಳಿಸಿದರು.

ಸ್ಮಾರ್ಟ್‌ ಸಿಟಿ ಯೋಜನೆಯ ಎಕ್ಸಿಕ್ಯೂಟಿವ್‌ ಇಂಜಿನಿಯರ್‌ ಮಹಾದೇವಪ್ಪ ಪ್ರತಿಕ್ರಿಯಿಸಿ, ರಸ್ತೆಗಳನ್ನು ಅದಷ್ಟು ಶೀಘ್ರವಾಗಿ ದುರಸ್ತಿ ಮಾಡಲಾಗುವುದು ಎಂದರು. ಆಗ, ಎಸ್ಪಿ ಹನುಮಂತರಾಯ, ಸುಪ್ರೀಂಕೋರ್ಟ್‌ ಆದೇಶದಂತೆ ರಸ್ತೆ ಬದಿಗಳಲ್ಲಿ ಆಸ್ಪತ್ರೆಗಳ ವಿವರ ಮತ್ತು ದೂರವಾಣಿ ಸಂಖ್ಯೆಯ ಸಂಪೂರ್ಣ ಮಾಹಿತಿ ಇರುವ ಫಲಕಗಳನ್ನು ಮಹಾನಗರ ಪಾಲಿಕೆ ಮತ್ತು ಸ್ಮಾರ್ಟಿ ಸಿಟಿಯವರು ಅಳವಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸಾಮಾಜಿಕ ಕಾರ್ಯಕರ್ತ ಎಂ.ಜಿ. ಶ್ರೀಕಾಂತ್‌ ಮಾತನಾಡಿ, ಅಶೋಕ ರಸ್ತೆಯಲ್ಲಿ ಅನಧಿಕೃತವಾಗಿ ಲಾರಿಗಳು ನಿಲುಗಡೆಯಾಗುತ್ತವೆ. ವಾಹನಗಳನ್ನು ರಸ್ತೆ ಬದಿಗಳಲ್ಲಿ ನಿಲ್ಲಿಸುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ರಸ್ತೆ ದುರಸ್ತಿ ವೇಳೆ ಮಣ್ಣನ್ನು ನಿಗದಿತ ಸ್ಥಳದಲ್ಲಿ ಹಾಕುವ ವ್ಯವಸ್ಥೆ ಮಾಡಿದರೆ ಆ ಮಣ್ಣನ್ನು ಇತರೆ ಕಾಮಗಾರಿ ಅಥವಾ ಸಾರ್ವಜನಿಕರ ಉಪಯೋಗಕ್ಕೆ ಬಳಸಬಹುದೆಂದು ಸಭೆಗೆ ತಿಳಿಸಿದರು.

ಜಿಲ್ಲಾಕಾರಿಗಳು ಪ್ರತಿಕ್ರಿಯಿಸಿ, ಅಶೋಕ ರಸ್ತೆಯಲ್ಲಿ ವಾಹನಗಳು ನಿಲುಗಡೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಮಹಾನಗರ ಪಾಲಿಕೆಯವರು ರಸ್ತೆ ದುರಸ್ತಿ ಸಂದರ್ಭದಲ್ಲಿ ಮಣ್ಣನ್ನು ಹಾಕಲು ಒಂದು ಜಾಗ ಗುರುತಿಸಬೇಕು. ಬಾತಿಕೆರೆ ರಸ್ತೆಯ ಬದಿಯಲ್ಲಿ ಬಾತಿ ಡಾಬಾ ಎಂದಿರುವ ನಾಮಫಲಕದಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಆ ನಾಮಫಲಕ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಮಹಾನಗರ ಪಾಲಿಕೆಯ ಎಕ್ಸಿಕ್ಯೂಟಿವ್‌ ಇಂಜಿನಿಯರ್‌ ಭಾರತಿ, ಐಕಾನ್‌ ಇಂಟರ್‌ನ್ಯಾಷನಲ್‌ ಲಿಮಿಟೆಡ್‌ನ‌ ಅಧಿಕಾರಿಗಳು, ದೂಡಾ ಅಧಿಕಾರಿಗಳು, ಹೆಬ್ಟಾಳ್‌ ಟೋಲ್‌ ಮ್ಯಾನೇಜರ್‌ ಟಿ. ಉಮಕಾಂತ್‌, ಲಾರಿ ಮಾಲೀಕರ ಸಂಘದ ಅಧ್ಯಕ್ಷರು , ಸರಕು ವಾಹನಗಳ ಸಂಘದ ಅಧ್ಯಕ್ಷ ಪಳನಿಸ್ವಾಮಿ, ವಿವಿಧ ಇಲಾಖೆ ಅಭಿಯಂತರರು ಉಪಸ್ಥಿತರಿದರು.

Advertisement

Udayavani is now on Telegram. Click here to join our channel and stay updated with the latest news.

Next